ಅಕ್ಕಮ್ಮ (ಉಷಾ)
ಅಕ್ಕಮ್ಮ (ಉಷಾ) | ಹುಟ್ಟಿದ ದಿನಾಂಕ: 1944-11-26 | ಮರಣ ದಿನಾಂಕ: 2015-11-29 | |
ತಂದೆ: ಗೋವಿಂದ | ತಾಯಿ: | ||
ಮಕ್ಕಳು: | |||
ಒಡಹುಟ್ಟಿದವರು: ಮೋಹನ, ಪ್ರಹ್ಲಾದ, ಪುಷ್ಪಾ, ವಿಟ್ಠಲ (ಅಪ್ಪಣ್ಣ) | |||
ವಿಳಾಸ: ಮನೆ ನಂ. ೧೩೨೯, "ಇಂದಿರಾ", ರಾಮಲಿಂಗ ಖಿಂಡ,ಬೆಳಗಾವಿ | Branch: 3 | Generation: 8 |
ವ್ಯಕ್ತಿ ಚಿತ್ರ
ಅಕ್ಕಮ್ಮ
ಗೋವಿಂದ ರಾಮಚಂದ್ರ ಮಂಗಳವೇಢೆ ಇವರ ಮಗಳು ಬೆಳಗಾವಿಯ ನಿವಾಸಿ
ಕಿರು ಪರಿಚಯ
ಅಕ್ಕಮ್ಮ (ಉಷಾ) ದಿ. ಗೋವಿಂದ ರಾಮಾಚಾರ್ಯ ಮಂಗಳವೇಢೆ ಇವರ ಮಗಳು.
ಜನ್ಮ ದಿನಾಂಕ : ೨೬ ನವೆಂಬರ ೧೯೪೪, ಗೋಕಾಕದಲ್ಲಿ.
ಮರಣ ದಿನಾಂಕ : ೨೯ ನವೆಂಬರ ೨೦೧೫, ಬೆಳಗಾವಿಯಲ್ಲಿ.
ತಾಯಿ : ದಿ. ರಮಾಬಾಯಿ / ಸುಬ್ಬಾ ( ತೌರು ಮನೆ ಹೆಸರು : ಸುಭದ್ರಾ ಅಣ್ಣಾಜಿ ಯಾರ್ದಿ)
ಪತಿ: ವಿದ್ಯಾಧರ ಅಣ್ಣಾಜಿ ಯಾರ್ದಿ (ತೀರಿಕೊಂಡ ತಾರಿಖು : ಎಪ್ರಿಲ್ ೩, ೨೦೦೮ ರಂದು ಬೆಳಗಾವಿಯಲ್ಲಿ)
ಮಕ್ಕಳು : ೧. ಸುನೀಲ ಮತ್ತು ೨.ಗಿರೀಶ
ವಾಸಿಸುತ್ತಿದ್ದುದು : ಮನೆ ನಂ. ೧೩೨೯, “ಇಂದಿರಾ”, ರಾಮಲಿಂಗ ಖಿಂಡ, ಬೆಳಗಾವಿ
ವ್ಯಕ್ತಿ ಪರಿಚಯ
ಕಳೆದ ತಿಂಗಳವಷ್ಟೆ- ನವೆಂಬರ ೧೬ ಮತ್ತು ೧೭, ೨೦೧೬ ರಂದು – ಅಕ್ಕಮ್ಮನ ಮೊದಲ ವರ್ಷಾಂತಿಕವನ್ನು ಬೆಳಗಾವಿಯಲ್ಲಿ ಮಕ್ಕಳು ಸುನೀಲ ಮತ್ತು ಗಿರೀಶ ಕೂಡಿ ಮಾಡಿದರು. ಹೋಗಿದ್ದೆ. ಅವಳ ತಾಯಿ ಗೋಕಾವಿ ಸುಬ್ಬಾ ಅಂದರೆ ನನ್ನ ಕಾಕೂ. ಆಕೆಯ ತೌರು ಮನೆ ಬಳಗ ಎಲ್ಲ ಬಂದಿದ್ದಿತು. ಆ ಬಳಗ ಅಕ್ಕಮ್ಮನಿಗೆ ಅತ್ತೆಮನೆ ಬಳಗವೂ ಹೌದು. ತೀರಿ ಹೋಗಿದ್ದ ಗಂಡ ವಿದ್ಯಾಧರ ಮದುವೆಯ ಮೊದಲು ಸೋದರ ಮಾವ. ಹೀಗಾಗಿ ಆ ಜನ ತಾಯಿಯ ತೌರಿನರೂ ಹೌದು, ಗಂಡನ ಕಡೆಯವರೂ ಹೌದು.
ಆದರೆ, ಕೂಡಿದ್ದ ಆ ಜನರಲ್ಲಿ ಅವಳ ತಂದೆಯ ಕಡೆಯವನು ನಾನೊಬ್ಬನೆ. ಹೀಗೇಕೆ ? ಸರಳವಾದ ಒಂದು ಉತ್ತರ ನನಗಷ್ಟೆ ಆ ಕಡೆಯಿಂದ ಆಮಂತ್ರಣ ಬಂದಿತ್ತು. ಆದರೆ, ನನಗಷ್ಟೆ ಕರೆದಿದ್ದೇಕೆ. ಉತ್ತರ ಅಷ್ಟು ಸರಳ, ಸಂಕ್ಷಿಪವಾಗಿ ಹೇಳಲಾಗುವದಿಲ್ಲ. ವಿವರಣೆ ಕೊಡುವದು ಅನಗತ್ಯ. ಈಗ ಕೇವಲ ಕಲೆಯಾಗಿ ಉಳಿದ ಆ ಮಾಯ್ದಿರುವ ಗಾಯವನ್ನು ಮತ್ತೆ ತಿವಿದು, ಕೆರೆದು, ಚುಚ್ಚಿ ಹೊಸದೊಂದು ಗಾಯ ಮಾಡಿದಷ್ಟೆ ಹುಚ್ಚುತನವಾದೀತು.
ಸೂಚ್ಯವಾಗಿ ಹೇಳಬೇಕೆಂದರೆ, ಅಕ್ಕಮ್ಮನ ತಾಯಿ ಅಂದರೆ ನನ್ನ ಕಾಕೂ ತನ್ನ ಗಂಡನ ಮರಣಾನಂತರದ ಅನುಭವಿಸಿದ್ದ ದಾರುಣ ಕತೆ ಇಂದಿನ ಸ್ಠಿತಿಯ ಹಿನ್ನೆಲೆ. ತಿಳಿಯ ಬೇಕೆ ? ಎಷ್ಟುಹೇಳಿದರೆ ಉಚಿತವೊ ಅಷ್ಟನ್ನು, ಅವಳ ತಂದೆಯ ವಿವರವಾದ ವ್ಯಕ್ತಿ ಪರಿಚಯದಲ್ಲಿ ಹೇಳಿದ್ದೇನೆ. ಆಸಕ್ತರು ಅದನ್ನು ಓದಬಹುದು.
ಇರಲಿ, ಆ ವರ್ಷಾಂತಿಕ ವಿಷಯಕ್ಕೆ ಬರೋಣ. ಅವಳು ಮರಣಿಸಿದ್ದು ೨೦೧೫ ರ ನವೆಂಬರ ೨೯ ರಂದು. ಅದು ಮನ್ಮಥನಾಮ ಸಂವತ್ಸರ, ಕಾರ್ತಿಕ ಮಾಸ ಕೃಷ್ಣ ಪಕ್ಷದ ಚತುರ್ಥಿ. ರವಿವಾರ. ಗೌರಿ ಹುಣ್ಣಿವೆಯ ನಂತರದ್ದು. ಅಂದು ಅವಳು ಇಲ್ಲವಾದಾಳು ಎಂದು ಯಾರೂ ಕನಸು ಮಸಿನಲ್ಲಿಯೂ ಬಂದಿರಲಾರದು. ಆದರೆ ಹಾಗೆ ಆಗಿಹೋಗಿತ್ತು. ನಂತರವೇ ಗೊತ್ತಾಗಿದ್ದು. ಸಾವು ಬರಸಿಡಿಲು ಹೊಡೆದಂತೆ ಅಷ್ಟು ಅನಿರೀಕ್ಷಿತ, ಅಷ್ಟು ಭಾರಿ ಆಘಾತವಾಗಿತ್ತು.
ಬರುವಾಗ ಒಬ್ಬನೆ, ಹೋಗುವಾಗ ಒಬ್ಬನೆ ಎಂದು ಬಲ್ಲವರು ಹೇಳುತ್ತಾರಲ್ಲ. ಹಾಗೆಯೆ ಆಗಿತ್ತು. ಮನೆಯಲ್ಲಿ ಅವಳೊಬ್ಬಳೆ. ಯಾವ ಸದ್ದು ಗದ್ದಲವಿಲ್ಲದೆ ಸುಮ್ಮನೆ ಶಾಂತವಾಗಿಬಿಟ್ಟಿದ್ದಳು. ಪುಣ್ಯಕ್ಕೆ ಬಾಗಿಲು ತೆರೆದೇ ಇತ್ತು. ನೆರೆಮನೆಯವರು ಏನೋ ಹೇಳಲೆಂದು ಬಂದಾಗ, ನೆಲದ ಮೇಲೆ ಅದೇ ಸತ್ತು ಬಿದ್ದಿದ್ದ ಅವಳು ಕಂಡಿದ್ದು. ಮೈಮೇಲೆ ಫ್ರಿಜ್ಜು ಒರಗಿತ್ತು. ರಕ್ತ ಬಂದಿತ್ತು. ಪೆಟ್ಟು ಆಗಿತ್ತು. ಆದರೆ ಅದು ಬಿದ್ದಾಗಿನ ಧಡಾರ ಸಪ್ಪಳು ಯಾರ ಕಿವಿಗೂ ಬಿದ್ದಿರಲಿಲ್ಲ. ನೋವಿನಿಂದ ಚೀರಿದ್ದು, ನರಳಿದ್ದೂ ಕೇಳಿರಲಿಲ್ಲ.
ಹಾಗೆ ಅಲ್ಲಿ, ಮನೆ- ನೆರೆಮನೆಯಲ್ಲಿ ಇದ್ದವರಾದರೂ ಯಾರು ? ಒಬ್ಬ ಹೆಣ್ಣು ಮಗಳು ಮಾತ್ರ. ಅವರೂ, ನಾನು ಸತ್ಯನಾರಾಯಣ ಪೂಜೆಗೆ ಹೋಗುತ್ತಿದ್ದೇನೆ, ಒಬ್ಬರೇ ಇದ್ದೀರಿ, ಜೋಪಾನ ಎಂದು ಹೇಳಲು ಬಂದ ಆ ಹೆಂಗಸು. ಆದದ್ದನ್ನು ಊಹಿಸುವದು ಕಷ್ಟವೇನಾಗಲಿಲ್ಲ. ಮಧ್ಯಾಹ್ನ ಊಟದ ವೇಳೆಯಾಗಿತ್ತು. ಅಡುಗೆಯೂ ಆಗಿತ್ತು. ಅಕ್ಕಮ್ಮ ನಿತ್ಯ ಬಾಳೆ ಎಲೆಯ ಮೇಲೇ ಊಟ ಮಾಡುತ್ತಿದ್ದಳು. ಅವು ಇದ್ದದ್ದು ಫ್ರಿಜ್ಜಿನ ಮೇಲೆ. ತೆಗೆದುಕೊಳ್ಳಲು ಹೋಗಿದ್ದಳು. ಫ್ರಿಜ್ಜು ಮಯ್ಯ ಮೇಲೆಯೆ ಬಿದ್ದಿತ್ತು. ಅದರ ಜೋಡನೆಯ ವಾಯರು ಪ್ಲಗ್ಗ ಕಿತ್ತಿ ಬಿದ್ದಿತ್ತು. ಶಾಕ್ ಹೊಡೆದಿತ್ತೆ ? ಆ ಲಕ್ಷಣಗಳು ಇರಲಿಲ್ಲ. ಏನಾಗಿ ಅದು ಮೈ ಮೇಲೆ ಬಿದ್ದಿತ್ತು ಗೊತ್ತಾಗಲಿಲ್ಲ. ಬರಿಯ ಊಹಾಪೋಹಗಳು.
ಯಾರಿಗೂ ನಂಬಲು ಆಗದು. ಏಕೆಂದರೆ, ಅಕ್ಕಮ್ಮ ಮೂರೆ ದಿನಗಳ ಹಿಂದೆ, ಮನೆ ಮಾಲಿಕ ರಘುರಾಜ ಜಕಾತಿ -ವಿದ್ಯಾ ದಂಪತಿಗಳ ಏಕಮಾತ್ರ ಪುತ್ರನ ಮದುವೆಯಲ್ಲಿ ಭಾಗ ತೆಗೆದುಕೊಂಡಿದ್ದಳು. ಭಾಗ್ಯ ನಗರದಲ್ಲಿ ನಡೆದ ಆ ಎಲ್ಲ ಕಾರ್ಯಕ್ರಮಗಳಲ್ಲಿಯೂ ತನ್ನನ್ನು ಪೂರ್ಣವಾಗಿ ತೊಡಗಿಸಿಕೊಂಡಿದ್ದಳು. ಅಕ್ಕೀಕಾಳಿನ ಹೊತ್ತಿಗೆ, ಕಾರ್ಯಲಯದಲ್ಲಿ ವೇದಿಕೆಯ ಮುಂದಿನ ಮೊದಲ ಸಾಲಿನಲ್ಲಿಯೆ ಕುಳಿತು- ಗುರುತಿನ ಜನರನ್ನೆಲ್ಲ ಮಾತನಾಡಿಸುತ್ತ ಸಮಾರಂಭದಲ್ಲಿ ಒಂದಾಗಿಬಿಟ್ಟಿದ್ದಳು. ಎರಡು ದಿನ ಪೂರ್ತಿ ಅಕ್ಕಮ್ಮ ಮತ್ತು ಮಕ್ಕಳು ಅದರಲ್ಲಿಯೆ ತೊಡಗಿಕೊಂಡಿದ್ದರು.
ಅಂದು, ಮದುವೆ ಆದ ಮೇಲೆ ಸತ್ಯನಾರಾಯಣ ಪೂಜೆ ಇದ್ದಿತು. ದಣಿದಿದ್ದಳೊ ಏನೋ, ಮಕ್ಕಳು, ಸೊಸೆಯನ್ನು ಕಳಿಸಿ ತಾನು ಮನೆಯಲ್ಲಿ ಉಳಿದಿದ್ದಳು. ಅಲ್ಲಿ ಅವರು ಪೂಜೆಯಾಗಿ ಊಟಕ್ಕೆ ಕೂಡಬೇಕು, ಅಷ್ಟರಲ್ಲಿ ಹೀಗಾಗಿ ಹೋಗಿತ್ತು. ಇತ್ತಕಡೆ, ಮನೆಯ ಎದುರೇ, ಅನತಿ ದೂರದಲ್ಲಿಯೆ ಟಿಳಕಚೌಕದಲ್ಲಿನ ರಾಘವೇಂದ್ರಸ್ವಾಮಿ ಮಠ. ತಪ್ಪದೆ ನಿತ್ಯವೂ ಹೋಗಿ, ಕೈಲಾದಷ್ಟು ಸೇವೆಯನ್ನೂ ಮಾಡಿ ಬರುವ ಪರಿಪಾಠ ಅಕ್ಕಮ್ಮನದು. ಮಕ್ಕಳು ಬರುವ ಮೊದಲೆ ಮಠದವರೆ ಬಂದು ಬಾಯಲ್ಲಿ ನೀರನ್ನೂ ಹಾಕಿ ಹೋಗಿದ್ದರು.
ಇದು, ಅಕ್ಕಮ್ಮನ ಕೊನೆಯ ಕ್ಷಣಗಳು. ಒಂದು ಕ್ಷಣದ ಹಿಂದೆ ಊಟದ ತಯಾರಿ ಮಾಡಿಕೊಳ್ಳುತ್ತ ಇದ್ದವಳು, ಮುಂದಿನ ಕ್ಷಣ ಇಲ್ಲವಾಗಿ ದೂರವಾಗಿ ಹೋಗಿಬಿಟ್ಟಿದ್ದಳು. “ಇಲ್ಲಿದ್ದದ್ದು ಸುಮ್ಮನೆ”.
ಮನೆ ಮಾಲಿಕ, ಉದ್ಯಮಿ ಜಕಾತಿಯವರಿಗೂ ಶಾಕ್ ಆಗಿತ್ತು ಈ ಘಟನೆಯಿಂದ. ಮುಂದಾಗಿ ಏನನ್ನೂ ಮಾಡುವ ಹಾಗಿರಲಿಲ್ಲ. ಮಗನ ಮದುವೆಯನ್ನು ಅದೇ ಮಾಡಿ ಮುಗಿಸಿದ್ದರು. ಆದರೆ ವರ್ಷಾಂತಿಕ ಕಾರ್ಯಕ್ರಮದಲ್ಲಿ ಮನೆಯವರಾಗಿ ತಾವೇ ನಿಂತು ಮೇಲುವಿಚಾರಣೆ ನಡೆಸಿದರು. ಬ್ರಾಹ್ಮಣರ ಮತ್ತಿತರರ ಊಟದ ವ್ಯವಸ್ಥೆ ಸಮೀಪದ ಕೋನವಾಳಗಲ್ಲಿ ಬ್ರಾಹ್ಮಣ ಧರ್ಮಶಾಲೆಯಲ್ಲಿ ಇಟ್ಟುಕೊಳ್ಳಲಾಗಿತ್ತು. ಅಲ್ಲಿ ಹೋಗಿ ಮಡಿಯಿಂದ ಸ್ನಾನ ಮಾಡಿ ಪಂಚೆ ಉಟ್ಟು, ನೈವೇದ್ಯವಿಟ್ಟು ವೈಶ್ವದೇವ ಮಾಡಿದವರು ಜಕಾತಿಯವರು.
ಸುಮಾರು ಇಪ್ಪತ್ತಕ್ಕೂ ಹೆಚ್ಚು ವರ್ಷಗಳ ಹಿಂದೆಯೆ ವಿದ್ಯಾಧರ- ಅಕ್ಕಮ್ಮ ಅವರ ರಾಮಲಿಂಗ ಖಿಂಡದ, ಟಿಳಕ ಚೌಕ ಸಮೀಪದ, “ಇಂದಿರಾ” ಎಂಬ ಹಳೆ ಮನೆಗೆ ಬಾಡಿಗೆಯಿಂದ ಬಂದಿದ್ದರು. ನಂತರ ಮಾಳ ಮಾರುತಿ ಬಡಾವಣೆಯಲ್ಲಿ ಸ್ವಂತ ಮನೆಯೂ ಆಯಿತು. ಆದರೆ ಅಲ್ಲಿಗೆ ಹೋಗಲು ಜಕಾತಿಯವರು ಬಿಡಲಿಲ್ಲ. ಇಲ್ಲಿಯೆ ಇರಿ. ನಿಮಗೆ ಬೇಕಾದ ರಾಯರ ಮಠ, ಪರಿಚಿತ ಜನ ಎಲ್ಲ ಇಲ್ಲಿಯೆ ಇದ್ದಾರೆ. ಅಲ್ಲಿಗೆ- ಅಷ್ಟು ದೂರ ಹೋಗುವದು ಬೇಡ ಎಂದು ಒತ್ತಾಯ ಮಾಡಿ ಉಳಿಸಿಕೊಂಡವರು ಅವರು.
ಜಕಾತಿಯವರುವಿಶ್ವ ಮಾಧ್ವ ಮಹಾ ಪರಿಷತ್ತಿನ ಬೆಳಗಾವಿ ಘಟಕದ ಮುಖ್ಯರು. ತಮ್ಮ ಮನೆಯ ಹೊರಗಿನ ಕೋಣೆ ಅದರ ಕಚೇರಿ. ಈ ಘಟಕ “ವಿಶ್ವವಾಣಿ ಜಾಗೃತಿ” ಎಂಬ ಮಾಧ್ವರ ಮಾಸ ಪತ್ರಿಕೆಯನ್ನು ಪ್ರಕಟಿಸುತ್ತದೆ. ಉತ್ತರಾದಿ ಮಠದ ಶ್ರೀ ಸತ್ಯಾತ್ಮ ತೀರ್ಥ ಸ್ವಾಮಿಗಳು ಬೆಳಗಾವಿಗೆ ಬಂದಾಗ ಜಕಾತಿಯವರ ಮನೆಯಲ್ಲಿ ಉಳಿದುಕೊಳ್ಳುತ್ತಾರೆ.
ಮನೆ ಮಾಲಕ – ಬಾಡಗೀದಾರರ ಇಂತಹ ಸಂಬಂಧ ನೋಡಲು ದುರ್ಲಭ. “ಇದು ಭಾಗ್ಯ, ಇದು ಭಾಗ್ಯವಯ್ಯ”.
ಯಾರ್ದಿ ಮನೆತನ ಸ್ಮಾರ್ತರದು. ಆದರೆ ಅದು ಹೇಗೋ ಅಕ್ಕಮ್ಮ ತಾಯಿಯ ವೈಷ್ಣವ ಸಂಪ್ರದಾಯಕ್ಕೆ ಮನಸೋತಳು. ರಾಮಲಿಂಗಖಿಂಡ ಮನೆಗೆ ಬಂದಮೇಲಂತೂ, ಎದುರಿಗೇ ರಾಯರ ಮಠ. ಸ್ವಾಮಿಗಳು, ಸಮಾರಾಧನೆ, ಮಠ, ತೀರ್ಥ ಇಂಥ ಸಂಗತಿಗಳಲ್ಲಿ ಮನಕ್ಕೆ ಸಮಾಧಾನ. ಗಂಡ ಈ ಸಂಪ್ರದಾಯದಆಚರಣೆಗೆ ಅಡಚಣಿಯಾಗಲಿಲ್ಲ. ಮಕ್ಕಳೂ ಇದರಲ್ಲಿ ಬೆರೆತು ಹೋಗಿದ್ದಾರೆ. ಮನೆಯಲ್ಲಿ ವಾಯುಸ್ತುತಿ ಪುರಶ್ಚರಣ ಆಗೀಗ ನಡೆಯುತ್ತಲೆ ಇರುತ್ತದೆ.
ಇನ್ನು, ಅಕ್ಕಮ್ಮನ ವ್ಯಕ್ತಿ ವಿಷಯಕ ಇತರ ವಿವರಗಳು.
ಲಂಚ ನಿರೋಧಕ ದಳದ ಪೋಲೀಸ ಅಧಿಕಾರಿಯಾಗಿದ್ದ ತಂದೆ ಗೋವಿಂದ ಅವರ ಎರಡನೆ ಹೆಂಡತಿ ಗೋಕಾವಿಯ ಸುಬ್ಬಾ (ಸುಭದ್ರಾ – ಅತ್ತೆಮನೆಯಲ್ಲಿ ಇಟ್ಟ ಹೆಸರು ರಮಾಬಾಯಿ) ಇವರ ಹಿರಿಯ ಮಗಳು ಶಾಲಾ ದಾಖಲೆಗಳಲ್ಲಿನ ಉಷಾ, ಎಲ್ಲರಿಗೂ ಅಕ್ಕಮ್ಮ ಎಂದೇ ಪರಿಚಿತ. ಹುಟ್ಟಿದ್ದುತಾಯಿಯ ತೌರು ಮನೆ ಗೋಕಾಕದಲ್ಲಿ, ೨೬ ನವೆಂಬರ, ೧೯೪೪ರಲ್ಲಿ. ತಾಯಿ ಅಣ್ಣಾಜಿ (ಕೃಷ್ಣ) ಮತ್ತು ರಾಧಾಬಾಯಿ ಯಾರ್ದಿ ಇವರ ಮಗಳು.
ಆ ದಂಪತಿಗಳ ಮಕ್ಕಳು : ೧. ದಮಯಂತಿ ೨. ಗೋಪಾಳ ೩. ಇಂದುಮತಿ ೪. ಸುಭದ್ರಾ ೫. ಚಂಪಾ ೬. ಶಾಕಂಬರಿ ೭. ಅಕ್ಕೂತಾಯಿ ೮. ಗೋವಿಂದ ೯. ವತ್ಸಲಾ ೧೦. ವಿದ್ಯಾಧರ ೧೧. ವೆಂಕಟೇಶ.
ತಂದೆಯ ಮರಣ : ೨೧ ಎಪ್ರಿಲ ೧೯೫೦ರಂದು, ಬೆಳಗಾವಿಯಲ್ಲಿ, ಉದರ ಬೇನೆಯಿಂದ. ಆಗ ಅಕ್ಕಮ್ಮ ಐದು ವರ್ಷದವಳು.
ಶಿಕ್ಷಣ : ೧೯೬೫ರಲ್ಲಿ ಎಸ್.ಎಸ್.ಎಲ್.ಸಿ ಪಾಸಾಗಿದ್ದು. ಒಂದನೆ ಇಯತ್ತೆ ಗೋಕಾಕದಲ್ಲಿ ಮುಗಿಸಿ ಮಾವಶಿ ಶಾಕಂಬರಿ ಅವರ ಕಡೆ ಚಿಕ್ಕೋಡಿಗೆ ಹೋದುದು. ಅವರಿಗೆ ಮಕ್ಕಳಿರಲಿಲ್ಲ, ಇದ್ದ ಒಂದು ಗಂಡು ಕೂಸು ತೀರಿಕೊಂದಿತ್ತು. ಅನಾಥ ಅಕ್ಕಮ್ಮನನ್ನು ಬಹಳ ಹಚ್ಚಿಕೊಂಡಿದ್ದರು. ಮಗಳ ಹಾಗೆ ಬೆಳೆಸಿದರು. ನಾಂದಿ ಇಟ್ಟುಕೋಂಡು ಮದುವೆ ಮಾಡಿಕೊಟ್ಟವರೂ ಅವರೆ. ಕಲಿಯುತ್ತಿದ್ದಾಗ, ಮಾವಶಿಯ ಪತಿ- ಪೋಲಿಸ ಇಲಾಖೆಯಲ್ಲಿದ್ದ ಮಹಾದೇವ ಕುಲಕರ್ಣಿ ಅವರಿಗೆ ಬದಲಿಯಾದಲ್ಲೆಲ್ಲ – ಹುಕ್ಕೇರಿ, ಬಾಗೇವಾಡಿ ಮೊದಲಾದ ಕಡೆ ಅಕ್ಕಮ್ಮನಿಗೂ ಹೋಗುವ ಅನಿವಾರ್ಯ. ಈ ದಂಪತಿಗಳು ಅಕ್ಕಮ್ಮನನ್ನು ಎಷ್ಟು ಹಚ್ಚಿಕೊಂಡಿದ್ದರೆಂದರೆ ವಿದ್ಯಾಧರ ಅವರು ಮಂಗಳೂರಿಗೆ ಬದಲಿಯಾಗಿ ಹೋದಾಗ ಅಲ್ಲಿಗೂ ಬಂದು ಮಾಡಿಹೋಗುತ್ತಿದ್ದರು.
ಅವರು ಹುಕ್ಕೇರಿಯಲ್ಲಿದ್ದಾಗ ೧೯೬೪ರಲ್ಲಿ ಅಕ್ಕಮ್ಮನ ಮದುವೆ ಆಯಿತು. ವಿಶೇಷ ವೆಂದರೆ ಈ ಮದುವೆ ಮಾಡಿಕೊಟ್ಟ ನಂತರ ೧೯೬೫ ರಲ್ಲಿ ಆ ದಂಪತಿಗಳಿಗೆ ಒಂದು ಮಗು – ಹೆಣ್ಣು ಹುಟ್ಟಿತು. ಬಹುಶ: ಕಾಕತಿಯಲ್ಲಿದ್ದಾಗ. ಅವರ ಬಾಣಂತನಕ್ಕೆ ಅಕ್ಕಮ್ಮ ಹೋಗಿದ್ದಳು. ಸುನೀಲ ಇನ್ನೂ ಹುಟ್ಟಿರಲಿಲ್ಲ.
ಮದುವೆ : ಸೋದರ ಮಾವ ವಿದ್ಯಾಧರ ಅವರೊಂದಿಗೆ ೧೯೬೪ ರ ಮೇ ೧೯ ರಂದು ಗೋಕಾಕದಲ್ಲಿ ಯಾರ್ದಿಯವರ ಮನೆಯ ಮುಂದೆಯೆ ಆಯಿತು. ಆಗ ಅಕ್ಕಮ್ಮ ಹಿಂದಿನ ವ₹ರ್ಷವೆ ಎಸ್.ಎಸ್.ಎಲ್.ಸಿ ಆಗಿ, ಇಪ್ಪತ್ತು ವರ್ಷ ನಡೆಯುತ್ತಿದ್ದ ಕನ್ಯೆ.
“ಸುಬ್ಬಕ್ಕಆತ್ತ್ಯಾ, ಬಾಬೂ, ರಾಜಾ (ನನ್ನ ತಮ್ಮ. ಅದೇ, ಹಾಯಸ್ಕೂಲು ಮುಗಿಸಿದ್ದ. ೧೮೯೬೭ರಲ್ಲಿ ತೀರಿಕೊಂಡ)” ಇವರೆಲ್ಲ ಬಂದಿದ್ದರು.
ವಿದ್ಯಾಧರ : ಅಣ್ಣಾಜಿ ಯಾರ್ದಿಯವರ ಹನ್ನೊಂದು ಮಕ್ಕಳಲ್ಲಿ ಹತ್ತನೆಯವರು. ಹುಟ್ಟಿದ್ದು ೧೨ ಡಿಸೆಂಬರ ೧೯೩೫ ರಲ್ಲಿ. ಗೋಕಾಕದಲ್ಲಿ ಎಸ್.ಎಸ್.ಲ್.ಸಿ ಆಯಿತು. ಕೇಂದ್ರ ಅಬಕಾರಿ ಇಲಾಖೆಯಲ್ಲಿ ಒಂದು ಸಣ್ಣ ಕೆಲಸ ನಿಪ್ಪಾಣಿಯಲ್ಲಿ ಸಿಕ್ಕು, ನಂತರ ಕ್ಲರ್ಕ ಆಗಿ ವೃತ್ತಿ ಜೀವನ ಮುಂದುವರೆದುದು. ನಿವೃತ್ತಿಯಾಗುವ ವೇಳೆಗೆ ದ್ವಿತೀಯ ದರ್ಜೆ ಅಧಿಕಾರಿಯಾಗಿ ಬಡತಿ ಸಿಕ್ಕಿದ್ದಿತು. ಈ ಕೆಲಸದಲ್ಲಿದ್ದಾಗ ನಿಪಾಣಿ, ಸೌಂದಲಗಾ, ಕೊಪ್ಪಳ, ಬಳ್ಳಾರಿ, ಬೆಂಗಳುರು, ನಿಪ್ಪಾಣಿ, ಮಂಗಳೂರು, ಬೆಳಗಾವಿ, ದಾವಣಗೆರೆ ಈ ಎಲ್ಲ ಊರುಗಳನ್ನು ಕಾಣ ಬೇಕಾಯಿತು. ಕೊನೆಗೆ ಮತ್ತೆ ಬೆಳಗಾವಿಗೆ ಬಂದ ಮೇಲೆ, ಅಲ್ಲಿಯೆ ನಿವೃತ್ತಿ ಆಯಿತು.
ಗೋಕಾಕದಲ್ಲಿನ ಮನೆ ಮಾರಿದಾಗ ತಮ್ಮ ಪಾಲಿನ ಹಣ ತೆಗೆದುಕೊಂಡು ವಿದ್ಯಾಧರ ಬೆಳಗಾವಿಯ ಬೂಡಾದ ಮಾಳ ಮಾರುತಿ ಬಡಾವಣೆಯಲ್ಲಿ 30ft X 40ft ನಿವೇಶನ ಕೊಂಡಿದ್ದರು. ಆಗ ಇನ್ನೂ ಸರ್ವೀಸಿನಲ್ಲಿದ್ದರು, ದಾವಣಗೆರೆಯಲ್ಲಿ. ಅಕ್ಕಮ್ಮ ಹೆಸರಲ್ಲಿ ಕೊಂಡಿದ್ದ ಆ ನಿವೇಶನದಲ್ಲಿ, ನಿವೃತ್ತಿಯ ನಂತರ ಮೂರು ಕೋಣೆಯ ಮನೆಯನ್ನು ಕಟ್ಟಿ, ವಾಸ್ತುಶಾಂತಿ ಗೃಹ ಪ್ರವೇಶವನ್ನೂ ಮಾಡಿದ್ದರು. ಆದರೆ, ಆಗ ರಾಮಲಿಂಗ ಖಿಂಡದಲ್ಲಿ ತಾವಿದ್ದ ಬಾಡಿಗೆ ಮನೆಯ ಮಾಲಿಕ ಜಕಾತಿಯವರು ಅಲ್ಲಿಯೆ ಉಳಿಯಲು ಆಗ್ರಹಪೂರ್ವಕ ಸಲಹೆ ಕೊಟ್ಟಿದ್ದರಿಂದ, ಸ್ವಂತ ಮನೆಗೆ ಸ್ಥಳಾಂತರಗೊಳ್ಳಲೆ ಇಲ್ಲ.
ಮಕ್ಕಳು : ಇಬ್ಬರು ಮಕ್ಕಳು – ೧. ಸುನೀಲ ೨. ಗಿರೀಶ.
೧. ಸುನೀಲ
ಇವರಲ್ಲಿ ಸುನೀಲ ಹುಟ್ಟಿದ್ದು ೧೫ ಮೇ ೧೯೬೬ರಲ್ಲಿ, ಮದುವೆಯಾಗಿ ಎರಡು ವರ್ಷಗಳ ನಂತರ. ಸ್ಥಳಿಯ ಬಿ.ಕೆ. ಮಾಡೆಲ ಹಾಯಸ್ಕೂಲಿನಿಂದ ಎಸ್.ಎಸ್.ಎಲ್.ಸಿ ಪಾಸು ಆಗಿ, ಭರತೇಶ ಕಾಲೇಜಿನಿಂದ ಡಿಪ್ಲೋಮಾ ಇನ್ ಆಟೋಮೊಬಾಯಿಲ ಮಾಡಿದ್ದು. ಬೆಂಗಳೂರು, ಪುಣೆ ಗಲಲ್ಲಿ ನೌಕರಿ ಮಾಡಿ ಈಗ ಕ್ವಾಲಿಟಿ ಕಂಟ್ರೋಲ ಇಂಜಿನೀಯರ ಎಂದು ಎಕ್ಸಪರ್ಟ ಎಂಜಿನೀಯರಿಂಗ ಎಂಟರಪ್ರಾಯ್ಸೆಸ, ಮಜಗಾಂವ – ಬೆಳಗಾವಿಯಲ್ಲಿ ಉದ್ಯೋಗದಲ್ಲಿರುವರು. ಅದು ವಾಲ್ವಗಳನ್ನು ತಯಾರಿಸುವ ಉದ್ದಿಮೆ.
ಮದುವೆ : ಸುಜಾತಾ ಎಂಬ ಕನ್ಯೆಯೊಡನೆ, ಬೆಳಗಾವಿ ಟಿಳಕವಾಡಿಯ ಸಮರ್ಥ ಮಂದಿರ ದಲ್ಲಿ ೨೧, ಡಿಸೆಂಬರ ೧೯೯೭ ರಂದು ವಿವಾಹ ನೆರವೇರಿದ್ದು. ತೌರು ಮನೆ ಹೆಸರೆ ಅತ್ತೆಮನೆಯಲ್ಲಿಯೂ ಉಳಿಯಿತು ಸುಜಾತಾ ರೇಲ್ವೆ, ಹುಬ್ಬಳ್ಳಿಯಲ್ಲಿ ಕ್ಲರ್ಕ ಆಗಿದ್ದ ವಿನಾಯಕ ರಾಮಚಂದ್ರ ಕುಲಕರ್ಣಿ ಇವರ ಏಕ ಮಾತ್ರ ಪುತ್ರಿ. ೬ ಮಾರ್ಚ ೧೯೭೩ರಲ್ಲಿ ಹುಟ್ಟಿದ್ದು. ತಾಯಿ ಒಳ್ಳೆಯ ಕಂಠವಿದ್ದ ಗಾಯಕಿ. ನರ್ತಕಿಯೂ ಹೌದು. ಅಕ್ಟೋಬರ ೨೦೦೮ರಲ್ಲಿ ಆಕೆ ತೀರಿಕೊಂಡರು. ಸುಜಾತಾನ ಸೋದರ ಮಾವ, ಶಿಕ್ಷಕ ನಾ.ಕೃ. ಕುಲಕರ್ಣಿ ಅವರು ಬೆಳಗಾವಿಯಲ್ಲಿ ತಮ್ಮ ಸಂಗೀತ ವಿದ್ಯೆಗಾಗಿ ಸುಪರಿಚಿತರಾಗಿದ್ದರು. ಸುಜಾತಾ ಅವರ ಶಿಕ್ಷಣಾರ್ಹತೆ : ಬಿ.ಎ. ಬಿ.ಎಡ್ . ಬೆಳಗಾವಿಯಲ್ಲಿಯೆ ಮಾಡಿದ್ದು.
ಸುನೀಲ- ಸುಜಾತಾ ಈ ದಂಪತಿಗಳಿಗೆ ಸುರಭಿ (ಜನ್ಮ – ಮಾರ್ಚ ೧೨, ೧೯೯೯), ಸುಕೃತ (ಜನ್ಮ ಜೂನ ೨೧, ೨೦೦೭) ಎಂಬ ಎರಡು ಮಕ್ಕಳಿವೆ.
೨. ಗಿರೀಶ
ಹುಟ್ಟಿದ ದಿನಾಂಕ : ೧೩ ಅಗಸ್ಟ ೧೯೬೯. ಬಿ.ಕೆ.ಮಾಡೆಲ ಹಾಯಸ್ಕೂಲಿಂದ ಎಸ್.ಎಸ್.ಎಲ್.ಸಿ ; ಲಿಂಗರಾಜ ಕಾಲೇಜಿನಲ್ಲಿ ಕಲಿತು ಬಿ.ಎ. ಪದವಿ ಪಡೆದದ್ದು. ಬೆಳಗಾವಿಯಲ್ಲಿಯೆ ಓನಿಡಾ ದಲ್ಲಿ ಸರ್ವೀಸ ಇಂಜಿನೀಯರ ಎಂದು ಕೆಲಸ.
ವಿಳಾಸ : ಎಸ್.ವಿ. ಯಾರ್ದಿ, ಮನೆ ನಂ. ೧೩೨೯, “ಇಂದಿರಾ”, ಟಿಳಕ ಚೌಕದ ಹತ್ತಿರ, ರಾಮಲಿಂಗ ಖಿಂಡ, ಬೆಳಗಾವಿ. ಫೋನ (ಮೊ) : 944 8156 729 ; e-mail : yardi_@rediffmail.com
ಗಿರೀಶ – ಮನೆ ವಿಳಾಸ ಮೇಲಿನದೆ. ಫೋನ (ಮೊ) : 80 950 70 858 ; e- mail : girishyardi@gmail.com
ಬರೆದವರು – ಶ್ರೀಕಾಂತ ಮಂಗಳವೇಢೆ, ೧೬ -೧೨-೨೦೧೬ ರಂದು. ಆಧಾರ – ನನ್ನ ನೆನಪು ಮತ್ತು ೨೬ ಡಿಸೆಂಬರ ೨೦೧೪ ರವಿವಾರದಂದು ನಡೆಸಿದ ಅಕ್ಕಮ್ಮ ಅವರ ಸಂದರ್ಶನ.