ವಿಟ್ಠಲ (ಅಪ್ಪಣ್ಣ)
ವಿಟ್ಠಲ (ಅಪ್ಪಣ್ಣ) | ಹುಟ್ಟಿದ ದಿನಾಂಕ: 1950-08-29 | ||
ತಂದೆ: ಗೋವಿಂದ | ತಾಯಿ: | ||
ಮಕ್ಕಳು: ಅಮಿತ, ಆರತಿ | |||
ಒಡಹುಟ್ಟಿದವರು: ಮೋಹನ, ಪ್ರಹ್ಲಾದ, ಅಕ್ಕಮ್ಮ (ಉಷಾ), ಪುಷ್ಪಾ | Branch: 3 | Generation: 8 |
ವ್ಯಕ್ತಿ ಚಿತ್ರ
ದಿ. ವಿಟ್ಠಲ ಗೋವಿಂದ ಮಂಗಳವೇಢೆ
ಮುರಗೋಡದ ಅನಂತಾಚಾರ್ಯರ ಪ್ರಪೌತ್ರ, ರಾಮಾಚಾರ್ಯರ ಪೌತ್ರ, ಗೋವಿಂದ – ಸುಭದ್ರಾ (ರಮಾಬಾಯಿ) ಅವರ ಪುತ್ರ ದಿ. ವಿಟ್ಠಲ ಗೋವಿಂದ ಮಂಗಳವೇಢೆ ಕೊಲ್ಲಾಪುರದಲ್ಲಿದ್ದವರು
ಕಿರು ಪರಿಚಯ
ವಿಟ್ಠಲ ಉರ್ಫ ಅಪ್ಪಣ್ಣ: ಗೋವಿಂದ ರಾಮಾಚಾರ್ಯ ಮಂಗಳವೇಢೆ ಇವರ ಕನಿಷ್ಠ ಪುತ್ರ.
ತಾಯಿ: ರಮಾಬಾಯಿ (ತೌರು ಮನೆಯ ಹೆಸರು ಸುಭದ್ರಾ ಅಣ್ಣಾಜಿ ಯಾರ್ದಿ)
ಜನ್ಮ ದಿನಾಂಕ: ೨೯ ಅಗಸ್ಟ ೧೯೫೦ರಂದು ಗೋಕಾಕದಲ್ಲಿ.
ಮರಣ: ೨೦೦೦ ಇಸವಿಯ ಹೋಳಿ ಹುಣ್ಣಿವೆಯ ಮರುದಿನ, ತನ್ನ ೫೦ನೆ ವಯಸ್ಸಿನಲ್ಲಿ.
ಪತ್ನಿ: ಶರಯೂ (ತೌರು ಮನೆ ಹೆಸರು ಮತ್ತು ಕರೆಯುವ ಹೆಸರೂ ಹೌದು); ಅತ್ತೆ ಮನೆ ಹೆಸರು : ಸೀಮಾ
ಮಕ್ಕಳು: ೧. ಅಮಿತ ಮತ್ತು ೨. ಆರತಿ
ಉದ್ಯೋಗ: ಸ್ವಂತ ಉದ್ಯೋಗ. ಸ್ಟ್ಯಾಂಪ ವೆಂಡರ ಆಗಿದ್ದರು ಮತ್ತು ಸ್ವಂತದ ಟಾಯಪಿಂಗ ಮತ್ತು ಝೆರಾಕ್ಸ ಅಂಗಡಿಯನ್ನೂ ನಡೆಸುತ್ತಿದ್ದರು.
ವಾಸವಾಗಿದ್ದ ವಿಳಾಸ: ೭೨೭, “ರಮಾ”, ಜೈನ ಗಲ್ಲಿ ( ಬಿ ವಾರ್ಡ), ರವಿವಾರ ಪೇಟ, ಕೊಲ್ಹಾಪುರ (ಮಹಾರಾಷ್ಟ್ರ).
ವ್ಯಕ್ತಿ ಪರಿಚಯ
ನಮ್ಮ ಮನೆತನದ ಮೂರನೆಯ ಟಿಸಿಲಿನಲ್ಲಿ ನಾವೆಲ್ಲ ಎಂಟನೆ ತಲೆಮಾರಿನವರು. ಈ ಪೀಳಿಗೆಯ ಮೊದಲ ಅಂಕುರ ೧೯೩೦ರಲ್ಲಿ ಹುಟ್ಟಿದ ನನ್ನ ಅಣ್ಣ ಶ್ರೀನಿವಾಸ. ಇನ್ನೇನು ಮದುವೆ ಮಾಡ ಬೇಕು ಎನ್ನುವ ವಯಸ್ಸಿಗೆ ಬಂದಾಗ, ೨೩ ವರ್ಷ ಆಗಿತ್ತು ತೀರಿಹೋದ. ಅವನ ಬೆನ್ನಮೇಲೆ ನಾನು. ನನ್ನ ತಮ್ಮ ಗುರುರಾಜ (ರಾಜಾ) ಇನ್ನೇನು ತಾರುಣ್ಯದ ಹೊಸ್ತಿಲ ಮೇಲೆ ಇನ್ನು ನಿಲ್ಲುತ್ತಾನೆ ಎನ್ನುವಷ್ಟರಲ್ಲಿ, ೧೭ನೆ ವರ್ಷ ನಡೆಯುತ್ತಿರುವಾಗಲೆ ಅಕಾಲ ಮೃತ್ಯುವಿಗೀಡಾದ. ಕಿಟ್ಟೂ ಕಾಕಾನ ಮಕ್ಕಳು ಪ್ರೇಮಾ ಮತ್ತು ಪ್ರಮೋದ ಇವರ ಮದುವೆಯೇನೊ ಆಗಿತ್ತು. ಮಕ್ಕಳೂ ಆದರು. ಆದರೆ ಅವು ಇನ್ನೂ ತೊಡೆಯ ಮೇಲೆ, ಬಗಲಲ್ಲಿ ಆಡುತ್ತಿರುವಾಗಲೆ ತೀರಿ ಹೋದವರು.
ಇದು ಹುಟ್ಟಿ, ಬೆಳೆದು ಅಲ್ಪಾಯುವಾದವರ ದುರಂತ ಕತೆಯಾದರೆ, ಹುಟ್ಟಿ ಆಟವಾಡುತ್ತ ಬೆಳೆಯುವ ವಯಸ್ಸಿನಲ್ಲಿ ಕರುಣಾಜನಕ ರೀತಿಯಲ್ಲಿ ದೊಡ್ಡವರಾದವರಾದ ನಾವು ಕೆಲವರಿದ್ದೇವೆ. ನಾನು ತಂದೆ ರಂಗಣ್ಣನನ್ನು ನನ್ನ ೧೪ ವರ್ಷದ ಬಾಲ್ಯದಲ್ಲಿಯೆ ಕಳೆದು ಕೊಂಡೆ. ಅನಂತ ಕಾಕಾನ ಏಕ ಮಾತ್ರ ಮಗ ಮಾಧವ ತಾಯಿಯ ಹಾಲೂ ಕಾಣದೆ, ಅವಳ ಪ್ರೀತಿ, ಮುದ್ದುಗಳನ್ನು ಎಳ್ಳಿನಷ್ಟೂ ಅನುಭವಿಸದೆಯೆ ಹೆಚ್ಚೂ ಕಡಿಮೆ ತಾಯಿಯಿಲ್ಲದೆಯೆ ಬೆಳೆದವ. ಇಬ್ಬರೂ ನಾವು self-made ವ್ಯಕ್ತಿಗಳೆಂದು ಹೇಳಬಹುದಾದವರು.
ಆದರೆ ಈ ಶಬ್ದದ ಮೇಲೆ ನಮಗಿಂತ ಹೆಚ್ಚು ಅಧಿಕಾರದ ಮತ್ತೊಬ್ಬನಿರುವದು ನಮ್ಮಲ್ಲಿ ಯಾರ ಗಮನಕ್ಕೂ ಬಂದಿಲ್ಲ. ಅವನು ಎಲೆಯ ಮರೆಯ ಕಾಯಿಯಾಗಿ ಬೆಳೆದು, ಉಳಿದ. ನಡುವಯಸ್ಸಿನಲ್ಲೆ ಇಲ್ಲವಾಗಿ ಮರೆಯಾದ. ಯಾರ ನೆರವು ಇಲ್ಲದೆ ಬೆಳೆದ. ಸರಕಾರಿ ನೌಕರಿ ಇದ್ದೂ ಅದನ್ನು ಬಿಟ್ಟು ಸ್ವಂತ ಅಂಗಡಿ ತೆಗೆದು ನಡೆಸಿದ. ಮದುವೆಯಾಗಿ ಮಕ್ಕಳನ್ನು ಹೆತ್ತು ಸಂಸಾರ ಮಾಡಿದ. ಬರಿಗೈಯಿಂದ ಬೆಳೆದೂ ಸ್ವಂತ ಮನೆ ಕಟ್ಟಿಕೊಂಡ. ಅವನೆ ಅಪ್ಪಣ್ಣ ಎಂದು ಕರೆಸಿಕೊಳ್ಳುತ್ತಿದ್ದ ವಿಟ್ಠಲ. ಗೋವಿಂದಣ್ಣ ಕಾಕಾನ ಕೊನೆಯ ಮಗ.
ಅವನ ಬದುಕು ನಮ್ಮದಕ್ಕಿಂತ ಅತ್ಯಂತ ಬೇರೆ. ಹುಟ್ಟುವಾಗಲೆ ಭಿನ್ನ. ತಂದೆ ಮರಣಿಸಿದಾಗ ಇವನಿನ್ನೂ ತಾಯಿಯ ಹೊಟ್ಟೆಯಲ್ಲೆಇದ್ದ. ನಾಕು ತಿಂಗಳ ಮೇಲೆ ಭೂಮಿಯ ಮೇಲೆ ಬಂದ. ತಂದೆಯಿಂದ ಇವನಿಗೆ ಬಳುವಳಿಯಾಗಿ ಬಂದದ್ದು ಮಂಗಳವೇಢೆ ಎಂಬ ಅಡ್ಡಹೆಸರು ಮಾತ್ರ. ಮತ್ತೆ ಏನೇನೂ ಅಂದರೆ ಏನೇನೂ ಇಲ್ಲ. ತಾಯಿಯ ತೌರು ಬೆಳೆಸಿತು. ಹೋಗಲಿ, ಬೆಳೆಯುತ್ತಿರುವಂತೆ ತಂದೆಯ ಕಡೆಯ ಕಾಕಾ ಕಾಕೂ ಅತ್ತ್ಯಾ ಇವರ ಗುರುತಾದರೂ ಆಯಿತೆ? ಇವರು ಯಾರ ಸಂಪರ್ಕವೆ ಇಲ್ಲವಾಗಿ ಬೆಳೆದ. ಬಾಲ್ಯದಲ್ಲಿ ಆಗೀಗ ಬೆಳಗಾವಿಗೆ ಬಂದರೆ ಸುಬ್ಬಕ್ಕ ಅತ್ತ್ಯಾ ಅಧ್ಯಾಪಕ ಅವರ ಟಿಳಕವಾಡಿ ಮನೆಗೆ ಬರಬೇಕು, ಒಪ್ಪತ್ತಿನ ಮಟ್ಟಿಗೆ. ನಾವೆಲ್ಲ ಕಕ್ಕನ ಮಕ್ಕಳು ಅಲ್ಲೇ ಅಡ್ಡಾಡುತ್ತಿದ್ದರೂ ಒಬ್ಬರೂ ಮಾತಾಡಿಸುತ್ತಿರಲಿಲ್ಲ. ದೊಡ್ದವರು ತೋರುತ್ತಿದ್ದುದು ಸಿಟ್ಟು ತಿರಸ್ಕಾರದ ನೋಟ ಮಾತ್ರ.
ನಾನು ಸಣ್ಣ ವಯಸ್ಸಿನಲ್ಲಿಯೆ ತಂದೆಯನ್ನು ಕಳೆದುಕೊಂಡರೂ, ತಾಯಿ ಇದ್ದಳು. ತಂದೆಯಿದ್ದ ಅದೇ ಮನೆಯಲ್ಲಿಯೆ ಬೆಳೆದೆ. ಕಲಿತೆ, ಕೆಲಸ ಹಿಡಿದೆ. ಮದುವೆಯಾಗಿ ಸಂಸಾರ ಮಾಡಿದೆ. ಮಕ್ಕಳಾದವು. ನಿವೃತ್ತ ನಾದೆ. ಮಾಧವ ಹುಟ್ಟಿದ್ದು ತಾಯಿಗೆ ಇನ್ನು ಮಕ್ಕಳಾಗುವದು ಸಾಧ್ಯವೇ ಇಲ್ಲ ಎನ್ನುವ ವಯಸ್ಸಿನಲ್ಲಿ. ಆದರೆ ಹುಟ್ಟಿದ, ತಾಯಿಯಿಲ್ಲದೆಯೆ ಬೆಳೆದ. ಆದರೆ ತಂದೆಯಾದರೂ ಇದ್ದ. ಬಂಧು ಬಳಗ ಹಚ್ಚಿಕೊಳ್ಳದಿದ್ದರೂ ಅವನ ಪ್ರೀತಿಯಾದರೂ ಸಿಕ್ಕಿತು. ಒಬ್ಬಂಟಿಯಾಗಿ, ಬೆಳೆದ. ಕಲಿತ. ಅದು ಮುಗಿಯಲೆ ಇಲ್ಲ. ಮಕ್ಕಳಾದ ಮೇಲೂ ಅವರ ಜೊತೆಗೂ ಕಾಲೇಜಿಗೆ ಹೋದ, ಪದವಿ ನಂತರದ ಉನ್ನತ ಶಿಕ್ಷಣ ಪಡೆಯಲು. ಕೆಲಸದಲ್ಲಿಯೂ ಉನ್ನತ ಸ್ಥಾನ ಹೊಂದಿದ. ಸಣ್ಣ ವಯಸ್ಸಿನಲ್ಲೆ ಮದುವೆ, ಮಕಳು. ಈಗ ಅವರ ಮದುವೆಯ ಜವಾಬುದಾರಿಯನ್ನೂ, ಉದ್ಯೋಗದಲ್ಲಿನ ನಿವೃತ್ತಿಗೂ ಮುಂಚೆಯೆ ನೀಗಿಕೊಂಡಿದ್ದಾನೆ.
ಆದರೂ ವಿಟ್ಠಲನ ಕತೆ ನಮಗಿಂತ ಬೇರೆ.
ಇರಲಿ, ಈಗ ಅವನ ಜೀವನದ ಇತರ ಸಾಮಾನ್ಯ ವಿಷಯದ ಕಡೆ ಹೊರಳೋಣ.
ತಂದೆ ಗೋವಿಂದ ಅವರು ಲಂಚ ನಿರೋಧಕ ಪೋಲೀಸ ಅಧಿಕಾರಿ. ಮೊದಲ ಹೆಂಡತಿ ರಾಮದುರ್ಗದ ಸೋನಾಬಾಯಿ, ಕಿತ್ತೂರಿನಲ್ಲಿದ್ದಾಗ, ೧೯೪೦ರಲ್ಲಿ, ಹಡೆದು ನಂಜೇರಿ ತೀರಿಕೊಂಡ ನಂತರ ಗೋಕಾವಿಯ ಅಣ್ಣಾಜಿ ಯಾರ್ದಿಯವರ ಮಗಳು ಸುಭದ್ರಾಳನ್ನು ಮದುವೆಯಾದ. ೧೯೪೧ರ ಫೆಬ್ರುವರಿ ಯಲ್ಲಿ. ಆಗಲೆ ಮೊದಲಿನವಳಿಂದ ಮೋಹನ ಪ್ರಹ್ಲಾದ ಎಂಬ ಇಬ್ಬರು ಮಕ್ಕಳಿದ್ದರು. ಸುಭದ್ರಾಗೆ ಅತ್ತೆ ಮನೆಯಲ್ಲಿಟ್ಟ ಹೆಸರು ರಮಾ ಎಂದು. ಸುಭದ್ರಾ (ಸುಬ್ಬಾ) ನಿಂದ ಅಕ್ಕಮ್ಮ (ಉಷಾ), ಪುಷ್ಪಾ ಮತ್ತು ಕೊನೆಯವನಾಗಿ ವಿಟ್ಠಲ ಹುಟ್ಟಿದರು. ಈ ಮೂವರೂ ಹುಟ್ಟಿದ್ದು ಗೋಕಾಕದಲ್ಲಿ.
ಗಂಡ ಇಲ್ಲವಾಗಿದ್ದ. ಆಗ ಗರ್ಭಿಣಿಯಾಗಿದ್ದ ಹೆಂಡತಿ ತೊರುಮನೆಗೆ ಹೋದಳು. ಮುಂದೆ ನಾಕು ತಿಂಗಳ ನಂತರ ಹೆರಿಗೆಯಾಗಿ ಈತ ಹುಟ್ಟಿದ. ಮಗುವಿನೊಂದಿಗೆ ಅತ್ತೆ ಮನೆಗೆ, ಬೆಳಗಾವಿಗೆ ಹೋದರೆ ಮನೆ ಬಾಗಿಲು ತೆರೆಯಲಿಲ್ಲ. ಸೂಚ್ಯವಾಗಿ ಇದನ್ನೆಲ್ಲ ಗೋವಿಂದಣ್ಣ ಕಾಕಾ ಅವರ ವಿವರವಾದ ವ್ಯಕ್ತಿ ಪರಿಚಯದಲ್ಲಿ ಹೇಳಿದ್ದೇನೆ.
ವಿಟ್ಠಲ ಹುಟ್ಟಿದ ದಿನಾಂಕ: ೯ ಅಗಸ್ಟ ೧೯೫೦ ರಂದು, ಗೋಕಾಕದಲ್ಲಿ ; ಮರಣ ದಿನಾಂಕ : ೧೦ ಮಾರ್ಚ ೨೦೦೧, ತನ್ನ ಐವತ್ತೊಂದನೆ ವರ್ಷ ವಯ್ಸಸ್ಸಿನಲ್ಲಿ , ಕೊಲ್ಲಾಪುರದ ಆಸ್ಪತ್ರೆಯೊಂದರಲ್ಲಿ ನಾಕು ಐದು ದಿನ ಚಿಕಿತ್ಸೆ ಪಡೆದ ನಂತರ, ಬಹು ಅಂಗಾಂಗ ವೈಫಲ್ಯದಿಂದ (multiiple organ failure).
ಶಿಕ್ಷಣ: ಗೋಕಾಕದಲ್ಲಿ ನಗರಸಭೆಯ ಮಾಧ್ಯಮಿಕ ಶಾಲೆಯಲ್ಲಿ ಕಲಿತು ೧೯೬೬ ರಲ್ಲಿ ಎಸ್.ಎಸ್.ಎಲ್.ಸಿ ಪಾಸಾದದ್ದು.
ವೃತ್ತಿ ಜೀವನ: ೨೨ ನೆ ವಯಸ್ಸಿಗೆ, ಭೂಗರ್ಭ ಮತ್ತು ಗಣಿಗಾರಿಕೆ ಇಲಾಖೆಯಲ್ಲಿ (Department of geology & Mining) ೧೯೭೨ರಲ್ಲಿ ಕೆಲಸ ಸಿಕ್ಕಿತು. ಆ ಇಲಾಖೆಯಲ್ಲಿ (UDC scale) 27 ವರ್ಷ ಕೆಲಸ ಮಾಡಿ, ಇನ್ನೂ ೧೪ ವರ್ಷಗಳ ಸೇವಾವಧಿ ಬಾಕಿ ಇರುವಾಗಲೆ ಸ್ವಯಂ ಸೇವಾ ನಿವೃತ್ತಿ ಯೋಜನೆಯಲ್ಲಿ (Voluntary Retirement Scheme – VRS) ಅಕ್ಟೋಬರ ೧೯೯೭ ರಲ್ಲಿ ನಿವೃತ್ತಿ ಪಡೆದದ್ದು. ನಂತರ ಕೊಲ್ಹಾಪುರದಲ್ಲಿಯೆ ಅಮಿತ ಟಾಯಪಿಂಗ ಮತ್ತು ಝೆರಾಕ್ಸ ಸೆಂಟರ ಎಂಬ ಅಂಗಡಿಯನ್ನು ತೆರೆದುದು. ಅದು ೬೯೪, ಬಿ. ವಾರ್ಡ, ಆಜಾದ ಚೌಕ, ಮಹಾಭಾರತ ಭವನದಲ್ಲಿದ್ದಿತು. ಅದು ಎಲೆಕ್ಟ್ರೊನಿಕ ಟಾಯಪಿಂಗ ಮತ್ತು ಝೆರಾಕ್ಸ ಅಂಗಡಿ. ಅಲ್ಲಿ ಫೋಟೊ ಮತ್ತು ದಾಖಲೆಗಳ ಲ್ಯಾಮಿನೆಶನ ಕೆಲಸ ಮತ್ತು ಸ್ಪಾಯಿರಲ ಬಾಯಂಡಿಂಗ ಕೆಲಸವೂ ಆಗುತ್ತಿದ್ದಿತು. ಅಲ್ಲದೆ ಎಸ್.ಟಿ.ಡಿ ಬೂಥ ಕೂಡ ಇದ್ದಿತು. ೪೦೦ ಚದುರ ಫೂಟಿನ ಆ ಅಂಗಡಿಯನ್ನು ೬ ಲಕ್ಷ ರೂಪಾಯಿಗೆ ಕೊಳ್ಳಲಾಗಿತ್ತು. ಇದರ ಜೊತೆಗೆ ಸ್ಟ್ಯಾಂಪ ವೆಂಡರ ಎಂದೂ ಕೆಲಸ ಮಾಡುತ್ತಿದ್ದುದು.
ಮದುವೆ: ಗಡಹಿಂಗ್ಲಜ ಮೂಲದ, ಟೆಲಿಗ್ರಾಫ ಡಿಪಾರ್ಟಮೆಂಟಿನಲ್ಲಿ ಕೆಲಸ ಮಾಡುತ್ತಿದ್ದ ಬಳವಂತ ನಾರಾಯಣ ಕುಲಕರ್ಣಿ ಯವರಮಗಳು ಶರಯೂ ಜೊತೆ. (ಅತ್ತೆಮನೆಯಲ್ಲಿ ಸೀಮಾ ಎಂದು ಹೆಸರಿಟ್ಟರೂ ಕರೆಯುವದು ಶರಯೂ ಎಂದೆ. ಬಳವಂತರಾವ ಅವರಿಗೆ ಐದು ಜನ ಮಕ್ಕಳು. ೧. ರಮೇಶ ೨. ಶರಯೂ ೩. ಶೈಲಾ ೪. ಗೀತಾ ೫. ಚಂದ್ರಕಾಂತ. ಶರಯೂ ಹುಟ್ಟಿದ್ದು ಬೆಳಗಾವಿಯಲ್ಲಿ, ಮಾರುತಿ ಗಲ್ಲಿಯಲ್ಲಿ.
ಮಕ್ಕಳು : ಇಬ್ಬರು – ೧. ಅಮಿತ – ಹುಟ್ಟಿದ್ದು ೧೮ ಡಿಸೆಂಬರ ೧೯೭೮, ಕೊಲ್ಹಾಪುರದಲ್ಲಿ. ಈತ ಬಿ.ಇ. (ಕಂಪ್ಯೂಟರ ಸಾಯನ್ಸ) ಪುಣೆಯಲ್ಲಿ ಕೆಲಸ. ೨. ಆರತಿ – ಹುಟ್ಟಿದ್ದು ೫ ನವೆಂಬರ ೧೯೮೦ (ಧನ ತ್ರಯೋದಶಿಯ ದಿನ), ವಿವಾಹಿತೆ. ಕೊಲ್ಹಾಪುರದಲ್ಲಿದ್ದಾಳೆ.
ಮನೆ – ಆಸ್ತಿ: ಕೊಲ್ಹಾಪುರಕ್ಕೆ ಬಂದ ಹೊಸದರಲ್ಲಿ ಅಂಬಾಬಾಯಿ ಗುಡಿಯ ಹತ್ತಿರ ಒಂದು ಬಾಡಿಗೆ ಮನೆಯಲ್ಲಿ (ಬೇಲಬಾಗದಲ್ಲಿ) ಇರುತ್ತಿದ್ದರು. ನಂತರ ಸ್ವಂತದ ಮನೆ ರವಿವಾರ ಪೇಟದಲ್ಲಿ ಆಯಿತು. ಅದನ್ನು ೩.೫ ಲಕ್ಷ ರುಪಾಯಿಗೆ ಮಾರಿ, ತಳ ಮಹಡಿ ಮತ್ತು ಮೊದಲ ಅಂತಸು ಸೇರಿ ಸುಮಾರು ೧೧೦೦ ಚೌ.ಫೂ. ಕ್ಷೇತ್ರದ “ರಮಾ” ಎಂಬ ಮನೆಯನ್ನು ಮಾಡಿಕೊಂಡದ್ದು. ಸುಮಾರು ೭.೫ ಲಕ್ಷ ರುಪಾಯಿ ಖರ್ಚು ಆಗಿದ್ದಿತು. ಅದು ರವಿವಾರ ಪೇಟೆಯ ಜೈನ ಗಲ್ಲಿ, ಬಿ ವಾರ್ಡಿನಲ್ಲಿ ಇದ್ದಿತು. ೨೭ ನವೆಂಬರ ೧೯೯೭ ರಲ್ಲಿ ಹೊಸ ಮನೆಯಲ್ಲಿ ವಾಸ್ತು ಶಾಂತಿ, ಗೃಹ ಪ್ರವೇಶ ಮಾಡಿದ್ದರು. ನಾನು ಕೊಲ್ಹಾಪುರಕ್ಕೆ ಹೋಗಿದ್ದಾಗ ಆ ಮನೆ ನೋಡಲು,೧೯೯೯ರ ಡಿಸೆಂಬರ ೨೬ರಂದು ಹೋಗಿದ್ದೆ.
ಈಗ ಅದನ್ನು ಮಾರಿ (ಬಹುಶಃ ೨೦೦೭ರಲ್ಲಿ) ಕೊಲ್ಹಾಪುರದಲ್ಲಿಯೆ ಲೇನ ನಂ. ೭, ಹರಿ ಓಂ ನಗರ, ಅಂಬಾಬಾಯಿ ಟ್ಯಾಂಕ ಹತ್ತಿರ ಹೊಸ ಮನೆಯನ್ನು ಕೊಂಡಿದ್ದಾರೆ. ತಾಯಿ ಶರಯೂ ಪುಣೆಯಲ್ಲಿ ಇದ್ದರೂ ಮಗನ ಕಡೆಗೆಂದು ಆಗೀಗ ಪುಣೆಗೆ ಬಂದು ಹೋಗುತ್ತಾರೆ.
ತಾಯಿಯ ಮರಣ: ೧೯೯೭ರ ಎಪ್ರಿಲದಲ್ಲಿ. ಚೈತ್ರ ಕೃಷ್ಣ ಕೃಷ್ಣ ಅಷ್ಟಮಿ ಯಂದು.
ಆ ಸಂದರ್ಭದಲ್ಲಿನ ಒಂದು ನೆನಪು : ಸುದ್ದಿ ಗೊತ್ತಾದಾಗ ವಿಟ್ಠಲನನ್ನು ಮಾತಾಡಿಸಲು ಕೊಲ್ಹಾಪುರಕ್ಕೆ ಹೋಗಿದ್ದೆ. ಅದೆಲ್ಲ ಆಗಿ ಅಲ್ಲಿಂದ ಹೊರಟೆ. ಕಳಿಸಲು ಸ್ವಲ್ಪ ದೂರ ಮಾತನಾಡುತ್ತ ಬಂದ. ನಾವು ಭೆಟ್ಟಿಯಾಗುವದು ಬಹಳ ಅಪರೂಪವಾಗಿತ್ತು. ತಡೆದುಕೊಳ್ಳಲು ಆಗದೆ ಅವನ ಮುಂದೆ ತೋಡಿಕೊಂಡೆ. “ನಾವು ಭೆಟ್ಟಿ ಆಗೋದು ಯಾರಾದರೂ ಸತ್ತಾಗ ಮಾತ್ರ ಆಗುತ್ತಿದೆ. ಹುಟ್ಟಿದಾಗ, ತೊಟ್ಟಿಲಲ್ಲಿ ಹಾಕುವಾಗ, ಮದುವೆ ಮುಂಜಿವೆಗಳಲ್ಲಿ ಕೂಡ ನಾವು ಒಂದೆಡೆ ಸೇರಿ ಭೆಟ್ಟಿಯಾಗುತ್ತಿಲ್ಲ. ಹೀಗಾಗುತ್ತಿರುವದು ಎಂದು ಮುಗಿಯುವದೊ ಏನೊ” ಎಂದೆ.
ಅವನ ಮನಸ್ಸಿಗೂ ಅದು ಹತ್ತಿತು. “ಹೌದು. ಇದು ಖರೆ ಅದ. ಹೀಗೆ ಆಗ ಬಾರದು. ಒಂದು ಕೆಲಸ ಮಾಡೋಣ. ಮುಂದಿನ ದಿನಗಳಲ್ಲಿ, ನೀವು ಎಂದಾದರೂ ಪಂಢರಪುರಕ್ಕೆ, ಕುಲದೇವರಿಗೆ ಹೋಗುವ ಯೋಚನೆ ಮಾಡಿದಾಗ, ಒಂದು ಕೆಲಸ ಮಾಡಿರಿ. ನೇರವಾಗಿ ಬೆಳಗಾವಿಯಿಂದ ಹೋಗಬೇಡಿರಿ. ಮೊದಲೆ ತಿಳಿಸಿರಿ. ನಾನೂ ಕುಟುಂಬ ಸಮೇತ ಬರುತ್ತೇನೆ. ನೀವು ಇಲ್ಲಿ ಬನ್ನಿರಿ. ಟ್ಯಾಕ್ಸಿ ವ್ಯವಸ್ಥೆ ಮಾಡಿರುತ್ತೇನೆ. ಕೂಡಿಯೆ ಹೋಗೋಣ”, ಎಂದಿದ್ದ. ಆದರೆ, ದುರ್ದೈವ. ಆಗ ಅಂದು ಕೊಂಡಂತೆ ಆಗಲೆ ಇಲ್ಲ.
ಆದರೆ, ನನ್ನ ಷಷ್ಟ್ಯಬ್ದಿ ಹೊತ್ತಿಗೆ ಅವನು ಇಲ್ಲವಾಗಿ ಬಿಟ್ಟಿದ್ದ. ೨೦೦೧ರಲ್ಲಿ ನಡೆದ ಆ ಕಾರ್ಯಕ್ರಮಕ್ಕೆ ಅಲ್ಲದಿದ್ದರೂ, ಅವನ ಮಗ ಅಮಿತ ಮುಂದೆ ಕೆಲದಿನಗಳ ನಂತರ ಬಂದು ಹೋಗಿದ್ದ.
ಬರೆದವರು : ಶ್ರೀಕಾಂತಮಂಗಳವೇಢೆ ೧೭ ಡಿಸೆಂಬರ ೨೦೧೬, ಶನಿವಾರ ಪುಣೆಯಲ್ಲಿ. ಆಧಾರ – ನೆನಪುಗಳು ಮತ್ತು ವಿಟ್ಠಲನನ್ನು ೨೬-೧೨-೧೯೯೯ರಲ್ಲಿ ಸಂದರ್ಶಿಸಿ ಬರೆದುಕೋಂಡಿದ್ದ ಟಿಪ್ಪಣಿಗಳು.