ಗೋವಿಂದ
ಗೋವಿಂದ | ಹುಟ್ಟಿದ ದಿನಾಂಕ: 1906-06-14 | ಮರಣ ದಿನಾಂಕ: 1950-04-21 | |
ತಂದೆ: ರಾಮಾಚಾರ್ಯ | ತಾಯಿ: | ||
ಮಕ್ಕಳು: ಮೋಹನ, ಪ್ರಹ್ಲಾದ, ಅಕ್ಕಮ್ಮ (ಉಷಾ), ಪುಷ್ಪಾ, ವಿಟ್ಠಲ (ಅಪ್ಪಣ್ಣ) | |||
ಒಡಹುಟ್ಟಿದವರು: ಬಾಳಾಚಾರ್ಯ (?), ರಂಗಾಚಾರ್ಯ, ಭೀಮಾಬಾಯಿ (ಅಕ್ಕಣ್ಣಿ), ಕ್ರಿಷ್ಣಾಬಾಯಿ, ಅನಂತಾಚಾರ್ಯ, ಪಾಂಡುರಂಗ, ಕೃಷ್ಣಾಜಿ, ಸುಭದ್ರಾ | Branch: 3 | Generation: 7 |
ವ್ಯಕ್ತಿ ಚಿತ್ರ
ದಿ. ಗೋವಿಂದ ರಾಮಾಚಾರ್ಯ ಮಂಗಳವೇಢೆ
ಮುರಗೋಡದ ರಂಗಾಚಾರ್ಯರ ಪ್ರಪೌತ್ರ, ಅನಂತಾಚಾರ್ಯರ ಪೌತ್ರ, ರಾಮಾಚಾರ್ಯರ ಪೌತ್ರ
ಕಿರು ಪರಿಚಯ
ಜನ್ಮ: ೧೪ ಜೂನ ೧೯೦೬ ; ಮರಣ : ೨೧ ಎಪ್ರಿಲ ೧೯೫೦
ಬೆಳಗಾವಿಯಲ್ಲಿ ಪೋಲೀಸ (ಲಂಚ ನಿರೋಧಕ ವಿಭಾಗ) ದಲ್ಲಿ ಅಧಿಕಾರಿ. ಸರ್ವೀಸಿನಲ್ಲಿದ್ದಾಗಲೆ ತೀರಿಕೊಂಡಿದ್ದು.
ತಂದೆ – ರಾಮಾಚಾರ್ಯರು ; ತಾಯಿ – ಕಾವೇರಿ ಬಾಯಿ.
ಮೊದಲ ಪತ್ನಿ – ಸೋನಾ ತೀರಿಕೊಂಡ ಮೇಲೆ, ಎರಡನೆಯ ಪತ್ನಿ – ಸುಭದ್ರಾ (ಅತ್ತೆ ಮನೆ ಹೆಸರು – ರಮಾಬಾಯಿ)
ಮಕ್ಕಳು : ಮೊದಲ ಪತ್ನಿ ಸೋನಾ ಅವರ ಹೊಟ್ಟೆಯಿಂದ ೧. ಮೋಹನ ಮತ್ತು ೨. ಪ್ರಹ್ಲಾದ – ಇಬ್ಬರೂ ತೀರಿಕೊಂಡಿದ್ದಾರೆ . ಎರಡನೆ ಪತ್ನಿ ಸುಭದ್ರಾಅವರ ಹೊಟ್ಟೆಯಿಂದ ೧. ಅಕ್ಕಮ್ಮ (ಉಷಾ ) (ವಿದ್ಯಾಧರ ಅಣ್ಣಾಜಿ ಯಾರ್ದಿಯವರ ಪತ್ನಿ), ೨. ಪುಷ್ಪಾ (ವಿಶ್ವಾಸ ರಾಮಚಂದ್ರ ಅಧ್ಯಾಪಕ ಇವರ ಪತ್ನಿ), ಮತ್ತು ೩. ವಿಟ್ಠಲ. ಇವರಲ್ಲಿ ಅಕ್ಕಮ್ಮ ಮತ್ತು ವಿಟ್ಠಲ ಇಬ್ಬರೂ ತೀರಿಕೊಂಡಿದ್ದಾರೆ. ಪುಷ್ಪಾ ಅಧ್ಯಾಪಕ ಕೊಲ್ಲಾಪುರದಲ್ಲಿ ಇರುತ್ತಾರೆ.
ವ್ಯಕ್ತಿ ಪರಿಚಯ
ನನ್ನ ತಂದೆಯ ಬೆನ್ನ ಮೇಲೆ ಎರಡು ವರ್ಷಗಳ ನಂತರ ಹುಟ್ಟಿದವರು ಈ ನನ್ನ ಕಕ್ಕ. ನನ್ನ ತಂದೆ ಮತ್ತು ಈ ಕಕ್ಕ ಇವರಿಬ್ಬರನ್ನೂ ನಾನು ಕರೆಯುತ್ತಿದ್ದ ರೀತಿಯಲ್ಲಿ ಒಂದು ವಿಶೇಷವಿದ್ದಿತು. ನನ್ನ ತಂದೆಯನ್ನು ಅಪ್ಪಾ ಎಂದು ಕರೆಯದೆ ರಂಗಣ್ಣ ಎನ್ನುತ್ತಿದ್ದೆ. ಹಾಗೆಯೆ ಕಕ್ಕನನ್ನು ಕಾಕಾ ಎನ್ನದೆ ಗೋವಿಂದಣ್ಣ ಎಂದು ಕರೆಯುತ್ತಿದ್ದೆ.
ಕಾರಣ ಇಷ್ಟೆ, ಅವರ ಒಡ ಹುಟ್ಟಿದವರು – ಆ ಎಲ್ಲರೂ ತಮ್ಮಂದಿರು ಅಥವಾ ತಂಗಿಯಂದಿರು – ಅವರಿಬ್ಬರೂ ಅಣ್ಣಂದಿರೆ ಆದ ಕಾರಣ ರಂಗಣ್ಣ, ಗೋವಿಂದಣ್ಣ ಎಂದು ಕರೆಯುತ್ತಿದ್ದರು. ಆ ಅವಿಭಕ್ತ ಕುಟುಂಬದಲ್ಲಿ ಹುಟ್ಟಿದ್ದ ನಾನು ಬೆಳೆಯುತ್ತ ಬೆಳೆಯುತ್ತ ಮಾತನಾಡಲು ಬರತೊಡಗಿದಂತೆ ಆ ಚಿಕ್ಕಪ್ಪಂದಿರನ್ನೆ ಅನುಕರಿಸಿ ಹೆಸರಿನಿಂದಲೆ ಕರೆಯತೊಡಗಿದ್ದೆ. ಆ ರೂಢಿಯನ್ನಾರೂ ಬಿಡಿಸಿರಲಿಲ್ಲ.
ದೊಡ್ಡವರಾದಂತೆ ಅಣ್ಣ ತಮ್ಮಂದಿರು ದಾಯದಿಗಳಾಗಿ ದೂರವಾಗುತ್ತಾರೆ. ರಂಗಣ್ಣ ಗೋವಿಂದಣ್ಣ ಇದಕ್ಕೆ ಅಪವಾದವಾಗಿದ್ದರು. ಒಬ್ಬರನ್ನೊಬ್ಬರು ಹಚ್ಚಿಕೊಂಡಿದ್ದರು. ಇಬ್ಬರ ನಡುವೆ ವಯಸ್ಸಿನ ಅಂತರ ಎರಡೆ ವರ್ಷ. ಆದರೆ ಮನಸ್ಸುಗಳ ನಡುವೆ ಆ ಅಂತರ ಬಹುಶಃ ಇರಲೆ ಇಲ್ಲ. ಸಂತೋಷದಿಂದ ಈ ಮಾತನ್ನು ಹೇಳುತ್ತಿದ್ದರೆ, ದು:ಖದ ಸಂಗತಿಯೂ ಒಂದಿದೆ. ಇಬ್ಬರೂ ಸಣ್ಣ ವಯಸ್ಸಿನಲ್ಲೇ ತೀರಿಕೊಂಡರು. ಅದರಲ್ಲಿನ ವ್ಯತ್ಯಾಸ – ಮೊದಲು ತಮ್ಮ ಹೋದ ೧೯೫೦ರಲ್ಲಿ, ನಂತರ ಅಣ್ಣ ಅವನ ಬೆನ್ನು ಹತ್ತಿದ ೧೯೫೬ರಲ್ಲಿ. ಇಬ್ಬರು ಹೋದದ್ದೂ ಉದರ ಬೇನೆಯಿಂದ.
ಮರಣ : ಶಕೆ ೧೮೭೨, ವಿಕೃತಿ ನಾಮ ಸಂವತ್ಸರ, ವೈಶಾಖ ಶುಕ್ಲ ಚತುರ್ಥಿ (ಅಕ್ಷಯ ತೃತೀಯಾ ಮರುದಿನ), ಶುಕ್ರವಾರ. ಅಂದರೆ ೨೧ ಎಪ್ರಿಲ ೧೯೫೦. ಉದರ ಬೇನೆಯಿಂದ (ಲೀವರ ತೊಂದರೆ). ಬೆಳಗಾವಿಯಲ್ಲಿನ ಕಾಕತಿವೇಸ ಗಲ್ಲಿಯಲ್ಲಿ ಆ ಕಾಲದಲ್ಲಿದ್ದ ಡಾ. ಕಿತ್ತೂರರ ಆಸ್ಪತ್ರೆಯಲ್ಲಿ. ಒಂದೆರಡು ತಿಂಗಳ ಜಡ್ಡಿನ ನಂತರ. ತಮ್ಮ ೪೪ ನೆ ವಯಸ್ಸಿನಲ್ಲಿ.
ಗೋವಿಂದಣ್ಣ ಕಾಕಾ ತೀರಿಕೊಂಡಾಗ ನಾನು ಬಹಳ ಚಿಕ್ಕವ. ಐದನೆ ಇಯತ್ತೆಯಲ್ಲಿದ್ದೆ. ನನ್ನ ಅಣ್ಣ ಶೀನೂ (ಶ್ರೀನಿವಾಸ, ಅವನೂ ಅಕಾಲದಲ್ಲಿ ಸಾವನ್ನಪ್ಪಿದವ, ೧೯೫೫ ರಲ್ಲಿ) ಅಂತ್ಯ ದರ್ಶನಕ್ಕೆ ಕರೆಯಲು, ವರ್ಗನಡೆಯುತ್ತಿದ್ದಾಗಲೆ ಶಾಲೆಗೆ ಬಂದು ನನ್ನನ್ನು ಕರೆದೊಯ್ದಿದ್ದ. ಮರಣಿಸಿದ್ದು ನಮ್ಮ ಮನೆಯ ಹಿಂದುಗಡೆಯ ಬೀದಿ, ಕಾಕತಿ ವೇಸ ಗಲ್ಲಿಯಲ್ಲಿದ್ದ ಡಾ. ಕಿತ್ತೂರ ಅವರ ಆಸ್ಪತ್ರೆಯಲ್ಲಿ. ಅಲ್ಲಿಂದ ಮನೆಗೆ ಬಂದಾಗ ನಡು ಮನೆಯಲ್ಲಿನ ಮಾಡದಲ್ಲಿಟ್ಟಿದ್ದ ಸಣ್ಣ ಅಲಾರ್ಮ ಗಡಿಯಾರ ಕೆಳಗೆ ಬಿದ್ದಿದ್ದಿತು. ಅದರ ಕಾಜು ಒಡೆದಿದ್ದಿತು. ಹಾಗೆ ಕೆಳಗೆ ಬಿದ್ದದ್ದಕ್ಕೆ ಕಾರಣವೊಂದು ಇರಬೇಕಲ್ಲ. ಅದು ಗೊತ್ತಾಗಲಿಲ್ಲ. ನಾವು ಮನೆಯಲ್ಲಿಲ್ಲದಾಗ ನಡೆದಿದ್ದಿತು. ಆ ಸಂಗತಿ ಇನ್ನೂ ಮಸುಕಾಗಿ ನೆನಪಿದೆ.
ಇದು ಒಂದು ಸಣ್ಣ ಸಂಗತಿ. ಆದರೆ ಕಾಕಾ ವಾಸವಾಗಿದ್ದ ಮನೆಯಲ್ಲಿ ದೊಡ್ದದೊಂದು ಅನಾಹುತ ಆಗಿದ್ದಿತು, ಅಥವಾ ಆಗಬಹುದಾಗಿದ್ದು ಸ್ವಲ್ಪದರಲ್ಲಿಯೆ ತಪ್ಪಿತು. ಆ ಮನೆ, ನನ್ನ ತಂದೆಯೊಬ್ಬರನ್ನು ಬಿಟ್ಟು, ಆ ಎಲ್ಲ ಅಣ್ಣ ತಮ್ಮಂದಿರು ಕೂಡಿ ಇರುತ್ತಿದ್ದ ಮನೆ. ಅಜ್ಜ ರಾಮಾಚಾರ್ಯರ ಕಾಲದಲ್ಲಿ ಕೊಂಡಿದ್ದ ರಾಮಲಿಂಗ ಖಿಂಡದಲ್ಲಿನ ಮನೆ.
ಅತ್ತ ಕಾಕಾ ಮರಣಿಸಿದ್ದರು. ಇತ್ತ, ಸುಬ್ಬಾ ಎಂದು ಹಿರಿಯರು ಕರೆಯುತ್ತಿದ್ದ ಕಾಕೂ ಬಾವಿಯಲ್ಲಿ ಬಿದ್ದದ್ದು ಲಕ್ಷ್ಯಕ್ಕೆ ಬಂದಿತು. ಆಗ ಆಕೆ ಗರ್ಭಿಣಿ. ಹೊಟ್ಟೆಯಲ್ಲಿ ಮುಂದೆ ಹುಟ್ಟಲಿದ್ದ ವಿಟ್ಠಲ ಇದ್ದ. ಬಾವಿಯಲ್ಲಿ ಕಡಿಮೆ ನೀರು ಇದ್ದಿತೆಂದು ಮುಳುಗಿರಲಿಲ್ಲ. ಜೀವಕ್ಕೆ ಅಪಾಯವಾಗಿರಲಿಲ್ಲ. ಮೈಗೆ ಅಲ್ಪ ಸ್ವಲ್ಪ ಪೆಟ್ಟು ಆಗಿತ್ತು. ದೊಡ್ಡ ತೊಟ್ಟಿಲಕ್ಕೆಬಲವಾದ ಹಗ್ಗಗಳನ್ನು ಕಟ್ಟಿ ಇಳಿಬಿಟ್ಟು, ಹೊರತೆಗೆದರು.
ಇದು ವಸ್ತುತಃ ನಡೆದದ್ದು. ಕಾಕೂ ಬಾವಿಗೆ ಬಿದ್ದುದು ಏಕೆ, ಆ ಕಾರಣ ಮೀಮಾಂಸೆಯನ್ನು ಅರವತ್ತು ವರ್ಷಗಳ ನಂತರ ಈಗ, ಈ ಬರವಣಿಗೆಯ ಮೂಲಕ ಮಾಡುವದು ಅನಗತ್ಯ. ಅದರಿಂದ ಸಾಧಿಸುವದಕ್ಕಿಂತ ಕೇಡು, ಕಹಿ ಇಷ್ಟೆ ಹುಟ್ಟೀತು. ಮರೆತು ಹೋದುದನ್ನು ಮರೆತು ಇರುವದರಲ್ಲಿಯೆ ಸುಖವಿದೆ.
ಈಗ ಅದು ಹೆಚ್ಚೂ ಕಡಿಮೆ ಎಲ್ಲರೂ ಮರೆತಿರುವ ಘಟನೆ. ಕಾಕೂ ಇಲ್ಲ. ಅವಳ ಭಾವ ಮೈದುನರೂ ಇಲ್ಲ. ಹೊಟ್ಟೆಯಿಂದ ಹುಟ್ಟಿದ ಮಕ್ಕಳೂ, ಪುಷ್ಪಾ ಎಂಬ ಒಬ್ಬಳನ್ನು ಬಿಟ್ಟು, ಯಾರೂ ಇಲ್ಲ. ಆ ಮೇಲೆ ಹುಟ್ಟಿದ ವಿಟ್ಠಲನೂ ಇಲ್ಲ, ಮಲ ಮಕ್ಕಳೂ ಸತ್ತು ಹಲವು ವರ್ಷಗಳಾದವು.
ಹೀಗಾಗಿ, ಅದನ್ನು ಕಣ್ಣಾರೆ ಕಂಡವರು, ಸ್ಪಷ್ಟವಾಗಿ ಘಟನೆಯ ಕಾರಣವನ್ನುತಿಳಿದವರು, ಸಂಬಂಧಿಸಿದವರು ಬಹುಶಃ ಈಗ ಒಬ್ಬಿಬ್ಬ ದೂರದ ಮುದುಕರನ್ನು ಬಿಟ್ಟು ಯಾರೂ ಉಳಿದಿಲ್ಲ. ನನ್ನಗಿಂತ ಮೂರು ವರ್ಷ ದೊಡ್ಡವನಾಗಿದ್ದ ಮತ್ತು ಅಗಿನದೆಲ್ಲದರ ತಕ್ಕ ಮಟ್ಟಿಗಿನ ನೆನಪು ಇದ್ದ ಅಧ್ಯಾಪಕ ಬಾಬೂರಾಯನೂ ತೀರಿಕೊಂಡು (ನವೆಂಬರ ೨೬, ೨೦೧೬) ಹದಿನೇಳು ದಿನಗಳಾದವು. ನನ್ನ ನೆನಪು ಮಸುಕಾಗಿದೆ. ಉಳಿದವರು ನನಗಿಂತ ಸಣ್ಣವರು.
ಗೋವಿಂದಣ್ಣನ ಸಾವಿಗಿಂತ ಮೊದಲು, ಸುಮಾರು ತಿಂಗಳ ಒಪ್ಪತ್ತು ನನ್ನ ತಂದೆ ತನ್ನ ತಮ್ಮನನ್ನು ಆರೈಕೆಗಾಗಿ ಗೋಂಧಳಿ ಗಲ್ಲಿಯ ಬೆಳವಿ ಚಾಳಿನ (ಬಾಡಿಗೆ) ನಮ್ಮ ಮನೆಯಲ್ಲಿ ಇಟ್ಟುಕೊಂಡಿದ್ದರು. ಹೀಗಾಗಿ, ಆ ಕಕ್ಕನ ಕೊನೆಯ ದಿನಗಳನ್ನು ಸಮೀಪದಿಂದ ನೋಡಿದ್ದೆ. ನಮ್ಮ ಮನೆಗೆ ಕರೆತರುವ ಮೊದಲು ಮಿರಜಿ ಯಲ್ಲಿನ ಮಿಶನ ಆಸ್ಪತ್ರೆಯಲ್ಲಿ ಕೆಲದಿನ ಚಿಕಿತ್ಸೆ ಕೊಡಿಸಲಾಗಿತ್ತು. ಅಲ್ಲಿಂದ ಆಗ ನನ್ನ ತಂದೆ ಬೆಳಗಾವಿಗೆ – ಕಿಟ್ಟೂಕಾಕಾನಿಗೆ ಬರೆದ ಪೋಸ್ಟ ಕಾರ್ಡು ಒಂದು ಈಗಲೂ ನನ್ನ ಸಂಗ್ರಹದಲ್ಲಿದೆ. ಹಾಗೆಯೆ ಆಗ ಬರೆದ ಮತ್ತೆರಡು ಪತ್ರಗಳು – ಪಾಂಡುಕಾಕಾನದು ಒಂದು, ಅಣ್ಣಾಜಿ ಯಾರ್ದಿಯವರದು ಇನ್ನೊಂದು ಇವೆ. ಮಿರಜಿಯಲ್ಲಿ ವಿಶೇಷ ಸುಧಾರಣೆ ಕಾಣದಿದ್ದಾಗ ಬೆಳಗಾವಿಗೆ ಮರಳಿ ಕರೆದುಕೊಂಡು ಬಂದಿದ್ದರು.
ಆ ದಿನಗಳಲ್ಲಿ ಮನೆಗಳಲ್ಲೆಲ್ಲ ನೀರು ಕಾಯಿಸಲು, ಅಡುಗೆ ಮಾಡಲು ಕಟ್ಟಿಗೆ ಉರಿಯ ಮಣ್ಣಿನ ಒಲೆಗಳು ಸಾಮಾನ್ಯವಾಗಿದ್ದವು. ಅದಕ್ಕಾಗಿ ಹಳ್ಳಿಯ ಜನ ಚಕ್ಕಡಿಗಳಲ್ಲಿ ಗಿಡಗಳನ್ನು ಕಡಿದು ಅದರ ದೊಡ್ದ ತುಂಡುಗಳನ್ನು ಹೇರಿ ಮಾರಲು ತರುತ್ತಿದ್ದರು. ಉರುವಲು ಬೇಕಾದವರು ಕೊಳ್ಳಬೇಕು. ಮನೆ ಮುಂದೆ, ಅಂಗಳದಲ್ಲಿ, ಹಾಕಿಸಿಕೊಂಡು ಕಟ್ಟಿಗೆ ಒಡೆಯುವವರಿಂದ ಅವನ್ನು ಒಡೆಸಿ, ಸಣ್ಣ ಸಣ್ಣ ಸೀಳು ತುಕಡಿ ಮಾಡಿ ಮನೆಯಲ್ಲಿ ಒಟ್ಟಿ ಇಟ್ಟುಕೊಳ್ಳುತ್ತಿದ್ದರು.
ಅ ಸಲ ರೂಢಿಯಂತೆ ಕಟ್ಟಿಗೆ ಚಕ್ಕಡಿ ಹಿಡಿದು ಆ ವ್ಯವಸ್ಥೆಯನ್ನು ನನ್ನ ತಂದೆ ಮಾಡಿಕೊಂಡಿರಲಿಲ್ಲ. ಬೇರೊಂದು ವಿಚಾರ ಬಂದಿತ್ತು. ಗಂದಿಗವಾಡ ಎಂಬಲ್ಲಿ ನಮ್ಮ ಹೊಲಗಳಿದ್ದವು. ಗಿಡಗಳೂ ಇದ್ದಿರಬೇಕು. ರೈತರಿಗೆ ಹೇಳಿ, ಗಿಡ ಕಡಿಸಿ ಅಲ್ಲಿಂದಲೆ ತರಿಸಿಕೊಂಡಿದ್ದರು. ಅವುಗಳನ್ನು ಒಡೆಸಲು ಆಗಿರಲಿಲ್ಲ. ಅಂಗಳದಲ್ಲಿ ಒಟ್ಟಿದ್ದ ಹಾಗೆಯೆ ಇದ್ದವು. ಇದೆಲ್ಲ ತಮ್ಮನ ಅಜಾರಿಯ ಬಹಳ ಮೊದಲೆ. ಮುಂದೆ, ತಮ್ಮ ತೀರಿಹೋದ.
ಅವನು ಸತ್ತ ದುಃಖ ಒಂದೆಡೆ, ಮತ್ತೊಂದು ಅದಕ್ಕಾಗಿ ಕಟ್ಟಿಗೆ ತರಿಸಿಕೊಂದಂತೆ ಆಯಿತೇ ಎಂದು ಸುಳಿದು ಮನಸ್ಸನ್ನು ಕೊರೆಯುತ್ತ ಹೋದ ವಿಚಾರ ಎರಡೂ ಸೇರಿ ಅವರ ಮನಸ್ಸು ಬಹಳ ಗಾಸಿಗೊಂಡಿತ್ತು. ಮುಂದೆಂದೂ ಹಾಗೆ ಹಳ್ಳಿಯಿಂದ – ನಮ್ಮ ಹೊಲಗಳಿಂದ ಗಿಡ ಕಡಿಸಿ ಕಟ್ಟಿಗೆ ತರೆಸಿಕೊಳ್ಳಲಿಲ್ಲ.
ವಿಧವೆಯಾದ ಕಾಕೂ ಆಗ ಗರ್ಭಿಣಿಯಿದ್ದಳು ಎಂದು ಆಗಲೆ ಹೇಳಿದ್ದೆನಲ್ಲವೆ. ಮುಂದೆ ನಾಕು ತಿಂಗಳ ನಂತರ ೨೯ ಅಗಸ್ಟ ೧೯೫೦ರಲ್ಲಿ ಅಪ್ಪಣ್ಣ (ವಿಟ್ಠಲ) ಗೋಕಾಕದಲ್ಲಿ ಹುಟ್ಟಿದ. ಗೋಕಾವಿ ಕಾಕೂನ ತವರೂರು. ಅಂತೆಯೆ ಅವಳನ್ನು ಗೋಕಾವಿ ಸುಬ್ಬಾ ಎಂದು ಕರೆಯುತ್ತಿದ್ದರು. ಊರಿನ ಹೆಸರಿನಿಂದ ಗುರುತಿಸಲು ಕಾರಣ ಮನೆತನದಲ್ಲಿದ್ದ ಮತ್ತೊಬ್ಬ ಸುಬ್ಬಾ. ನಮ್ಮ ಸೋದರತ್ತೆ. ನನ್ನ ತಂದೆ ಮತ್ತು ಗೋವಿಂದಣ್ಣ ಕಕ್ಕ ಇವರ ಒಡಹುಟ್ಟಿದವರಲ್ಲಿ ಕೊನೆಯವಳು ಸುಭದ್ರಾ – ಸುಬ್ಬಾ. ಬೆಳಗಾವಿಯಲ್ಲಿಯೆ ಟಿಳಕವಾಡಿಯಲ್ಲಿ ಇರುತ್ತಿದ್ದ ಅಧ್ಯಾಪಕ ರಾಮರಾಯರ ಪತ್ನಿ. ಒಂದೇ ಹೆಸರಿನ ಇಬ್ಬರನ್ನು ಪ್ರತ್ಯೇಕವಾಗಿ ಗುರುತಿಸಲು ಮಾಡಿಕೊಂಡ ಉಪಾಯ.
ಇರಲಿ, ಮತ್ತೆ ಗೋವಿಂದಣ್ಣ ಅವರ ಈಗಲೂ ಉಳಿದಿರುವ ಸ್ವಲ್ಪ ಸ್ವಲ್ಪ ನೆನಪು : ಅವರು ಪೋಲೀಸ ಇನ್ಸಪೆಕ್ಟರ ಆಗಿದ್ದರೋ ಸಬ್ ಇನ್ಸಪೆಕ್ಟರ ಆಗಿದ್ದರೋ – ಖಚಿತವಾಗಿ ಗೊತ್ತಿದ್ದವರು ಈಗ ಯಾರೂ ಇಲ್ಲ. ಆಗ ನಾನು ಬಹಳ ಚಿಕ್ಕವ. ನಾನೆಂದೂ ಅವರನ್ನು ಖಾಕಿ ಡ್ರೆಸ್ಸಿನಲ್ಲಿ ನೋಡಿದ್ದ ನೆನಪಿಲ್ಲ. ಲಂಚ ನಿರೋಧಕ ದಳ (anti -graft) ದಲ್ಲಿ ಇದ್ದುದು ಅದಕ್ಕೆ ಕಾರಣವೊ, ಗೊತ್ತಿಲ್ಲ. ಧಡೂತಿ ಎನ್ನಲೂ ಆಗದ ಆದರೆ ಸ್ವಲ್ಪ ಹಾಗೆಯೆ ಇದ್ದ ದೇಹಯಷ್ಟಿ ಹೊಂದಿದವರು ಅವರು. ತಿಳಿಗಪ್ಪು ಬಣ್ಣ. ಧೋತರ, ಅಂಗಿ, ಕರಿ ಟೊಪ್ಪಿಗೆ ಈ ವೇಷ ಭೂಷಣಗಳಲ್ಲಿಯೆ ನಾನು ಕಂಡ ವ್ಯಕ್ತಿಯವರು.
ಅಂತಹ ಉಡುಪಿನಲ್ಲಿಯ – ಎದೆಯ ಮೇಲು ಮಟ್ಟ ಮಾತ್ರ ಕಾಣುವ ಫೋಟೊ ಒಂದು ಮಾತ್ರ ಈಗಲೂ ಉಳಿದಿದೆ. ಅವರ ಇಬ್ಬರು ಮಕ್ಕಳು -ಮೋಹನ ಮತ್ತು ಪ್ರಹ್ಲಾದ ಅವರ ಮನೆಯಲ್ಲಿ ಇದರ ಪ್ರತಿಯನ್ನು ನೆನಪಿಗಾಗಿ ಕಟ್ಟು ಹಾಕಿಸಿ ಗೋಡೆ ಮೇಲೆ ಹಾಕಿದ್ದು ನೋಡಿದ್ದೆ. ಇದೂ ಅಲ್ಲದೆ ಮತ್ತೂ ಒಂದು, ಪೋಲೀಸ ದಿರಿಸಿನಲ್ಲಿ, ಅನೇಕ ಅಧಿಕಾರಿ ಮತ್ತು ಸಿಬ್ಬಂದಿಯವರು ಇದ್ದ ಗುಂಪು ಚಿತ್ರ ಇದ್ದಿತು. ಅದು ಆ ಮನೆಯಲ್ಲಿ (ರಾಮಲಿಂಗ ಖಿಂಡ ಮನೆಯನ್ನು ನಾವು ಕರೆಯುತ್ತಿದ್ದದ್ದು ಹಾಗೆ) ಪಡಸಾಲೆಯಲ್ಲಿ. ಅಲ್ಲಿ, ಒಳಗೆ ಬರುತ್ತಿದ್ದ ಹಾಗೆಯೆ ತಲೆಬಾಗಿಲ ಚೌಕಟ್ಟಿನ ಒಳಭಾಗದ ಗೋಡೆಯ ಮೇಲೆ ಅದು, ಆ ಮನೆಯನ್ನು ೧೯೯೭ರಲ್ಲಿ (?) ಮಾರುವವರೆಗೆ, ಎಷ್ಟೊವರ್ಷಗಳ ಕಾಲ (೪೭- ೪೮ ವರ್ಷಗಳಷ್ಟು ) ಆ ಜಾಗೆಯನ್ನು ಅಲಂಅಕರಿಸಿತ್ತು. ಈಗ ಆ ಮನೆಯೂ ಇಲ್ಲ. ಫೋಟೊ ಕೂಡ ಇಲ್ಲ. ಏನಾಯಿತು ಎಂದು ಕೇಳುವದು ವ್ಯರ್ಥ.
ಇಷ್ಟನ್ನು ಬಿಟ್ಟು ಮತ್ತೆ ನನಗೆ ನೆನಪಿದ್ದುದು, ಬೆಳವಿ ಚಾಳಿನ ನಮ್ಮ ಮನೆಗೆ ಆಗಾಗ ಸಾಯಕಲ್ಲು ಹೊಡೆದುಕೊಂಡು ಬರುತ್ತಿದ್ದುದು. ಅ ದ್ವಿಚಕ್ರ ವಾಹನ ಎಲ್ಲರ ಹತ್ತಿರ ಇರುತ್ತಿದ್ದಿಲ್ಲ. ಇದ್ದವರ ಬಗ್ಗೆ ಕೌತುಕ ಎನಿಸುತ್ತಿತ್ತು. ಆಗ ಅದೂ ಒಂದು ತರಹದ ಐಷ ಆರಾಮಿ ವಸ್ತು. ಆ ದಿನಗಳಲ್ಲಿ ನಾನು ಆರು ಏಳು ವರ್ಷದವ. ನಾನು ಕಾಣಿಸಿದೊಡನೆ ಏ ಡೊಣ್ಣ ಮೂಗು ಎಂದು ಛೇಡಿಸುತ್ತಿದ್ದರು. ಡೊಂಡೊಂಡು ಎಂದು ಅನ್ನುತ್ತ ಮತ್ತೆ ಏನೋ ಅನ್ನುತ್ತಿದ್ದರು. ನೆನಪಿಲ್ಲ. ಆ ಶಬ್ದ ನಾನು ತೀರ ಚಿಕ್ಕವನಿದ್ದಾಗ ಮಾತನಾಡುತ್ತಿದ್ದ ನನ್ನ ಆ ಉಚ್ಚಾರಣೆಯ ಅಣಕು ಆಗಿದ್ದಿತೋ, ಈಗ ಹೇಗೆ ಹೇಳಲಿ. ಆದರೆ ನನ್ನನ್ನು ನೋಡಿದಾಗೆಲ್ಲ ಆ ಶಬ್ದಗಳಿಂದಲೆ ನನ್ನೊಂದಿಗೆ ಅವರ ಮಾತು ಶುರು ಆಗುತ್ತಿತ್ತು.
ಆ ವ್ಯಕ್ತಿಯೂ ಇಲ್ಲ. ಅವ್ಯಕ್ತಿಯ ಮಕ್ಕಳೂ ಇಲ್ಲ. ಮೊಮ್ಮಕ್ಕಳು ಇದ್ದಾರೆ. ಆದರೆ ಸುಮಾರು ಅರವತ್ತು ವ₹ರ್ಷಗಳ ಹಿಂದೆಯೆ ತೀರಿ ಹೋದ, ತಾವೆಂದೂ ನೋಡದಿದ್ದ ಆ ಅಜ್ಜನ ಫೋಟೊ ಮೊಮ್ಮಕ್ಕಳ ಇಂದಿನ ಆಧುನಿಕ ಅಪಾರ್ಟಮೆಂಟು, ಗೋಡೆಗಳ ಮೇಲೆ ಚಂದ ಕಂಡಾವೇ ? ಅಂತಹದನ್ನು ಎಲ್ಲಿಯಾದರೂ ಕಂಡೀರಾ ? ಯಾರಿಗೆ ಏಕೆ ಅನಬೇಕು, ನಾವೇನು ಬೇರೆ ಇದ್ದೇವೆಯೆ ?
ಇರಲಿ, ಇಲ್ಲಿಯ ವರೆಗೆ ಅವರ ಮರಣ ಮತ್ತು ಮರಣಾನಂತರದ ಸುದ್ದಿಯಷ್ಟೆ ಆಯಿತು. ಅವರ ಜೀವನದ ಮತ್ತೆ ಯಾವ ವಿವರಗಳೂ ಇನ್ನೂ ಬಂದಿಲ್ಲವಲ್ಲ. ಈಗ ಆ ಕಡೆ ಹೊರಳೋಣ.
ಅವರ ಜನ್ಮ : ಶಕೆ ೧೮೨೮, ಪರಾಭವ ನಾಮ ಸಂವತ್ಸರ, ಜ್ಯೇಷ್ಠ ವದ್ಯ ಅಷ್ಟಮಿ, ಗುರುವಾರದಂದು ಮೂರೂವರೆ ತಾಸು ರಾತ್ರಿ ಹೊತ್ತು. ಅಂದರೆ – ೧೪ ಜೂನ ೧೯೦೬ ರಂದು ಮುರಗೋಡದಲ್ಲಿ. ಉತ್ತರಾ ಭಾದ್ರಪದ ನಕ್ಷತ್ರ, ದ್ವಿತೀಯ ಚರಣ. ಮೀನ ರಾಶಿ.
ಮುಂಜಿವೆ : ನನಗೇ ನನ್ನ ಮುಂಜಿವೆಯ ತಾರೀಖು ಗೊತ್ತಿಲ್ಲ. ಆದರೆ ನೂರುವರ್ಷಕ್ಕೂ ಹಿಂದೆ ನಡೆದ ನನ್ನ ತಂದೆ ಮತ್ತು ಕಕ್ಕ ಇವರ ಮುಂಜಿವೆಯ ಬಗ್ಗೆ ಬರೆಯುತ್ತಿದ್ದೇನೆ. ಎಂತಹ ಪುಲಕಿತಗೊಳಿಸುವ ಸಂಗತಿ. ಇಬ್ಬರ ಉಪನಯನ ಒಂದೆ ದಿನ ನಡೆದಿದ್ದಿತು, ೨೨ನೆ ಮೇ ೧೯೧೩ರಂದು, ಏಳು ಘಳಿಗೀಗೆ ಒಂದು, ಎಂಟನೆ ಘಳಿಗೆ ಮತ್ತೊಂದು. ಮನೆಯಲ್ಲಿಯೆ. ಆ ನಿಮಿತ್ತ ರಾಮಾಚಾರ್ಯರು ಊರ ಪ್ರಯೋಜನ ಆಯೋಜಿಸಿದ್ದರು. ಆಗ ನನ್ನ ತಂದೆಯ ವಯಸ್ಸು – ಒಂಬತ್ತು, ಕಾಕಾನದು – ಎಳು.
ಈ ವಿವರವನ್ನು ಇಷ್ಟು ಖಚಿತವಾಗಿ ಆಧಾರ ಸಹಿತ ಹೇಳಲು ಸಾಧ್ಯವಾದುದು, ವಾಮನರಾವ ಯರಝರವಿ ಎನ್ನುವವರ ಡಾಯರಿಯಲ್ಲಿ ನಮೂದಾಗಿರುವ ಈ ವಿಷಯ. ಅವರೂ ಮುರಗೋಡದವರು. ಸ್ಟ್ಯಾಂಪ ವೆಂಡರ ಆಗಿದ್ದವರು. ಅವರಿಗೆ ಆ ದಿನಗಳಲ್ಲಿ ಊರಲ್ಲಿ ಆಸ್ತಿ ಖರೀದಿ ವಿಕ್ರಿ ಮತ್ತಿತರ ಮಹತ್ವದ ಘಟನೆಗಳು ಸ್ವಾಭಾವಿಕವಾಗಿಯೆ ಗೊತ್ತಾಗುತ್ತಿದ್ದವು. ಬರೆದಿಟ್ಟರೆ ಮುಂದೊಂದು ದಿನ ಅದರ ಪ್ರಯೋಜನವೂ ಆದೀತೆಂಬ ಕಲ್ಪನೆಯೂ ಇದ್ದಿತು. ಡಾಯರಿ ಬರೆದಿಟ್ಟರು , ೧೮೮೫ ರಿಂದ ಮೂವತ್ತೈದು ವರ್ಷ ಕಾಲ. ಆ ವಿಷಯ ತಿಳಿದಿದ್ದ ನನಗೆ ಕೆಲವನ್ನು ನೋಡುವ ಅವಕಾಶ ಸಿಕ್ಕಿದ್ದಿತು. ನನ್ನ ತಂದೆ ಕಕ್ಕನ ಮುಂಜಿವೆಯ ದಿನಾಂಕ ಗೊತ್ತಾದಾಗ ಹ₹ರ್ಷ ರೋಮಾಂಚಿತಗೊಂಡಿದ್ದೆ.
ಅಣ್ಣ ಮ್ಮಂದಿರ ಈ ಮುಂಜಿವೆಯ ಹಾಗೆ ಅವರ ಮಕ್ಕಳ – ಶ್ರೀನಿವಾಸ (ಶೀನೂ) ಮತ್ತು ಮೋಹನರಮುಂಜಿವೆಯೂ ಒಟ್ಟಿಗೆಯೆ ನಡೆದಿತ್ತು. ೧೯೪೫ ರಲ್ಲಿ, ಕುಲ ದೇವರು ಶ್ರೀ ಪಾಂಡುರಂಗ ವಿಟ್ಠಲನ ಕ್ಷೇತ್ರಪಂಢರಪುರದಲ್ಲಿ. ಇದು ಆ ಅಣ್ಣ ತಮ್ಮಂದಿರ ವಿಶೇಷ.
ಪ್ರಾಥಮಿಕ ಶಾಲಾ ಶಿಕ್ಷಣ ಮುರಗೋಡದಲ್ಲಿಯೆ ಆಯಿತು. ಆ ದಿನಗಳಲ್ಲಿ ಮುರಗೋಡದಲ್ಲಿ ಮಾಧ್ಯಮಿಕ ಶಾಲೆ ಇರಲಿಲ್ಲವಾಗಿ, ಧಾರವಾಡಕ್ಕೆ ಹೋಗಬೇಕಾಗಿ ಬಂತು. ಅಣ್ಣ ರಂಗಣ್ಣ ಆಗಲೆ ಅಲ್ಲಿ ಕೋಣೆಯೊಂದನ್ನು ಹಿಡಿದು ಕರ್ನಾಟಕ ಹಾಯಸ್ಕೂಲಿನಲ್ಲಿ ಕಲಿಯುತ್ತಿದ್ದ. ಅವನೊಂದಿಗೇ ಸೇರಿಕೊಂಡು ಶಿಕ್ಷಣವನ್ನು ಮುಂದುವರೆಸಿದರು. ಆದರೆ ಅದೇ ಮಾಧ್ಯಮಿಕ ಶಾಲೆಯಲ್ಲಿಯೆ ? ಇರಲಾರದು. ಅಲ್ಲಿನ ದಾಖಲೆಗಳಲ್ಲಿ ನನ್ನ ತಂದೆಯ ಹೆಸರು ಸಿಕ್ಕಿತು, ಇವರದು ಸಿಗಲಿಲ್ಲ. ಹಾಗಿದ್ದರೆ ವಿದ್ಯಾರಣ್ಯ ಸ್ಕೂಲಿನಲ್ಲಿ ಹೆಸರು ಹಚ್ಚಿದ್ದರೆ? ಗೊತ್ತಿಲ್ಲ, ಪತ್ತೆ ಹಚ್ಚ ಬೇಕಿದೆ.
ಆದರೆ ಧಾರವಾಡದಲ್ಲಿ ಇದ್ದುದಂತೂ ನಿಜ. ಅದರ ಪುರಾವೆಯಾಗಿ – ೧೯೨೫ರ ಫೆಬ್ರುವರಿ ೨೬ರಂದು ಅವರು ಕಿತ್ತೂರಿನಲ್ಲಿದ್ದ ಕೃಷ್ಟಾಚಾರ್ಯ ಭೀಮಾಚಾರ್ಯ ಮುರಗೋಡ ಅವರಿಗೆ ತಮ್ಮ ಶಾಲೆಯ ಫೀ ಬಾಕಿ ಉಳಿದಿದ್ದು ಬಹಳ ಬೇಗನೆ ಕೊಡಬೇಕಾಗಿದೆ. ಇಲ್ಲವಾದರೆ ಬಹಳ ತೊಂದರೆ ಇದೆ. ಆದ್ದರಿಂದ ಸಹಾಯ ಮಾಡುವ ಭರವಸೆ ಕೊಟ್ಟಿರುವಿರಿ, ಅದರಂತೆ ಕೂಡಲೆ ಮನಿ ಆರ್ಡರ ಮಾಡಲು ವಿನಂತಿ ಮಾಡಿಕೊಂಡು ಬರೆದ ಪತ್ರವೊಂದು ಇನ್ನೂ ಉಳಿದಿದೆ. ಅದರಲ್ಲಿ ಅವರು ಕೊಟ್ಟಿರುವ ವಿಳಾಸ : ಭೀಮಾಚಾರ್ಯ ಮರಡೂರ ಇವರ ಮನೆ. ನಂ. ೩೪೩೩, ಹೊಸಯಲ್ಲಾಪುರ ಎಂದಿದೆ.
ಅಷ್ಟಾಗಿಯೂ, ಅವರ ಮಾಧ್ಯಮಿಕ ಶಿಕ್ಷಣ ಮುಗಿಯುವ ಹೊತ್ತಿಗೆ ಬೆಳಗಾವಿಗೆ ಬಂದರೆಂದು ಕಾಣುತ್ತದೆ. ಏಕೆಂದರೆ, ಅವರ ಹೆಸರು ಮತ್ತು – ವಿದ್ಯಾರ್ಥಿ, ಬೆನನ್ ಸ್ಮಿಥ ಹಾಯಸ್ಕೂಲ, ಬೆಳಗಾವಿ ಎಂದು ಇಂಗ್ಲೀಷಿನಲ್ಲಿ ಬರೆದಿರುವ ಒಂದು ಪುಸ್ತಕವೂ ನನ್ನ ಸಂಗ್ರಹದಲ್ಲಿದೆ.
ಮ್ಯಾಟ್ರಿಕ ಪರಿಕ್ಷೆಯನ್ನು ಅವರು ಈ ಶಾಲೆಯಿಂದ ಮುಗಿಸಿದರೊ ಏನೋ. ೧೯೩೦ರಲ್ಲಿಯಂತೂ ನನ್ನ ತಂದೆಗೆ ಬೆಳಗಾವಿಯಲ್ಲಿ ವನಿತಾ ವಿದ್ಯಾಲಯ ಮಾಧ್ಯಮಿಕ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಹತ್ತಿದ್ದಿತು. ಅದಕ್ಕಾಗಿ ಬೆಳಗಾವಿಯಲ್ಲಿ ಮನೆ ಆಗಿತ್ತು. ತಮ್ಮಂದಿರಾದ ಅನಂತಕಾಕಾ, ಪಾಂಡುಕಾಕಾ, ಕಿಟ್ಟೂ ಕಾಕಾ ಇವರ ಮಾಧ್ಯಮಿಕ ಶಾಲಾ ಶಿಕ್ಷಣ ಬೆಳಗಾವಿಯಲ್ಲಿ ಮುಂದುವರೆಯಬೇಕಾಗಿತ್ತು.
ಮದುವೆ : ೧೯೩೫- ೩೬ ರ ಸುಮಾರಿಗೆ ಆಗಿದ್ದಿರಬೇಕು. ಸೋನಾ ಎಂಬುವಳ ಜೊತೆ. ಏಕೆಂದರೆ ಹಿರಿಯ ಮಗ ಮೋಹನ ಹುಟ್ಟಿದ್ದು ೧೯೩೭ರಲ್ಲಿ. ತನ್ನ ತಾಯಿ ರಾಮದುರ್ಗದವಳು ಎಂದು ಮೋಹನ ಹೇಳಿದ್ದನ್ನು ನಾನು ಟಿಪ್ಪಣಿ ತೆಗೆದುಕೊಂಡಿದ್ದೆ. ತೌರುಮನೆಯ ಬಗ್ಗೆ ಅಷ್ಟೆ ಮಾಹಿತಿ. ನನ್ನ ತಾಯಿ ತುಂಗಕ್ಕ ಮಾತ್ರ ಆಕೆ ಬಹಳ ಒಳ್ಳೆಯವಳು ಎಂದು ನೆನಸುತ್ತಿದ್ದ ನೆನಪು ಇದೆ. ಇವಳ ಹೊಟ್ಟೆಯಿಂದ ಮೋಹನ ಮತ್ತೂ ಪ್ರಹ್ಲಾದ ಎಂಬ ಇಬ್ಬರು ಹುಟ್ಟಿದರು.
“ಕಿತ್ತೂರಿನಲ್ಲಿದ್ದಾಗ, ಮತ್ತೂ ಒಂದು ಗಂಡು ಮಗುವನ್ನು ೮ನೆ ತಿಂಗಳಲ್ಲಿಯೆ ಹಡೆದು, ನಂಜು ಏರಿ ತೀರಿಕೊಂಡಳು. ಆ ಕೂಸೂ ಉಳಿಯಲಿಲ್ಲ. ಅವಳು ಮರಣಿಸಿದ ತಿಥಿ : ಕಾರ್ತಿಕ ಹುಣ್ಣಿವೆ ಅಥವಾ ಅದರ ಮರುದಿನ ಪ್ರತಿಪದಾ. (೧೯೪೦ರ ನವೆಂಬರ ೧೫ ಅಥವಾ ೧೬). ಆಗ, ಕೃಷ್ಟಾಚಾರ್ಯರು ತೀರಿಕೊಂಡು ಹತ್ತು ದಿನಗಳು ಇನ್ನೂ ಮುಗಿದಿರಲಿಲ್ಲ. ಮುಂದೆ ಸುಮಾರು ಮೂರು ತಿಂಗಳ ನಂತರ ಮಾಘದಲ್ಲಿ – (ಫೆಬ್ರುವರಿ ೧೯೪೧), ನಮ್ಮ ಮದುವೆಯಾಯಿತು” ಅಷ್ಟು ಹೊತ್ತಿಗೆ ಮೃತ ಕೃಷ್ಟಾಚಾರ್ಯರ ವಿಧವಾ ಪತ್ನಿ ಸೀತಾಬಾಯಿ ನನ್ನ ತಂದೆ ರಂಗಣ್ಣನನ್ನು ದತ್ತಕ ತೆಗೆದುಕೊಂಡಿದ್ದಳು (೭-೧-೧೯೪೧).
ಗೋವಿಂದಣ್ಣ ಆಗ ಅಲ್ಲಿಗೆ ವರ್ಗವಾಗಿದ್ದರಿಂದ ಕಿತ್ತೂರಿನಲ್ಲಿದ್ದರು. ತಡಕೋಡ ನಾಗಮ್ಮ ಅವರ ಮನೆಯಲ್ಲಿ ಬಾಡಿಗೆಯಿಂದ. ನಾಗಮ್ಮ ಎಂದರೆ, ಬೆಳಗಾವಿಯಲ್ಲಿ ನಾವಿರುತ್ತಿದ್ದ ಮನೆಯ ಸಮೀಪ ಗವಳಿ ಗಲ್ಲಿಯಲ್ಲಿರುತ್ತಿದ್ದ ನಾರಾಯಣರಾವ ಕುಲಕರ್ಣಿಯವರ ಅತ್ತೆ. ಕುಮ್ಮಕ್ಕ ಮತ್ತು ಪ್ರಹ್ಲಾದ ತಡಕೋಡ ಅವರ ತಾಯಿ. ಕೃಷ್ಟಾಚಾರ್ಯರೆಂದರೆ ನನ್ನ ತಂದೆಯ ದತ್ತಕ ತಂದೆ. ಅವರು ತೀರಿಕೊಂಡ ತಾರೀಖು ೬-೧೧-೧೯೪೦. ಅವರ ಮರಣ ಉತಾರ ನನ್ನ ಸಂಗ್ರಹದಲ್ಲಿ ಇದೆ. ಅದರ ಮೇಲೆ ಅರ್ಜಿ ಕೊಟ್ಟವರ ಹೆಸರೂ ಇದೆ. ಅದು ನನ್ನ ಈ ಕಕ್ಕನದು.
ಎಂದು, ಆಗ ನಡೆದಿದ್ದ ಸಂಗತಿಗಳನ್ನು ಹೇಳಿದ್ದು ಗೋವಿಂದಣ್ಣ ಅವರ ಎರಡನೆ ಹೆಂಡತಿ ಗೋಕಾವಿ ಸುಬ್ಬಾ. ಹಳೆಯ ವಿಷಯ ತಿಳಿದುಕೊಳ್ಳಲೆಂದು, ಈ ಕಾಕೂನನ್ನು ಅವರ ಮಗಳು ಅಕ್ಕಮ್ಮ. ಅವರನ್ನು ರಾಮಲಿಂಗ ಖಿಂಡದ ಅವರ ಮನೆಯಲ್ಲಿ (ನಮ್ಮ ಆ ಮನೆಯಲ್ಲ ಮತ್ತೆ) ೪-೩-೧೯೯೩ ರಂದು ಭೆಟ್ಟಿಯಾಗಿ, ಟಿಪ್ಪಣಿಗಳನ್ನು ಬರೆದುಕೊಂಡಿದ್ದೆ.
ಗೋವಿಂದಣ್ಣ ಕಾಕಾನ ಎರಡನೆ ಮದುವೆ : ಮೊದಲ ಪತ್ನಿ ಸೋನಾ ತೀರಿಕೊಂಡ ನಂತರ ಗೋಕಾವಿಯ ಅಣ್ಣಾಜಿ (ಕೃಷ್ಣ) ಯಾರ್ದಿ – ರಾಧಾಬಾಯಿ ಇವರ ಮಗಳು ಸುಭದ್ರಾ ಜೊತೆ, ೧೯೪೧ ರ ಫೆಬ್ರುವರಿ ಯಲ್ಲಿ (ಮಾಘ ಮಾಸ) ಗೋಕಾಕದ ಹತ್ತಿರದ ಕಲ್ಲೊಳ್ಳಿಯಲ್ಲಿ ಅಲ್ಲಿನ ಮಾರುತಿ ಮಂದಿರದಲ್ಲಿ ಆಯಿತು. ಸುಭದ್ರಾ ತನ್ನ ತಂದೆತಾಯಿಗಳ ಹನ್ನೊಂದು ಮಕ್ಕಳಲ್ಲಿ ನಾಕನೆಯವಳು. ಮದುವೆಯ ನಂತರ ಅತ್ತೆ ಮನೆಯಲ್ಲಿ ರಮಾಬಾಯಿಯೆಂದು ಹೆಸರಿಟ್ಟರು.
ಆ ಮದುವೆಯ ಕಾಲಕ್ಕೆ ಅವರ ಮಲಮಗ ಮೋಹನನಿಗೆ ಮುಂದೆ (ಒಂದು ತಿಂಗಳು) ಫಾಲ್ಗುಣದಲ್ಲಿ ಐದುವರ್ಷ ಆಗಿದ್ದಿತು. ಇತ್ತ, ನನ್ನ ತಂದೆಯ ಚೊಚ್ಚಲ ಮಗ ಶ್ರೀನಿವಾಸ (ಶೀನೂ) ನ ಬೆನ್ನ ಮೇಲೆ ಹುಟ್ಟಿದ್ದ ಶಾಮ ಮತ್ತು ಮದ್ಧೂ ಈ ಇಬ್ಬರು ಮಕ್ಕಳೂ ತೀರಿಕೊಂದಿದ್ದವು. ಕಾಕೂ ಅವರ ನೆನಪಿನ ಪ್ರಕಾರ ಅವರ ಮದುವೆಗೆ ಹೋಗಿದ್ದ ನನ್ನ ತಾಯಿಯ ಬಗಲಲ್ಲಿ, ನಂತರ ಹುಟ್ಟಿದ್ದ ಹೆಣ್ಣು ಮಗು ಇದ್ದಿತು. (ಆ ನನ್ನ ಅಕ್ಕ- ಗುಂಡಿ (ಅಥವಾ ಸುಧಾ?) ಮುಂದೆ ಉಳಿಯಲಿಲ್ಲ).
ನನ್ನ ಅತ್ತ್ಯಾ ಕೃಷ್ಟಕ್ಕ / ಕೃಷ್ಣಾಬಾಯಿಯ ಮಗಳು ಮೈನಕ್ಕ ಆಗ ಸುಮಾರು ಹದಿನೈದು ವರ್ಷ ವಯಸ್ಸಿನವಳು. ಮೈದುನ ಪಾಂಡೂ ಕಾಕಾ – ವನಮಾಲ ಕಾಕೂ ಅವರ ಮದುವೆ ಆಗಲೆ ಆಗಿದ್ದಿತು. ನಾಕು ಅಥವಾ ಐದನೆ ಮಂಗಳಾಗೌರಿ ಪೂಜೆ ಆಗಿತ್ತು, ಎಂದೂ ಗೋಕಾವಿ ವೈನಿಯ (ನಾವು ಅವರನ್ನು ಹಾಗೆ ಕರೆಯುತ್ತಿದ್ದೆವು) ನೆನಪು. ತಮ್ಮ ಮದುವೆಯ ಎಂಟು ಒಂಬತ್ತು ತಿಂಗಳ ನಂತರ ಗೋವಿಂದಣ್ಣನಿಗೆ ಕಿತ್ತೂರಿನಿಂದ ಸದಲಗಾಕ್ಕೆ ಬದಲಿಯಾಯಿತು. ಸ್ವಲ್ಪ ದಿವಸ ಅಲ್ಲಿ, ನಂತರ ಅಥಣಿಗೆ ಅಲ್ಲಿಂದ ಕಾಗವಾಡ, ಬೆಳಗಾವಿಗೆ ಬದಲಿ. ಬೆಳಗಾವಿಗೆ ಬಂದಮೇಲೆ ಅಕ್ಕಮ್ಮ ಹುಟ್ಟಿದ್ದು – ೧೯೪೪ರ ನವೆಂಬರ ೨೬ ರಂದು ಗೊಕಾಕದಲ್ಲಿ.
ಕಾಕೂನ ಮತ್ತೂ ಕೆಲ ನೆನಪುಗಳು
ಮೈನಕ್ಕನ ಮದುವೆ :
ನನ್ನ ಕಡೆಯ ಕಕ್ಕ ಕೃಷ್ಣಾಜಿಯ ಮದುವೆ ೧೯೪೭ರ ಮಾರ್ಚ ೨೧, ಶುಕ್ರವಾರ ನಡೆಯಿತು. ಬೆಳ ಗಾವಿಯಲ್ಲಿಯೆ. ರಾಮಲಿಂಗಖಿಂಡದಲ್ಲಿನ ಮನೆಯ ಮುಂದೆಯೆಯೆ. ಕನ್ಯೆಯೂ ಮನೆಯಲ್ಲಿಯಯೆ ಇದ್ದವಳು. ನಮ್ಮ ಅತ್ತ್ಯಾ – ಕೃಷ್ಟಕ್ಕನ ಮಗಳು ಮೈನಕ್ಕ. ಅಷ್ಟು ಹೊತ್ತಿಗೆಗೆ ಕೃಷ್ಟಕ್ಕತ್ತ್ಯಾ ವಿಧವೆಯಾಗಿ ತೌರುಮನೆಗೆಗೆ ಮಗಳನ್ನು ಕರೆದುಕೊಂಡು ಬಂದು ಬಿಟ್ಟಿದ್ದಳು. ಮಗಳು ವಯಸ್ಸಿಗೆ ಬಂದಿದ್ದಳು. ತಮ್ಮನೂ ವರ ಆಗಿದ್ದ. ಗಂಡು ಹುಡುಕುವ ಅಗತ್ಯವೆ ಇರಲಿಲ್ಲ. ಕಿಟ್ಟೂ ಕಾಕಾ ಮೈನಕ್ಕ ಇವರ ಮದುವೆ ಗೊತ್ತಾಗಿ ಹೋಗಿತ್ತು.
“ಆಗ ಎರಡನೆ ಮಗಳು ಪುಷ್ಪಾ ಹುಟ್ಟಿದ್ದಳು – (ಗೋಕಾಕದಲ್ಲಿ, ೨೧ ಮಾರ್ಚ ೧೯೪೭ರಂದು). ಹೀಗಾಗಿ ಮದುವೆಗೆ ಹಾಜರ ಇರಲು ಆಗಲಿಲ್ಲ. ಕಿಟ್ಟೂ ಕಾಕಾನ ತರ್ಫೆ ರಂಗಣ್ಣ – ತುಂಗಕ್ಕ, ನನ್ನ ತಂದೆ ತಾಯಿ ನಾಂದಿ ಇಟ್ಟುಕೊಂಡಿದ್ದರು. ಮೈನಕ್ಕನ ತರ್ಫೆ ನಮ್ಮ ಇನ್ನೊಬ್ಬ ಅತ್ತ್ಯಾ ಸುಬ್ಬಕ್ಕ ಮತ್ತು ಅವರ ಗಂಡ ಅಧ್ಯಾಪಕ ರಾಮರಾಯರು ನಾಂದಿ ಇಟ್ಟುಕೊಳ್ಳುವದೆಂದು ಗೊತ್ತಾಗಿದ್ದಿತು. ಆದರೆ, ಕೊನೆ ಗಳಿಗೆಯಲ್ಲಿ ಅವರಿಗೆ ಸೂತಕದ ಮೈಲಿಗೆ ಬಂದಿತು. ಆದ್ದರಿಂದ ಅದು ತಪ್ಪಿತು. ಜಕಾತಿ ಶೀನಪ್ಪ – ಕೃಷ್ಟಕ್ಕ ನಾಂದಿ ಇಟ್ಟುಕೊಂಡರು”. ಮುಂದೆ ಗೋಕಾಕದಲ್ಲಿ -ಯಾರ್ದಿಯವರ ಮನೆಯಲ್ಲಿ, ೧೯೪೮ರಲ್ಲಿ (?), ಒಂದೆ ವೇಳೆಗೆ ಎರಡು ಮದುವೆ ಆದಾಗ, ಅವುಗಳಲ್ಲಿ ಒಂದಕ್ಕೆ ಗೋವಿಂದಣ್ಣ ನಾಂದಿ ಇಟ್ಟುಕೊಂಡಿದ್ದ.
ಜಕಾತಿ ಶೀನಪ್ಪ ಆವರೂ ಮುರಗೋಡದವರು. ರಾಮಲಿಂಗ ಖಿಂಡದ ನಡುವಿನ ಭಾಗ ಅಶೋಕ ಚೌಕದಲ್ಲಿ ನಮ್ಮ ಆ ಮನೆ. ಅದೇ ಓಣಿಯ ಕೊನೆಯಲ್ಲಿ ಅವರ ಮನೆ. ಟಿಳಕ ಚೌಕದ ಸ್ವಲ್ಪ ಮೊದಲು. ಅತ್ಯಲ್ಪ ದೂರ. ನನ್ನ ತಾಯಿ ತುಂಗಕ್ಕನಂತೂ ಕೈಯಿಂದ ಆಗುತ್ತಿದ್ದವರೆಗೆ, ನಡೆಯಲು ತ್ರಾಸಾಗುತ್ತಿದ್ದರೂ, ನಿತ್ಯ ಸಂಜೆ ಅವರ ಮನೆಯವರೆಗೆ ಹೋಗಿ ಬರುತ್ತಿದ್ದಳು. ಒಂದು ಕಿಲೋ ಮೀಟರದಷ್ಟು ದೂರ, ಗೋಂಧಳಿ ಗಲ್ಲಿಯನಮ್ಮ ಮನೆಯಿಂದ.
ಆ ಹಳೆಯ ಸಂಬಂಧ ಇಂದಿನ ವರೆಗೂ ಇದೆ, ಎಪ್ಪತ್ತಕ್ಕೂ ಹೆಚ್ಚು ವರ್ಷಗಳಾದ ಮೇಲೂ.
ಶೀನಪ್ಪ – ಕೃಷ್ಟಕ್ಕ. ಆ ದಂಪತಿಗಳು ಈಗ ಇಲ್ಲ. ಅವರ ದತ್ತಕ ಮಗ ರಘುರಾಜ. ಇದ್ದಾರೆ. ಆ ಹಳೆಯ ಮನೆಯೂ ಇಲ್ಲ. ಬಿಚ್ಚಿಸಿ ಕಟ್ಟಿದ ಹೊಸ ಮನೆ “ಇಂದಿರಾ” (ಕೃಷ್ಟಕ್ಕ ಅವರ ಹೆಸರು) ಇದೆ. ಇತ್ತ ನಮ್ಮಕಡೆ ಈಗ ನನ್ನ ತಂದೆಯ ಆ ಪೀಳಿಗೆಯ ಯಾರೊಬ್ಬರೂ ಉಳಿದಿಲ್ಲ. ಈ ನಡುವೆ ನಮ್ಮ ಗೋಕಾವಿ ವೈನಿಯ ಅಳಿಯ – ಅಕ್ಕಮ್ಮ ಅವರ ಗಂಡ – ವಿದ್ಯಾಧರ ಯಾರ್ದಿ ಬೆಳಗಾವಿಗೇ ಬಂದರು ಬದಲಿಯಾಗಿ. ಸುಮಾರು ಇಪ್ಪತ್ತು ವರ್ಷಗಳ ಹಿಂದೆಯೆ. ಆಗ ಅವರಿಗೆ ಸಿಕ್ಕ ಬಾಡಿಗೆ ಮನೆ ಈ ಜಕಾತಿ ಅವರದೆ. ದೊಡ್ಡ ಮನೆ, ಎರಡು ಭಾಗಗಳು , ಒಂದನ್ನು ಇವರಿಗೆ ಕೊಟ್ಟರು.
ಅದು ವಿಶೇಷವಲ್ಲ. ಸ್ವಲ್ಪ ಮುಂಚೆ ವಿದ್ಯಾಧರ ಯಾರ್ದಿ ಮಾಳ ಮಾರುತಿ ಬಡಾವಣೆಯಲ್ಲಿ ನಿವೇಶನ ತೆಗೆದುಕೊಂಡಿದ್ದರು. ಅಲ್ಲಿ ಮನೆ ಕಟ್ಟಿಕೊಂಡರು. ವಾಸ್ತು ಶಾಂತಿ ಗೃಹ ಪ್ರವೇಶವನ್ನೂ ಮಾಡಿದರು. ಆದರೆ ರಘುರಾಜ ಜಕಾತಿ ನೀವು ಇಲ್ಲಿಯೆ ಇರಿ, ಎದುರಿಗೇ ರಾಯರ ಮಠವಿದೆ. ಬೇಕಾದವರೆಲ್ಲರೂ ಸಮೀಪವೆ ಇದ್ದಾರೆ ಎಂದು ಒತ್ತಾಯಿಸಿ ಉಳಿಸಿಕೊಂಡರು. ಇದು ವಿಶೇಷ.
ಅಕ್ಕಮ್ಮನಿಗೆ ನಿತ್ಯ ಮಠಕ್ಕೆ ಹೋಗಿ ಬರದಿದ್ದರೆ ಸಮಾಧಾನವೇ ಇರಲಿಲ್ಲ. ಸಾಧ್ಯವಿದ್ದರೆ ಏನಾದರೂ ಸೇವೆ ಮಾಡಬೇಕು. ಮಕ್ಕಳೂ ಅಷ್ಟೆ. ಉದ್ಯಮಿ ರಘುರಾಜ ಕೂಡ ದೈವ ಭಕ್ತರು. ಅವರ ಮನೆಯ ಹೊರಗಿನ ಕೋಣೆ ವಿಶ್ವ ಮಾಧ್ವ ಮಹಾ ಪರಿಷತ್ತಿನ ಬೆಳಗಾವಿ ಘಟಕದ ಆಫೀಸು. ಅಲ್ಲಿಂದ “ವಿಶ್ವವಾಣಿ- ಜಾಗೃತಿ” ಮಾಸಪತ್ರಿಕೆ ಹೊರಡುತ್ತದೆ. ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥ ಸ್ವಾಮಿಗಳು ಬೆಳಗಾವಿ ವಾಸ್ತವ್ಯದಲ್ಲಿ “ಇಂದಿರಾ” ದಲ್ಲಿಯೆ. ಈಗ ಜಕಾತಿಯವರು ಭಾಗ್ಯ ನಗರದಲ್ಲಿ ಮತ್ತೊಂದು ಮನೆ ಕಟ್ಟಿಕೊಂಡಿದ್ದಾರೆ. ಅಲ್ಲಿಗೆ ಹೋಗಿದ್ದಾರೆ. ವಿದ್ಯಾಧರ ಯಾರ್ದಿ ೨೦೦೮ರ ಎಪ್ರಿಲದಲ್ಲಿ ತೀರಿಕೊಂಡರು.
ಇತ್ತೀಚೆಗೆ, ಅಕ್ಕಮ್ಮನೂ ತೀರಿಕೊಂಡು ವರ್ಷವಾಯಿತು. ಆಂದು ಸಪ್ಟೆಂಬರ ೧೭, ೨೦೦೧೬ ರಂದು, ವ₹ರ್ಷಾಂತಿಕ. ಅಂದು ಮನೆ ದೇವರ ಪೂಜೆ ಮುಗಿದಿದ್ದಿತು. ಕರ್ಮಾಂತರಗಳೂ ಮುಗಿದಿದ್ದವು. ಕೊನೆಯಲ್ಲಿ ನೈವೇದ್ಯ, ವೈಶ್ವದೇವ ಇಟ್ಟವರು ರಘುರಾಜ ಜಕಾತಿ. ಇಂತಹ ಅತ್ಯಂತ ದುರ್ಲಭ ಮನೆ – ಮಾಲಿಕ ಬಾಡಿಗೆದಾರ ಸಂಬಂಧವಿದ್ದ ಭಾಗ್ಯ ಅಕ್ಕಮ್ಮ ಮತ್ತು ಅವಳ ಮಕ್ಕಳದು. ಇದು ವಿಶೇಷ.
ಇರಲಿ, ಗೋವಿಂದಣ್ಣ – ಗೋಕಾವಿ ವೈನಿ ಇವರ ಸಂಸಾರದ ಕಡೆ ಹೊರಳೋಣ. ಕಿಟ್ಟೂ ಕಾಕಾನ ಮದುವೆಗಿಂದ ಸ್ವಲ್ಪ ಮುಂಚೆ ಪುಷ್ಪಾ ಹುಟ್ಟಿದ್ದು ಆಗಲೆ ಬಂದಿದೆ. ನಂತರ ಹುಟ್ಟಿದವನು ತಂದೆಯ ಮರಣದ ಕಾಲಕ್ಕೆ ಇನ್ನೂ ಹೊಟ್ಟೆಯಲ್ಲಿಯೆ ಇದ್ದ ವಿಟ್ಠಲ ಉರ್ಫ ಅಪ್ಪಣ್ಣ. ಇವನ ಜನ್ಮವೂ ಗೋಕಾಕದಲ್ಲಿಯೆ ಆಯಿತು, ೨೯ ಅಗಸ್ಟ -೧೯೫೦ರಂದು. (ಇವನೂ ಈಗ ತೀರಿಕೊಂಡಿದ್ದಾನೆ, ಹೋಳಿ ಹುಣ್ಣಿವೆಯ ಮರುದಿನ, ೨೦೦೦ದ ಇಸವಿಯಲ್ಲಿ).
ನಮ್ಮ ಮನೆಯಲ್ಲಿ ಆ ದಿನಗಳಲ್ಲಿ ಹುಟ್ಟಿದ ಹೆಣ್ಣು ಸಂತಾನ – ಹಿರಿತನದ ಕ್ರಮದಲ್ಲಿ : ಅಕ್ಕಮ್ಮ, ಪುಷ್ಪಾ, ಚಿತ್ರಾ (ಪಾಂಡು ಕಾಕನ ಮಗಳು), ಪ್ರೇಮಾ (ಕಿಟ್ಟೂ ಕಾಕ್ಕನ ಮಗಳು).
ಇನ್ನು, ಗೋವಿಂದಣ್ಣ ಅಕಾಲವಾಗಿ, ತನ್ನ ನಲವತ್ತು ನಾಕು ವ₹ರ್ಷ ವಯಸ್ಸಿನಲ್ಲಿ ತೀರಿಹೋದದರವರೆಗೆ ಏನೇನು ಆಯಿತು ಎಂದು ಹೇಳಿ ಆಗಿದೆ. ವ್ಯಕ್ತಿ ಇಲ್ಲವಾದ ಒಡನೆ ಅಲ್ಲಿಗೇ ಅವನ ಕತೆ ಮುಗಿಯುವದಿಲ್ಲ. ಇದು ಮರ್ತ್ಯ ಲೋಕ. ಯಾರೂ ಅಮರರಲ್ಲ. ಅದೇನೋ ಸರಿ. ಆದರೆ ಜೀವಕ್ಕೆ ತಾನು ಅಮರನಾಗಿ ಉಳಿಯಬೇಕು ಎಂಬ ಅದಮ್ಯ, ಅವ್ಯಕ್ತ ಆಸೆ ಅಂತರ್ಗತವಾಗಿ ಇದ್ದೇ ಇರುತ್ತದಲ್ಲ. ಆ ಇಚ್ಛಾ ಪೂರ್ತಿಗೆ ತನ್ನ ದೇಹತ್ಯಾಗದ ನಂತರವೂ ಸಂತಾನದ ರೂಪದಲ್ಲಿ ಅಮರನಾಗುವ ಉಪಾಯವನ್ನು ಕಂಡುಕೊಂಡಿದೆಯಲ್ಲ.
ಈ ಮಾತು ಬಂದದ್ದು, ಗೋವಿಂದಣ್ಣನ ನಂತರವೂ ಇದ್ದ ಆತನ ಸಂಸಾರದ, ಸಂತಾನದ ಕತೆ. ಅದು, ಒಂದು ರೀತಿಯಲ್ಲಿ ಇಲ್ಲವಾದ ಅವನ ವ್ಯಕ್ತಿ ಪರಿಚಯದ ಮುಂದುವರೆದ ಭಾಗ, ಅಲ್ಲವೆ !
ಗಂಡ ತೀರಿದ ಸ್ವಲ್ಪ ದಿನಗಳಲ್ಲಿಯೆ ಕಾಕೂ ತೌರಿನವರ ಜೊತೆ ಗೋಕಾಕಕ್ಕೆ ಹೋದರು. ದು:ಖದಲ್ಲಿದ್ದ ಹೆಂಗಸು, ಗರ್ಭಿಣಿಯೂ ಬೇರೆ. ಮನೆಯಲ್ಲಿ ಆ ಸಾವಿನ ನಂತರ ಬೇರೆ ಅಪ್ರಿಯ ಬೆಳವಣಿಗೆಗಳು ಹುಟ್ಟಿಕೊಳ್ಳತೊಡಗಿದ್ದವು. ಅಂತಹ ಸ್ಥಿತಿಯಲ್ಲಿ, ತೌರು ಮನೆ ಜನ ಬಾ ಎಂದು ಕರೆದರು. ಗಟ್ಟಿಯಾಗಿ ಇಲ್ಲಿಯೆ ನಿಲ್ಲದಿದ್ದರೆ ಹಿಡಿತ ತಪ್ಪೀತು ಎಂದು ಒಂದಿಬ್ಬರು ಸೂಚ್ಯವಾಗಿ ಹೇಳಿದರು. ಯಾವ ದಿಕ್ಕೂ ತೋಚದ ಸ್ಥಿತಿಯಲ್ಲಿದ್ದ ಕಾಕೂ ತೌರಿನ ಕರೆಗೆ ಹೂಂ ಎಂದರು.
ಮುಂದೆ ಗೋಕಾಕದಲ್ಲಿ ಅಪ್ಪಣ್ಣ ಅಂದರೆ ವಿಟ್ಠಲ ಹುಟ್ಟಿದ. ಬಾಣಂತಿತನ ಮುಗಿಯಿತು. ಮರಳಿ, ಕೂಸಿನೊಂದಿಗೆ ಅತ್ತೆಮನೆಗೆ ಬಂದರೆ, ಬಾಗಿಲು ತೆರೆಯಲಿಲ್ಲ. ಇಷ್ಟೇ ಹೇಳುತ್ತೇನೆ. ಪೂರ್ತಿ ಮರೆತರೇ ಒಳಿತು ಎನ್ನುವ ಕೆಲ ಸಂಗತಿಗಳಿರುತ್ತವೆ. ಅಂತಹದು ಈ ಘಟನೆ. ಆದ್ದರಿಂದ, ಯಾರು ಹೀಗೆ ಮಾಡಿದರು, ಏಕೆ, ಆಗ ಮತ್ತು ನಂತರ ಏನೇನು ಆಯಿತು ಎನ್ನುವದನ್ನೆಲ್ಲ ಹೇಳುವದು ಹೋಗಲಿ ನೆನಪಿಸಿಕೊಳ್ಳಲೂ ಬಾರದು.
ಮನೆಯಲ್ಲಿ ಒಡಕು ಹುಟ್ಟಿಬಿಟ್ಟಿತ್ತು. ಅದರಿಂದ ಆ ಅಸಹಾಯಕ, ಅನಾಥ ಕುಟುಂಬಕ್ಕೆ ಸಾಂತ್ವನವೇನೂ ಸಿಗಲಿಲ್ಲ. ಕಾಕೂಗೆ ಅತ್ತೆಮನೆ ಸಂಬಂಧ ಪೂರ್ಣವಾಗಿ ಕಡಿದು ಹೋಯಿತು. ತೌರುಮನೆ ಸಾಧ್ಯವಿದ್ದಷ್ಟು ನೆರವಿಗೆ ಬಂದಿತು. ಆ ದಿನಗಳಲ್ಲಿ ಕಾಕೂ ವರುಷಕ್ಕೊಮ್ಮೆಯೊ, ಎರಡು ಸಲವೋ ಬೆಳಗಾವಿಗೆ ಬಂದರೆ ಒಂದೊಪ್ಪತ್ತು ನಮ್ಮಲ್ಲಿ ಬರುತ್ತಿದ್ದರು. ತಮ್ಮನ ಹೆಂಡತಿಯೆಂದು ಸಾಧ್ಯವಿದ್ದುದನ್ನು ಮಾಡಿಕಳಿಸುತ್ತಿದ್ದರು ನನ್ನ ತಂದೆ.
ಸಣ್ಣ ಹುಡುಗನಾಗಿದ್ದ ಅಪ್ಪಣ್ಣನಿಗಂತೂ ತನ್ನ ತಂದೆಯ ಬಳಗ ಕೊನೆಗೂ ಗುರುತಾಗಲೇ ಇಲ್ಲ. ಆ ದಿನಗಳಲ್ಲಿ ಯಾವದಾದರೂ ಒಂದು ಕಾರಣದಿಂದ ತಪ್ಪಿ ಬಂದರೆ, ಅದು, ಟಿಳಕವಾಡಿಗೆ. ಅಣ್ಣಾ ಎಂದು ನಾವು ಕರೆಯುತ್ತಿದ್ದ ಅಧ್ಯಾಪಕ ರಾಮರಾಯರ ಮನೆಗೆ ಮಾತ್ರ. ಅದೂ ಒಪ್ಪತ್ತು ಮಾತ್ರ. ಅವರ ಪರಿಸ್ಥಿಗೆ ಮರುಗುತ್ತಿದ್ದ, ಕೈಲಾದಷ್ಟು ಮಾಡುತ್ತಿದ್ದ ಮತ್ತೊಂದು ಕುಟುಂಬ ಅವರದು. ಟಿಳಕವಾಡಿಯ ಆ ಮನೆ ನಮ್ಮ ಸುಬ್ಬಕ್ಕ ಅತ್ತೆಯದು. ರಾಮರಾಯರು ಸುಬ್ಬಕ್ಕನ ಪತಿ.
ಹುಟ್ಟಿಸಿದ ದೇವರು ಅವರನ್ನು ಹೇಗೋ ಉಳಿಸಿದ. ಕಾಕೂ, ಆ ಕಹಿಯನ್ನೆಲ್ಲ ನುಂಗಿ, ಅನುಭವಿಸಿ, ಹೇಗೋ ಜೀವನ ಸಾಗಿಸಿದರು. ಆ ಅನಾಥ ಮಕ್ಕಳನ್ನು ಬೆಳೆಸಿದರು. ಅವರ ಮದುವೆಯೂ ಆಯಿತು, ಸಂಸಾರವೂ ಆಯಿತು. ಅವರ ವಂಶವೃಕ್ಷವೂ ಚಿಗಿತುಕೊಂಡಿತು.
ಆದರೆ ನಾವೆಲ್ಲ ಕಾಲ ವಶರು. ಆ ಕಾಕೂ ಈಗ ಇಲ್ಲ. ಯಾವ ಕಾಕಾಗಳೂ ಇಲ್ಲ. ಕಾಕೂಗಳೂ ಇಲ್ಲ. ಆ ಗೋಕಾವಿ ಸುಬ್ಬಾನ ಮಲಮಕ್ಕಳೂ ಇಲ್ಲ, ಪುಷ್ಪಾಳನ್ನುಳಿದು ಹೊಟ್ಟೆಯಿಂದ ಹುಟ್ಟಿದ್ದ ಅಕ್ಕಮ್ಮ, ಅಪ್ಪಣ್ಣ (ವಿಟ್ಠಲ)ರೂ ಇಲ್ಲ. ಕಾಕೂನ ಆ ಮಲಮಕ್ಕಳ ಮಕ್ಕಳು ಇದ್ದಾರೆ. ತನ್ನ ಮೂವರಿಗೆ ಹುಟ್ಟಿದ ಮಕ್ಕಳು ಇದ್ದಾರೆ. ಆದರೆ ಗೋವಿಂದಣ್ಣ ಕಾಕಾನಿಗೆ ಮೊದಲ ಹೆಂಡತಿಯಿಂದ ಹುಟ್ಟಿದ ಮಕ್ಕಳ ಮತ್ತು ಎರಡನೆಯವಳಿಂದಾದ ಮಕ್ಕಳ ನಡುವೆ ಆಗ ಕಡಿದು ಹೋದ ಸಂಬಂಧ ಈಗಲೂ ಕೂಡಿಲ್ಲ.
ಈಗ ಅವರೂ ಉಳಿದಿಲ್ಲ. ಹೊಸ ಪೀಳಿಗೆ ಹುಟ್ಟಿದೆ. ಅವರೂ ಅಪರಿಚಿತರಾಗಿ ಉಳಿದಿದ್ದಾರೆ. ಹುಟ್ಟು ಸಾವು, ಮದುವೆ ಮುಂಜಿವೆ, ಯಾರು ಎಲ್ಲಿದ್ದಾರೆ, ಏನಿದ್ದಾರೆ- ಈ ಯಾವ ಒಂದು ಸುದ್ದಿಯೂ ಪರಸ್ಪರರಿಗೆ ಗೊತ್ತಿಲ್ಲದೆ ಬೆಳೆಯುತ್ತಿದ್ದಾರೆ. ಆದರೂ, ಸಮಾಧಾನದ ಸಂಗತಿ ಎಂದರೆ ಅವರ ನಡುವೆ ಆ ಕಹಿ ನೆನಪೂಗಳು ಇಲ್ಲ. ಆ ಕಾರಣದಿಂದ ವೈರ, ಸಿಟ್ಟುಮುಂದುವರೆದಿಲ್ಲ. ಹೀಗಿರುವಾಗ, ಈ ಹಿನ್ನೆಲೆಯಲ್ಲಿ ಆಗೆಲ್ಲ ಏನೇನು ನಡೆಯಿತು ಎಂಬುದನ್ನೆಲ್ಲ ಈಗ ಬರೆಯಬೇಕೆ !
ಮುಗಿಸುವ ಮುನ್ನ ಕಾಕೂನ ಜೀವನದ ಬಗ್ಗೆ ಒಂದು ಸಂಕ್ಷಿಪ್ತ ಮಾಹಿತಿ ಕೊಡುತ್ತೇನೆ.
ಆ ಕಾಕೂನ (ಗೋಕಾವಿಯ ಸುಭದ್ರಾ ಅಣ್ಣಾಜಿ ಯಾರ್ದಿ, ಮದುವೆಯ ನಂತರದ ರಮಾಬಾಯಿ ಗೋವಿಂದ ಮಂಗಳವೇಢೆ) ಜನ್ಮ ದಿನಾಂಕ ಮತ್ತು ಮರಣ ದಿನಾಂಕ. ಹುಟ್ಟಿದ್ದು : ೨೧ ಮಾರ್ಚ ೧೯೨೨ರಂದು. ಗಂಡನಗಿಂತ ೧೬ ವ₹ರ್ಷ ಸಣ್ಣವರು.
ಕಾಕೂ ಅವರ ಒಡಹುಟ್ಟಿದವರು : ಅವರು ಒಟ್ಟು ಹನ್ನೊಂದು ಜನ – ನಾಕು ಗಂಡು + ಏಳು ಹೆಣ್ಣು. ೧. ದಮಯಂತಿ ೨. ಗೋಪಾಳ ೩. ಇಂದುಮತಿ ೪. ಸುಭದ್ರಾ ೫. ಚಂಪಾ ೬. ಶಾಕಂಬರಿ ೭. ಅಕ್ಕೂತಾಯಿ ೮. ಗೋವಿಂದ ೯ ವತ್ಸಲಾ ೧೦. ವಿದ್ಯಾಧರ ೧೧. ವೆಂಕಟೇಶ.
ಮದುವೆ: ೧೯೪೧ರ ಫೆಬ್ರುವರಿಯಲ್ಲಿ. ಅದು ಮಾಘ ಮಾಸವಾಗಿತ್ತು. ಮದುವೆ ಗೋಕಾಕ ಸಮೀಪದ ಕಲ್ಲೊಳ್ಳಿಯಲ್ಲಿ ನಡೆದಿದ್ದಿತು. ಹತ್ತು ವರ್ಷದ ಸಾಂಸಾರಿಕ ಜೀವನ. ಕಾಕೂನಿಗೆ ಮುರಗೋಡದಲ್ಲಿ ಇರುವ ಪ್ರಸಂಗವೆ ಬರಲಿಲ್ಲ. ಆಗೀಗ ಕೆಂಗೇರಿಗೆ (ಮುರಗೋಡದ ಹೊರಭಾಗ) ಚಿದಂಬರ ದೀಕ್ಷಿತರ ಜಾತ್ರೆಗೆ ಹೋಗಿದ್ದು ಅಷ್ಟೆ. ಹೆಚ್ಚು ಮಾಹಿತಿ ಇರಲಿಲ್ಲ. ಅಕ್ಕಮ್ಮ ಹುಟ್ಟಿದ ಮೇಲೆ ಮೋಹನನ ಮುಂಜಿವೆಗೆಂದು ಪಂಢರಪುರಕ್ಕೆ ಹೋದದ್ದು, ಅದು ಅವರು ಕೈಗೊಂದಿದ್ದ ಯಾತ್ರೆ. ಗಂಡ ತೀರಿಕೊಂಡ ಮೇಲೆ ನಾದಿನಿ ಸುಬ್ಬಕ್ಕ – ಸುಬ್ಬಕ್ಕನ ಪತಿ ಅಧ್ಯಾಪಕ ರಾಮರಾಯರು (ಅಣ್ಣಾ) ಅವರ ಜೊತೆ ಒಮ್ಮೆ ಜಾತ್ರೆಗೆ ಹೋಗಿದ್ದು.
ಗಂಡ ತೀರಿಕೋಂಡಾಗ ಅವರ ಇಪ್ಪತ್ತು ದಿನಾಲ ಪಗಾರ ಬಂದಿತ್ತು. ಸುಮಾರು ೨೦೦ ರೂಪಾಯಿ. ಮುಂದೆ ೧೯೮೨ ರಿಂದ ಪೆನಶೆನ ಕೂಡ ಬರಹತ್ತಿತು.
ಕಾಕೂ ತೀರಿಕೊಂಡದ್ದು : ೧೯೯೭ರ ಎಪ್ರಿಲಿನಲ್ಲಿ. ಚೈತ್ರ ಕೃಷ್ಣ ಅಷ್ಟಮಿಯಂದು, ಕೊಲ್ಲಾಪುರದಲ್ಲಿ, ಮಗ ವಿಟ್ಠಲನ ಮನೆಯಲ್ಲಿ. ಗಂಡ ತೀರಿಕೊಂಡ ಮೇಲೆ ೪೭ ವರ್ಷ ಜೀವಿಸಿದ್ದರು. ಮೊಮ್ಮಕ್ಕಳನ್ನೂ ನೋಡಿದ್ದರು. ವಿಟ್ಠಲನ ಶಿಕ್ಷಣ , ಉದ್ಯೋಗದ ಕಾರಣಗಳಿಂದಾಗಿ ಕೊಲ್ಲಾಪುರಕ್ಕೆ ಹೋಗಿ ಇರಹತ್ತಿದ್ದರು. ಅವನ ಮದುವೆ ಆಗಿ ಅಲ್ಲಿಯೆ ಸಂಸಾರ ಮಾಡಹತ್ತಿದ. ಕೊನೆಯವರೆಗೆ ಅವನ ಹತ್ತಿರವೆ ಇದ್ದರು.
ಕಾಕೂ, ಹಿರಿಯ ಮಗಳು ಅಕ್ಕಮ್ಮನನ್ನು (ಉಷಾ) ತನ್ನ ತಮ್ಮ ವಿದ್ಯಾಧರ ಇವರಿಗೆ ಕೊಟ್ಟಿದ್ದಳು. ಎರಡನೆಯವಳು ಪುಷ್ಪಾಳನ್ನು ನಾದಿನಿ ಸುಬ್ಬಕ್ಕನ (ರಾಮರಾವ ಅಧ್ಯಾಪಕರ) ಎರಡನೆ ಮಗ ವಿಶ್ವಾಸನಿಗೆ ಕೊಟ್ಟಿದ್ದರು. ಮಗ ವಿಟ್ಠಲನಿಗೆ, ಗಡಹಿಂಗ್ಲಜ ಮೂಲದ ಬಳವಂತ ನಾರಾಯಣ ಕುಲಕರ್ಣಿಯವರ ಮಗಳು ಶರಯೂ ಎಂಬುವಳನ್ನು ತಂದುಕೊಂಡಿದ್ದರು.
ಬರೆದವರು ಶ್ರೀಕಾಂತ ರಂಗನಾಥ ಮಂಗಳವೇಢೆ. ಮುಗಿದದ್ದು : ೧೬-೧೨- ೨೦೧೬. ಆಧಾರ – ನೆನಪುಗಳು, ಕಾಕೂ ಗೋಕಾವಿ ಸುಬ್ಬಾ ಅವರನ್ನು ಮಾರ್ಚ ೪, ೧೯೯೩ರಂದು ಸಂದರ್ಶಿಸಿ ಕೇಳಿ ತಿಳಿದ ವಿಷಯ ಹಾಗೆಯೆ ಡಿಸೆಂಬರ ೨೬, ೨೦೧೪ ರಂದು ನಡೆದ ಅವರ ಮಗಳು ಅಕ್ಕಮ್ಮನ ಸಂದರ್ಶನದಲ್ಲಿ ತಿಳಿದ ವಿಷಯ.