ಬಂಡಾಚಾರ್ಯ
ಬಂಡಾಚಾರ್ಯ | ಹುಟ್ಟಿದ ದಿನಾಂಕ: | ||
ತಂದೆ: ಕೃಷ್ಟಾಚಾರ್ಯ | ತಾಯಿ: | ||
ಮಕ್ಕಳು: | |||
ಒಡಹುಟ್ಟಿದವರು: ಭೀಮಾಚಾರ್ಯ, ಶ್ಯಾಮಾಚಾರ್ಯ | Branch: 3 | Generation: 6 |
ದಿ. ಬಂಡಾಚಾರ್ಯ ಕೃಷ್ಟಾಚಾರ್ಯ ಮಂಗಳವೇಢೆ
ಮುರಗೋಡದ ಕೃಷ್ಟಾಚಾರ್ಯರ ಪ್ರಪೌತ್ರ, ರಂಗಾಚಾರ್ಯರ ಪೌತ್ರ, ಕೃಷ್ಟಾಚಾರ್ಯ – ಗೋದೂಬಾಯಿ ದಂಪತಿಗಳ ಪುತ್ರ ಬಂಡಾಚಾರ್ಯ
ಮುರಗೋಡ ನಿವಾಸಿ
ಕಿರು ಪರಿಚಯ
ದಿ. ಬಂಡಾಚಾರ್ಯ ಕೃಷ್ಟಾಚಾರ್ಯ ಮಂಗಳವೇಢೆ
ಕಟಕೋಳದಲ್ಲಿ ರಸ್ತೆ ಮತ್ತು ಕಟ್ಟಡ ನಿರ್ಮಾಣ ಕೆಲಸಗಳ ಮೇಸ್ತ್ರಿ ( overseer ) ಯಾಗಿ ಕೆಲಸ ಮಾಡುತ್ತಿದ್ದರು.
ಜನ್ಮ ಮತ್ತು ಮರಣ ದಿನಾಂಕ : ಜನ್ಮ- ೧೯೦೦ ನೆ ಇಸವಿಯ ಆಸುಪಾಸಿನಲ್ಲಿ ; ಮರಣ – ೧೯೩೦ ರ ಸುಮಾರಿಗೆ
ಪತ್ನಿ: ಗಂಗೂಬಾಯಿ (ಗಂಗಕ್ಕ)
ಮಕ್ಕಳು : ೧) ಸೋನೂತಾಯಿ (ಸೋನಕ್ಕ) (ಗುರುನಾಥ ಶಾಸ್ತ್ರಿ ಯವರ ಪತ್ನಿ) ೨) ಪ್ರಭಾವತಿ (ಅಕ್ಕವ್ವ / ಅಕ್ಕಣ್ಣಿ) ಜಮಖಂದಿಯ ಟಂಕಸಾಲಿ ಮನೆತನದ —-ರ ಪತ್ನಿ) ೩) ಇಂದುಮತಿ (ಕೊಲ್ಲಾಪುರದ ಖ್ಯಾತ ಗಾಯಕ ಮನೆತನ ಶಾಲಿಗ್ರಾಮ —– ರ ಪತ್ನಿ) ೪) ಛಬೂ ೫) ಶ್ರೀಪಾದ – ದತ್ತಕ ಪುತ್ರ. (ಮೊಮ್ಮಗ. ಮಗಳು ಸೋನೂತಾಯಿ ಗುರುನಾಥ ಶಾಸ್ತ್ರಿ ಯವರ ಹಿರಿಯ ಮಗನನ್ನು ಬಂಡಾಚಾರ್ಯರ ಮರಣದ ನಂತರ ಗಂಗಕ್ಕ ದತ್ತಕತೆಗೆದು ಕೊಂಡರು)
ವ್ಯಕ್ತಿ ಪರಿಚಯ
ದಿ. ಬಂಡಾ ಚಾರ್ಯ ಕೃಷ್ಟಾಚಾರ್ಯ ಮಂಗಳವೇಢೆ
ಜನ್ಮ ಮತ್ತು ಮರಣ : ಜನ್ಮ- ೧೯೦೦ನೆ ಇಸವಿಯ ಆಸುಪಾಸಿನಲ್ಲಿ : ಮರಣ – ೧೯೩೦ರ ಸುಮಾರಿನಲ್ಲಿ. ಈ ಎರಡೂ ಘಟನೆಗಳ ಖಚಿತ ಮಾಹಿತಿ ಇಲ್ಲ.
ದಿ. ಬಂಡಾಚಾರ್ಯರು ನಮ್ಮ ಮನೆತನದ ಮೂರನೆ ಟಿಸಿಲಿನ ಆರನೆ ತಲೆಮಾರಿನವರು. ಮುರಗೋಡದಲ್ಲಿ ಇದ್ದವರು. ಇವರ ಕಿರಿಯ ಸಹೋದರ ಶ್ಯಾಮಾಚಾರ್ಯರು, ದತ್ತಕ ಹೋಗಿ ಗಿರಿಭಟ್ಟನವರ ಎಂಬ ಅಡ್ಡ ಹೆಸರನ್ನು ಪಡೆದು ಕಿತ್ತೂರಿನಲ್ಲಿ ನೆಲಸಿದ್ದವರು. ತಂದೆ – ಕೃಷ್ಟಾಚಾರ್ಯ ; ತಾಯಿ – ಗೋದೂಬಾಯಿ.
ಬಂಡಾಚಾರ್ಯರನ್ನು ನೋಡಿದವರು, ಅವರ ಜೀವಿತ ಕಾಲದ ಘಟನೆಗಳ ಸಾಕ್ಷಿಯಾಗಿ ಆ ವಿವರಗಳನ್ನು ಹೇಳಬಲ್ಲವರು, ಈಗ ಯಾರೂ ಇಲ್ಲ. ಪತ್ನಿ ಗಂಗಕ್ಕ ಇಲ್ಲ. ಮಕ್ಕಳೂ ಉಳಿದಿಲ್ಲ. ಉಳಿದಿದ್ದರೆ, ಅದು ಎರಡನೆ ಮಗಳು, ತೊಂಬತ್ತು ವರ್ಷ ವಯಸ್ಸಾಗಿರುವ ಪ್ರಭಾವತಿ (ಅಕ್ಕಣ್ಣಿ) ಟಂಕಸಾಲಿ. ಪುಣೆಯಲ್ಲಿ ಇದ್ದಿರಬಹುದು. ಗೊತ್ತಿಲ್ಲ. ಗಂಗಕ್ಕ ತೆಗೆದುಕೊಂಡಿದ್ದ ದತ್ತಕ ಮಗನೂ ೧೯೯೭ ರಲ್ಲಿಯೆ ತೀರಿಹೋಗಿ, ೧೯ ವರ್ಷಗಳೇ ಉರುಳಿಹೋಗಿವೆ ಇಂದಿಗೆ.
ಇನ್ನು, ಬಂಡಾಚಾರ್ಯರ ತಮ್ಮ ಶ್ಯಾಮಾಚಾರ್ಯ. ಅವರು ೧೯೯೮ ರಲ್ಲಿಯೆ ತೀರಿಕೊಂಡರು. ಅವರ ಮಕ್ಕಳೇನೋ ಇದ್ದಾರೆ. ಆದರೆ ಅವರಿಗೂ ಕೇಳಿ ಗೊತ್ತಿರಬಹುದಾದ ಸಂಗತಿ ಬಹಳ ಸ್ವಲ್ಪ. ಕಕ್ಕ ಬಂಡಾಚಾರ್ಯರ ಬಗ್ಗೆ, ಕಕ್ಕಿ ಗಂಗಕ್ಕನ ಬಗ್ಗೆ ಮತ್ತವರ ಮಕ್ಕಳ ಬಗ್ಗೆ ಕಿವಿಯ ಮೇಲೆ ಹೆಚ್ಚೇನೂ ಬಿದ್ದಿರಲಾರದು.
ಅಂದಮೇಲೆ, ಈಗ ಅವರನ್ನು ನೆನಸಿಕೊಳ್ಳುವವರು ಯಾರು !
ಯಾರೂ ಇಲ್ಲವೆಂದರೂ, ಮನೆತನದ ಇತಿಹಾಸವನ್ನು ಅರಿಯಲು ಹೊರಟ ನನಗೆ ಅವರ ಬಗ್ಗೆ ತಿಳಿದುಕೊಳ್ಳಬೇಕಿದೆ. ಸುದೈವದಿಂದ, ತಕ್ಕ ಮಟ್ಟಿಗೆ ಆ ವಿಷಯ ಗೊತ್ತಿದ್ದ ವ್ಯಕ್ತಿಯೊಬ್ಬರು ಇದ್ದಾರೆ. ಅವರೆ ನಲಿನಿ. ಬಂಡಾಚಾರ್ಯರ ಮೊಮ್ಮಗಳು. ಮಗಳು ಸೋನಕ್ಕ ಶಾಸ್ತ್ರಿಯವರ ಮಗಳು. ನನಗಿಂತ ಮೂರುನಾಕು ವರ್ಷ ಸಣ್ಣವರು. ಸುಮಾರು ಅರವತ್ತು ವರ್ಷಗಳ ಹಿಂದೆಯೆ ಗುರುತಾಗಿದ್ದ ಆಗಿನ ನಲೂ ಶಾಸ್ತ್ರಿ, ಈಗ ಮದುವೆಯಾಗಿ ನಲಿನಿ ವೇದವ್ಯಾಸ ಜೋಶಿ.
“ಅಜ್ಜನ ಕೆಲಸದ ಗುರುತೊಂದು ಈಗಲೂ ಇದೆ. ಕೆ. ಚಂದರಗಿ – ಎಂದರೆ ಕಟಕೋಳ ಚಂದರಗಿಯಲ್ಲಿ, ಬೇವಿನ ಗಿಡದ ಸುತ್ತಲೂ ಬಸವಣ್ಣನ ಕಟ್ಟೆ ಎಂದು ಕರೆಯಲಾಗುವ ಜಾಗೆಯೊಂದಿದೆ. ಹಳೆಯ ಜನ ಅದು ಬಂಡಾಚಾರ್ಯರ ನಿರ್ಮಿತಿ ಎಂದು ಹೇಳುತ್ತಿದ್ದರು. ಅವರು ಅಲ್ಲಿಂದಲೆ ತಮ್ಮ ವೃತ್ತಿ ಜೀವನವನ್ನು ಶುರು ಮಾಡಿದ್ದರು. ಅಜ್ಜ ಮ್ಯಾಟ್ರಿಕ ಪರೀಕ್ಷೆಯಾಗಿದ್ದರು. ಆದರೆ, ವಯೋಮಿತಿಯಲ್ಲಿ ಸಣ್ಣವರಾಗಿದ್ದರು ಎಂದು ಸರಕಾರಿ ಕೆಲಸಕ್ಕೆ ಸೇರಲಾಗದೆ ಮೇಸ್ತ್ರಿ ಯಾಗಿ (overseer) ಕೆಲಸಕ್ಕೆ ಹತ್ತಿದ್ದರು. ಅಲ್ಲಿನ ರಸ್ತೆ ನಿರ್ಮಾಣ ಪ್ರಾರಂಭಿಸುವ ಮೊದಲು ಈ ದೇವರ ಕಟ್ಟೆ ನಿರ್ಮಿಸಿ, ತಮ್ಮ ಕೆಲಸ ಪ್ರಾರಂಭಿಸಿದ್ದರು”, ಹೀಗೆ ನಾನು ಕೇಳಿದ್ದೆ ಎಂದು ನಲಿನಿ ಅಜ್ಜನ ನೆನಪು ಮಾಡಿಕೊಂಡರು.
ಬಂಡಾಚಾರ್ಯ ಮತ್ತು ಶ್ಯಾಮಾಚಾರ್ಯರು ಅಣ್ಣ ತಮ್ಮಂದಿರು. ಒಂದೆ ರಕ್ತದವರಲ್ಲವೆ. ಹಾಗಾಗಿ, ಇಬ್ಬರಲ್ಲಿಯೂ ಕೆಲ ಸಾಮ್ಯಗಳು ಎದ್ದು ಕಾಣುವಂತಿದ್ದವು. ಇಬ್ಬರೂ ಸಂಗೀತದ ಗೀಳು ಇದ್ದವರು. ಕಲಾ ವಿಷಯಕ ಆಸಕ್ತಿ ಇದ್ದವರು. ಆ ಕಾಲದಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯ ಹೋರಾಟ ಇಬ್ಬರ ಮೇಲೂ ಪ್ರಭಾವ ಬೀರಿತ್ತು.
“ಆ ಕಾಲದಲ್ಲಿ ನಾಟಕ ಕಂಪನಿಗಳ ಹತ್ತಿರ ಇರುತ್ತಿದ್ದ ಸಂಗೀತ ಸಾಧನಗಳಲ್ಲಿ ಕಾಲು ಪೆಟ್ಟಿಗೆ ಎಂಬುದೊಂದು ಇದ್ದಿತಲ್ಲವೆ. ಅಜ್ಜ, ಆ ಕಾಲು ಪೆಟ್ಟಿಗೆ ನುಡಿಸುವಲ್ಲಿ ಪರಿಣತಿ ಪಡೆದಿದ್ದರು. ಅದೊಂದೇ ಅಲ್ಲ. ಚಿತ್ರ ಕಲೆಯೂ ಅವರಿಗೆ ಅವಗತವಿದ್ದಿತು. ಅವರ ನಿಕಟ ಪರಿಚಿತರಲ್ಲಿ ನಾಟಕರಂಗದ ಸುಪ್ರಸಿದ್ಧ ಕಲಾವಿದ ಏಣಗಿ ಬಾಳಪ್ಪ ಅವರೂ ಒಬ್ಬರು. ಸಮಕಾಲೀನರು. ಹಾಗೆಯೆ, ಗೆಳೆಯರಲ್ಲಿ ಸುಪ್ರಸಿದ್ಧ ಜಾನಪದ ಹಾಡುಗಾರ ಮುರಗೋಡದವರೆ ಆದ ಹುಕ್ಕೇರಿ ಬಾಳಪ್ಪ, ಮತ್ತೊಬ್ಬರು.
“ಒಮ್ಮೆ ಹೀಗಾಯಿತು – ಏಣಗಿ ಬಾಳಪ್ಪನವರ ನಾಟಕ ಒಂದಕ್ಕೆ ಅರ್ಜೆಂಟಾಗಿ ಹೊಸ ಪಡದೆಗಳು ಬೇಕಾದವು. ಅಷ್ಟು ಅವಸರದಲ್ಲಿ ಅವುಗಳನ್ನು ತಯಾರು ಮಾಡಿಸುವದು ಹೇಗೆ? ಯಾರು ಈ ಕೆಲಸ ಮಾಡಿಕೊಟ್ಟಾರು ? ಎಂಬ ಪ್ರಶ್ನೆ ಧುತ್ತೆಂದು ಎದುರಾಗಿ ಕಾಡುತ್ತಿದ್ದಾಗ, ಆ ಕೆಲಸವನ್ನು ಸತತವಾಗಿ ಮಾಡಿ ಎರಡು ಮೂರು ದಿನಗಳಲ್ಲಿ, ಹೊಸ ಸೀನುಗಳ ಆ ಪಡದೆಗಳನ್ನು ಪೇಂಟ ಮಾಡಿಕೊಟ್ಟವರು ಬಂಡಾಚಾರ್ಯರು, ಎಂದು ಕೇಳಿದ್ದೆ ಸವದತ್ತಿಯಲ್ಲಿದ್ದಾಗ, ಏಣಗಿ ಬಾಳಪ್ಪ ಅಲ್ಲಿಗೆ ಬಂದರೆ ಮನೆಗೂ ಬಂದು ಅಜ್ಜಿ ಗಂಗಕ್ಕನನ್ನು ಭೆಟ್ಟಿಯಾಗುತ್ತಿದ್ದರು. ಅತ್ತಿಗೆ ಎಂದು ಅವರನ್ನು ಸಂಬೋಧಿಸುತ್ತಿದ್ದರು”, ಎಂದು ತಮ್ಮ ಅಜ್ಜನ ಇನ್ನೊಂದು ನೆನಪು ಹೇಳಿದರು.
“ಅವರದು ಸುಶ್ರಾವ್ಯ ಕಂಠ. ಸ್ವಂತದ ತಂಬೂರಿ ಇದ್ದಿತು. ತೀರಿಕೊಂಡಾಗ, ಅದು ಅವರ ಪರಿಚಿತರಾದ ಜಯದೇವರಾವ ಕುಲಕರ್ಣಿಯವರ ಮನೆಯಲ್ಲಿದ್ದಿತು. ಗೆಳೆಯನ ನೆನಪೆಂದು ಅದನ್ನು ಅವರು ತಮ್ಮಲ್ಲಿಯೆ ಇಟ್ಟುಕೊಂಡರು”, ಮತ್ತೊಂದು ನೆನಪು. ಜಯದೇವರಾವ ಕುಲಕರ್ಣಿ ಬೆಳಗಾವಿ ಜಿಲ್ಲೆಯ, ಆ ಕಾಲದ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಬಹು ದೊಡ್ಡ ಹೆಸರು. ಬೆಳಗಾವಿಯ ಟಿಳಕವಾಡಿಯ ಎರಡನೆ ರೇಲ್ವೆ ಗೇಟಿನ ಹತ್ತಿರ ಇದ್ದರು. ಅವರಿಗೆ ಹೆಣ್ಣು ಕೊಟ್ಟ ಮಾವ ಮುರಗೋಡದವರು- ಮಾಟೊಳ್ಳಿ ಬಾಬು ಎಂಬುವರು. ಅವರೂ ಈ ಭಾಗದಲ್ಲಿ ಪ್ರಸಿದ್ಧರೆ.
ಬಂಡಾಚಾರ್ಯರೂ ಕಾಂಗ್ರೆಸ್ಸಿನ ಪ್ರಭಾವಕ್ಕೆ ಒಳಗಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಬಿದ್ದವರೆ. ಮುರಗೋಡ, ಬೈಲ ಹೊಂಗಲ, ಬೆಳಗಾವಿ ಮೊದಲಾದ ಕಡೆ ಕಾರ್ಯಕರ್ತನಾಗಿ ಕೆಲಸ ಮಾಡಿದವರು. ಮಹಾತ್ಮಾ ಗಾಂಧಿಯವರೆ ಅಧ್ಯಕ್ಷರಾಗಿದ್ದ ಬೆಳಗಾವಿ ಕಾಂಗ್ರೆಸ್ಸ ಅಧಿವೇಶನದಲ್ಲೂ ದುಡಿದವರು. ತಾವೊಬ್ಬರೆ ಅಲ್ಲ ಹೆಂಡತಿ ಗಂಗಾಬಾಯಿ ಸಹಿತ. ಆಗ ಅವರ ಚೊಚ್ಚಲ ಮಗು – ಸೋನಕ್ಕ ಇನ್ನೂ ಚಿಕ್ಕ ಕೈಗೂಸು. ಆ ಹೋರಾಟದಲ್ಲಿ, ಗಂಡ ಹೆಂಡತಿ ಇಬ್ಬರೂ ಜೇಲಿಗೆ ಹೋಗಿಬಂದವರಾಗಿದ್ದರು. ಆ ದಿನಗಳಲ್ಲೆ ಜಯದೇವರಾವ ಮತ್ತು ಮಾಟೊಳ್ಳಿ ಬಾಬು ಅವರ ಸಮೀಪದ ಸಂಪರ್ಕ ಬಂದಿದ್ದು.
ಹೀಗೆ, ಸಂಗೀತದ ಗೀಳು, ಗಾಯನದ ಕಲೆ ಇವುಗಳು ಅಣ್ಣ ತಮ್ಮಂದಿರಲ್ಲಿ ಸಮಾನವಾಗಿದ್ದವು. ಚಿತ್ರಕಲೆ- ನಾಟಕದ ದೊಡ್ಡ ಪಡದೆಗಳ ಪೇಂಟಿಂಗ ಇದರಲ್ಲಿ ಅಣ್ಣ ಪರಿಣಿತ. ಸಾಹಿತ್ಯದ ರುಚಿ, ತಕ್ಕ ಮಟ್ಟಿಗಿನ ಸಂಸ್ಕೃತ ಭಾಷಾ ಜ್ಞಾನ ಇವು ತಮ್ಮನ ಆಸಕ್ತಿ. ಇಬ್ಬರೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದವರು. ಅಣ್ಣ ಸ್ವಾತಂತ್ರ್ಯ ಪ್ರಾಪ್ತಿಗಿಂತ ಮೊದಲೆ ಇಲ್ಲವಾಗಿದ್ದರು. ತಮ್ಮ ಅದನ್ನು ಕಂಡ ಭಾಗ್ಯವಂತ. ಕೇಂದ್ರ ಸರಕಾರ ಅವರ ಹೋರಾಟವನ್ನು ಗುರುತಿಸಿ ತಾಮ್ರಪಟವನ್ನು ಕೊಟ್ಟು ಗೌರವಿಸಿದ್ದಿತು.
ಬಂಡಾಚಾರ್ಯರ ಮರಣದ ನಂತರ ಆಸ್ತಿಯ ವಿಷಯದಲ್ಲಿ ಅತ್ತಿಗೆ ಗಂಗಕ್ಕ ಮತ್ತು ಮೈದುನರಲ್ಲಿ ವ್ಯಾಜ್ಯ ಹುಟ್ಟಿಕೊಂಡಿತ್ತು. ಹಾಯ ಕೋರ್ಟ ವರೆಗೂ ಹೋಗಿತ್ತು. ತೀರ್ಮಾನ ಬರುವವರೆಗೆ ಸುಮಾರು ಎರಡು ದಶಕಗಳು ಕಳೆದವು. ಆ ಕಾಲದಲ್ಲಿ ಎರಡೂ ಕುಟುಂಬಗಳು ಮುರಗೋಡನ್ನು ಬಿಟ್ಟು, ಪ್ರತ್ಯೇಕಗೊಂಡು, ಒಂದು ಸವದತ್ತಿಯಲ್ಲಿ ಮತ್ತೊಂದು ಕಿತ್ತೂರಿನಲ್ಲಿ ಇರಹತ್ತಿದ್ದವು. ಮನಸ್ಸು ಒಡೆದಿತ್ತು. ಸಂಪರ್ಕ ಕಡಿದಿತ್ತು. ಎರಡು ಮೂರು ದಶಕಗಳ ಕಾಲ ಇದೇ ಸ್ಥಿತಿ ಮುಂದುವರೆಯಿತು. ಅತ್ತಿಗೆ ಮೈದುನರು ಭೆಟ್ಟಿ ಕೇವಲ ಕೋರ್ಟಿನಲ್ಲಿ ಆಗುತ್ತಿತ್ತು.
ಕೊನೆಗೂ ತೀರ್ಮಾನ ಬಂದಿತು. ಗಂಗಕ್ಕನ ಪರವಾಗಿ. ಗಂಡ ಬಂಡಾಚಾರ್ಯರ ಮರಣದ ನಂತರ ಪರಭಾರೆಯಾಗಿ ಹೋಗಿದ್ದ ಆಸ್ತಿ ಮರಳಿ ಕೈಸೇರಿತು.
ಬಂಡಾಚಾರ್ಯರಿಗೆ ಪಿತ್ರಾರ್ಜಿತವಾಗಿ ಬಂದಿದ್ದ ಮನೆಯ ಕುರಿತು ಮಾತನಾಡುತ್ತ ತಾನು ಚಿಕ್ಕವಳಿದ್ದಾಗ ದೊಡ್ಡವರ ಜೊತೆ – ಅಂದರೆ ಅಜ್ಜಿ ಗಂಗಕ್ಕ, ಮತ್ತು ದತ್ತೂ ಮಾಸ್ತರ ಜೊತೆ ಮುರಗೋಡಕ್ಕೆ ಹೋಗಿದ್ದ ನೆನಪು ಹೇಳಿ, ನಲಿನಿ ಆ ಮನೆ ಒಂದು ಮೂಲೆ ನಿವೇಶನಲ್ಲಿದ್ದಿತು, ಹತ್ತಿರವೆ ಲಾಯಿಟ ಕಂಬ. ಮನೆಗೆ ಸೇರಿದ ಬಾವಿಯೊಂದೂ ಇದ್ದಿತು. ಮುರಗೋಡದಲ್ಲಿ ಬಾವಿಗಳೆ ಕಡಿಮೆ ಎಂದೆಲ್ಲ ನೆನಸಿಕೊಂಡರು. ಆ ಮನೆಯನ್ನು ಕುಲಕರ್ಣಿ ಎಂಬುವವರಿಗೆ ಮಾರಿದರು, ಅವರ ಪೂರ್ಣ ಹೆಸರಾಗಲಿ, ಯಾವ ವರ್ಷ ಎಂಬುದಾಗಲಿ ನೆನಪಿಲ್ಲ, ಎಂದೂ ಹೇಳಿದರು. ಸವದತ್ತಿ ತಾಲೂಕಿನ ನುಗ್ಗಾನಟ್ಟಿಯಲ್ಲಿ ಬಂಡಾಚಾರ್ಯರ ಹೊಲ ಇದ್ದಿತಂತೆ.
ಕಾಣಲು ಹೇಗಿದ್ದರು ? ಸ್ವಭಾವ ಹೇಗಿದ್ದಿತು ? “ಗಿಡ್ಡ ಎಂದೆ ಹೇಳಬಹುದಾದ ಸುಮಾರು ೫ ಫೂಟು ೪ ಇಂಚು ಎತ್ತರದ, ಯುರೋಪಿಯನ್ನರಂತಿದ್ದ ಬೆಳ್ಳಗೆ, ದಪ್ಪನಾದ ಕೆಂಪು ತುಟಿಗಳು -ಕಾಣಲು ಹೀಗಿದ್ದರು. ಜಾಣ, ಮಿತಭಾಷಿ. ಎಲ್ಲರೊಂದಿಗೆ ಕೂಡಿಕೊಳ್ಳುವ ಗುಣ. ಶಾಂತ ಸ್ವಭಾವ. ಇದು ತನ್ನ ಅಜ್ಜಿಯಿಂದ ಆಗಾಗ ಕೇಳಿಬರುತ್ತಿದ್ದ ಅವರ ರೂಪ, ಸ್ವಭಾವದ ವರ್ಣನೆ”.
ಇದು ಬಂಡಾಚಾರ್ಯರ ಶಬ್ದರೂಪದ ಒಂದು ಚಿಕ್ಕ ರೇಖಾ ಚಿತ್ರ. ಇದನ್ನು ಬರೆಯುತ್ತಿರುವಾಗ – ಈವ್ಯಕ್ತಿ ಚಿತ್ರದ ಹಿನ್ನೆಲೆಯಲ್ಲಿ ಬೇರೆ ಕೆಲ ವಿವರಗಳನ್ನೂ ಕೊಡಬೇಕು ಎನಿಸುತ್ತಿದೆ.
ಈ ವ್ಯಕ್ತಿ ಪರಿಚಯ ಬರೆಯುವ ಮೊದಲು ಅವರ ಕಿರಿಯ ಸಹೋದರ ಶ್ಯಾಮಾಚಾರ್ಯರ ವ್ಯಕ್ತಿ ಪರಿಚಯವನ್ನು ಬರೆದು ಮುಗಿಸಿ, ನಂತರ ಈ ಕೆಲಸಕ್ಕೆ ತೊಡಗಿದೆ. ಮೊದಲು ತಮ್ಮನ ಬಗ್ಗೆ ಹೇಳಿ ಆಮೇಲೆ ಅಣ್ಣನ ಬಗ್ಗೆ ಹೇಳಹೊರಟಿದ್ದೇನೆ. ಬಹುಶಃ ನನಗೆ ಮೊದಲು ಶ್ಯಾಮಾಚಾರ್ಯರ ಗುರುತು ಆಗಿದ್ದು ಇದರ ಕಾರಣವಾಗಿರಬಹುದು. ೧೯೫೬ ರಲ್ಲಿ ನನ್ನ ತಂದೆ ತೀರಿಕೊಂಡ ನಂತರ ಹೊಲ ಮನೆ, ಆಸ್ತಿಪಾಸ್ತಿ ಕಿತ್ತೂರಿನಲ್ಲಿದ್ದವಾಗಿ ನಾನು ಕಿತ್ತೂರಿಗೆ ಹೋಗಿಬರಬೇಕಾಗಿದ್ದುದರಿಂದ ಅಲ್ಲಿದ್ದ ಅವರ ಗುರುತು, ಇವರ ಹೆಸರನ್ನೂ ಕೇಳುವ ಮೊದಲೆ ಆಗಿದ್ದಿತು.
ಅದೇ ಸುಮಾರಿಗೆ ಬಂಡಾಚಾರ್ಯರ ವಿಧವಾ ಮಗಳು ಸೋನಕ್ಕ ತನ್ನ ಮಕ್ಕಳನ್ನು ಕಟ್ಟಿಕೊಂಡು, ಅವರ ಶಿಕ್ಷಣಕ್ಕಾಗಿ, ಸವದತ್ತಿಯಿಂದ ಬೆಳಗಾವಿಗೆ ಬಂದಿದ್ದರು, ಪ್ರಾಯಶಃ ೧೯೫೫ ರ ಹೊತ್ತಿಗೆ. ಒಂದು ಬಾಡಿಗೆ ಮನೆ, ನಾವಿದ್ದ ಗೋಂಧಳಿಗಲ್ಲಿಗೆ ಅಡ್ಡವಾಗಿದ್ದ ಅಡ್ಡ ಗೋಂಧಳಿ ಗಲ್ಲಿಯಲ್ಲಿ ಅವರಿಗೆ ಸಿಕ್ಕಿದ್ದಿತು. ಎಲ್ಲೋ ನೋಡಿದಾಗ ನನ್ನ ತಾಯಿಗೆ ಅವರ ಗುರುತು ಹತ್ತಿತು. ಆದರೆ ಮನೆಗೆ ಬಂದು ಹೋಗಿ ಮಾಡಲು ಮತ್ತೆ ತಿಂಗಳುಗಳು ಗತಿಸಿದವು. ನನ್ನ ಮಟ್ಟಿಗೆ, ಅವರ ಹೆಸರು, ಅವರ ಮನೆ ಎಲ್ಲಿ ಇತ್ಯಾದಿ ಅಷ್ಟೆ ಗೊತ್ತಾದದ್ದು.
ಮುಂದೆ ಹೀಗೆಯೆ ಮತ್ತೊಂದು ಇಪ್ಪತ್ತು ವರುಷಗಳೆ ಕಳೆದವು. ಭೆಟ್ಟಿಯ ಸಾತತ್ಯ ಹೆಚ್ಚಾಗಿತ್ತು. ಅಷ್ಟು ಹೊತ್ತಿಗೆ ಶ್ರೀಪಾದ ಕಲಿಯುವದನ್ನು ಮುಗಿಸಿ ಬೆಂಗಳೂರಿಗೆ ಹೋಗಿದ್ದ. ನಲೂ ಶಿಕ್ಷಿಕೆಯಾಗಿ ನಾನಿದ್ದ ಶಾಲೆಯಲ್ಲಿಯೆ ನನ್ನ ಸಹೋದ್ಯೋಗಿಯಾಗಿ ಬಂದಳು. ಎಸ್.ಎಸ್.ಸಿ ಪರೀಕ್ಷೆಯ ಉತ್ತರ ಪತ್ರಿಕೆ ತಪಾಸಣೆಗೆಂದು ನಾನು ಬೆಂಗಳೂರಿಗೆ ಹೋದಾಗ ಶ್ರೀಪಾದನ ರೂಮಿನಲ್ಲಿ ಉಳಿದುಕೊಳ್ಳುತ್ತಿದ್ದೆ. ನಲೂ ಜೊತೆಗಂತೂ ಶಾಲೆಯಲ್ಲಿ ನಿತ್ಯ ಭೆಟ್ಟಿ.
ಈ ನಡುವೆ, ಅಡ್ಡ ಗೋಂಧಳಿ ಗಲ್ಲಿಯಿಂದ ಅವರು ಮಾರುತಿ ಗಲ್ಲಿಗೆ, ಅಲ್ಲಿಂದ ಬಸವನ ಗಲ್ಲಿಗೆ, ಕೊನೆಯಲ್ಲಿ ಶಹಾಪುರ ರಸ್ತೆಯ ಮೇಲೆ ಕಪಿಲೇಶ್ವರ ಗುಡಿ ಮತ್ತು ರೇಲ್ವೆ ಗೇಟಿನ ಹತ್ತಿರ ಅಪಾರ್ಟ್ಮೆಂಟಿನಲ್ಲಿ ಸ್ವಂತ ಒಂದು ಫ್ಲ್ಯಾಟಿಗೆ ಸ್ಥಳಾಂತರ ಹೊಂದಿದರು. ಸೋನಕ್ಕ ಅವರನ್ನು ಭೆಟ್ಟಿಯಾಗಲು ಆ ಮನೆಗಳಿಗೂ ಹೋಗುತ್ತಿದ್ದೆ. ಈ ನಡುವೆ ನನ್ನ ಮದುವೆಯಾಯಿತು. ಈಗ ಆದ ಬದಲಾವಣೆ, ಜೋಡಿ ಯಾಗಿ ಹೋಗುತ್ತಿದ್ದೆವು. ಅವರೂ ಮನೆ ನನ್ನನ್ನೂ ನನ್ನ ತಾಯಿಯನ್ನು ನೋಡಲು ಬಂದು ಹೋಗುತ್ತಿದ್ದರು.
ಈ ಅವಧಿಯಲ್ಲಿ ಗಂಗಕ್ಕ ಅವರೂ ಮಗಳಕಡೆಗೆಂದು ಬೆಳಗಾವಿಗೆ ಬಂದು ಹೋಗುತ್ತಿದ್ದರು. ಅವರ ಗುರುತೂ ಆಗಿತ್ತು. ಅವರ ಜೊತೆಗೆ ಕೆಲವು ಸಲ ಬಂದಿದ್ದ – ಕೋರ್ಟು ಕಟ್ಟೆಯನ್ನೇರಿದ ಆಸ್ತಿಯ ವ್ಯಾಜ್ಯದಲ್ಲಿ ಬೆಂಬಲವಾಗಿ ನಿಂತು ಹೋರಾಡಿ ಗೆದ್ದ, ವಾವೆಯಲ್ಲಿ ತಮ್ಮನಾಗಿದ್ದ, ಗಂಗಕ್ಕನ ಮಾವಸಿಯ ಮಗ ದತ್ತೂ ಮಾಸ್ತರರ ಗುರುತೂ ಆಗಿತ್ತು. ಇಷ್ಟೆಲ್ಲ ಆಗಿದ್ದರೂ ಸೋನಕ್ಕ ಅವರ ಮಗ ಶ್ರೀಪಾದನನ್ನು ನಾವು ಶ್ರೀಪಾದ ಎಂದೆ ಗುರುತಿಸುತ್ತಿದ್ದೆವೇ ವಿನಃ, ಆತ ತನ್ನ ಅಜ್ಜಿ ಗಂಗಕ್ಕನಿಗೆ ದತ್ತಕ ಹೋಗಿ – ಶ್ರೀಧರ ಬಂಡಾಚಾರ್ಯ ಮಂಗಳವೇಢೆ ಆಗಿದ್ದ ಎಂಬುದು ತಲೆಯಲ್ಲಿ ಆಳವಾಗಿ ಇಳಿದಿರಲೇ ಇಲ್ಲ.
ಹಾಗೆಯೆ, ಗಂಗಕ್ಕ ಶ್ಯಾಮಾಚಾರ್ಯರ ವೈನಿ ಎಂದು, ಹಲವಾರು ಸಲ ಕೇಳಿದ್ದ ಮೇಲೂ, ತಲೆಯಲ್ಲಿ ಆಳವಾಗಿ ಇಳಿದಿರಲಿಲ್ಲ. ಮುಖ್ಯವಾಗಿ, ಕಿತ್ತೂರಿನ ಶ್ಯಾಮಾಚಾರ್ಯರ ಪರಿಚಯವಾಗಿಯೂ, ಅವರನ್ನು ಗಿರಿಭಟ್ಟನವರ ಮನೆತನದವರೆಂದು ತಿಳಿದಿದ್ದೆನೇ ಹೊರತು – ದತ್ತಕ ಬಂದು ಅವರಿಗೆ ಆ ಅಡ್ಡಹೆಸರು ಬಂದಿದೆಯೆಂದು ಗೊತ್ತಿದ್ದೂ – ಅವರೂ ಮುರಗೋಡದವರೆ, ಮಂಗಳವೇಢೆ ಅಡ್ಡ ಹೆಸರಿನವರೇ, ನನ್ನ ಅಜ್ಜ, ತಂದೆ, ಕಕ್ಕ ಮೊದಲಾದ ಹಿರಿಯರೊಂದಿಗೆ ಒಂದೇ ಊರಲ್ಲಿ ಕೂಡಿ ಆಡಿ ಬೆಳೆದವರು, ನಿಕಟ ಸಂಬಂಧಿಗಳು ಎಂದು ಸ್ವಲ್ಪವೂ ಭಾಸವಾಗಿರಲೆ ಇಲ್ಲ. ಮೊದಲು ಗುರುತಾಗಿದ್ದ ಶ್ಯಾಮಾಚಾರ್ಯ ಮತ್ತು ನಮ್ಮ ಸಂಬಂಧವೆ ಗೊತ್ತಾಗದೆ ಇದ್ದಾಗ – ಎಂದೋ ತೀರಿಹೋಗಿದ್ದ, ನಾನು ಎಂದೂ ನೋಡದಿದ್ದ ಮುರಗೋಡದ ಬಗ್ಗೆ, ಆ ಊರಿನ ಬಂಡಾಚಾರ್ಯರ ಬಗ್ಗೆ ಆಸ್ಥೆಯಾದರೂ ಹೇಗೆ ಹುಟ್ಟೀತು !
ವಂಶಾವಳಿ ಮತ್ತು ಮನೆತನದ ಇತಿಹಾಸ ಬರೆಯುವ ಹುಚ್ಚು ಹೊಕ್ಕ ನಂತರವೆ ಈ ಸಂಬಂಧಗಳೆಲ್ಲ ತಿಳಿಯುತ್ತ ಹೋದವು. ಬಂಡಾಚಾರ್ಯರು ನಮ್ಮದೆ ಎಂದರೆ ಮೂರನೆ ಟಿಸಿಲಿನ ಆರನೆ ತಲೆಮಾರಿನವರು. ಅದು ನನ್ನ ಅಜ್ಜ ರಾಮಾಚಾರ್ಯರ, ಹಾಗೆಯೆ ನನ್ನ ತಂದೆಯ ದತ್ತಕ ಅಜ್ಜ ಕೃಷ್ಟಾಚಾರ್ಯರ ತಲೆಮಾರು.
ಬಂಡಾಚಾರ್ಯರು ನನ್ನ ತಂದೆಗಿಂತ ನಾಕು ವರ್ಷವಾದರೂ ದೊಡ್ಡವರೇ ಇರಬೇಕು. ಬಂಡಾಚಾರ್ಯರ ಚೊಚ್ಚಲ ಮಗು ಬಹುಶಃ ೧೯೨೪ ರಲ್ಲಿ ಹುಟ್ಟಿದ್ದಿತು. ಮೊದಲ ಸಂತಾನವನ್ನು ಅವರು ತಮ್ಮ ೨೪ ನೆ ವಯಸ್ಸಿಗೆ ಪಡೆದಿದ್ದರೆಂದು ಕಲ್ಪನೆ ಮಾಡಿದರೂ, ಅವರ ಜನ್ಮ೧೯೦೦ ರಲ್ಲಿ ಆಗಿತ್ತು ಎಂದು ಆಗುತ್ತದೆ. ಈ ಊಹೆ ಬಹಳೇನೂ ತಪ್ಪಾಗಿ ಇರಲಾರದು. ಮತ್ತೊಂದು ರೀತಿಯಲ್ಲಿಯೂ ಇದೇ ಉತ್ತರ ಸಿಗುತ್ತದೆ. ಅವರ ತಮ್ಮ ಶ್ಯಾಮಾಚಾರ್ಯರು, ತಮ್ಮ ತಂದೆಯ ಬಗ್ಗೆ ಕೊಟ್ಟಿದ್ದ ಮಾಹಿತಿಯನ್ನು ಇಲ್ಲಿ ಉಲ್ಲೇಖಿಸುತ್ತೇನೆ. ಅದರಂತೆ,
ಕೃಷ್ಟಾಚಾರ್ಯರ ಸಂತಾನ : ಇವರಿಗೆ ಇಬ್ಬರು ಹೆಂಡಿರು. ಹಿರಿಯವಳು ಗುಂಡಕ್ಕ. ಮಕ್ಕಳಾಗದೆ ತೀರಿಕೊಂಡಮೇಲೆ ಕಿತ್ತೂರಿನ ಗಿರಿಭಟ್ಟನವರ ಮನೆತನದ ಗೋದೂಬಾಯಿ ಎಂಬ ಕನ್ಯೆಯೊಡನೆ ಮದುವೆ. ಈ ಗೋದೂಬಾಯಿಯ ಹೊಟ್ಟೆಯಿಂದ –
೧. ಸುಬ್ಬಕ್ಕ ೨. ಫಲ್ಗೂ ಬಾಯಿ ೩. ಬಂಡಾಚಾರ್ಯ ೪. ಸೋನಾಬಾಯಿ ೫. ಭೀಮಾಚಾರ್ಯ ೬. ಅಕ್ಕವ್ವ ೭. ಗಂಡು (ಹೆಸರು ನೆನಪಿಲ್ಲ) ೮. ಹೆಣ್ಣು (ಹೆಸರು ನೆನಪಿಲ್ಲ) ೯. ಶ್ಯಾಮಾಚಾರ್ಯ (ಕಿತ್ತೂರಿನ ಶ್ಯಾಮಾಚಾರ್ಯ ಗಿರಿಭಟ್ಟನವರ).
ಇವರಲ್ಲಿ ಕೊನೆಯ ಶ್ಯಾಮಾಚಾರ್ಯ ೨೨ ಮೇ ೧೯೨೦. ಇವರು (ಹೆಸರು ಗೊತ್ತಿಲ್ಲದ) ಯಾವ ಹೆಣ್ಣಿನ ಬೆನ್ನ ಮೇಲೆ ಹುಟ್ಟಿದರೊ ಅವಳು ಹುಟ್ಟಿದ್ದು ೧೯೦೮ರಲ್ಲಿ. ಈ ದಿನಾಂಕ ನನಗೆ ಗೊತ್ತಾದದ್ದು ಮುರಗೋಡದಲ್ಲಿ ಬಾಂಡ ರಾಯಟರ ಆಗಿದ್ದ ವಾಮನರಾವ ಯರಝರವಿ ಎನ್ನುವವರು ಅಲ್ಲಿನ ನಿತ್ಯದ ಘಟನೆಗಳನ್ನು ಬರೆದ ಡಾಯರಿ – ( ೧೮೮೫ – ೧೯೨೩ರ ನಡುವೆ ಬರೆದಿಟ್ಟ೧೮ ಡಾಯರಿಗಳು) ಯಲ್ಲಿ ಲಿಖಿತವಾಗಿರುವ – ” ತಾ|| ೧೨-೨-೦೮ ಯಿವತ್ತೆ ತಿಳೀತು ಕೃಷ್ಟಾಚಾರಿ ಹೆಣತಿ ಯಿಕಿ – ಹೆಂಣು – ಮೂಲಾ ನಕ್ಷತ್ರದ ಮೇಲೆ ಹಡೆದಳಂತೆ ಕೇಳತೇನೆ” ಎಂಬ ಒಂದು ವಾಕ್ಯದಿಂದ.
ಅರ್ಥಾತ್ – ೧೯೦೮ ರಲ್ಲಿ ಹುಟ್ಟಿದ ಈ ಹೆಣ್ಣು ಮಗುವಿಗಿಂತ ಮೊದಲು ಹುಟ್ಟಿದ ನಾಕು ಮಕ್ಕಳು ಬಂಡಾಚಾರ್ಯರ ಬೆನ್ನ ಮೇಲಿನವು. ಆ ಮಕ್ಕಳು ಎರಡೆರಡು ವರ್ಷಗಳ ಅಂತರದಲ್ಲಿ ಹುಟ್ಟಿದವೆಂದು ಲೆಕ್ಕ ಹಾಕಿದರೆ, ಹತ್ತು ವರ್ಷ ಹಿಂದೆ ಹೋಗಬೇಕಾಗುತ್ತದೆ. ಹೀಗೆ, ಬಂಡಾಚಾರ್ಯರು ೧೮೯೮ – ೧೯೦೦ ರ ಮಧ್ಯದಲ್ಲಿ ಜನ್ಮ ತಳೆದವರೆಂದು ಲೆಕ್ಕ ಹಾಕಿದರೆ ತಪ್ಪೇನೂ ಆಗಲಾರದು.
ಬಂಡಾಚಾರ್ಯರ ಮದುವೆ : ಕಟಕೋಳದ ಶ್ರೀಪಾದ ಶಾಸ್ತ್ರಿಯವರ ಮಗಳು ಗಂಗೂಬಾಯಿಯ ಎಂಬ ಕನ್ಯೆಯೊಡನೆ ಮದುವೆಯಾಗಿತ್ತು. ಬಹುಶಃ, ೧೯೨೪ ರಲ್ಲಿ ನಡೆದ ಬೆಳಗಾವಿ ಕಾಂಗ್ರೆಸ್ಸ ಅಧಿವೇಶನಕ್ಕಿಂತ ಮೊದಲು ಈ ಮದುವೆ ನಡೆದಿರಬೇಕು. ಏಕೆಂದರೆ ಆ ಅಧಿವೇಶನದ ಸಮಯದಲ್ಲಿ ಚೊಚ್ಚಲ ಮಗಳು ಸೋನೂಬಾಯಿ ಚಿಕ್ಕ ಕೈಗೂಸಾಗಿದ್ದಳು ಎಂದು ಹೇಳುತ್ತಿದ್ದರು. ಚಿಕ್ಕವರಾಗಿದ್ದ ಗುಂಗುರ ಕೂದಲಿನ, ಬೆಳ್ಳಗಿನ, ಮರಾಠಿ ಐದು ಆರು ಇಯತ್ತೆ ಕಲಿತಿದ್ದ ಗಂಗೂಬಾಯಿ ಮದುವೆ ಹೊತ್ತಿಗೆ ಗಂಡನಗಿಂತ ಕಡಿಮೆ ಎತ್ತರವಾಗಿ (೫ ಫೂಟು, ೧ ಇಂಚು) ಕಾಣುತ್ತಿದ್ದರೂ, ನಂತರದ ದಿನಗಳಲ್ಲಿ ಎರಡು ಇಂಚು ಎತ್ತರವಾಗಿ ಬೆಳೆದು ಹೆಚ್ಚೂ ಕಡಿಮೆ ಗಂಡನಷ್ಟೆ ಎತ್ತರವಾಗಿ ಕಾಣತೊಡಗಿದರಂತೆ. ಅತ್ತೆಮನೆಯಲ್ಲಿಟ್ಟ ಹೆಸರು – ರುಕ್ಮಿಣಿ.
ಬಂಡಾಚಾರ್ಯ – ಗಂಗಕ್ಕ ಈ ದಂಪತಿಗಳ ಸಂತಾನ : ನಾಕು ಜನ ಹೆಣ್ಣು ಮಕ್ಕಳು ಮತ್ತು ಗಂಡನ ಮರಣಾನಂತರ ಗಂಗೂಬಾಯಿ ದತ್ತಕ ತೆಗೆದುಕೊಂಡ ಮಗ.
೧. ಸೋನೂಬಾಯಿ (ಸೋನಕ್ಕ ಶಾಸ್ತ್ರಿ) . ಕಟಕೋಳದಲ್ಲಿದ್ದ ಸೋದರಮಾವ ಗುರುನಾಥ ಶ್ರೀಪಾದ ಶಾಸ್ತ್ರಿಯವರ ಪತ್ನಿ. ಗಂಡನ ಮನೆಯಲ್ಲಿ ಇಟ್ಟ ಹೆಸರು ವೆಂಕೂಬಾಯಿ. ಮಾವ ಶ್ರೀಪಾದ ಶಾಸ್ತ್ರಿಯವರ ತಾಯಿಯ ಹೆಸರು.. ೧೯೨೪ (?) ರಲ್ಲಿ ಹುಟ್ಟಿದವರು. ಏಳರಲ್ಲಿ ಹುಟ್ಟಿದ ಮಗು. ಸತ್ತ ಮಗು ಎಂದು ಎಸೆದೂ ಬಿಟ್ಟಿದ್ದರಂತೆ. ಎರಡು ಮೂರು ತಾಸುಗಳ ನಂತರ ಕೂಸಿನಲ್ಲಿ ಸ್ವಲ್ಪ ಅಲುಗಾಟ ಕಂಡು ಮತ್ತೆ ಒಳಗೆ ತಂದರಂತೆ. ನೆರೆಮನೆಯವರು ಆ ನವಜಾತ ಶಿಶು ಮಿಸುಕಾಡಿಸುತ್ತಿದ್ದನ್ನು ಗಮನಿಸಿ ಹೇಳಿದರಂತೆ.
ಇನ್ನೂ ಏಳು ವರ್ಷಗಳು ಆಗುತ್ತಿದ್ದಂತೆ ಲಗ್ನ ಮಾಡಿದರಂತೆ. ಕಾಯದೆಯಲ್ಲಿ ಕೂದುವದಿಲ್ಲವೆಂದು ಅಂಜಿಕೆಯಿಂದ ೧೪ ವಯಸ್ಸು ಎಂದು ಬರೆಸಿದ್ದರಂತೆ. ಮದುವೆಯಾದ ಮೇಲೆ ಐದು ವರ್ಷಗಳ ನಂತರ ಮೈನೆರೆದು, ಆ ಮೇಲೆ ಹದಿನಾರು ಆಗುವಷ್ಟರಲ್ಲಿ ಒಂದು ಗರ್ಭ ಪಾತವೂ ಆಗಿ, ೧೮ನೆ ವಯಸ್ಸಿಗೆ ಶ್ರೀಪಾದ ಹುಟ್ಟಿದನಂತೆ. ಅವನು ಹುಟ್ಟಿದ್ದು ೧೯೪೩ರಲ್ಲಿ ಅಂತೆ. ಮತ್ತು ಆಗ ಸೋನಕ್ಕನಿಗೆ ೧೮ ವರ್ಷ ವಯಸ್ಸಾಗಿತ್ತು. ಅರ್ಥಾತ್ ಅವರು ಹುಟ್ಟಿದ್ದು ೧೯೨೪ ಇಲ್ಲ ೧೯೨೫ ರಲ್ಲಿ. ಇದನ್ನೆಲ್ಲ ಅವರೆ ನನಗೆ ಹೇಳಿದ್ದು. ತಮ್ಮ ತಂದೆ ತಾಯಿಯ ಕುರಿತು ಅವರೂ ನನಗೆ ಅನೇಕ ವಿಷಯಗಳನ್ನು ತಿಳಿಸಿದ್ದರು.
೨ . ಪ್ರಭಾವತಿ (ಅಕ್ಕಣ್ಣಿ) ಜಮಖಂಡಿಯ ಟಂಕಸಾಲಿ ಮನೆತನದ ಡಿಪ್ಲೋಮಾ ಇಂಜಿನೀಯರ ಆಗಿದ್ದ ಒಬ್ಬವರಿಗೆ ಕೊಟ್ಟಿದ್ದಿತು. ಸಾತಾರಾದಲ್ಲಿ ಕೆಲಸವಿದ್ದಿತು . ಈಗ ಪುಣೆಯಲ್ಲಿದ್ದರೆ. ಇಬ್ಬರು ಮಕ್ಕಳು -ಆಶಾ, ಉಷಾ.
೩. ಇಂದುಮತಿ – ಕೊಲ್ಲಾಪುರದ ಖ್ಯಾತ ಶಾಲಿಗ್ರಾಮ ಎಂಬ ಗಾಯಕ ಮನೆತನದ ವ್ಯಕ್ತಿಯೊಡನೆ ಮದುವೆಯಾಗಿತ್ತು. ಮುಂದೆ ಎರಡು ಮೂರು ವರ್ಷಗಳ ನಂತರ ತೀರಿಕೊಂಡಿದ್ದು.
೪. ಛಬೂ – ತಂದೆ ತೀರಿಕೊಂಡ ಸ್ವಲ್ಪ ದಿನಗಳಲ್ಲಿಯೆ ತೀರಿಕೊಂಡದ್ದು.
ಬಂಡಾಚಾರರಿಗೆ ಹೆಣ್ಣು ಕೊಟ್ಟ ಮಾವ : ಅವರ ಪೂರ್ಣ ಹೆಸರು ಶ್ರೀಪಾದ ನಾರಾಯಣ ಶಾಸ್ತ್ರಿ. ಇವರು ತಮ್ಮ ಅಡ್ಡ ಹೆಸರಿನ ಮುಂದೆ ಕೆರೂರ ಎಂದೂ ಹೇಳುತ್ತಿದ್ದರು (?). ಅಂದಮೇಲೆ, ಆ ಊರಿನವರೋ, ಅಲ್ಲಿನ ಉತ್ಪನ್ನದಾರರೋ ಆಗಿದ್ದಿರಬಹುದು. ಯರಗಟ್ಟಿ, ಐನಾಪುರ ಗಳಲ್ಲಿ ಹೊಲಗಳು, ಕಟಕೋಳದಲ್ಲಿ ಮನೆ ಇದ್ದಿತು. ಈ ಆಸ್ತಿಯನ್ನು ಅವರ ತಾಯಿ ವೆಂಕೂಬಾಯಿ ಗಳಿಸಿದ್ದು.
ಶ್ರೀಪಾದ ನಾ. ಶಾಸ್ತ್ರಿಯವರ ಮಕ್ಕಳು :
೧. ದತ್ತಾತ್ರಯ – ಮದುವೆಯಾಗಿ ಒಬ್ಬ ಮಗ ಹುಟ್ಟಿದ ನಂತರ ತೀರಿಕೊಂಡರು. ಐನಾಪುರದ ಆಸ್ತಿ ಇವರಿಗೆ ಹೋಯಿತು. ಇವರ ಮಗ ಹಣಮಂತ. ಕೊಲ್ಲಾಪುರದಲ್ಲಿ ಇರುವದು.
೨. ಯಮುನಕ್ಕ – ತೀರಿಕೊಂಡಿದ್ದಾರೆ, ಬಹುಶಃ ೧೯೯೦ರಲ್ಲಿ. ಕಟಕೋಳದ ವೈದ್ಯ ಎಂಬ ಮನೆತನಕ್ಕೆ ಕೊಡಲಾಗಿತ್ತು. ನನಗೆ ಹತ್ತೊಂಬತ್ತನೂರಾ ಎಪ್ಪತ್ತರ ಮೊದಲ ಮೊದಲ ವರ್ಷಗಳಲ್ಲಿ ಆಗೊಮ್ಮೆ ಈಗೊಮ್ಮೆ ಭೆಟ್ಟಿಯಾಗಿ ಪರಿಚಿತನಾಗಿದ್ದ, ನಮ್ಮ ವಾರಿಗೆಯ ಪಂಡಿತ ಎಂಬ ವ್ಯಕ್ತಿ ಈ ಯಮುನಕ್ಕ ಅವರ ಮೊಮ್ಮಗ.
೩. ಚಂದ್ರಾಬಾಯಿ (ಚಂದ್ರಕ್ಕ) – (ಈ ಟಿಪ್ಪಣಿ ಬರೆದ ಕಾಲಕ್ಕೇ, ಅದು ಯಾವ ವರ್ಷ ಬರೆದಿಟ್ಟಿಲ್ಲ, ಅವರಿಗೆ ೮೮ ವರ್ಷ ವಯಸ್ಸಾಗಿದ್ದಿತು. ಮಹಾರಾಷ್ಟ್ರದ ಅಹಮ್ಮದನಗರದ ವ್ಯಕ್ತಿಯೊಬ್ಬರಿಗೆ ಕೊಟ್ಟಿದ್ದಿತು. ಅವರ ಮಗ ನಿವೃತ್ತ ಫೌಜುದಾರ, ಆ ಊರಲ್ಲಿದ್ದಾರೆ. ಚಂದ್ರಕ್ಕ ಮಾವಶಿಯೂ ಹೌದು. ನಾದಿನಿಯೂ ಹೌದು.
೪. ಗಂಗೂಬಾಯಿ (ಗಂಗಕ್ಕ) – ಬೇರೆಕಡೆ ಇವರ ಬಗ್ಗೆ ಹೇಳಿದ್ದೇನೆ. ಇವರು ೧೯೮೩ರಲ್ಲಿ ತೀರಿಕೊಂಡರು.
೫. ವೇಣೂ ಬಾಯಿ (ಯೇಣೂ ಬಾಯಿ) – ವಂಟಮೂರಿಯಲ್ಲಿ ಸ್ಟ್ಯಾಂಪ ವೆಂಡರ ಆಗಿದ್ದ ದಿವಾಕರ ಜೋಶಿ ಎನ್ನುವವರಿಗೆ ಕೊಟ್ಟಿದ್ದಿತು. ಅತ್ತೆಮನೆ ಹೆಸರು ಇಂದಿರಾಬಾಯಿ. ಗಂಡ ಕ್ಯಾನ್ಸರದಿಂದ ಸಣ್ಣ ವಯಸ್ಸಿನಲ್ಲೆ ತೀರಿಕೊಂಡದ್ದು. ಯೇಣೂ ಬಾಯಿ ತೀರಿಕೊಂಡದ್ದು ತಮ್ಮ ಅರವತ್ತು ಅಥವಾ ಅದಕ್ಕೂ ಕಡಿಮೆ ವಯಸ್ಸಿನಲ್ಲಿ, ಮಕ್ಕಳಾಗದೆ.
೬ . ಗುರುನಾಥ : ಈ ಮಾಹಿತಿಯನ್ನೆಲ್ಲ ಕೊಟ್ಟ – ಬಂಡಾಚಾರ್ಯರ ಹಿರಿಯ ಮಗಳು ಸೋನಕ್ಕ ಅವರ ಸೋದರ ಮಾವ ಮತ್ತು ಪತಿ. ತಂದೆಯ ಆಸ್ತಿಯಲ್ಲಿ ಇವರಿಗೆ ಕಟಕೋಳದ ಮನೆ ಬಂದಿತು. ಅದು ಈಗಲೂ ಇದ್ದು, ಬಾಡಿಗೆ ಕೊಡಲಾಗಿದೆ. ಇವರು ಕೊಲ್ಲಾಪುರದಲ್ಲಿ ಪಿ.ಡಬ್ಲೂ.ಡಿ ಯಲ್ಲಿ ಓವರಸೀಯರ ಆಗಿದ್ದರು. ಕೊನೆಯವರೆಗೂ ಆರಾಮಾಗಿಯೆ ಇದ್ದರು. ಹಾರ್ಟ್ ಅಟ್ಯಾಕದಿಂದ, ತಮ್ಮ ೪೦ ನೆ ವಯಸ್ಸಿನಲ್ಲಿ ತೀರಿಕೊಂಡರು, ೧೯೫೫ ರಲ್ಲಿ (?). ಪತ್ನಿ ಸೋನಕ್ಕ ಅವರಿಗೆ ಆಗ. ಕೇವಲ ೨೮ ವರ್ಷ ವಯಸ್ಸು.
ಗುರುನಾಥ – ಸೋನೂತಾಯಿ ಈ ದಂಪತಿಗಳ ಹಿರಿಯ ಮಗ ಶ್ರೀಪಾದ, ನಂತರದವರು ನಲಿನಿ, ಮೀರಾ ಮತ್ತು ದೀಪಕ. ಇವರಲ್ಲಿ ಶ್ರೀಪಾದ ತನ್ನ ಅಜ್ಜಿ ಗಂಗಕ್ಕ ಅವರಿಗೆ ದತ್ತಕ ಹೋಗಿ ಶ್ರೀಧರ ಬಂಡಾಚಾರ್ಯ ಮಂಗಳವೇಢೆ ಆದದ್ದು. ೧೯೪೩ರಲ್ಲಿ ಹುಟ್ಟಿದ್ದ ಇವರು ೧೯೯೭ ರ ಡಿಸೆಂಬರ ೧೦ ರಂದು ತೀರಿಕೊಂಡರು. ಇವರ ಪತ್ನಿ ವರ್ಷಾ ಜೂನ ೨೪ ರಂದು ತೀರಿಕೊಂಡಿದ್ದು. ಇವರಿಗೆ ಇಬ್ಬರು ಮಕ್ಕಳು, ಸುಪ್ರಿಯಾ (ಜನ್ಮ -ಡಿಸೆಂಬರ ೨೪, ೧೯೮೪) ಮತ್ತು ಸುಹಾಸ (ಜನ್ಮ- ಸೆ ಪ್ಟೆಂಬರ ೧೦, ೧೯೯೦).
ನಲಿನಿ ತಮ್ಮ ನೆನಪಿನಿಂದ ಅಜ್ಜ (ತಾಯಿಯ ಕಡೆಯಿಂದ) ಬಂಡಾಚಾರ್ಯ ಮತ್ತು ಅಜ್ಜಿ ಗಂಗಕ್ಕ ಇವರ ಕುರಿತು ಸಾಕಷ್ಟು ಮಾಹಿತಿ ಒದಗಿಸಿದವರು. ಬಿ.ಎಸ್. ಸಿ ಯಾಗಿ ಭಾರತಿ ವಿದ್ಯಾಲಯದಲ್ಲಿ ಶಿಕ್ಷಿಕೆಯಾಗಿ, ನನ್ನ ಸಹೋದ್ಯೋಗಿ ಯಾಗಿದ್ದರು. ರೂರ್ಕಿಯಲ್ಲಿನ ಖ್ಯಾತ ಇಂಜಿನೀಯರಿಂಗ ಕಾಲೇಜದಲ್ಲಿ ಭೂಕಂಪ ಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿದ್ದ, ರಾಮದುರ್ಗ ಮೂಲದ ವೇದವ್ಯಾಸ ಜೋಶಿಯವರ ಪತ್ನಿ.
ದೀಪಕ ಮತ್ತು ಅವರ ಪತ್ನಿ ಬೆಳಗಾವಿಯಲ್ಲಿನ ಶಹಾಪುರ ರಸ್ತೆಯ ಮೇಲಿನ ಕಪಿಲೇಶ್ವರ ಗುಡಿಯ ಹತ್ತಿರದ ರೇಲ್ವೆ ಗೇಟಿನ ಹತ್ತಿರದ ಅಪಾರ್ಟಮೆಂಟಿನಲ್ಲಿ ಇದ್ದಾರೆ.
ಬಂಡಾಚಾರ್ಯರ ಮರಣ : ಅವರು ೧೯೩೦ ರಿಂದ ೧೯೩೩ ರ ನಡುವೆ, ಯಾವುದೋ ಒಂದು ವರ್ಷ, ನಾನು ಹುಟ್ಟುವ ಹತ್ತು-ಹನ್ನೆರಡು ವರ್ಷಗಳಮೊದಲೆ. ಆ ವರ್ಷ ಯಾವುದು, ತಿಂಗಳು, ತಾರೀಖು – ಅದಾವುದೂ ಗೊತ್ತಿಲ್ಲ. ಆದರೆ ತಿಥಿ ಮಾತ್ರ – ದ್ವಾದಶಿ ಎಂದು ಗೊತ್ತಿದೆ. ಮರಣದ ಕಾರಣ – ಉದರ ಬೇನೆ. ಆ ಕಾಲದಲ್ಲಿ ಇದಕ್ಕೆ ಔಷಧವೆ ಗೊತ್ತಿರಲಿಲ್ಲ. ಹೀಗಾಗಿ ಬೇನೆ ಗೊತ್ತಾಗಿ ಐದು ದಿನಗಳಲ್ಲಿ ಸಾವು ಬಂದಿತ್ತು. ಆದ ರೋಗ, ಮತ್ತದರ ಭೀಕರತೆ ತಿಳಿಯುವ ಮೊದಲೆ “ಝಟ್ ಪಟ್ ಆಗಿ” ಎಲ್ಲವೂ ಮುಗಿದು ಹೋಗಿತ್ತು. ಕಟಕೋಳದಲ್ಲಿ ಮರಣ.
ಅವರ ಪತ್ನಿ ಗಂಗೂಬಾಯಿ (ಗಂಗಕ್ಕ) ಅವರ ಮರಣ : ೧೯೮೩ ರಲ್ಲಿ.
ಆಗಿನ ಒಂದು ಸಂಗತಿಯ ನೆನಪು : ನಾನು ಇನ್ನೂ ಮೂರು ವರ್ಷದವ, ಆಗ ಅಣ್ಣ ಶ್ರೀನಿವಾಸ ಮತ್ತು ಕಕ್ಕನ ಮಗ ಮೋಹನ ಈ ಇಬ್ಬರ ಮುಂಜಿವೆ ಪಂಢರಪುರದಲ್ಲಿ ನಡೆದಿತ್ತು. ಅಲ್ಲಿನ ಪಾಂಡುರಂಗ ನಮ್ಮ ಕುಲದೇವರು. ಅಷ್ಟು ಸಣ್ಣವನಿದ್ದಾಗ ಹೋಗಿ ಬಂದ ನೆನಪು ಹೇಗೆ ಉಳಿದೀತು! ಅದಾದ ಮೇಲೆ ಏನೇನೋ ಕಾರಣಗಳಿಂದ ಕುಲದೇವರಿಗೆ ಹೋಗಲು ಆಗದೆ, ಆ ಕೊರಗು, ಆ ತಪ್ಪಿತಸ್ಥ ಭಾವನೆಯಿಂದಲೆ ಮೂವತ್ತೆಂಟು ವರ್ಷಗಳನ್ನು ಕಳೆದಿದ್ದೆ. ೧೯೮೩ರಲ್ಲಿ ಪಂಢರಪುರದ ಯಾತ್ರೆಯ ವ್ಯವಸ್ಥೆ ಮಾಡಿಕೊಂಡಿದ್ದೆ. ಅಷ್ಟು ವರ್ಷಗಳ ಹಿಂದೆ ಅಲ್ಲಿಯೆ ಮುಂಜಿವೆಯಾಗಿದ್ದ ಮೋಹನನೊಂದಿಗೆ. ಟ್ಯಾಕ್ಸಿಗೆ ಮುಂಗಡವನ್ನೂ ಕೊಟ್ಟಿದ್ದೆ.
ಇನ್ನೇನು, ಮರುದಿನವೋ -ಎರಡು ದಿನ ಬಿಟ್ಟೊ ಎರಡೂ ಕುಟುಂಬಗಳು ಹೊರಡ ಬೇಕು. ಗಂಗಕ್ಕ ಅವರ ಸಾವಿನ ಸುದ್ದಿ ತಿಳಿಯಿತು. ಬಹುಶ: ನಮಗೆ ಸೂತಕವಿರಬೇಕು ಎಂದೆನಿಸಿತು. ಆದರೆ, ನಮ್ಮ ಮತ್ತು ಬಂಡಾಚಾರ್ಯರ ಸಂಬಂಧ ಹೇಗೆ ಎನ್ನುವದು ಖಚಿತವಾಗಿ ತಿಳಿಯದು. ಮೋಹನನಿಗೆ ಅವರ ಬಗ್ಗೆ ಕೇಳಿಕೂಡ ಗೊತ್ತಿರಲಿಲ್ಲ. ಗೊತ್ತೂ ಇಲ್ಲದವರ ಸಾವಿಗೆ ಸೂತಕ ಹೇಗೆ ? ಅದೂ ಇಷ್ಟು ಸುದೀರ್ಘ್ ಕಾಲದ ಅಂತರಅ ಮೇಲೆ ! ಅದೂ ಇನೇನು ಹೊರದಬೇಕು ಎನ್ನುವಾಗ ಎಂದು ಸಿಡಿಮಿಡಿಗೊಂಡ. ನಾನೊ, ಈ ವಿಷಯ ಬಲ್ಲವರೊಡನೆ ಪರ್ಯಾಲೋಚಿಸದೆ, ಕುಲದೇವರಿಗೆ ಅದೂ ಸೂತಕದ ಅವಧಿಯಲ್ಲಿ ಹೋಗುವದು ಸರಿಯಾದೀತೇ ಎಂದು ಗೊಂದಲಕ್ಕೆ ಬಿದ್ದಿದ್ದೆ. ಅವರಿವರನ್ನು ಕೇಳಿದ್ದಾಯಿತು. ಅವರು ಹಾಗೂ ಹೇಳಿದರು, ಹೀಗೂ ಹೇಳಿದರು. ಅಂತಹದರಲ್ಲಿ ಕುಲದೇವರಿಗೆ ಹೋಗಲು ಧೈರ್ಯ ಹುಟ್ಟಲಿಲ್ಲ. ಯಾತ್ರೆಯನ್ನು ರದ್ದು ಪಡಿಸಿದೆವು. ಕೆಲ ದಿನಗಳ ನಂತರ ಮತ್ತೊಮ್ಮೆ ಆ ವ್ಯವಸ್ಥೆ ಮಾಡಿಕೊಂಡು ಹೋಗಿಬಂದೆವು.
ಆ ಕಾಲದಲ್ಲಿ ಹುಟ್ಟಿದವರು ಈಗ ಯಾರಾದರೂ ಇದ್ದರೆ ಅಂಥವರು ಎಂಬತ್ತೈದು ವರ್ಷ ಅಥವಾ ಅದಕ್ಕೂ ಹೆಚ್ಚಿನ ವಯಸ್ಸಿನವರು. ಅದಕ್ಕೂಮೊದಲು ಹುಟ್ಟಿದವರಂತೂ, ತೊಂಬತ್ತು ವರ್ಷಗಳನ್ನೂ ದಾಟಿದವರು.
ಏಕೆಂದರೆ, ಅವರು ಹುಟ್ಟುವ ಮೊದಲೆ ತಂದೆ ಶ್ಯಾಮಾಚಾರ್ಯರು ದತ್ತಕ ಬಂದು ಕಿತ್ತೂರಿನ ನಿವಾಸಿಯಾಗಿದ್ದರು. ಮುರಗೋಡ ಅವರ ನೆಲೆಯಾಗಿ ಉಳಿದಿರಲಿಲ್ಲ. ಹಾಗೆಯೆ, ಗಂಗಕ್ಕ ಕೂಡ ಪತಿ ತೀರಿಕೊಂಡ ಕೆಲ ಕಾಲದ ಮೇಲೆ ತಮ್ಮ ಅಬಚಿಯ ಕಡೆ ಸವದತ್ತಿಗೆ ಹೋಗಿ ಇರಹತ್ತಿದ್ದರು.