ಶ್ಯಾಮಾಚಾರ್ಯ
ಶ್ಯಾಮಾಚಾರ್ಯ | ಹುಟ್ಟಿದ ದಿನಾಂಕ: 1910-05-22 | ಮರಣ ದಿನಾಂಕ: 1998-06-17 | |
ತಂದೆ: ಕೃಷ್ಟಾಚಾರ್ಯ | ತಾಯಿ: | ||
ಮಕ್ಕಳು: | |||
ಒಡಹುಟ್ಟಿದವರು: ಬಂಡಾಚಾರ್ಯ, ಭೀಮಾಚಾರ್ಯ | |||
ವಿಳಾಸ: ಮನೆ ನಂ. ೧೦೧೭, ಗದ್ದಿ ಓಣಿ, ಗುರುವಾರ ಪೇಟೆ, ಕಿತ್ತೂರು (ಬೆಳಗಾವಿ ಜಿಲ್ಲೆ ) | Branch: 3 | Generation: 6 |
ವ್ಯಕ್ತಿ ಚಿತ್ರ
ಶ್ಯಾಮಾಚಾರ್ಯ ಕೃಷ್ಟಾಚಾರ್ಯ ಮಂಗಳವೇಢೆ
ಕಿರುಪರಿಚಯ
ಮೂಲತ: ಶ್ಯಾಮಾಚಾರ್ಯ ಕೃಷ್ಟಾಚಾರ್ಯ ಮಂಗಳವೇಢೆ ದತ್ತಕದ
ನಂತರ: ಶ್ಯಾಮಾಚಾರ್ಯ ಹಣಮಂತಾಚಾರ್ಯ ಗಿರಿಭಟ್ಟನವರ
ವೃತ್ತಿ: ಹೊಲ ಮನೆಗಳನ್ನು ನೋಡಿಕೊಂಡಿದ್ದರು
ವಿಳಾಸ: ಮನೆ ನಂ. ೧೦೧೭, ಗದ್ದಿ ಓಣಿ, ಗುರುವಾರ ಪೇಟೆ, ಕಿತ್ತೂರು (ಬೆಳಗಾವಿ ಜಿಲ್ಲೆ )
ಪತ್ನಿ: ಸೀತಾಬಾಯಿ. ಕಲಭಾವಿಯ ಭೀಮರಾವ ಶೇಷೊ ದೇಶಪಾಂಡೆಯವರ ಮಗಳು. ತೌರುಮನೆಯ ಹೆಸರು : ಕಮಲಾ. ಜನ್ಮ : ೨ ಅಕ್ಟೋಬರ ೧೯೨೩ ; ಮರಣ : ೨೦೦೫ನೆ ಇಸವಿಯ ಆಷಾಢ ವದ್ಯ ತದಿಗೆಯಂದು (ಶನಿವಾರ) ತಮ್ಮ ೮೨ನೆ ವಯಸ್ಸಿನಲ್ಲಿ, ಕಿತ್ತೂರಿನ ಸ್ವಗೃಹದಲ್ಲಿ.
ಮಕ್ಕಳು: ೧) ಮಿತ್ರವಿಂದಾ (ಸೋನಾ) – ಪುಣೆಯಲ್ಲಿ ಇದ್ದ ಸೋದರಮಾವ ಮಧ್ವ ಭೀಮರಾವ ದೇಶಪಾಂಡೆ ಅವರ ಪತ್ನಿ. ಎರಡನೆ ಹೆರಿಗೆ ಕಾಲಕ್ಕೆ ತೀರಿಕೊಂಡಿದ್ದು. ೨) ರಂಗನಾಥ – ಕಿತ್ತೂರಿನ ಮಾಧ್ಯಮಿಕ ಶಾಲೆಯಲ್ಲಿ ಕೆಲಸ ಮಾಡಿ, ಈಗ ನಿವೃತ್ತರು. ೩) ಭೀಮಾತಾಯಿ – ಕಿತ್ತೂರಿನಲ್ಲಿ ವೈದ್ಯಕೀಯ ವೃತ್ತಿಯಲ್ಲಿರುವ ಸೋದರಮಾವ ಡಾ. ಗೋಪಾಳ ಭೀಮರಾವ ದೇಶಪಾಂಡೆ ಇವರ ಪತ್ನಿ ೪) ಅಶೋಕ (ರಾಮ / ಅಪ್ಪಣ್ಣ) – ಕೆಲವು ವರ್ಷ ಹರಿಹರದಲ್ಲಿ ಕಿರ್ಲೋಸ್ಕರ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಇವರು ಈಗ ಬೆಂಗಳೂರಿನಲ್ಲಿದ್ದಾರೆ. ೫) ಶೋಭಾ – ಸಿಂಡಿಕೇಟ ಬ್ಯಾಂಕಿನಲ್ಲಿ ಕೆಲಸವಿದ್ದ, ಸ್ವೇಚ್ಛಾ ನಿವೃತ್ತಿಯ ನಂತರ ವಕೀಲಿ ವೃತ್ತಿ ಮಾಡುತ್ತಿದ್ದು, ತೀರಿಕೊಂದಿರುವ ವಾಸುದೇವರಾವ ಕುಲಕರ್ಣಿ ಅವರ ಪತ್ನಿ. ೬) ಕೃಷ್ಣ – ಗ್ರಾಮೀಣ ಬ್ಯಾಂಕಿನ ನಿವೃತ್ತ ಉದ್ಯೋಗಿ. ಧಾರವಾಡದಲ್ಲಿ ಇರುತ್ತಾರೆ. ೭) ಗೋದಾವರಿ – ಮುಂಬಯಿ ಕಾರ್ಪೋರೇಶನದಲ್ಲಿ ಇಂಜಿನೀಯರ ಆಗಿ ನಿವೃತ್ತರಾಗಿರುವ ಕೆ.ಕೆ. ನಗರ ಅವರ ಪತ್ನಿ. ೮) ವಿಟ್ಠಲ – ಕಿರ್ಲೋಸ್ಕರ ಕಂಪನಿಯ ಉದ್ಯೊಗಿ. ಹರಿಹರದಲ್ಲಿನ ಫ್ಯಾಕ್ಟರಿ ಮುಚ್ಚಿದ ನಂತರ ಖಾಸಗಿ ಕೆಲಸದಲ್ಲಿದ್ದಾರೆ. ದಾವಣಗೆರೆಯಲ್ಲಿ ವಾಸ. ೯) ಸಂಜೀವ – ಇಂಜಿನೀಯರ. ಅಮೇರಿಕೆಯಲ್ಲಿ ಕೆಲಸ. ಅಲ್ಲಿಯೆ ಮನೆ ಮಾಡಿಕೊಂಡು ವಾಸವಾಗಿದ್ದಾರೆ.
ವ್ಯಕ್ತಿ ಚಿತ್ರ
ಮೂಲತ: ಶ್ಯಾಮಾಚಾರ್ಯ ಕೃಷ್ಟಾಚಾರ್ಯ ಮಂಗಳವೇಢೆ
ದತ್ತಕದ ನಂತರ: ಶ್ಯಾಮಾಚಾರ್ಯ ಹಣಮಂತಾಚಾರ್ಯ ಗಿರಿಭಟ್ಟನವರ
ಜನ್ಮ ದಿನಾಂಕ : ೨೨ ಮೇ ೧೯೧೦ ರಂದು ಅಂದರೆ ಶಕೆ ೧೮೩೨, ಸಾಧಾರಣ ನಾಮ ಸಂವತ್ಸರ, ವೈಶಾಖ ಶುಕ್ಲ ಚತುರ್ದಶಿ ( ನರಸಿಂಹ ಜಯಂತಿ) , ಭಾನುವಾರ. ಮುರಗೋಡದಲ್ಲಿ.
ಮರಣ ದಿನಾಂಕ : ೧೭ ಜೂನ ೧೯೯೮ ರಂದು ಅಂದರೆ ಬಹುಧಾನ್ಯ ನಾಮ ಸಂವತ್ಸರದ ಜ್ಯೇಷ್ಠ ವದ್ಯ ಅಷ್ಟಮಿ, ಬುಧವಾರ (ತಮ್ಮ ೮೮ನೆ ವಯಸ್ಸಿನಲ್ಲಿ). ಹಾರ್ಟ ಅಟ್ಯಾಕದಿಂದ, ಕಿತ್ತೂರಿನ ಗದ್ದಿ ಓಣಿಯ ಸ್ವಗೃಹದಲ್ಲಿ.
ಎತ್ತರವಲ್ಲದ – ಬಹಳ ಗಿಡ್ಡರೆಂದೂ ಅನ್ನಲಾಗದ, ಈ ಕಡೆಯ ಜನರ ಸಾಧಾರಣ ಎತ್ತರಕ್ಕಿಂತ ತುಸುವೆ ಕಡಿಮೆ ಅನಿಸುವ ದೈಹಿಕ ನಿಲುವು. ಗೌರ ವರ್ಣದ ಒಳ್ಳೆ ವರ್ಚಸ್ವಿ ವ್ಯಕ್ತಿತ್ವ. ದೂರದರ್ಶನದ ಧಾರಾವಾಹಿನಿಗಳಿಂದಾಗಿ ಬಿಂಬಿತವಾಗಿರುವ ಹೆಗಲ ವರೆಗೂ ಇಳಿಬಿದ್ದ ದೀರ್ಘ ಶಿಖೆಯ ಚಾಣಕ್ಯನ ನೆನಪು ತರುವ ಮುಖಮುದ್ರೆ.
ಶ್ಯಾಮಾಚಾರ್ಯರು ಮುರಗೋಡದವರು, ಮಂಗಳವೇಢೆ ಮನೆತನದವರು ಎನ್ನುವದು ನನ್ನ ಪೀಳಿಗೆಯ ಹೆಚ್ಚೂಕಡಿಮೆ ಯಾರಿಗೂ ಕೇಳಿಕೂಡ ಗೊತ್ತಿಲ್ಲದೆ ಹೋದ ಒಬ್ಬ ಹಿರಿಯ ವ್ಯಕ್ತಿ. ಎಂಬತ್ತೆಂಟು ವ₹ರ್ಷಗಳಷ್ಟು ಜೀವಿಸಿದ್ದ ದೀರ್ಘಾಯುಷಿ. ಅಷ್ಟಾಗಿಯೂ, ಅವರು ಬದುಕಿದ್ದ ಈ ಸುದೀರ್ಘ ಅವಧಿಯಲ್ಲಿ ನನ್ನಪೀಳಿಗೆಯವರಿಗೆ , ಶ್ಯಾಮಾಚಾರ್ಯರು ನಮ್ಮ ಪರಿವಾರದವರೆ ಎಂಬ ಅರಿವು ಹೋಗಲಿ, ಅವರ ಇರುವಿಕೆಯೆ ಅಜ್ಞಾತವಾಗಿತ್ತು.
ಅದಕ್ಕೆ, ಅವರು ದೂರದ ಯಾವುದೋ ದೇಶಾಂತರದಲ್ಲಿ ಇದ್ದರು ಎಂಬ ಕಾರಣವೂ ಇರಲಿಲ್ಲ. ನಾವಿದ್ದುದು ಬೆಳಗಾವಿಯಲ್ಲಾದರೆ, ಅವರು ಇದ್ದುದು ಕಿತ್ತೂರಲ್ಲಿ, ನಮ್ಮದೆ ಜಿಲ್ಲೆಯಲ್ಲಿ. ಕೇವಲ ಇಪ್ಪತ್ತೇಳು, ಇಪ್ಪತ್ತೆಂಟು ಮೈಲುಗಳಾಚೆ.
ಶ್ಯಾಮಾಚಾರ್ಯರು ನಮ್ಮದೆ ಅಂದರೆ ಮೂರನೆ ಟಿಸಿಲಿನ ಆರನೆ ತಲೆಮಾರಿನವರು. ನಮ್ಮ ಹಿರಿಯರೆಲ್ಲ ಇದ್ದ ಮುರಗೋಡಿನಲ್ಲೆ ಹುಟ್ಟಿ ಅವರೊಂದಿಗೇ ಬೆಳೆದವರು. ನನ್ನ ತಂದೆಗಿಂತ ಆರು ವರ್ಷ ಚಿಕ್ಕವರಾದರೂ ತಲೆಮಾರಿನ ಲೆಕ್ಕದಲ್ಲಿ ಅವರ ಹಿಂದಿನ ತಲೆಮಾರಿನವರು. ನಾನು – ಅಂದರೆ, ಈ ವಂಶಾವಳಿ ಮತ್ತು ಮನೆತನದ ಇತಿಹಾಸದ ವಿಷಯ ಸಂಗ್ರಹಕಾರ ಮತ್ತು ಲೇಖಕ – ಎಂಟನೆ ತಲೆಮಾರಿಗೆ ಸೇರಿದವನು. ಅವರು ಕಿತ್ತೂರಿಗೆ ದತ್ತಕ ಬಂದು, ಮದುವೆಯಾಗಿ ಚೊಚ್ಚಲ ಮಗುವನ್ನು ಪಡೆದ ಒಂದೂವರೆ ವ₹ರ್ಷದ ನಂತರ ನನ್ನ ತಂದೆಗೆ ಐದನೆ ಮಗನಾಗಿ ನಾನು ಹುಟ್ಟಿದವನು.
ಶ್ಯಾಮಾಚಾರ್ಯರು ತಮ್ಮ ಹುಟ್ಟೂರು ಮುರಗೋಡನ್ನು ಬಿಟ್ಟು ದತ್ತಕದ ಕಾರಣದಿಂದ ಕಿತ್ತೂರು ಸೇರಿದ ಹಾಗೆಯೆ, ನನ್ನ ತಂದೆ ರಂಗನಾಥ (ಆಗಿನ ಶಾಲಾ ದಾಖಲೆಗಳಲ್ಲಿನ ರಂಗಾಚಾರ್ಯ) ಅವರೂ ದತ್ತಕ ಹೋದರು, ಅದೂ ಕಿತ್ತೂರಿಗೇ, ಎರಡು ಮೂರು ವರ್ಷಗಳ ನಂತರ. ಇಬ್ಬರ ಮನೆಗಳೂ ಒಂದೇ ಬೀದಿ – ಗದ್ದಿ ಓಣಿಯಲ್ಲಿ ಇದ್ದದ್ದೂ ಮತ್ತೊಂದು ವಿಶೇಷ.
ಫರಕು ಇಷ್ಟೇ – ನನ್ನ ತಂದೆ ದತ್ತಕ ಹೋದುದು ಪರಗೋತ್ರಕ್ಕೆ, ಬೇರೊಂದು ಮನೆತನಕ್ಕೆ ಅಲ್ಲ. ತಮ್ಮ ತಂದೆಯ ತಮ್ಮ (ಚಿಕ್ಕಪ್ಪನ ಮಗ) ನಿಗೆ. ವಾವೆಯಲ್ಲಿ ತನಗೆ ಕಕ್ಕನಾದ ವ್ಯಕ್ತಿಗೆ. ಹೀಗಾಗಿ ಅದೇ ಗೋತ್ರ, ಅದೇ ಅಡ್ಡಹೆಸರು ಉಳಿದವು. ಮತ್ತೊಂದು ಫರಕು – ನನ್ನ ತಂದೆ ಕಿತ್ತೂರಿಗೆ ಹೋಗಿ ನೆಲೆಸಲಿಲ್ಲ, ಮೊದಲೇ ಇದ್ದ ನೌಕರಿಯನ್ನು ಬಿಡದೆ, ಬೆಳಗಾವಿಯಲ್ಲೆ ಉಳಿದರು.
ಶ್ಯಾಮಾಚಾರ್ಯರ ವ್ಯಕ್ತಿ ಚಿತ್ರದ ನಿರೂಪಣೆಯಲ್ಲಿ ಈ ಕಥೆಯನ್ನೆಲ್ಲ ಹೇಳಲು ಕಾರಣವಿಷ್ಟೆ. ಬೆಳಗಾವಿಯಲ್ಲಿದ್ದ ನನ್ನ ಪೀಳಿಗೆಯ ಉಳಿದ ಯಾರಿಗೂ ಶ್ಯಾಮಾಚಾರ್ಯರ ಇರುವಿಕೆಯೂ ಗೊತ್ತಿಲ್ಲದೆ ಇದ್ದಾಗ, ನನಗೆ ಅವರ ಗುರುತು ಉಂಟಾದುದು ಹೇಗೆ ಎಂಬುದನ್ನು ವಿವರಿಸಲು. ನಾನಿನ್ನೂ ಶಾಲಾ ಬಾಲಕನಿರುವಾಗಲೆ ನನ್ನ ತಂದೆ ತೀರಿಹೋದರು. ಅದಕ್ಕೂ ಕೆಲ ತಿಂಗಳ ಮೊದಲೇ ನನ್ನ ಹಿರಿಯಣ್ಣನೂ ಅಕಾಲಮೃತ್ಯು ಹೊಂದಿದ್ದ. ನಮ್ಮಿಬ್ಬರ ನಡುವಿನವರಂತೂ, ನಾನು ಹುಟ್ಟುವ ಮೊದಲೆ ಕಣ್ಣು ಮುಚ್ಚಿದ್ದರು.
ಹೀಗಾಗಿ ಅಲ್ಲಿಯವರೆಗೆ ಕಿತ್ತೂರನ್ನೆ ಎರಡುದಿನ ಅಲ್ಲಿದ್ದೂ ನೋಡಿರದ ನಾನು, ಅಲ್ಲಿದ್ದ ನಮ್ಮ ಹೊಲ ಮನೆಗಳ ಗುರುತು ಮಾಡಿಕೊಳ್ಳಲು, ಆಗೀಗ ದಿನವೆರಡು ದಿನ ಹೋಗುವ ಅನಿವಾರ್ಯ ಉಂಟಾಯಿತು. ಮುಂದೆ ಆರೇಳು ವರ್ಷಗಳ ನಂತರ ನನ್ನ ತಂದೆಯ ದತ್ತಕ ತಾಯಿಯೂ ತೀರಿಹೋದರು. ಆ ದಿನಗಳಲ್ಲಿ ನಾನು ಅಲ್ಲಿನ ಆಸ್ತಿಪಾಸ್ತಿಯ ವಿಷಯದಲ್ಲಿ ಹುಟ್ಟಿಕೊಂಡ ಸಮಸ್ಯೆಗಳ ಸುಳಿಯಲ್ಲಿ ಸಿಕ್ಕುಕೊಂಡಿದ್ದೆ. ಆಗೆಲ್ಲ ಶ್ಯಾಮಾಚಾರ್ಯರನ್ನು ನೋಡಿದ್ದು ಇಷ್ಟೆ ಅಲ್ಲ, ಅವರ ಮನೆಗೂ ಹೊಗುವ, ನೆರವು ಯಾಚಿಸುವ ಪರಿಸ್ಥಿತಿ ಉಂಟಾಗಿತ್ತು. ಅದರಲ್ಲಿ ಸಂಕೋಚದ ಭಾವನೆಯಿದ್ದರೂ, ಅವರು ನಮಗೆ ಏನೋ ಒಂದು ರೀತಿಯಲ್ಲಿ ಬಳಗ ಎಂದೂ ನನ್ನ ತಾಯಿಯಿಂದ ಅರಿವಿಗೆ ಬಂದಿತ್ತು. ಆದರೆ ಆ ಸಂಬಂಧ ಅಸ್ಪಷ್ಟವಾಗಿಯೇ ಇದ್ದು, ಮುಂದಿನ ಮೂವತ್ತು ವರ್ಷಗಳಕಾಲ ಹಾಗೆಯೆ ಮುಂದುವರೆಯಿತು.
೧೯೯೨ರ ಭಾರತ ಹುಣ್ಣಿವೆ ಜಾತ್ರೆಗೆಂದು ಕಿತ್ತೂರಿಗೆ ಹೋಗಿದ್ದಾಗ ಅಲ್ಲಿ ಒಂದು ರಾತ್ರಿಯನ್ನು ಕಳೆಯುವ ಅನಿವಾರ್ಯ ಉಂಟಾಯಿತು. ಶ್ಯಾಮಾಚಾರ್ಯರ ಮನೆಯಲ್ಲಿಯೆ ಇದ್ದೆ. ಮರುದಿನ ಬೆಳಗಾವಿಗೆ ಮರಳಬೇಕು. ಅದಕ್ಕೂ ಮುನ್ನ ಬೆಳಿಗ್ಗೆ ಚಹ ಕುಡಿಯುತ್ತಿರುವಾಗ, ಏನೋ ಒಂದು ಪ್ರೇರಣೆಯಾಗಿ ನಮ್ಮ ಸಂಬಂಧವನ್ನು ಸ್ಪಷ್ಟಪಡಿಸಿಕೊಳ್ಳುವ ನಿಟ್ಟಿನಲ್ಲಿ ಒಂದೆರಡು ಪ್ರಶ್ನೆಗಳನ್ನು ಕೇಳಿದೆ. ಅವರಿಗೂ ಹೇಳುವ ಹುರುಪು ಬಂದಿತ್ತು. ಅಂದು ಅವರು ಹೇಳಿದ ವಿಷಯ, ನಮ್ಮ ಮನೆತನದ ಇತಿಹಾಸ ತಿಳಿದುಕೊಳ್ಳುವಲ್ಲಿ ನಾನಿಟ್ಟ ಮೊದಲ ಹೆಜ್ಜೆಯಾಯಿತು. ಅಂದೇ, ವಂಶಾವಳಿಯ ಈ ಕಥಾನಕ ಕಟ್ಟಡದ ಭೂಮಿಪೂಜೆ, ಪಾಯಾ ತೆಗೆಯುವ ಕೆಲಸದ ಓಂ ಶ್ರೀ ಗಣೇಶಾಯನಮಃ ಶುರುವಾದುದು.
ಶ್ಯಾಮಾಚಾರ್ಯರು ೮೮ ವ₹ರ್ಷಗಳಷ್ಟು ಸುದೀರ್ಘ ಕಾಲ ಜೀವಿಸಿದ್ದೂ. ನಮಗೆ ಗೊತ್ತೇ ಇರದ ವ್ಯಕ್ತಿ ಎಂಬ ಅಂಶ, ಅವರು ಸಾರ್ವಜನಿಕವಾಗಿ ಹೆಚ್ಚು ಪರಿಚಿತರಾಗದೆ- ತಮ್ಮಷ್ಟಕ್ಕೆ ತಾವು, ತಾವಾಯಿತು ತಮ್ಮ ಮನೆಯಾಯಿತು ಎಂದು ಒಳಗೆಯೆ ಹುದುಕಿಕೊಂಡಿದ್ದ ವ್ಯಕ್ತಿ – ಎಂದು ಅರ್ಥೈಸಿದರೆ ಅದು ತಪ್ಪಾಗುತ್ತದೆ.
ತಮ್ಮ ಕಾಲದಲ್ಲಿ ಅವರು ಕಿತ್ತೂರಿನ ಸಾರ್ವಜನಿಕ ಜೀವನದಲ್ಲಿ ಒಬ್ಬ ಗಣ್ಯ ವ್ಯಕ್ತಿಯಾಗಿ ಇದ್ದವರು. ಆ ಭಾಗದ ಸ್ವಾತಂತ್ರ್ಯ ಹೋರಾಟಗಾರರ ಕೊನೆ ಕೊನೆಯ ಬೀಡಿನಲ್ಲಿ ಇವರ ಹೆಸರೂ ಇದೆ. ಅಷ್ಟೇ ಅಲ್ಲ, ಅದನ್ನು ಮನ್ನಿಸಿದ ಗುರುತಾಗಿ ಕೇಂದ್ರ ಸರಕಾರದಿಂದ ತಾಮ್ರಪಟವನ್ನು ಪಡೆದಿದ್ದವರು. ಕಿತ್ತೂರ ನಾಡ ವಿದ್ಯಾವರ್ಧಕ ಸಂಘದ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದರು. ಈ ಸಂಸ್ಥೆ ಶ್ರೀ ಗುರು ಸಿದ್ಧೇಶ್ವರ ಮಾಧ್ಯಮಿಕ ಶಾಲೆಯನ್ನಲ್ಲದೆ ಅಲ್ಲಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯಗಳನ್ನೂ ನಡೆಸುತ್ತಿದೆ. ಅಲ್ಲಿನ ಹಾಲಿನ ಸೊಸಾಯಟಿಯ ಸದಸ್ಯರೂ ಕೃಷಿ ಪತ್ತಿನ ಸಹಕಾರಿ ಸಂಘದ ಸದಸ್ಯರೂ ಆಗಿದ್ದರು. ಒಂದುಸಲ (ಬಹುಶಃ ೧೯೬೮ ರಲ್ಲಿ?) ಪಂಚಾಯತ ಮೆಂಬರರೂ ಆಗಿದ್ದರು. ವಿಟ್ಠಲ ದೇವಸ್ಥಾನದ ಟ್ರಸ್ಟದಲ್ಲಿಯೂ ಸದಸ್ಯರಾಗಿದ್ದವರು.
ಇದು ಅವರ ಒಂದು ಮುಖ. ಹೆಚ್ಚಿನ ಶಾಲಾ ಶಿಕ್ಷಣ ಪಡೆಯಲಾಗದಿದ್ದರೂ ಹೆಚ್ಚಿನ ಇತರರಲ್ಲಿ ಕಾಣಬರದ, ತಕ್ಕ ಮಟ್ಟಿಗಿನ ಸಂಸ್ಕೃತ ಭಾಷಾ ಜ್ಞಾನ – ಸಾಹಿತ್ಯ ಪರಿಚಯ ಉಳ್ಳವರಾಗಿದ್ದರು. ಮಾತಿನಲ್ಲಿ ಒಳ್ಳೆ ಅಭಿವ್ಯಕ್ತಿ ಉಳ್ಳವರಾಗಿದ್ದರು.
ಸಂಗೀತ ಪ್ರೇಮವೂ ಇದ್ದಿತಾಗಿ ಆ ಕಲೆಯಲ್ಲಿಯೂ ತಕ್ಕ ಮಟ್ಟಿನ ಪರಿಶ್ರಮ ಮಾಡಿದ್ದರು. ಗಂಧರ್ವ ಮಹಾವಿದ್ಯಾಲಯದ -ಬಹುಶಃ ವಿಶಾರದ ( ?) ಪರೀಕ್ಷೆ ಆಗಿದ್ದರು. ಆಗ ಕಿತ್ತೂರು ಬೆಳಗಾವಿ ಜಿಲ್ಲೆಯಲ್ಲಿಯ ಆ ಮಹಾವಿದ್ಯಾಲಯದ ಪ್ರಥಮ ಕೇಂದ್ರವಾಗಿತ್ತು. ಜಿಲ್ಲಾ ಕೇಂದ್ರಕ್ಕೂ ಈ ಮಾನ್ಯತೆ ಇರಲಿಲ್ಲ. ಮುರಗೋಡಿನವರೆ ಆದ ಸುಪ್ರಸಿದ್ಧ ಜಾನಪದ ಹಾಡುಗಾರ ಶ್ರೀ ಬಾಳಪ್ಪ ಹುಕ್ಕೇರಿ ಇವರ ಗೆಳೆಯರು. ಮುರಗೋಡದಲ್ಲಿ ಅವರಿಗೆ ವಿನಾಯಕ ಭಟ್ಟರೆಂಬ ಸಂಗೀತದ ಗೀಳು ಇದ್ದ ಮತ್ತೊಬ್ಬರು ನಿಕಟ ವಾಗಿದ್ದರು. ಕಿತ್ತೂರಿಗೆ ಹೋದ ಮೇಲೂ ಗೆಳೆತನ ಉಳಿಯಿತು. ಅವರ ಮಗಳು ಕಲಭಾವಿಯಲ್ಲಿ ನರ್ಸ ಆಗಿ ಕೆಲಸ ಮಾಡುತ್ತಿದ್ದುದರಿಂದ ವಿನಾಯಕ ಭಟ್ಟರು ಅಲ್ಲಿ ಬಂದಾಗ ಇವರನ್ನು ಭೆಟ್ಟಿಯಾಗದೆ ಇರುತ್ತಿರಲಿಲ್ಲ. ಇಬ್ಬರೂ ಸೇರಿದಾಗ ಅವರದೇ ಮತ್ತೊಂದು ಸಂಗೀತ- ನಾದ ಪ್ರಪಂಚ ನಿರ್ಮಾಣಗೊಳ್ಳುತ್ತಿತ್ತು.
ಹೊಲದ ಬೆಳೆಯ ಮೇಲೆಯೆ ಜೀವನ ಸಾಗುತ್ತಿದ್ದರಿಂದ, ಸಣ್ಣ ಪ್ರಮಾಣದಲ್ಲಿ ಒಬ್ಬ ಪ್ರಗತಿಪರ ರೈತನಂತೆ, ಒಕ್ಕಲುತನದಲ್ಲಿ ಸುಧಾರಣೆಗಳನ್ನೂ ಅಳವಡಿಸಿ, ನಿರ್ವಹಿಸುತ್ತಿದ್ದರು. ಮನೆಯಲ್ಲಿ ಆಕಳನ್ನೂ ಸಾಕಿದ್ದರು. ನಿತ್ಯ ಪೂಜೆ ನಡೆಯುತ್ತಿತ್ತು.
ಇದು ಅವರ ವ್ಯಕ್ತಿ ಪರಿಚಯದ ಕೆಲ ಗುಣ ವಿಶೇಷಗಳು. ಇನ್ನು, ಅವರ ಜೀವನದ ಉಳಿದ ಬೇರೆ ವಿವರಗಳ ಬಗ್ಗೆ ಯೂ ಹೇಳಬೇಕಲ್ಲ.
ಶ್ಯಾಮಾಚಾರ್ಯರ ತಂದೆ ಕೃಷ್ಟಾಚಾರ್ಯರು ಐದನೆಯ ಪೀಳಿಗೆಯವರು. ನನ್ನ ಮುತ್ತಜ್ಜ ಅನಂತಾಚಾರ್ಯರಿಗೆ (ಅವರು ರಂಗಾಚಾರ್ಯರ ಆರು ಮಕ್ಕಳಲ್ಲಿ ಹಿರಿಯವರು) ಇದ್ದ ಐವರು ತಮ್ಮಂದಿರಲ್ಲಿ ಕೊನೆಯವರಿಬ್ಬರೆಂದರೆ ಭೀಮಾಚಾರ್ಯ ಮತ್ತು ಕೃಷ್ಟಾಚಾರ್ಯ(ಕಿತ್ತೂರಿನ ಶ್ಯಾಮಾಚಾರ್ಯರ ಜನಕ ತಂದೆ). ಹೀಗಾಗಿ, ಭೀಮಾಚಾರ್ಯರು ಶ್ಯಾಮಾಚಾರ್ಯರ ದೊಡ್ಡಪ್ಪ (ಕಕ್ಕ). ನನ್ನ ಮುತ್ತಜ್ಜ ಅನಂತಾಚಾರ್ಯರ ಪುತ್ರ ರಾಮಾಚಾರ್ಯರು, ನನ್ನ ತಂದೆ ರಂಗನಾಥನ ಜನಕ ತಂದೆ. ನನ್ನ ತಂದೆಯನ್ನು (ಅಷ್ಟು ಹೊತ್ತಿಗೆ ಕಿತ್ತೂರಿನಲ್ಲಿ ನೆಲೆಸಿದ್ದ -) ಭೀಮಾಚಾರ್ಯರ ಮಗ – ಇವರ ಹೆಸರೂ ಕೃಷ್ಟಾಚಾರ್ಯ, ಇವರಿಗೆ ದತ್ತಕ ಕೊಡಲಾಗಿತ್ತು.
ಕೃಷ್ಟಾಚಾರ್ಯರಿಗೆ (ಶ್ಯಾಮಾಚಾರ್ಯರತಂದೆ) ಇಬ್ಬರು ಹೆಂಡಂದಿರು. ಹಿರಿಯವಳು ಗುಂಡಕ್ಕ. ಮಕ್ಕಳಾಗದೆ ತೀರಿಕೊಂಡಮೇಲೆ ಕೃಷ್ಟಾಚಾರ್ಯರು ಕಿತ್ತೂರಿನ ಗಿರಿಭಟ್ಟನವರ ಮನೆತನದ ಗೋದೂಬಾಯಿ ಎಂಬ ಕನ್ಯೆಯೊಡನೆ ಮದುವೆಯಾದರು. ಈ ಗೋದೂಬಾಯಿಯ ಹೊಟ್ಟೆಯಿಂದ ಒಂಬತ್ತು ಮಕ್ಕಳು – ಆರು ಹೆಣ್ಣು ಮತ್ತು ಮೂರು ಗಂಡು – ೧. ಸುಬ್ಬಕ್ಕ ೨. ಫಲ್ಗುಬಾಯಿ ೩. ಬಂಡಾಚಾರ್ಯ ೪. ಸೋನಾಬಾಯಿ ೫. ಭೀಮಾಚಾರ್ಯ ೬. ಅಕ್ಕವ್ವ ೮. ಗಂಡು (ಹೆಸರು?) ೯.ಶ್ಯಾಮಾಚಾರ್ಯ – ಹುಟ್ಟಿದರು. (ಈ ಹೆಣ್ಣು ಮಕ್ಕಳ ಹೆಸರು ಮತ್ತು ಕ್ರಮ ಶ್ಯಾಮಾಚಾರ್ಯರೆ ಹೇಳಿದ್ದು.
(ಇವರಲ್ಲಿ ಶ್ಯಾಮಾಚಾರ್ಯರ ಜನ್ಮ ದಿನಾಂಕವನ್ನು ಅವರ ಹಿರಿಯ ಮಗ ರಂಗ, ಮಗಳು ಭೀಮಕ್ಕ ಅಳಿಯ ಡಾ. ಗೋಪಾಳ ಭೀ. ದೇಶಪಾಂಡೆ ಇವರಿಂದ ಕೇಳಿ ತಿಳಿದು ಕೊಂಡಿದ್ದು. ಅವರಿಗೆ ಆ ತಾರೀಖು ನಿಶ್ಚಿತವಾಗಿ ಗೊತ್ತಿರದಿದ್ದರೂ ಅವರು ಹುಟ್ಟಿದ್ದು ನರಸಿಂಹ ಜಯಂತಿಯ ದಿನ ಎಂದೂ ಮತ್ತು ಮರಣ ಹೊಂದಿದ ತಾರೀಖನ್ನೂ, ಪಂಚಾಗದಂತೆ ಮಾಸ, ತಿಥಿಗಳನ್ನೂ, ಆಗ ಅವರಿಗೆ ೮೮ ವರ್ಷ ವಯಸ್ಸಾಗಿದ್ದಿತು ಎಂದೂ ಹೇಳಿದ್ದರು. ಇವುಗಳ ಆಧಾರದಿಂದ ಹಳೆಯ ಪಂಚಾಗಗಳನ್ನು ಹುಡುಕಿ ಆ ಜನ್ಮ ದಿನಾಂಕ, ಸಂವತ್ಸರ, ತಿಥಿ, ವಾರ, ಮಾಸಗಳನ್ನೆಲ್ಲ ಹುಡುಕಿ ತೆಗೆದೆ. ಹಾಗೆಯೆ ಯರಝರವಿಯವರ ಡಾಯರಿಗಳಲ್ಲಿನ “ತಾ|| ೧೨|೭|೦೮ ಯಿವತ್ತೆ ತಿಳೀತು ಕೃಷ್ಟಾಚಾರಿ ಹೆಣತಿ ಗೋದವ್ವಾ ಯಿಕಿ- ಹೆಂಣು- ಮೂಲಾ ನಕ್ಷತ್ರದ ಮೇಲೆ ಹಡೆದಳಂತೆ ಕೇಳತೇನೆ” ಎಂಬ ಮಾಹಿತಿಯನ್ನು ಹೇಳುವ ಸಾಲಿನಿಂದ, ಯಾವ ಹೆಣ್ಣಿನ (ಹೆಸರು?) ಬೆನ್ನ ಮೇಲೆ ಶ್ಯಾಮಾಚಾರ್ಯರು ಹುಟ್ಟಿದ್ದರೋ ಅವಳ ಜನ್ಮ ದಿನಾಂಕವು ತಿಳಿಯುತ್ತದೆ).
ಹಾಗೆಯೆ ಅವರ ಅಪೂರ್ಣವಾದ ಮಾಧ್ಯಮಿಕ ಶಾಲಾ ಜೀವನದ ಒಂದೆರಡು ಚಿಕ್ಕ ಅಧಿಕೃತ ವಿವರಗಳು ಮತ್ತೊಂದು ಸಂದರ್ಭದಲ್ಲಿ ಅಕಸ್ಮಾತ್ತಾಗಿ ಸಿಕ್ಕವು. ನನ್ನ ತಂದೆ ಧಾರವಾಡದ ಕರ್ನಾಟಕ ಹಾಯಸ್ಕೂಲಿನ ವಿದ್ಯಾರ್ಥಿಯಾಗಿದ್ದರು ಎಂಬ ಬಗ್ಗೆ ಮನೆಯಲ್ಲಿ ಸಿಕ್ಕಿದ್ದ ಹುಲುಕಡ್ಡಿಯಂತಹ ೧೯೨ ಒಂದು ಸಣ್ಣ ಆಧಾರದ ಸುಳಿಯನ್ನು ಹಿಡಿದು, ಅಲ್ಲಿ ಆ ವರ್ಷದ ಜನರಲ್ ರಜಿಸ್ಟರ ಇನ್ನೂ ಇದೆಯೆ, ಇದ್ದರೆ ಅದರಲ್ಲಿ ಸಿಗಬಹುದಾದ ಅವರು ಮ್ಯಾಟ್ರಿಕ್ ಪಾಸಾದ ವರ್ಷ, ಅವರ ಆಗಿನ ಸ್ಥಳೀಯ ಪಾಲಕರು ಯಾರಿದ್ದರು, ಅವರ ವಿಳಾಸ ಇತ್ಯಾದಿ ವಿವರಗಳೇನಾದರೂ ಸಿಗಬಹುದೆ ಎಂದು ಹುಡುಕಿ ಹೋದಾಗ ಸುದೈವದಿಂದ, ಆ ರಜಿಸ್ಟರ ಸಿಕ್ಕಿತು.
ಅದರ ಪುಟಗಳನ್ನುತಿರುವುತ್ತಿದ್ದಾಗ ಶ್ಯಾಮಾಚಾರ್ಯರೂ ಅದೇ ಶಾಲೆಯಲ್ಲಿ ಕಲಿತದ್ದು ಗೊತ್ತಾಯಿತು. ಅದರಲ್ಲಿ ದಾಖಲಾದ ಅವರ ಬಗೆಗಿನ ವಿವರಗಳು – ರಜಿಸ್ಟರ ನಂ. ೨೦೯೯. ಜನ್ಮ ಸ್ಥಳ : ಮುರಗೋಡ ; ಜನ್ಮ ದಿನಾಂಕ : ೧೯- ೧೨ -೧೯೧೩ : ಯಾವ ಶಾಲೆಯಿಂದ ಬಂದದ್ದು : ಕನ್ನಡ ಗಂಡು ಮಕ್ಕಳ ಶಾಲೆ, ಮುರಗೋಡ ; ದಾಖಲಾದ ದಿನಾಂಕ ಮತ್ತು ವರ್ಗ : ೧೬ -೯- ೨೫ ರಂದು ಮೂರನೆ ಇಯತ್ತೆಯಲ್ಲಿ. ಶರಾ : ದೀರ್ಘಾವಧಿಯ ಅನುಪಸ್ಥಿತಿಯ ಕಾರಣ ಹೆಸರನ್ನು ಕಡಿಮೆ ಮಾಡಿದ್ದು, ೩೧ – ೧೦-೨೫ರಂದು. ಫೀ ಬಾಕಿ : ೭/೮ (ರೂಪಾಯಿ – ಆಣೆ ?) ; ಮತ್ತೆ ರಿ-ಆಡ್ಮಿಶನ ಮಾಡಿದ್ದು : ರ. ನಂ.೨೧೫೨ ; ೧ -೩- ೨೬ ರಂದು ; ೩ನೆ ಇಯತ್ತೆಯಲ್ಲಿ ; ನಡತೆ – ಉತ್ತಮ ; ಶಾಲೆ ಬಿಟ್ಟ ದಿನಾಂಕ – ೩೦-೮-೨೬ ; ಯಾವ ಇಯತ್ತೆಯಲ್ಲಿ ಕಲಿಯುತ್ತಿದ್ದುದು – ೪ನೆ ಇಯತ್ತೆಯಲ್ಲಿ. ಫೀ ಬಾಕಿ – ೪/೮ (ರೂಪಾಯಿ – ಆಣೆ ?).
ಇಲ್ಲಿ ಈಗಿನವರು ತಿಳಿದುಕೊಳ್ಲ ಬೇಕಾದ ಒಂದು ವಿಷಯ : ಈ ರಜಿಸ್ಟರದಲ್ಲಿ ನಮೂದಾಗಿರುವ ಇಯತ್ತೆ / ವರ್ಗ ಗಳ ವಿಚಾರವಾಗಿ – ಆ ಕಾಲದಲ್ಲಿ ಪ್ರಾಥಮಿಕ ಶಾಲೆಯಲ್ಲಿ ೪ ಇಯತ್ತೆ ಕಲಿತು ಮಾಧ್ಯಮಿಕ ಶಾಲೆಯಲ್ಲಿ ಪ್ರವೇಶ ಪಡೆದಾಗ ಅಲ್ಲಿ ಆ ವಿದ್ಯಾರ್ಥಿ ಒಂದನೆ ಇಯತ್ತೆಗೆ ದಾಖಲಾಗುತ್ತಿದ್ದ. ಆ “ಇಂಗ್ಲಿಷ ಶಾಲೆಯ” ೧ ನೆ ವರ್ಗವೆಂದರೆ ಇಂದಿನ ೫ ನೆ ವರ್ಗ. ಶಾಲಾಂತ್ಯ ಪರೀಕ್ಷೆಗೆ ಕೂಡಲು ೭ ನೆ ಇಯತ್ತೆಯ ವಿದ್ಯಾರ್ಥಿಗಳನ್ನು ಅಂದರೆ ಇಂದಿನ ಲೆಕ್ಕದಲ್ಲಿ ೧೧ ನೆ ವರ್ಗದ ಕಲಿಕೆ ಪೂರ್ಣಗೊಂಡವರನ್ನು (ಈಗ ೧೧ನೆ ವರ್ಗವಿಲ್ಲ, ಹತ್ತನೆಯದೆ ಮಾಧ್ಯಮಿಕ ಶಾಲೆಗಳಲ್ಲಿನ ಕೊನೆಯ ವರ್ಗ. ಅರ್ಥಾತ್ ಶ್ಯಾಮಾಚಾರ್ಯರು ೩ ನೆ ಇಯತ್ತೆಗೆ ಪ್ರವೇಶ ಪಡೆದಿದ್ದರು ಎಂದರೆ ಈಗಿನ ೭ ನೆ ವರ್ಗ. ಶಾಲೆ ಬಿಟ್ಟಾಗ ೪ ನೆ ವರ್ಗದಲ್ಲಿದ್ದರು ಎಂದರೆ ಈಗಿನ ೮ ನೆ ವರ್ಗದಲ್ಲಿದ್ದರು ಎಂದು ತಿಳಿಯಬೇಕು.
ಶ್ಯಾಮಾಚಾರ್ಯರು ತಮ್ಮ ಮದುವೆಯ ಮುಂಚೆಯೆ, ದತ್ತಕವಾಗುವ ಪೂರ್ವದಲ್ಲಿಯೆ ಕಿತ್ತೂರಿಗೆ ಬಂದು ನೆಲೆಸಿದ್ದರ ಹಿನ್ನೆಲೆ.
ಅವರ ತಾಯಿ ಗೋದೂಬಾಯಿ (ಅಂದರೆ ಕೃಷ್ಟಾಚಾರ್ಯರ ಹೆಂಡತಿ), ಕಿತ್ತೂರಿನ ಹಣಮಂತಾಚಾರ್ಯ ಗಿರಿಭಟ್ಟನವರರ ತಂಗಿ. ಹೀಗಾಗಿ, ದತ್ತಕ ತೆಗೆದುಕೊಂಡು ತಂದೆ ಎನಿಸಿಕೊಳ್ಳುವ ಮೊದಲು, ಹಣಮಂತಾಚಾರ್ಯರು ಶ್ಯಾಮಾಚಾರ್ಯರ ಸೋದರ ಮಾವನಾಗಿದ್ದರು.
ಮುರಗೋಡದಲ್ಲಿ ತಂದೆ ತೀರಿಹೋಗಿದ್ದರು. ಹಿರಿಯ ಅಣ್ಣ ಬಂಡಾಚಾರ್ಯರೂ ಅಕಾಲ ಮೃತ್ಯು ಹೊಂದಿದರು. ಅವರು ಆಗಲೆ ಕದಕೋಳದ ಕನ್ಯೆ ಗಂಗಕ್ಕ ಎಂಬುವರನ್ನು ಮದುವೆಯಾಗಿ ಮದುವೆಯಾಗಿ ಮಕ್ಕಳನ್ನು ಪಡೆದಿದ್ದರೂ – ಆದ ನಾಕೂ ಹೆಣ್ಣು ಸಂತಾನ. ಇನ್ನೊಬ್ಬ ಅಣ್ಣ – ಭೀಮಾಚಾರ್ಯ ಮುಂಜಿವೆಯಾಗಿ, ಮದುವೆಯ ಮೊದಲೆ ಕಿತ್ತೂರಿನಲ್ಲಿ ತೀರಿಕೊಂಡಿದ್ದ.
ಉಳಿದಿದ್ದವರು, ಬಂಡಾಚಾರ್ಯರ ಮರಣಾನಂತರವೂ ಮುರಗೋಡದಲ್ಲಿ ಎರಡು ಮೂರು ವರ್ಷ ಇದ್ದರು. ಆದರೆ ಆ ಅವಧಿಯಲ್ಲಿ ಆದ ಕೆಲ ಬೆಳವಣಿಗೆಯಿಂದಾಗಿ ಮುರಗೋಡದಲ್ಲಿಯೆ ಇರಬೇಕು ಎನಿಸುವಂತಹ ಆಸ್ತಿಯೇನೂ ಅಲ್ಲಿ ಉಳಿಯಲಿಲ್ಲವಾಗಿ, ಗೋದೂಬಾಯಿ ತನ್ನ ಕಿರಿಯ ಮಗ ಶ್ಯಾಮಾಚಾರ್ಯರನ್ನು ಕಟ್ಟಿಕೊಂಡು ಅಣ್ಣ ಹಣಮಂತಾಚಾರ್ಯರ ಆಶ್ರಯಕ್ಕೆ, ಕಿತ್ತೂರಿಗೆ ಬಂದರು. ಅದು ಬಹುಶಃ ೧೯೩೫ ರ ಸ್ವಲ್ಪ ಹಿಂದು ಮುಂದಿನ ಕಾಲ ಇದ್ದಿರಬಹುದು. ಹಣಮಂತಾಚಾರ್ಯರು ಸಮೀಪದ ಕಲಭಾವಿಯ ದೇಶಪಾಂಡೆಯವರ ಪುರೋಹಿತರು. ಆ ಮನೆತನದೊಂದಿಗೆ ಒಡನಾಟವಿದ್ದಿತು.
ಹಣಮಂತಾಚಾರ್ಯರಿಗೆ ಗಂಡು ಮಕ್ಕಳಿರಲಿಲ್ಲ. ಒಬ್ಬಳೆ ಹೆಣ್ಣು ಮಗಳು – ತಾರಾಬಾಯಿ. ಮಗಳನ್ನು ಆಗ ಕಿತ್ತೂರಿನಲ್ಲಿಯೆ ಇದ್ದ (?) ಶಿಕ್ಷಕ ನರಸಿಂಹಾಚಾರ್ಯ ಗಲಗಲಿ ಅವರಿಗೆ ಕೊಟ್ಟಿದ್ದರು.
ಸೋದರ ಅಳಿಯ ಶ್ಯಾಮಾಚಾರ್ಯರಿಗೆ ಮದುವೆ ವಯಸ್ಸು ಬಂದಿತ್ತು. ಮದುವೆ ಮಾಡುವ ಜವಾಬುದಾರಿ ಹಣಮಂತಾಚಾರ್ಯರ ಇದ್ದಿತು. ಕಲಭಾವಿಯ ಶೇಷೋ ಭೀ. ದೇಶಪಾಂಡೆಯವರಲ್ಲಿ ಮದುವೆಗೆ ಬಂದ ಒಬ್ಬ ಕನ್ಯೆ, ಇದ್ದಳು, ಅವರ ಮೊಮ್ಮಗಳು – ಕಮಲಾ (ವಿವಾಹಾನಂತರದ ಸೀತಾಬಾಯಿ). ಭೀಮರಾವ ಶೇಷೋ ದೇಶಪಾಂಡೆಯವರ ಮಗಳು. ಅವಳನ್ನು ತನ್ನ ಸೋದರಳಿಯನಿಗೆ ತಂದುಕೊಳ್ಳ ಬೇಕೆಂಬ ವಿಚಾರ ಬಂದು ದೇಶಪಾಂಡೆಯವರ ಹತ್ತಿರ ಪ್ರಸ್ತಾಪವನ್ನೂ ಮಾಡಿದರು.
ಶ್ಯಾಮಾಚಾರ್ಯರ ಹೆಸರಲ್ಲಿ ಅಷ್ಟುಹೊತ್ತಿಗೆ ಯಾವ ಆಸ್ತಿಪಾಸ್ತಿಯೂ ಉಳಿದಿರಲಿಲ್ಲ. ಒಂದು ಕರಾರಿನ ಮೇಲೆ ಶೇಷೋ ಅವರು ಮೊಮ್ಮಗಳನ್ನು ಕೊಡಲು ಸಮ್ಮತಿಸಿದರು. ಹಣಮಂತಾಚಾರ್ಯರು ಸೋದರಳಿಯನನ್ನು ದತ್ತಕ ತೆಗೆದುಕೊಂಡು ಆಸ್ತಿವಂತನನ್ನಾಗಿ ಮಾಡಿದರೆ ಮಾತ್ರ ಈ ಪ್ರಸ್ತಾಪ ಒಪ್ಪಿಗೆ ಎಂದರು. ಹಣಮಂತಾಚಾರ್ಯರು ಅದರಂತೆ ಸೋದರಳಿಯನನ್ನು ದತ್ತಕ ಪುತ್ರನಾಗಿ ಸ್ವೀಕರಿಸಿ ತಮ್ಮ ಹೊಲ ಮನೆಗಳಿಗೆ ವಾರಸುದಾರನನ್ನಾಗಿ ಮಾಡಿಕೊಂಡರು. ಇದರಿಂದಾಗಿ ಅವರಿಗೆ ಗದ್ದಿ ಓಣಿಯಲ್ಲಿನ ಮನೆ,ಯಲ್ಲದೆ, ಕಲಭಾವಿ, ಮೇಟ್ಯಾಲ ಮತ್ತು ಅರವಳ್ಳಿಯಲ್ಲಿ ಜಮೀನು ಪ್ರಾಪ್ತವಾದವು.
ಹೀಗೆ, ಶ್ಯಾಮಾಚಾರ್ಯರು ಮೊದಲು ಹಣಮಂತಾಚಾರ್ಯರ ದತ್ತಕ ಪುತ್ರನಾಗಿ, ಆ ನಂತರ ಚತುರ್ಭುಜರಾದರು. ಅವರಿಗಿಂತ ಹದಿಮೂರು ವರ್ಷ ಸಣ್ಣವಳು ಕಮಲಾ ಸೀತಾಬಾಯಿಯಾಗಿ ಅವರ ಮನೆ ತುಂಬಿದಳು. ಅವರ ಜನ್ಮ ದಿನಾಂಕ ೨ -೧೦- ೧೯೨೩.
ಈ ದತ್ತಕ ೧೯೩೮ – ೩೯ರ ಹೊತ್ತಿಗೆ, ಮದುವೆ ಬಹುಶಃ ಜನೆವರಿ ೧೯೪೦ ರಲ್ಲಿ ಆಗಿರಬೇಕು. ಆಗಿನ್ನೂ ಸೀತಾಬಾಯಿಯ ತಮ್ಮ ಡಾಕ್ಟರ ಗೋಪಾಳರಾವ ಭೀ. ದೇಶಪಾಂಡೆ ಹುಟ್ಟಿರಲಿಲ್ಲ. ಅವರು ಹುಟ್ಟಿದ್ದು ೩೦ ನವೆಂಬರ ೧೯೪೦ ರಂದು. ನೂತನ ದಂಪತಿಗಳ ಮೊದಲ ಮಗು ಮಿತ್ರವಿಂದಾ ಹುಟ್ಟಿದ್ದು – ೧೬ -೧- ೧೯೪೧ ರಲ್ಲಿ.
ಶ್ಯಾಮಾಚಾರ್ಯ – ಸೀತಾಬಾಯಿ ದಂಪತಿಗಳ ಮಕ್ಕಳು, ಎಲ್ಲಿ ಎಲ್ಲಿ ಇದ್ದಾರೆ
೧) ಮಿತ್ರವಿಂದಾ (ಸೋನಾ) – ತೀರಿಕೊಂಡಿದ್ದಾರೆ. ಜನ್ಮ ದಿನಾಂಕ – ೧೬ -೧ -೧೯೪೧. ಪುಣೆಯಲ್ಲಿ ಅಕೌಂಟಂಟ ಜನರಲ (ಏ.ಜಿ) ಆಫೀಸಿನಲ್ಲಿ ಆಡಿಟರ ಆಗಿ ಕೆಲಸ ಮಾಡುತ್ತಿದ್ದ ಸೋದರ ಮಾವ, ಕಲಭಾವಿಯ ಮಧ್ವ ಭೀಮರಾವ ದೇಶಪಾಂಡೆ ಅವರ ಪತ್ನಿ. ಎರಡನೆ ಹೆರಿಗೆಯಾದ ತುಸು ಹೊತ್ತಿನಲ್ಲಿಯೆ, ಕಿತ್ತೂರಲ್ಲಿ, ೧೯೬೩ ರಲ್ಲಿ (?) ತೀರಿಕೊಂಡರು. ಮಧ್ವ ಅವರೂ ಉನ್ನತಿ ಪಡೆದು ಸೀನಿಯರ ಅಕೌಂಟಂಟ ಆಗಿ ನಿವೃತ್ತಿ ಹೊಂದಿ ೨೦೧೪ (?) ರಲ್ಲಿ ತೀರಿಕೊಂಡರು.
ಎಸ್. ಎಸ್. ಸಿ ವರೆಗೆ ಶಿಕ್ಷಣ. ವಿಶೇಷ ವೆಂದರೆ ಕಲಿತಿದ್ದು, ನಮ್ಮ ಮನೆತನದ ಹೆಣ್ಣುಮಗಳಾದ ಭಾಗೀರಥಿಬಾಯಿ ಪುರಾಣಿಕ ಅವರು ಕಟ್ಟಿದ್ದ ಧಾರವಾಡದಲ್ಲಿನ ವನಿತಾ ಸೇವಾ ಸಮಾಜದ ಶಾಲೆಯಲ್ಲಿ. ಮತ್ತೊಂದು ವಿಶೇಷ, ಒಳ್ಳೆಯ ಕಂಠವಿದ್ದ ಮಿತ್ರವಿಂದಾ ಚಿಕ್ಕ ವಯಸ್ಸಿನಲ್ಲೇ ಆಕಾಶವಾಣಿ ಕಲಾವಿದೆಯಾಗಿ, ಎರಡು ಸುಗಮ ಸಂಗೀತದ ಕಾರ್ಯಕ್ರಮಗಳು ಪ್ರಸಾರವಾಗಿದ್ದವು.
ಇವರ ಮೊದಲ ಮಗಳು ಭಾರತಿ, ಪುಣೆಯಲ್ಲಿಯೆ ಹಾಯ ಪಾವರ ಕ್ಲ್ಯಾಂಪ್ಸ ಫ್ಯಾಕ್ಟರಿ ಎಂಬ ಉದ್ದಿಮೆಯಲ್ಲಿ ಪಾಲುದಾರ ಆಗಿರುವ ರಾಜೀವ ಪಾಗೆ ಎಂಬುವರ ಪತ್ನಿ. ಈ ದಂಪತಿಗಳಿಗೆ ಸ್ನೇಹಲ ಮತ್ತು ಜಯದೇವ ಎಂಬ ಇಬ್ಬರು ಮಕ್ಕಳಿದ್ದಾರೆ. ಸ್ನೇಹಲ ಅವರ ಮದುವೆ ಇತ್ತಿಚೆಗೆ ಆಗಿದೆ.
೨) ರಂಗನಾಥ (ಶಾಲಾ ದಾಖಲೆಗಳಲ್ಲಿ ರಂಗೋ) – ಹುಟ್ಟಿದ್ದು ೧೭ ಎಪ್ರಿಲ ೧೯೪೩ ರಂದು ಕಲಭಾವಿಯಲ್ಲಿ. ಶಿಕ್ಷಣ – ಬಿ.ಎ. ಕಿತ್ತೂರಿನ ಶ್ರೀ ಗುರುಸಿದ್ದೇಶ್ವರ ಹಾಯಸ್ಕೂಲದಲ್ಲಿ ದ್ವಿತೀಯ ದರ್ಜೆ ಸಹಾಯಕ ನೆಂದು ಕೆಲಸಮಾಡಿ ೨೦೦೦ ನೆ ಇಸವಿಯ ಎಪ್ರಿಲ ೩೦ರಂದು ನಿವೃತ್ತಿ ಪಡೆದಿದ್ದಾರೆ. ವಾಸಸ್ಥಳ – ಮನೆ ನಂ. ೧೦೧೭, ಗದ್ದಿ ಓಣಿ, ಗುರುವಾರ ಪೇಟೆ, ಕಿತ್ತೂರು. ಆಗೀಗ / ಮೇಲಿಂದ ಮೇಲೆ, ಹಿರಿಯ ಮಗ ಶ್ರೀಧರನ (ಹಣಮಂತ ಎಂದೂ ಪರಿಚಿತ) ಕಡೆಗೆ ಪುಣೆಗೆ ಇಲ್ಲವಾದರೆ ಇನ್ನೊಬ್ಬ ಮಗ ಮುರಲೀಧರನ ಕಡೆಗೆ ಚೆನ್ನೈ ಗೆ ಹೋಗಿ ಇರುವದೂ ನಡೆದಿರುತ್ತದೆ. ಫೋನ – (ಮೊ) ೯೪೪೯೪೧೦೭೧೯.
ಉಪನಯನ : ಕಿತ್ತೂರಿನಲ್ಲಿಯೆ ಮನೆಯ ಮುಂದೆ, ವರ್ಷ ನೆನಪಿನಲ್ಲಿಲ್ಲ. ಶಿಕ್ಷಣ : ಬೆಳಗಾವಿಯ ಕೋನವಾಳಗಲ್ಲಿಯ ಕನ್ನಡ ಶಾಲೆ ಹಾಗೂ ಕಿತ್ತೂರಿನ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಕಿತ್ತೂರಿನ ಗುರುಸಿದ್ದೇಶ್ವರ ಹಾಯಸ್ಕೂಲಿನಲ್ಲಿ ಮಾಧ್ಯಮಿಕ ಶಿಕ್ಷಣ ಮುಗಿಸಿ, ಬೆಳಗಾವಿಯ ರಾಜ ಲಖಮನಗೌಡಾ ಸಾಯನ್ಸ ಕಾಲೇಜಿನಲ್ಲಿ ಬಿ.ಎಸ್.ಸಿ ೧ ಕಲಿಯುತ್ತಿರುವಾಗಲೆ, ಕಿತ್ತೂರಿನಲ್ಲಿ ತಾನು ಕಲಿತ ಮಾಧ್ಯಮಿಕ ಶಾಲೆಯಲ್ಲಿಯೆ ಜುಲೈ ೧೯೬೫ರಲ್ಲಿ ದ್ವಿತೀಯ ದರ್ಜೆ ಗುಮಾಸ್ತ ಕೆಲಸ ಸಿಕ್ಕಿದ್ದರಿಂದ ಕಾಲೇಜು ಶಿಕ್ಷಣ ಮೊಟಕು ಗೊಂಡಿದ್ದು. ನಂತರ ಬಿ.ಎ. (ಬಾಹ್ಯ) ಮಾಡಿದ್ದು.
ಗೋಕಾಕದ ನಿವೃತ್ತ ಶಿರಸ್ತೇದಾರ ಗೋವಿಂದರಾವ ಭೀಮರಾವ ಕುಲಕರ್ಣಿ ಮತ್ತು ಕುಸುಮಾಬಾಯಿ ದಂಪತಿಗಳ ಐದು ಮಕ್ಕಳಲ್ಲಿ (ಶೋಭಾ, ಕೃಷ್ಣ, ರಜನಿ, ದತ್ತಗುರು ಮತ್ತು ಶ್ರೀಪಾದ) ಮೂರನೆಯಳು – ರಜನಿಯೊಂದಿಗೆ (ಹುಟ್ಟಿದ್ದು ೨೯ ಜನೆವರಿ ೧೯೫೦) ಅವರ ಮನೆ ಮುಂದೆ ಜನೆವರಿ ೧, ೧೯೭೧ ರಂದು ವಿವಾಹ. ಇಬ್ಬರು ಗಂಡು ಮಕ್ಕಳು – ಶ್ರೀಧರ (ಹುಟ್ಟಿದ್ದು ೧೭ -೧೦- ೧೯೭೨ರಂದು ಗೊಡಚಿಯಲ್ಲಿ) ಮತ್ತು ಮುರಲೀಧರ (ಹುಟ್ಟಿದ್ದು ೧೮- ೬ – ೧೯೭೫ ರಂದು ಗೊಡಚಿಯಲ್ಲಿ).
ಇವರಲ್ಲಿ ಶ್ರೀಧರ Diploma in Automobile & NTTF ಆಗಿ Inoxpa India Ltd. ಸಿಂಹಗಡ ರೋಡ ಹತ್ತಿರ, ಪುಣೆಯಲ್ಲಿ (ಮಹಾರಾಷ್ಟ್ರ) ಮತ್ತು ಮುರಲೀಧರ B.E. (Comp. Sc.) ಆಗಿ AMUL, Gujarath Coop. Milk Marketing Federation (GCMMF) Dy.Manager (Systems) ಚೆನ್ನೈದಲ್ಲಿ (ತಮಿಳ್ ನಾಡು) ಇದ್ದಾರೆ.
ಯಾತ್ರೆ – ಪರ್ಯಟನೆ : ೨೦೦೨ರಲ್ಲಿ (?) ಮೂರುವರೆ ತಿಂಗಳ ಕಾಲ – ತಾಯಿ ಸೀತಾಬಾಯಿಯನ್ನು ಕರೆದುಕೊಂಡು ಮಗ ರಂಗ, ಸೊಸೆ ರಜನಿ ಮತ್ತು ಈ ಮೂವರು ಕೈಗೊಂಡ ಅಮೇರಿಕಾ ಪರ್ಯಟನ. ನಿಮಿತ್ತ : ರಂಗನಾಥ ಅವರ ಕೊನೆಯ ತಮ್ಮ ಸಂಜೀವನಿರುವ ಅಮೇರಿಕಾದ ವರ್ಜೀನಿಯಾ ರಾಜ್ಯ ರಾಜಧಾನಿ ರಿಚಮಂಡದ ಹತ್ತಿರ ಚಸ್ಟರ ಏರಿಯಾದಲ್ಲಿ ಇರುವದು. ಸಂಜೀವ ಅವರ ಮನೆ – ಇದು ವಾಷಿಂಗಟನ್ ದಿಂದ ಎರಡು ತಾಸು ಡ್ರಾಯವಿಂಗ ಅಂತರದಲ್ಲಿದೆ. ಅಲ್ಲಿದ್ದ ಈ ಮೂರೂವರೆ ತಿಂಗಳ ಅವಧಿಯಲ್ಲಿ ನಾಯಗರಾ, ನ್ಯೂ ಜರ್ಸೀ, ನ್ಯೂಯಾರ್ಕ ಮೊದಲಾದವುಗಳನ್ನು ನೋಡಿದ್ದು.
ಅಮೇರಿಕೆಯಿಂದ ಬಂದ ಮೇಲೆ – ೨೦೦೩ ರಲ್ಲಿ, ರಂಗನಾಥ ಮತ್ತು ರಜನಿ ದಂಪತಿಗಳು ದಕ್ಷಿಣ ಭಾರತ – ಮುಖ್ಯವಾಗಿ ರಾಮೇಶ್ವರ ನೋಡಿ ಬಂದದ್ದು ಹಾಗೆಯೆ ಸಕ್ರಿ ಆಚಾರ್ಯರ ಜೊತೆ ಕಾಶಿ, ಪ್ರಯಾಗ, ಗಯಾ, ಹರಿದ್ವಾರ ಗಳನ್ನೂ, ಸೋಮನಾಥ, ದ್ವಾರಕಾ, ಬೇಟದ್ವಾರಕಾ, ಮಾತೃ ಗಯಾ ಗಳಿಗೆ ಹೋಗಿಬಂದದ್ದು.
೨೦೦೪ ರಲ್ಲಿ ಮತ್ತೆ ದಕ್ಷಿಣ ಭಾರತದ ಯಾತ್ರೆ – ತಿರುಪತಿ, ಮಂತ್ರಾಲಯ, ರಾಮೇಶ್ವರ ಗಳ ಯಾತ್ರೆ.
೩) ಭೀಮಾಬಾಯಿ ( ಅಜ್ಜ ಹಣಮಂತಾಚಾರ್ಯರ ಪತ್ನಿಯ ಹೆಸರು ). : ಅಜ್ಜಿಯ ಹೆಸರು. ಹುಟ್ಟಿದ್ದು : ೧೦ -೧೧ – ೧೯೪೭ . ಸೋದರ ಮಾವ ಡಾ. ಗೋಪಾಳರಾವ ಭೀ. ದೇಶಪಾಂಡೆ ಅವರೊಡನೆ ವಿವಾಹ.
೪) ಅಶೋಕ ( ರಾಮ / ಅಪ್ಪಣ್ಣ ಎಂದೂ ಪರಿಚಿತ ). ಹರಿಹರದ ಕಿರ್ಲೋಸ್ಕರ ಕಂಪನಿಯಲ್ಲಿ ಕೆಲಸವಿದ್ದಿತು. ಕಂಪನಿ ಮುಚ್ಚಿಹೋದ ಮೇಲೆ ಕೆಲಸ ಕಳೆದುಕೊಂಡ ಅನೇಕರಲ್ಲಿ ಇವರೂ ಒಬ್ಬರು. ಈಗ ಖಾಸಗಿ ಕೆಲಸದಲ್ಲಿ ಇದ್ದು ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಮಕ್ಕಳಲ್ಲಿ – ಮೊದಲನೆಯವಳು ಇಂಜಿನೀಯರ. ವಿವಾಹಿತೆ. ಎರಡನೆಯವಳು ಸಿ.ಎ. ಮಾಡುತ್ತಿದ್ದಾಳೆ.
೫) ಶೋಭಾ : ಪತಿ ವಾಸುದೇವರಾವ ಕುಲಕರ್ಣಿ ಸಿಂಡಿಕೇಟ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದರು. ಸ್ವೇಚ್ಛಾ ನಿವೃತ್ತಿ ಪಡೆದು ವಕೀಲರಾಗಿ ಮತ್ತೆ ಹೊಸದಾಗಿ ವೃತ್ತಿ ಜೀವನವನ್ನು ನಡೆಸುತ್ತಿದ್ದರು. ತೀರಿಕೊಂಡಿದ್ದಾರೆ. ಶೋಭಾ ಬೆಂಗಳುರಿನಲ್ಲಿ ಇರುತ್ತಾರೆ.
೬) ಕೃಷ್ಣ : ನಿವೃತ್ತ ಗ್ರಾಮೀಣ ಬ್ಯಾಂಕ ಮ್ಯಾನೇಜರ. ಧಾರವಾಡದ ಯಾಲಕ್ಕಿ ಶೆಟ್ಟರ ಕಾಲನಿಯಲ್ಲಿ ಮನೆಮಾಡಿಕೊಂಡು ಇದ್ದಾರೆ.
೭) ಗೋದಾವರಿ : ಅಜ್ಜಿಯ (ತಂದೆಯ ತಾಯಿ) ಹೆಸರು. ಮುಂಬಯಿ ಕಾರ್ಪೋರೇಶನದಲ್ಲಿ ಇಂಜಿನೀಯರ ಆಗಿ ಕೆಲಸದಲ್ಲಿರುವ ಕೆ.ಕೆ. ನಗರ ಅವರ ಪತ್ನಿ.
೮) ವಿಟ್ಠಲ : ಇವರಿಗೂ ಹರಿಹರದ ಕಿರ್ಲೋಸ್ಕರ ಕಂಪನಿಯಲ್ಲಿ ಕೆಲಸವಿದ್ದಿತು. ಅದು ಬಂದಾದ ಮೇಲೆ ಮತ್ತೊಂದು ಕಡೆ ಖಾಸಗಿ ಕೆಲಸದಲ್ಲಿ ಇದ್ದರೆ. ದಾವಣಗೆರೆಯಲ್ಲಿ ಇರುತ್ತಾರೆ.
೯) ಸಂಜೀವ : ಬಿ.ಇ. ಆಗಿ ಅಮೇರಿಕೆಯಲ್ಲಿ ಕೆಲಸ ಹೊಂದಿದ್ದಾರೆ. ಅಲ್ಲಿಯೆ ಮನೆಯೊಂದನ್ನು ಮಾಡಿಕೊಂಡಿದ್ದಾರೆ.
(ಈ ವ್ಯಕ್ತಿ ಪರಿಚಯದಲ್ಲಿನ ವ್ಯಕ್ತಿತ್ವದ ಚಿತ್ರವನ್ನು ನನ್ನ ನೆನಪುಗಳಿಂದ, ಇತಿಹಾಸದ ವಿವರಗಳನ್ನು ಶ್ಯಾಮಾಚಾರ್ಯರ ಬಾಯಿಂದ ೭ ಫೆಬ್ರುವರಿ ೧೯೯೨ ರಂದು ಕಿತ್ತೂರಿನ ಅವರ ಮನೆಯಲ್ಲಿ ಅವರಿಂದಲೇ ಕೇಳಿ ತಿಳಿದದ್ದು. ಜನ್ಮ ದಿನಾಂಕ, ಮಕ್ಕಳು ಇತ್ಯಾದಿ ವಿವರಗಳನ್ನು ಅವರ ಮಗ ರಂಗನಾಥನಿಂದ ಕಿತ್ತೂರಿನಲ್ಲಿ ೨೪ -೫- ೨೦೧೫ ದಂದು, ಮುರಗೋಡದಿಂದ ಕಿತ್ತೂರಿಗೆ ಬಂದ ಆ ಕಾಲದ ಘಟನೆಗಳ ವಿವರಗಳನ್ನು ಅಳಿಯ ಡಾ. ಜಿ.ಬಿ.ದೇ ಅವರ ಧಾರವಾಡದ ಮನೆಯಲ್ಲಿ ೨೨-೬- ೨೦೧೫ ಕೇಳಿ ತಿಳಿದುಕೊಂಡಿದ್ದು)