ಬಿಂದುಮಾಧವ
ಬಿಂದುಮಾಧವ | ಹುಟ್ಟಿದ ದಿನಾಂಕ: 1951-10-22 | ||
ತಂದೆ: ಶ್ರೀನಿವಾಸ | ತಾಯಿ: | ||
ಮಕ್ಕಳು: ಶ್ರೀನಿವಾಸ, ಶ್ರೀನಾಥ | |||
ಒಡಹುಟ್ಟಿದವರು: ಪದ್ಮನಾಭ | |||
ವಿಳಾಸ: "ಪಾಂಡುರಂಗ ಕೃಪಾ", ಪ್ಲಾಟ ನಂ. ೩೫, ಬಿ. ಬ್ಲಾಕ, ಗಂಗಾಧರ ನಗರ, ಸಿಂಧೊಳ್ಳಿ (ಪೋಸ್ಟ ಸಾಂಬ್ರಾ) -೫೯೧೧೨೪. | |||
ಮೊಬೈಲ್: 9731861088 | Branch: 2 | Generation: 9 |
ವ್ಯಕ್ತಿ ಚಿತ್ರ
ಬಿಂದುಮಾಧವ ಶ್ರೀನಿವಾಸ ಮಂಗಳವೇಢೆ
ಮುರಗೋಡದಲ್ಲಿದ್ದ ಶೇಷಾಚಾರ್ಯರ ಪ್ರಪೌತ್ರ, ವೆಂಕಟಾಚಾರ್ಯರ ಪೌತ್ರ, ಶ್ರೀನಿವಾಸ ಅವರ ಪುತ್ರ
ಬೆಳಗಾವಿ ನಿವಾಸಿ
ಕಿರು ಪರಿಚಯ
ಎರಡನೆ ಟಿಸಿಲಿನ ಒಂಬತ್ತನೆ ತಲೆಮಾರಿನವರು
ಜನ್ಮ ದಿನಾಂಕ ಮತ್ತು ಸ್ಥಳ: ೨೨-೧೦-೧೯೫೧, ಬೆಳಗಾವಿ ಹತ್ತಿರದ ಬಸ್ತವಾಡ
ತಂದೆ -ತಾಯಿ: ಶ್ರೀನಿವಾಸ ಮತ್ತು ಸುಶೀಲಾ ಇವರ ಇಬ್ಬರು ಮಕ್ಕಳಲ್ಲಿ ಹಿರಿಯವ
ಒಡಹುಟ್ಟಿದವರು: ಪದ್ಮನಾಭ (ತಮ್ಮ)
ನಿವೃತ್ತ ದ್ವಿತೀಯ ದರ್ಜೆ ಸಹಾಯಕ, ಶ್ರೀಮತಿ ಉಷಾತಾಯಿ ಗೋಗಟೆ ಹೆಣ್ಣು ಮಕ್ಕಳ ಪ್ರೌಢ ಶಾಲೆ, ಬೆಳಗಾವಿ.
ಪತ್ನಿ: ಸೌ. ಗೀತಾ, ಗೃಹಿಣಿ
ಮಕ್ಕಳು: ೧. ಶ್ರೀನಿವಾಸ M.Com. ಬೆಳಗಾವಿ ಮತ್ತು ೨. ಶ್ರೀ B.Com. Infosys, ಪುಣೆ.
ವಿಳಾಸ: “ಪಾಂಡುರಂಗ ಕೃಪಾ”, ಪ್ಲಾಟ ನಂ. ೩೫, ಬಿ. ಬ್ಲಾಕ, ಗಂಗಾಧರ ನಗರ, ಸಿಂಧೊಳ್ಳಿ (ಪೋಸ್ಟ ಸಾಂಬ್ರಾ) -೫೯೧೧೨೪.
ದೂರವಾಣಿ: (ಮೊ) ೯೭೩೧ ೮೬ ೧೦೮೮.
ವ್ಯಕ್ತಿ ಪರಿಚಯ
ಬೆಳಗಾವಿಯಲ್ಲಿಯೆ ಇದ್ದ ವ್ಯಕ್ತಿಯಾದರೂ ೧೯೯೩ರ ವರೆಗೆ ಇವರ ಇರುವಿಕೆಯ ಬಗ್ಗೆ ಎಳ್ಳಷ್ಟೂ ಗೊತ್ತಿರಲಿಲ್ಲ. ಬೆಳಗಾವಿಯಲ್ಲಿದ್ದ ಮುರಗೋಡದ ಮಂಗಳವೇಢೆ ಮನೆತನದ ಇನ್ನೊಬ್ಬರ ಅಲ್ಪಸ್ವಲ್ಪ ಪರಿಚಯ ೧೯೭೦ರ ಹೊತ್ತಿಗೆ ಆಗಿದ್ದಿತು. ಅವರೆ ದಾಮೂ ಆಚಾರ್ಯರ ಮಗ ಸುಧೀರ. ಆ ಪರಿಚಯ ಮತ್ತಷ್ಟು ಆಗಲು, ಅವರು ಇನ್ನೂ ನಿಕಟ ರಾಗಲು ಮತ್ತೆ ಎರಡು ದಶಕಗಳು ಕಳೆದವು. ಅವರಿಂದ ಕೇಳಿದ್ದು ಈ ಬಿಂದುಮಾಧವ ಅವರ ಬಗ್ಗೆ.
ಸುಧೀರ ಅವರಿಗೆ ಈ ವ್ಯಕ್ತಿ ಅವರ ಖಾಸ ಕಕ್ಕನ ಮೊಮ್ಮಗ. ಆಗ ಅವರಲ್ಲಿಯೂ ನಿಕಟ ಬಾಂಧವ್ಯವೇನೂ ಇರಲಿಲ್ಲ. ಆದರೆ ಪರಸ್ಪರರ ಇರುವಿಕೆ, ಹೆಸರು, ಎಲ್ಲಿದ್ದಾರೆ ಎಂಬ ಬಗ್ಗೆ ಒಂದು ಸ್ಥೂಲ ಕಲ್ಪನೆ ಇತ್ತು, ಅಷ್ಟೆ.
ಬಿಂದುಮಾಧವ ಮತ್ತು ಅವರ ವಿಧವಾ ತಾಯಿ ಆ ದಿನಗಳಲ್ಲಿ ಫುಲಬಾಗ ಗಲ್ಲಿಯಲ್ಲಿರುತ್ತಿದ್ದರು. ನಮ್ಮ ಮೊದಲ ಭೆಟ್ಟಿ ಆದುದು ಮೇ ೨, ೧೯೯೩ರಲ್ಲಿ, ಗುರುತು ಮಾಡಿಕೊಳ್ಳಲೆಂದು ಅವರ ಮನೆಗೆ ಹುಡುಕಿಕೊಂಡು ಹೋಗಿದ್ದೆ. ಅದೇನೂ ನಾನಿದ್ದ ಗೋಂಧಳಿಗಲ್ಲಿಯಿಂದ ಬಹಳ ದೂರದಲ್ಲಿದ್ದ ಓಣಿಯೇನಲ್ಲ. ಸುಮಾರು ಎರಡು ಕಿಲೊಮೀಟರ ಅಂತರದಲ್ಲಿ ಇದ್ದುದು.ಮೇಲಾಗಿ ಅದಕ್ಕೆ ಹತ್ತಿರದ ಇನ್ನೊಂದು ದಾರಿಯನ್ನು ನಿತ್ಯವೂ ನಾನು ಬಳಸುತ್ತಿದ್ದೆ. ನನ್ನ ಶಿಕ್ಷಕ ವೃತ್ತಿಯ ಕಾರಣದಿಂದ, ಕೆಲಸ ಮಾಡುತ್ತಿದ್ದ ಶಾಲೆಗೆ ಹೋಗಿ ಬರಲು.
ಅವರ ವ್ಯಕ್ತಿ ಪರಿಚಯ ಮಾಡಿಕೊಡುವ ಮೊದಲು ನಮ್ಮ ಪರಿಚಯವಾದ ವಿಷಯ ಹೇಳಬೇಕು ಅನಿಸಿತು. ಕಾಲ ಕಳೆದಂತೆ, ಹೊಸ ತಲೆಮಾರುಗಲು ಹುಟ್ಟಿದಂತೆ, ಸಂಬಂಧಗಳು ಸಡಿಲಗೊಂಡು, ಸಮೀಪವೆ ಇದ್ದರೂ ದೂರದವರಾಗಿದ್ದೆವು. ಬಂಧುಗಳೆ ಆಗಿದ್ದರೂ ಅಪರಿಚಿತರಾಗಿದ್ದೆವು. ಸಂಬಂಧ ಹೆಸರಿನದೊಂದೆ, ಮತ್ತೇನೂ ಇಲ್ಲ ಎಂಬುವಷ್ಟರ ಮಟ್ಟಿಗೆ ಅಜ್ಞಾನದಲ್ಲಿದ್ದೆವು. ಇರಲಿ, ಬಿಂದು ಮಾಧವ ಅವರ ಬಗ್ಗೆ ಹೇಲಬೇಕಾಗಿದೆ ಅಲ್ಲವೆ!
ಇವರ ಜನ್ಮ ದಿನಾಂಕ ೨೨ ಅಕ್ಟೋಬರ ೧೯೫೧. ಅದು ಖರ ನಾಮ ಸಂವತ್ಸರ, ಆಶ್ವಿನ ಮಾಸ, ಕೃಷ್ಣ ಪಕ್ಷ, ಸಪ್ತಮಿ, ಸೋಮವಾರ. ಹುಟ್ಟಿದ ಸ್ಥಳ ಬೆಳಗಾವಿಯ ಹೊರವಲಯದ, ಧಾರವಾಡಕ್ಕೆ ಹೋಗುವ ಹೆದ್ದಾರಿ ಮೇಲಿನ ಬಸ್ತವಾಡ ಗ್ರಾಮ. ಜನ್ಮ ನಕ್ಷತ್ರ ಪುನರ್ವಸು (೩ನೆ ಚರಣ), ಮಿಥುನ ರಾಶಿ. ಶಾಲಾ ದಾಖಲೆಯಲ್ಲಿ ನಮೂದಾದ ಜನ್ಮದಿನಾಂಕ ೨೨-೧೦-೧೯೫೨.
ಇನ್ನು ಬಾಲ್ಯ, ಕಲಿತ ಶಾಲೆಗಳ ವಿಷಯ. ತಂದೆ ಶ್ರೀನಿವಾಸ ಅವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದರು. ನೌಕರಿಯಲ್ಲಿ ಆಗಾಗ ಮತ್ತೊಂದು ಊರಿಗೆ ವರ್ಗವಾಗುವದು ಸಾಮನ್ಯವಲ್ಲವೆ! ಇವರೂ ಆ ಅವಧಿಯಲ್ಲಿ ರಾಯಬಾಗ, ಕೊಣ್ಣೂರ, ಹಲಕಿ ಮೊದಲಾದ ಉರುಗಳಲ್ಲಿ ಕೆಲಸ ಮಾಡಿದರು. ಹೀಗಾಗಿ ಬಿಂದುಮಾಧವ ಅವರ ಶಿಕ್ಷಣ ಓಂದೆ ಕಡೆ ಆಗಲಿಲ್ಲ. ಒಂದನೆ, ಎರಡನೆ ಇಯತ್ತೆ ರಾಯಬಾಗದಲ್ಲಿ, ೩ನೆ ಇಯತ್ತೆ ತಾಯಿಯ ತೌರೂರು ಬಸ್ತವಾಡದಲ್ಲಿ, ಮುಂದಿನ ೪, ೫,೬ನೆ ಇಯತ್ತೆ ಗೊಕಾಕದ ಹತ್ತಿರದ ಕೊಣ್ಣೂರಿನಲ್ಲಿ. ನಡೆದು, ಮಾಧ್ಯಮಿಕ ಶಿಕ್ಷಣ ಬೆಳಗಾವಿಯ ಬಿ.ಕೆ.ಮಾಡೆಲ ಹಾಯಸ್ಕೂಲಿನಲ್ಲಿ ನಡೆಯಿತು. ೧೯೭೦ರ ಎಪ್ರಿಲಿನಲ್ಲಿ ಎಸ್.ಎಸ್.ಎಲ್.ಸಿ ಪಾಸಾದರು. ಕಾಲೇಜ ಶಿಕ್ಷಣಕ್ಕಾಗಿ ಮತ್ತೆ ಬೇರೊಂದು ಊರಿಗೆ – ರಾಯಬಾಗ ಹತ್ತಿರ ಇರುವ ಶೇಡಬಾಳಕ್ಕೆ ಹೋಗಬೇಕಾಯಿತು. ಅಲ್ಲಿನ ಸನ್ಮತಿ ಶಿಕ್ಷಣ ಸಂಸ್ಥೆಯ ಕಾಲೇಜ ಆಫ ಕಾಮರ್ಸ ಸೇರಿ ೧೯೭೯ ರಲ್ಲಿ B.Com. ಆದರು.
ತಂದೆಯ ಮರಣ: ಈ ನಡುವೆ, ಇನ್ನೂ ಹಾಯಸ್ಕೂಲಿದ್ದಾಗಲೆ ಘೋರ ಘಟನೆಯೊಂದು ನಡೆದು ಹೋಯಿತು. ತಂದೆ ಒಮ್ಮೆಲೆ ಇಲ್ಲವಾದರು. ಯಾವ ರೋಗ ರುಜಿನದಿಂದ ಅಲ್ಲ. ರೈತನಿಂದಲೆ ಆದ ಕೊಲೆ. ಹೊಲದ ತಂಟೆಯ ಕಾರಣದಿಂದ ಬಂದೆರಗಿದ ದಾರುಣ ಮೃತ್ಯು. ಆಗ ಶ್ರೀನಿವಾಸ ಅವರು ಹಲಕಿಯಲ್ಲಿದ್ದರು. ಅಂದು ಸೆಪ್ಟೆಂಬರ ೧, ೧೯೬೭. (ನನ್ನ ತಮ್ಮ ೧೬ ವರ್ಷದ ನಾವು ರಾಜಾ ಎಂದು ಕರೆಯುತ್ತಿದ್ದ ಗುರುರಾಜ ಮುಂಬಯಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ತೀರಿಕೊಂಡಿದ್ದೂ ಅದೇ ದಿನ). ಕಡೆ ಶುಕ್ರವಾರ. ಶ್ರಾವಣ ಕೃಷ್ಣ ದ್ವಾದಶಿ. ಮುಂದೆ ಗಣಪತಿ ಹಬ್ಬ.
ಆಗ ಶ್ರೀನಿವಾಸ ಅವರಿಗೆ ಕೇವಲ ೪೧ ವರ್ಷ. ತಾಯಿ ಸುಶೀಲಾ ಅವರಿಗಿನ್ನೂ ವರ್ಷ ಮೂವತ್ತೂ ಆಗಿರಲಿಲ್ಲ. ಈ ಸಣ್ಣ ಹುಡುಗರನ್ನು ಬೆಳೆಸುವ ದೊಡ್ದ ಹೊಣೆ. ಆಗ ಪೆನಶೆನ ಕೂಡ ಸಿಗುತ್ತಿರಲಿಲ್ಲ.(ಎಷ್ಟೊ ವರ್ಷಗಳ ನಂತರ ಐದು ಸಾವಿರ ರೂಪಾಯಿ ಪೆನಶೆನ ಪ್ರತಿ ತಿಂಗಳು ಬರಹತ್ತಿತು). ಹಿರಿಯ ಮಗ ಬಿಂದು ಮಾಧವ ಇನ್ನೂ ಹದಿವಯದ, ಅದೇ ಹಾಯಸ್ಕೂಲ ಸೇರಿದ್ದ ಹುಡುಗ. ಇನ್ನೊಬ್ಬಾತ – ಪದ್ಮನಾಭ ಹತ್ತು ವರ್ಷದವ. ಸುಶೀಲಾ ಅವರ ತಮ್ಮ ಬಾಪೂ ಎಂಬುವರು ಅಕ್ಕನಿಗೆ ಐದಾರು ವರ್ಷ ಆಶ್ರಯವಾದರು. ಆ ದಿನಗಳಲ್ಲಿ ಅವರು ಬೆಳಗಾವಿಯಲ್ಲಿ ಅನಸೂರಕರ ಗಲ್ಲಿಯಲ್ಲಿದ್ದರು. ಬಿಂದು ಮಾಧವ ಅವರ ಮುಂಜಿವೆ ಸೋದರತ್ತೆ ಗಂಗೂತಾಯಿ ಅವರ ಮನೆಯಲ್ಲಿ ನಡೆಯಿತು. ಮುಂದಿನ ಶಿಕ್ಷಣದ ಜವಾಬುದಾರಿಯನ್ನು ಆತ್ತೆ ಮತ್ತು ಕಾಕಾ- ಗಂಗೂತಾಯಿ ಮತ್ತು ಗುರುರಾಜ ತೆಗೆದುಕೊಂಡರು. ಮದುವೆಯನ್ನು ಗಂಗೂತಾಯಿವರೆ ಮಾಡಿದರು.
ವೃತ್ತಿ ಜೀವನ: ಆಗಿನ ಪರಿಸ್ಥಿಯಲ್ಲಿ ತಮಗೆ ಬೇಕಾದ ಕೆಲಸ ಸಿಕ್ಕರೆ ಮಾತ್ರ ಒಪ್ಪಿಕೊಳ್ಳುವ ಆಯ್ಕೆ ಇರಲಿಲ್ಲ. ಪಾಲಿಗೆ ಬಂದದ್ದು ಪಂಚಾಮೃತವೆಂದುಕೊಳ್ಳುವ ಸ್ಥಿತಿ ಇದ್ದಿತು. ಅಂತಹ ಒಂದು ಕೆಲಸ ಶ್ರೀಮತಿ ಉಷಾತಾಯಿ ಗೋಗಟೆ ಹಾಯಸ್ಕೂಲಿನಲ್ಲಿ ಸಿಕ್ಕಾಗ ಒಪ್ಪಿಕೊಂಡು ನವೆಂಬರ ೧೯೭೫ ರಲ್ಲಿ ಸೇರಿದರು. ಆದರೆ ಡಿಗ್ರಿ ಪಡೆಯುವ ಹಂಬಲ ಅವರನ್ನು ಉದ್ಯೋಗದಲ್ಲಿದ್ದೂ ಕಲಿಕೆಯನ್ನು ಮುಂದುವರೆಸಲು ಹಚ್ಚಿತು. ಕೊನೆಗೂ ಆ ಆಸೆ ನೆರವೇರಿ ೧೯೭೯ ರಲ್ಲಿ B.Com. ಆದರು. ಅದೆ ಹೊತ್ತಿಗೆ ಕ್ಲರ್ಕ ಹುದ್ದೆಯ ಒಂದು ಕೆಲಸವೂ ಆ ಶಾಲೆಯಲ್ಲಿ ಲಭ್ಯವಾದಾಗ ಆಡಳಿತ ಮಂಡಳಿ ಆ ಸ್ಥಳಕ್ಕೆ- Second Division Assistant ಎಂದು ಇವರನ್ನು ನೇಮಿಸಿಕೊಂಡಿತು. ಈ ಬಢತಿ ಸಿಕ್ಕದ್ದು ೧೯೯೩ ಮಾರ್ಚ ೧೧ ರಂದು. ಹೀಗೆ ೩೭ ವರ್ಷಗಳ ಸುದೀರ್ಘ ಸೇವೆಯ ನಂತರ, ಅರವತ್ತು ವರ್ಷಗಳಾಗಿ, ೨೦೧೨ ರ ಅಕ್ಟೊಬರ ೩೧ರಂದು ನಿವೃತ್ತಿ ಹೊಂದಿದರು.
ವಿವಾಹ: ಬಿಂದುಮಾಧವ ಅವರ ಪತ್ನಿ ಸೌ. ಗೀತಾ ಇವರು ಹೊಳೆಹೊಸೂರಿನ ಕೃಷ್ಣಾಜಿ ಗೋವಿಂದ ಕುಲಕರ್ಣಿ ಮತ್ತು ಸೌ. ರುಕ್ಮಿಣಿ ಅವರ ಮಗಳು. ಮದುವೆ ನಡೆದದ್ದು ೭ ಜೂನ ೧೯೮೧ ರಂದು. ತೌರು ಮನೆ ಹೆಸರೆ ಅತ್ತೆಮನೆಯಲ್ಲಿಯೂ ಉಳಿದಿದೆ.
ಸೌ. ಗೀತಾ ತಮ್ಮ ತಂದೆತಾಯಿಯ ಐವರು ಹೆಣ್ಣು ಮಕ್ಕಳಲ್ಲಿ ಕೊನೆಯವರು. ಜನ್ಮ ದಿನಾಂಕ : ೨೭-೫-೧೯೫೬, ಹುಟ್ಟಿದ್ದು ಹೊಳೆ ಹೊಸೂರಿನಲ್ಲಿ. ಇದು ಬೈಲಹೊಂಗಲ ತಾಲೂಕಿನಲ್ಲಿ ನೇಗಿನಹಾಳದ ಹತ್ತಿರ ಇದೆ. ಎಸ್.ಎಸ್.ಎಲ್.ಸಿ ಪಾಸಾಗಿರುವ ಇವರು ಕಲಿತದ್ದು ಪಂ.ನೆಹರೂ ಹಾಯಸ್ಕೂಲ, ಶಹಾಪುರ- ಬೆಳಗಾವಿಯಲ್ಲಿ.
ಇವರ ಸೋದರಿಯರು : ೧.ಸೌ.ಕಮಲಾ ಜೋಶಿ, ಸಂಕೇಶ್ವರದ ಸಮೀಪದ ಅಮ್ಮಣಗಿಯಲ್ಲಿರುತ್ತಾರೆ. ೨. ಸುಧಾ ಆರ್. ಜೋಶಿ, ಇಟಗಿಯಲ್ಲಿರುತ್ತಾರೆ. ೩. ಪರಿಮಳಾ ಪ್ರಹ್ಲಾದ ಗೋಕಾಕಕರ, ಡೊಂಬಿವಲಿಯಲ್ಲಿರುತ್ತಾರೆ. ೪. ಶೋಭಾ ಅನಂತ ಅಧ್ವರ್ಯು, ಚಿದಂಬರ ನಗರ – ಬೆಳಗಾವಿಯಲ್ಲಿರುತ್ತಾರೆ. ಈ ಎಲ್ಲ ಸೋದರಿಯರ ತಂದೆ ಕೃಷ್ಣಾಜಿ ಮತ್ತು ತಾಯಿ ರುಕ್ಮಿಣಿ ಇಬ್ಬರೂ ಈಗ ತೀರಿಕೊಂಡಿದ್ದಾರೆ.
ಮಕ್ಕಳು : ಬಿಂದು ಮಾಧವ – ಸೌ.ಗೀತಾ ಈ ದಂಪತಿಗಳಿಗೆ ಶ್ರೀನಿವಾಸ ಮತ್ತು ಶ್ರೀನಾಥ ಎಂಬ ಇಬ್ಬರು ಗಂಡು ಮಕ್ಕಳು.
ಶ್ರೀನಿವಾಸ ಹುಟ್ಟಿದ್ದು ಬೆಳಗಾವಿಯಲ್ಲಿ ೮ ಸೆಪ್ಟೆಂಬರ ೧೯೮೩ರಂದು. ಅದು ರುಧಿರೋದ್ಗಾರಿ ಸಂವತ್ಸರ, ಭಾದ್ರಪದ ಶುಕ್ಲ ದ್ವಿತೀಯಾ, ಗುರುವಾರ. ನಕ್ಷತ್ರ ಉತ್ತರಾ (೩ನೆ ಚರಣ), ಕನ್ಯಾ ರಾಶಿ. ಪ್ರಾಥಮಿಕ ಶಿಕ್ಷಣ : ಶಾಲೆ ನಂ. ೭, ಫುಲಬಾಗ ಗಲ್ಲಿ, ಮಾಧ್ಯಮಿಕ : ಬಿ.ಕೆ. ಮಾಡೆಲ ಹಾಯಸ್ಕೂಲ, ಬೆಳಗಾವಿ, ಕಾಲೇಜು – ಗೋಗಟೆ ಕಾಲೇಜ ಆಫ ಕಾಮರ್ಸ. M.Com. ಮಾಡಿದ್ದು ಭೂತರಮನಟ್ಟಿ- ಬೆಳಗಾವಿ ಯ ಕರ್ನಾಟಕ ವಿಶ್ವ ವಿದ್ಯಾಲಯದ ಆವರಣ (campus). ಸಧ್ಯ ಬೆಳಗಾವಿಯಲ್ಲಿ ಮಾರುತಿ ಗಲ್ಲಿಯಲ್ಲಿರುವ ಶಿವಣಗಿ ಮತ್ತು ಲಾಟಕರ ಅವರ C.A. Office ದಲ್ಲಿ ಕೆಲಸ ಮಾಡುತ್ತ C.A. ಮಾಡುತ್ತಿದ್ದಾರೆ.
ಶ್ರೀನಾಥ ಹುಟ್ಟಿದ್ದು ಬೆಳಗಾವಿಯಲ್ಲಿ ೧೩ ಮಾರ್ಚ ೧೯೮೬ ರಂದು. ಅದು ಕ್ರೋಧನ ನಾಮ ಸಂವತ್ಸರ, ಫಾಲ್ಗುಣ ಶುಕ್ಲ ತೃತೀಯಾ, ಗುರುವಾರ, ನಕ್ಷತ್ರ ಅಶ್ವಿನಿ (೧ನೆ ಚರಣ), ಮೇಷ ರಾಶಿ. ಪ್ರಾಥಮಿಕ ಶಿಕ್ಷಣ : ಶಾಲೆ ನಂ.೨ ಕುಲಕರ್ಣಿ ಗಲ್ಲಿ. ಮಾಧ್ಯಮಿಕ : ಬಿ.ಕೆ. ಮಾಡೆಲ ಹಾಯಸ್ಕೂಲ, ಬೆಳಗಾವಿ, ಕಾಲೇಜು : ಲಿಂಗರಾಜ ಕಾಲೇಜ ಆಫ ಕಾಮರ್ಸ. B.Com. ಸಧ್ಯ ಇನಫೊಸಿಸದ ಪುಣೆಯ ಹಿಂಜೆವಾಡಿಯ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದಾರೆ.
ದೇವರು: ಬಿಂದುಮಾಧವ ಅವರ ಮನೆಯಲ್ಲಿ ಹಿರಿಯರಿಂದ ಬಂದ ದೇವತಾ ಮೂರ್ತಿಗಳಾವವೂ ಇಲ್ಲ. ಅವು ಬಹುಶಃ ಇವರ ಕಕ್ಕ ರಂಗಾಚಾರ್ಯರ ಕಡೆಗೆ ಉಳಿದವೇನೋ!! ನಿತ್ಯ ಪೂಜೆಗಾಗಿ ತಾವೇ ಪಂಢರಪುರಕ್ಕೆ ಹೋದಾಗ ತಂದ ವಿಟ್ಠಲ ರಖುಮಾಯಿ ಮೂರ್ತಿ, ಕಾಕಾ ಗೋಪಾಲ ಅವರು ಕೊಟ್ಟಿರುವ ಮಂತ್ರಾಲಯ ರಾಯರ ವೃಂದಾವನ ಮತ್ತು ತಾವೆ ತಂದಿದ್ದ ಡೊಗ್ಗಾಲು ಕೃಷ್ಣ ಇಷ್ಟು ದೇವರ ಪ್ರತಿಮೆಗಳು ಮಾತ್ರ ಇವೆ.
ಆಸ್ತಿಪಾಸ್ತಿ: ಇದ್ದ ಹೊಲಗಳನ್ನು ಹಿರಿಯರ ಕಾಲದಲ್ಲಿಯೆ ಮಾರಲಾಗಿತ್ತು. ಹಲಕಿ ಯಲ್ಲಿ ಹೊಲ ಮುರಗೋಡದಲ್ಲಿ ಜಂಬಿ ಭಾವಿಯಹತ್ತಿರ ಮನೆ ಇದ್ದಿತು. ಹಲಕಿಯಲ್ಲಿದ್ದಾಗಲೆ ಹೊಲದ ಕಾರಣದಿಂದಾಗಿ ತಂದೆಯ ಕೊಲೆಆಗಿತ್ತಷ್ಟೆ. ಬೆಳಗಾವಿಯಲ್ಲಿ ನೌಕರಿ ಮಾಡುತ್ತಿದ್ದಾಗ ಫುಲಬಾಗ ಗಲ್ಲಿಯಲ್ಲಿ ಕೆಲಕಾಲ, ನಂತರ ಮಹಾದ್ವಾರ ರೋಡಿನ ಮೇಲೆ ಇದ್ದ ಮತ್ತೊಂದು ಮನೆಯಲ್ಲಿ ಬಾಡಿಗೆಯಿಂದ ಇದ್ದುದು.
ಆಗ ಅವರ ಒಬ್ಬ ಸಹೊದ್ಯೋಗಿ ನಗರದ ಹೊರವಲಯದಲ್ಲಿ, ಸಾಂಬ್ರಾ ಹತ್ತಿರದ ಸಿಂಧೊಳ್ಳಿಯಲ್ಲಿನ ತಮ್ಮ ಜಮೀನಿನಲ್ಲಿ ನಿವೇಶನಗಳನ್ನು ಮಾಡಿ ಯೋಗ್ಯ ಬೆಲೆಗೆ ಮಾರಿದರು. ಗುರುತಿನವರಿಗೆ ಕೆಲ ಸೌಲಭ್ಯಗಳನ್ನೂ ಕೊಟ್ಟರು. ಅದರ ಪ್ರಯೋಜನ ಪಡೆದು ತೆಗೆದುಕೊಂಡಿದ್ದ ಅಲ್ಲಿನ ತಮ್ಮ ನಿವೇಶನದಲ್ಲಿ ಮನೆಯನ್ನು ಕಟ್ಟಿಕೊಂಡರು. ಅದೇ – ಗಂಗಾಧರ ನಗರ, ಬಿ. ಬ್ಲಾಕ, ಪ್ಲಾಟ ನಂ. ೩೫ರಲ್ಲಿದ್ದ “ಪಾಂಡುರಂಗ ಕೃಪಾ”, ಸಿಂಧೊಳ್ಳಿ (ಪೋಸ್ಟ – ಸಾಂಬ್ರಾ) – ೫೯೧೧೨೪. ಸ್ವಂತದಾದ ಈ ಮನೆಗೆ ೨೦೦೨ ಇಸವಿಯ ಕೊನೆಯಭಾಗದಲ್ಲಿ ಗೃಹ ಪ್ರವೇಶ ಮಾಡಿದರು. ತಾಯಿ ಸುಶೀಲಾ ಬಾಯಿ ಇದನ್ನೆಲ್ಲ ನೋಡಿ ಸಂತೋಷಪಟ್ಟಿದ್ದರು. ಈಗ ಅವರು ಇಲ್ಲ. ೨೦೧೬ರಲ್ಲಿ ತೀರಿಕೊಂಡರು.
ಯಾತ್ರೆ, ಪುಣ್ಯ ಕ್ಷೇತ್ರಗಳ ದರ್ಶನ: ತಮ್ಮ ಮದುವೆಯಾಗಿ ಐದು ವರ್ಷಗಳಾದ ಮೇಲೆ ೧೯೮೬- ೮೭ರಲ್ಲಿ (ಯಾವ ವರ್ಷ ಪಕ್ಕಾ ನೆನಪಿಲ್ಲ) ತಾವು, ಪತ್ನಿ ಸೌ. ಗೀತಾ ಮತ್ತು ನಲಿನಿ ಅತ್ತ್ಯಾ ಸೇರಿಕೊಂಡು ಮೊದಲ ಸಲ ಕುಲದೇವರಿಗೆಂದು ಪಂಢರಪುರಕ್ಕೆ ಹೋಗಿಬಂದರು. ಎರಡನೆ ಸಲ ಮತ್ತೆ ಐದು ವರ್ಷಗಳಾದ ನಂತರ ಗಂಡ ಹೆಂಡತಿ ಮತ್ತು ಮಗ ಶ್ರೀನಿವಾಸ ಸೇರಿ ೧೯೯೧-೯೨ ರಲ್ಲಿ, ೨೦೦೭ರಲ್ಲಿ ಹೆಂಡತಿ ಮತ್ತು ಹೆಂಡತಿಯ ಅಕ್ಕ ಮತ್ತು ಅವರ ಗಂಡ ಹೀಗೆ ಮೂರನೆಸಲ ಹೋಗಿ ಬಂದುದಾಗಿದೆ. ಲಗ್ನಒಂದರಲ್ಲಿ ಪಾಲ್ಗೊಳ್ಳಲೆಂದು ಹೋಗಿದ್ದಾಗ ಸ್ವಾದಿಯ ದರ್ಶನವೂ ಒಮ್ಮೆ ೨೦೧೩ರಲ್ಲಿ ಆಗಿದೆ.
ಇವರ ತಮ್ಮ ಪದ್ಮನಾಭ ಖಾನಾಪುರ ತಾಲೂಕಿನಲ್ಲಿ ದೇವರಾಯಿ ಸ್ಟೇಷನ್ನಿಗೆ ಹತ್ತಿರದ ಗೋಟಕಾಳೆಯಲ್ಲಿ ವೈದ್ಯರಾಗಿ ಪ್ರ್ಯಾಕ್ಟೀಸು ಮಾಡುತ್ತಿದ್ದಾರೆ. ವಿವಾಹಿತರು. ಶ್ರೀರಾಮ ಭಟ್ಟ ಎಂಬ ಮಗ ಇದ್ದಾನೆ.
ಬರೆದವರು : ಶ್ರೀಕಾಂತ ರಂ. ಮಂಗಳವೇಢೆ. ಮುಗಿದುದು : ಶುಕ್ರವಾರ, ಮಾಘ ಕೃಷ್ಣಪಕ್ಷ ಷಷ್ಟಿ/ ಸಪ್ತಮಿ ೧೭ ಫೆಬ್ರುವರಿ ೨೦೧೭ ಅಪರಾಹ್ನ ೪.೧೫ ಗಂಟೆ. ಆಧಾರ : ಬಿಂದು ಮಾಧವ ಅವರನ್ನು ೨-೫-೧೯೯೩, ೬-೧೨-೧೯೯೩ ರಂದು ಬೆಳಗಾವಿಯಲ್ಲಿ ಮತ್ತು ೧೭-೬-೨೦೧೫ರಂದು ಧಾರವಾಡದ ನಮ್ಮ ಮನೆಯಲ್ಲಿ ಭೆಟ್ಟಿಯಾಗಿ ಬರೆದುಕೊಂದ ಮಾಹಿತಿ.