ವ್ಯಕ್ತಿ ಪರಿಚಯ
ಮಂಗಳವೇಢೆ ಮನೆತನದಲ್ಲಿ ಇಬ್ಬರು ಕೊಲೆಗೊಂಡು ಮರಣಿಸಿದರು ಎಂಬುದು ಅತ್ಯಂತ ದುಃಖಕರ ಮತ್ತು ದುರ್ದೈವಿ ಸಂಗತಿ. ಒಬ್ಬರು ಎರಡನೆ ಟಿಸಿಲಿನ ಎಂಟನೆ ತಲೆಮಾರಿನವರು – ವೆಂಕಣ್ಣಾಚಾರ್ಯರ ಪುತ್ರ ಶ್ರೀನಿವಾಸ. ಶಿಕ್ಷಕನಾಗಿದ್ದ ವ್ಯಕ್ತಿ. ಹೊಲದ ತಂಟೆಯ ಕಾರಣವಾಗಿ ರೈತನೆ ಕೊಲೆ ಮಾಡಿದ, ಹಲಕಿಯಲ್ಲಿ, ಹೊಲದಲ್ಲಿಯೆ. ೧೯೬೭ರಲ್ಲಿ ಈ ಘೋರ, ದಾರುಣ ಘಟನೆ ನಡೆಯಿತು. ಅಗ ಶ್ರೀನಿವಾಸ ಇನ್ನೂ ನಲವತ್ತೊಂದು ವರ್ಷದವರು. ಇಬ್ಬರು ಮುಗ್ಧ ಮಕ್ಕಳು, ಒಬ್ಬ ಅದೇ ಹಾಯಸ್ಕೂಲಿನಲ್ಲಿ ಕಾಲಿಟ್ಟು ಒಂದೋ ಎರಡೊ ವರ್ಷ ಕಳೆದವ. ಎಸ್.ಎಸ್.ಎಲ್.ಸಿ ವರ್ಗಕ್ಕೂ ಬಂದಿರಲಿಲ್ಲ. ಇನ್ನೊಬ್ಬ ಆರು ವರ್ಷದ ಬಾಲಕ.
ಆದರೆ, ಇಂತಹ ದುರಂತ ಮಂಗಳವೇಢೆ ಮನೆತನದಲ್ಲಿ ಇದೆ ಮೊದಲಿನದಾಗಿರಲಿಲ್ಲ. ಶ್ರೀನಿವಾಸ ಅವರ ಕೊಲೆಯ ಹದಿನೇಳು ವರ್ಷಗಳ ಮುಂಚೆಯೆ ಮೊದಲನೆಯದು ಘಟಿಸಿ ಹೋಗಿತ್ತು.ಮೂರನೆ ಟಿಸಿಲಿನ ಏಳನೆ ತಲೆಮಾರಿನ ಕುಲಮನಟ್ಟಿ ತಮ್ಮಣ್ಣನೆಂದೆ ಪರಿಚಿತ ಆಗಿದ್ದ ಮಧ್ವಾಚಾರ್ಯ ಎಂಬ ಹೆಸರಿನ ವ್ಯಕ್ತಿಯ ಕೊಲೆಯೂ ಇಂತಹದೆ ಕಾರಣದಿಂದ ೧೯೫೦ರಲ್ಲಿಯೆ ಆಗಿತ್ತು. ಇದ್ದ ಒಬ್ಬ ಮಗ ರಂಗ ಎನ್ನುವವರನ್ನು ದತ್ತಕ ಕೊಟ್ಟಿದ್ದರು. ಕೊಲೆಗೀಡಾದ ತಮ್ಮಣ್ಣ ಅವರ ತಂದೆಯ ಹೆಸರೂ ವೆಂಕಟಾಚಾರ್ಯ ಎಂದೆ ಇದ್ದುದು ಒಂದು ಆಕಸ್ಮಿಕ.
ತಮ್ಮಣ್ಣ ಅವರ ಕೊಲೆ ಮತ್ತೂ ಒಂದು ದುರಂತದಲ್ಲಿ ಕೊನೆಗೊಂಡಿತ್ತು. ಅವರ ಅಜ್ಜ ಬಿಂದಾಚಾರ್ಯರು (ಧಾರವಾಡದಲ್ಲಿ ವನಿತಾ ಸೇವಾ ಸಮಾಜ ಎಂಬ ಶಿಕ್ಷಣ ಸಂಸ್ಥೆಯ ಸಂಸ್ಥಾಪಿಕೆ ಭಾಗೀರಥಿಬಾಯಿ ಪುರಾಣಿಕ ಅವರ (ತಂದೆ ವಾಮನಾಚಾರ್ಯರ ತಂದೆ)- ಅಜ್ಜ. ಅವರಿಗೆ ನಾಕು ಗಂಡು ಮಕ್ಕಳಾಗಿದ್ದರೂ ಮೂವರಿಗೆ ಪುತ್ರ ಸಂತಾನವಾಗದೆ ವಂಶದ ಬಳ್ಳಿ ಮುರುಟಿದ್ದಿತು, ನಾಕನೆಯ ವೆಂಕಟಾಚಾರ್ಯ ಮಗನ ಕೊಲೆಯಾಗಿ ಹೋಯಿತು ಮತ್ತು ಮೊಮ್ಮಗ ದತ್ತಕ ಹೋಗಿದ್ದ. ಇದರಿಂದಾಗಿ ಬಿಂದಾಚಾರ್ಯರ ಸಂತಾನ ಪೂರ್ನವಾಗಿ ಮುರುಟಿ ಹೋಯಿತು.
ಇರಲಿ, ಶ್ರೀನಿವಾಸ ಅವರ ವಿಷಯಕ್ಕೆ ಹೊರಳೋಣ. ಅವರದು ಎಷ್ಟೆ ದಾರುಣ ಅಂತ್ಯವಾಗಿರಲಿ, ಮಕ್ಕಳು ಬೆಳೆದು ದೊಡ್ಡವರಾದರು. ಅದು ದೇವರ ಕೃಪೆ. ಅದು ಸಮಾಧಾನದ ಸಂಗತಿ.
ಅವರು ಹುಟ್ಟಿದ್ದು ೧೯೨೬ ರಲ್ಲಿ ಎಂದು ಅವರ ಮಗ ಬಿಂದುಮಾಧವ ಆ ಇಸವಿಯನ್ನು ಮಾತ್ರ ಹೇಳಿದ್ದರು. ಮುಂದೆ ಮೊಮ್ಮಗ ಶ್ರೀನಿವಾಸ ತಮ್ಮ ಅಜ್ಜ- ಅಜ್ಜಿ ಮದುವೆಯಾದ ಹೊಸದಾಗಿ ತೆಗೆಸಿಕೊಂಡ ಫೋಟೊ ಮತ್ತು ಆ ಕಾಲದ, ೧೯೪೩ರಲ್ಲಿ ಪ್ರಾಯಮರಿ ಸ್ಕೂಲ ಲೀವಿಂಗ ಸರ್ಟಿಫಿಕೇಟ ಎಕ್ಸಾಮಿನೇಶನ ಪಾಸಾದ ಸರ್ಟಿಫಿಕೇಟದ ಫೋಟೊಪ್ರತಿಯನ್ನು ಸ್ಕ್ಯಾನ ಮಾಡಿ ಇ ಮೇಲ ಕಳಿಸಿದ್ದರು.ಅದರಲ್ಲಿ ಅವರ ಜನ್ಮ ದಿನಾಂಕ ೨-೧-೧೯೨೬ ಎಂದು ದಾಖಲಾಗಿದ್ದುದು ಗೊತ್ತಾಯಿತು.
ನನ್ನ ಹತ್ತಿರ “ಪನ್ನಾಸ ವರ್ಷಾಂಚೆ ಪಂಚಾಂಗ” ಎಂಬ ಹೆಸರಿನ ಐವತ್ತುವರ್ಷಗಳ ಪಂಚಾಂಗ (ಶಕೆ ೧೮೦೧ ರಿಂದ ೧೮೫೦ರ ವರೆಗಿನ ಅಂದರೆ ೧೮೭೯ ರಿಂದ ೧೯೨೯ ನೆ ಇಸವಿಯ ವರೆಗಿನ) ಶಂಕರ ನರಹರ ಜೋಶಿಯವರು ಸಂಗ್ರಹಿಸಿದ ಚಿತ್ರಶಾಳಾ, ಪುಣೆ ಇವರು ಪ್ರಕಟಿಸಿರುವ ಪಂಚಾಂಗ ಸಂಗ್ರಹವಿದೆ. ಅದರಲ್ಲಿ ಈ ತಾರೀಖನ್ನು ಹುಡುಕಿದಾಗ ಅದು ಶಕೆ ೧೮೪೭ ಕ್ರೋಧನ ನಾಮ ಸಂವತ್ಸರ, ಪೌಷ್ಯ ಕೃಷ್ಣ ತೃತೀಯಾ, ಶನಿವಾರ ವೆಂದು ಗೊತ್ತಾಯಿತು. ಅದರಲ್ಲಿ ಹುಟ್ಟಿದ ಊರು ಕೊಟ್ಟಿಲ್ಲ.
ಅವರ ಶಿಕ್ಷಣ ಮುಲ್ಕಿ ಪರೀಕ್ಷೆ (ಈಗಿನ ೭ನೆ ಇಯತ್ತೆ) ಪಾಸಾಗಿದ್ದರು. ಅದೇ ನಾನು ಈ ಮೊದಲು ಉಲ್ಲೇಖಿಸಿದ ಪರೀಕ್ಷೆ. ಬೈಲಹೊಂಗಲ ಕೇಂದ್ರದಿಂದ ಅವರು ೧೯೪೩ರ ಎಪ್ರಿಲಿನಲ್ಲಿ ನಡೆದ ಈ ಪರೀಕ್ಷೆಯನ್ನು ಪಾಸಾಗಿದ್ದರು. ಆ ಕಾಲದಲ್ಲಿ ಸರಕಾರಿ ನೌಕರಿಗೆ ಇದು ಅರ್ಹತೆ ಕೊಡುತ್ತಿತ್ತು. ಮುಂದೆ ಸಾಂಗಲಿ ಸಂಸ್ಥಾನದಲ್ಲಿ ಒಂದು ವರ್ಷದ ಶಿಕ್ಷಕ ತರಬೇತಿಯನ್ನೂ ಪಡೆದರು.
ಪ್ರಾಥಮಿಕ ಶಾಲಾ ಶಿಕ್ಷಕ ನೆಂದು ಕೆಲಸ ಸಿಕ್ಕು ಮಾವಿನಕಟ್ಟೆಯಿಂದ ವೃತ್ತಿ ಜೀವನ ಶುರುವಾಯಿತು. ಆಗಾಗ ವರ್ಗವಾಗುತ್ತ, ಬಾಳೆಕುಂದ್ರಿ, ರಾಯಬಾಗ, ಕೊಣ್ಣೂರ ಮತ್ತು ಕೊನೆಯಲ್ಲಿ ಹಲಕಿ ಈ ಸ್ಥಳಗಳಲ್ಲಿ ಕೆಲಸ ಮಾಡಿದರು. ಹಲಕಿಯಲ್ಲಿ ಕೊಲೆಯಾಯಿತು, ಹೊಲದ ತಂಟೆಯಿಂದಾಗಿ. ಆ ಗ್ರಾಮ ಮುರಗೋಡದ ಸಮೀಪವೇ ಇದ್ದಿತಾಗಿ ಅಲ್ಲಿನ ತಮ್ಮ ಮನೆಯಲ್ಲಿಯೆ ಇರುತ್ತಿದ್ದರು. ಕೊಲೆಯಾಗಿ ಮರಣ ಹೊಂದಿದ್ದು ೧-೯-೧೯೬೭. ಅದು ಶಕೆ ಕಾಲಯುಕ್ತ ನಾಮ ಸಂವತ್ಸರ, ಶ್ರಾವಣ ಕೃಷ್ಣ ಪಕ್ಷ ದ್ವಾದಶಿ, ಶುಕ್ರವಾರ. ಹಿಗೆ ೪೧ ವರ್ಷ ಬದುಕಿದ್ದರು.
ಯಾವ ಹೊಲದ ರೈತರು ಕೊಲೆ ಮಾಡಿದರೊ ಆ ಹೊಲ ಇವರಿಗೆ ಅರಣ್ಯ ಇಲಾಖೆಯಲ್ಲಿ ರೇಂಜರ ಹುದ್ದೆಯಲ್ಲಿದ್ದ ಮತ್ತು ಬೆಳಗಾವಿ ಬಸವನ ಗಲ್ಲಿಯಲ್ಲಿದ್ದ ಅಪ್ಪಣ್ಣಾಚಾರ್ಯ ಪುರೋಹಿತ ಅವರು ೧೯೪೨ ರಲ್ಲಿ ಕೊಟ್ಟದ್ದು. ಈ ಅಪ್ಪಣ್ಣಾಚಾರ್ಯ ಪುರೋಹಿತರೆಂದರೆ ಶ್ರೀನಿವಾಸ ಅವರ ತಮ್ಮ ವಿಟ್ಠಲ (ಪುಣೆಯಲ್ಲಿ ರಾಸ್ತಾ ಪೇಟದಲ್ಲಿದ್ದವರು) ಅವರ ತಾಯಿಯ ತಂದೆ- ಅಜ್ಜ. “ಡಿ ಫೊರೆಸ್ಟ” ಅವರನ್ನು ಹಣ್ಣು ಮಾಡಿತ್ತು ಈ ವಿಷಯವನ್ನು ವಿಟ್ಠಲ ಅವರೆ ನನಗೆ ಹೇಳಿದ್ದರು.
ಆಗ ನನಗೆ ಶ್ರೀನಿವಾಸ ಅವರ ಕೊಲೆ, ಮತ್ತು ಅದರ ಕಾರಣ ಈ ಹಿನ್ನೆಲೆ ಗೊತ್ತಿರಲಿಲ್ಲ. ಹೇಳಿದ್ದನ್ನು ಬರೆದುಕೊಂಡಿದ್ದೆನಷ್ಟೆ. ಅಪ್ಪಣ್ಣಾಚಾರ್ಯ ಪುರೋಹಿತರನ್ನು ಹಣ್ಣು ಮಾಡಿದ್ದ “ಡಿ ಫೊರೆಸ್ಟ್” ಮತ್ತು ಅದನ್ನು ಇವರಿಗೆ (ಅಂದರೆ ಯಾರಿಗೆ) ಕೊಟ್ಟಿದ್ದು ಏಕೆ, ಮತ್ತು ಆ ವಿವಾದ ಏನಿತ್ತು, ಆ ಕುರಿತು ಹೆಚ್ಚು ಕೇಳದೆ ಹೋಗಿದ್ದೆ. ಹೀಗಾಗಿ ಈ ಘಟನೆಯ ಆದ್ಯಂತ ನನಗೆ ತಿಳಿಯದು.
ಅವರು ಬೆಳಗಾವಿಗೆ ಅಕ್ಕ ಗಂಗೂತಾಯಿ ಕಡೆಗೆ ಬಂದಾಗ, ನನ್ನ ಮನೆಗೂ ಬಂದು ಗುರುತು ಮಾಡಿಕೊಂಡು, ಮಾಹಿತಿಕೊಟ್ಟು ಹೋಗಿದ್ದರು. ಅದೂ ನಾನು ಗಂಗೂತಾಯಿಯವರಲ್ಲಿ ನಾನು ಹಿಂದೆ ಮಾಡಿಕೊಂಡಿದ್ದ ವಿನಂತಿಯ ಮೇರೆಗೆ. ಈ ಭೆಟ್ಟಿ ೧೯೯೩ ಅಥವಾ ೧೯೯೪ರಲ್ಲಿ ಆದದ್ದು.
ಇರಲಿ, ಮತ್ತೆ ಶ್ರೀನಿವಾಸ ಅವರ ಜೀವನದ ಕೇಳಿ ತಿಳಿದ ಇತರ ವಿವರಗಳತ್ತ ಹೊರಳುವೆ.
ಮದುವೆ: ಬಹುಶ: ೧೯೪೮ರಲ್ಲಿ ನಡೆದಿರಬಹುದು. ಅಗ ಅವರಿಗೆ ೨೨ ವರ್ಷ ವಯಸ್ಸು. ” ಮದುವೆಯಾದಾಗ ಅವರಿಗಿನ್ನೂ ಇಪ್ಪತ್ತು ವರ್ಷಗಳೂ ಆಗಿರಲಿಲ್ಲ. ನಾನು ಆಗ ಹದಿನೈದು ವರ್ಷದವಳು” ಎಂದು ಸುಶೀಲಬಾಯಿಯವರು – ಅವರನ್ನು ಗುರುತು ಮಾಡಿಕೊಳ್ಳಲೆಂದು ಫುಲಬಾಗ ಗಲ್ಲಿಯ ೨೨೪ / ೧೧೦ ನಂ. ಮನೆಗೆ ೨-೫-೧೯೯೩ರಲ್ಲಿ ಹೋಗಿದ್ದಾಗ ಹೇಳಿದ್ದನ್ನು ಟಿಪ್ಪಣಿ ಬರೆದಿಟ್ಟುಕೊಂಡಿದ್ದೆ. ಆಗ ಪತಿ ಶ್ರೀನಿವಾಸ ಅವರಿಗೆ ಬಾಳೆಕುಂದ್ರಿಯಲ್ಲಿ ಕೆಲಸವಿದ್ದಿತು- ಅಲ್ಲಿ ಬಾಡಿಗೆ ಮನೆಯಲ್ಲಿ ಇದ್ದರು ಎಂದೂ ನೆನಪು ಮಾಡಿಕೊಂಡಿದ್ದರು.
ಸುಶೀಲಾ ಅವರ ತೌರು ಮನೆ ಹೆಸರು ಶಕುಂತಲಾ. ನಾಕನೆ ಇಯತ್ತೆಯ ವರೆಗೆ ಶಿಕ್ಷಣವಾಗಿದ್ದಿತು. ದಾರವಾಡ ರಸ್ತೆ – ಪುಣೆ ಬೆಂಗಳೂರು ರಾಶ್ಟ್ರೀಯ ಹೆದ್ದಾರಿಯ ಮೇಲೆ ಬೆಳಗಾವಿಯ ಹೊರವಲಯದಲ್ಲಿರುವ ಬಸ್ತವಾಡ ಗ್ರಾಮದಲ್ಲಿ ಹುಟ್ಟಿದವರು. ಅಲ್ಲಿನ ವೈಜನಾಥ ಕುಲಕರ್ಣಿ ಮತ್ತು ಪುಟ್ಟಕ್ಕ ಇವರ ಎರಡನೆ ಮಗಳು. ಕುಲಕರ್ಣಿಯವರು ಅಲ್ಲಿ ತಮ್ಮ ಹೊಲ ಮನೆಗಳನ್ನು ನೋಡಿಕೊಂಡು ಇದ್ದರು.
ಈ ದಂಪತಿಗಳಿಗೆ ಚೊಚ್ಚಲ ಮಗನಾಗಿ ಕಿರಣ ಎಂಬ ಹುಡುಗ ಹುಟ್ಟಿದ್ದ. ಆದರೆ ೨-೩ ವರ್ಷದವನಾಗಿದ್ದಾಗಲೆ ತೀರಿಕೊಂಡ. ನಂತರ ಹುಟ್ಟಿದ್ದು ಬಿಂದು ಮಾಧವ (೨೨-೧೦- ೧೯೫೧) ಮತ್ತು ಪದ್ಮನಾಭ (೧೯೫೭). ಬಿಂದುಮಾಧವ ಬೆಳಗಾವಿಯ ಹಾಯಸ್ಕೂಲ ಒಂದರಲ್ಲಿ ಕ್ಲರ್ಕ ಅಗಿ ನಿವೃತ್ತರಾಗಿ, ಸಿಂಧೊಳ್ಳಿಯಲ್ಲಿ ಮನೆ ಮಾಡಿಕೊಂದು ಇದ್ದಾರೆ. ಅವರಿಗೆ ಇಬ್ಬರು ಮಕ್ಕಳು – ಶ್ರೀನಿವಾಸ M.com. ಮಾಡಿ ಈಗ C.A. ಆಗಲು ಪರೀಕ್ಷೆಗಳಿಗೆ ಕೂಡುತ್ತಿದ್ದಾರೆ. ಶ್ರೀನಾಥ B.Com. ಅಗಿ ಇನಫೊಸಿಸ ದಲ್ಲಿ, ಹಿಂಜೆವಾಡಿ- ಪುಣೆಯಲ್ಲಿ ಇದ್ದಾರೆ
ಸುಶೀಲಾ ಅವರ ಒಡಹುಟ್ಟಿದವರು: ೧. ವನಮಾಲಾ, ಕೊಲ್ಲಾಪುರದ ಕೃಷ್ಣಾಜಿ ಅಥಣಿಕರ ಅವರ ಪತ್ನಿ. ೨ ಶಕುಂತಲಾ (ಶ್ರೀನಿವಾಸ ಅವರ ಪತ್ನಿ, ಬಿಂದುಮಾಧವ ಮತ್ತು ಪದ್ಮನಾಭ ಅವರ ತಾಯಿ), ೩. ಬಾಪೂ ವೈ. ಕುಲಕರ್ಣಿ, ಕೇಳಕರ ಬಾಗ- ಬೆಳಗಾವಿ- ಅಕ್ಕ ಆ ಚಿಕ್ಕ ವಯಸ್ಸಿನಲ್ಲಿಯೆ ವಿಧವೆ ಯಾದಾಗ ಕೆಲ ವ₹ರ್ಷ ಆಶ್ರಯ ಕೊಟ್ಟವರು. ೪. ಶಶಿಕಾಂತ, ನೇವಿಯಲ್ಲಿದ್ದು ನಿವೃತ್ತಿ ಪಡೆದಿದ್ದು ಹಡಪಸರ – ಪುಣೆಯಲ್ಲಿದ್ದಾರೆ. ೫. ದಿ. ಲೀಲಾ, ಇಟಗಿಯಲ್ಲಿ ಪೋಸ್ಟ ಮಾಸ್ತರ ಆಗಿದ್ದ ದಿ.ಆರ್.ಎ. ಕುಲಕರ್ಣಿಯವರ ಪತ್ನಿ ೬. ದಿ. ಪ್ರಭಾಕರ, ಹೊಲ ಮನೆ ನೋಡಿಕೊಂಡು ಬಸ್ತವಾಡ ದಲ್ಲಿದ್ದರು.
ಹೀಗೆ ಶ್ರೀನಿವಾಸ ಅವರ ಮಕ್ಕಳು ಬಿಂದು ಮಾಧವ ಮತ್ತು ಪದ್ಮನಾಭ ಇವರಿಗೆ ಮೂವರು ಮಾವಶಿಗಳು ಮತ್ತು ಮೂರು ಸೋದರಮಾವಂದಿರು.
ಬರೆದವರು : ಶ್ರೀಕಾಂತ ರಂ. ಮಂಗಳವೇಢೆ ; ಆಧಾರ : ಶ್ರೀನಿವಾಸ ಅವರ ಪುತ್ರ ಬಿಂದುಮಾಧವ ಅವರು ಕೊಟ್ಟ ಮಾಹಿತಿ ; ಮುಗಿದುದು : ರವಿವಾರ, ೧೮-೨-೨೦೧೭ 8.30 A.M.