ಬಾಳಾಚಾರ್ಯ
ಬಾಳಾಚಾರ್ಯ | ಹುಟ್ಟಿದ ದಿನಾಂಕ: 1903-05-05 | ಮರಣ ದಿನಾಂಕ: 1993-09-31 | |
ತಂದೆ: ಬಂಡಾಚಾರ್ಯ | ತಾಯಿ: | ||
ಮಕ್ಕಳು: ಕಾಂತಾ, ಲಕ್ಷ್ಮೀನರಸಿಂಹ (ಅಣ್ಣಪ್ಪ), ಯಾದವ, ಬಂಡಾಚಾರ್ಯ, ಸೇತೂಬಾಯಿ, ಮಾಯಾವತಿ, ಗೋವರ್ಧನಾಚಾರ್ಯ | |||
ಒಡಹುಟ್ಟಿದವರು: ಪಾಂಡುರಂಗಾಚಾರ್ಯ, ಸ್ವಾಮಿರಾಚಾರ್ಯ / ಕೃಷ್ಟಾಚಾರ್ಯ(?) | Branch: 1 | Generation: 7 |
ವ್ಯಕ್ತಿ ಚಿತ್ರ
ದಿ. ಪಂ.ಬಾಳಾಚಾರ್ಯ ಬಂಡಾಚಾರ್ಯ ಮಂಗಳವೇಢೆ
ಯಕ್ಕುಂಡಿಯಲ್ಲಿದ್ದ ಮಧ್ವಾಚಾರ್ಯರ (ಮದ್ದಂಭಟ್ಟರ) ಪ್ರಪೌತ್ರ, ಬಾಳಾಚಾರ್ಯರ ಪೌತ್ರ, ಬಂಡಾಚಾರ್ಯರ ಪುತ್ರ. ಹುಬ್ಬಳ್ಳಿಯಲ್ಲಿ ವಾಸವಾಗಿದ್ದವರು.
ಕಿರು ಪರಿಚಯ
ಒಂದನೆಯ ಟಿಸಿಲಿನ ಏಳನೆಯ ತಲೆಮಾರಿನ ವ್ಯಕ್ತಿ
ಮಾಣಿಕ ಭಟ್ಟ > ಬಾಳಂ ಭಟ್ಟ (ಬಾಳಕೃಷ್ಣ ಭಟ್ಟ ಜೋಶಿ) > ಮಧ್ವಾಚಾರ್ಯ (ಮದ್ದಂ ಭಟ್ಟ) > ಬಾಳಾಚಾರ್ಯ > ಬಂಡಾಚಾರ್ಯ > ಬಾಳಾಚಾರ್ಯ
ಒಂದು ಟಿಪ್ಪಣಿ: ಅಜ್ಜ ಮೊಮ್ಮಗನನ್ನು ದತ್ತಕ ತೆಗೆದುಕೊಂಡಿದ್ದರಿಂದಾಗಿ ಜನಕ ತಂದೆಯ ಹೆಸರು ಬಿಟ್ಟು ಹೋಗಿದೆ. ಅಷ್ಟೆ ಅಲ್ಲ, ಅದರಿಂದಾಗಿ ಒಂದು ತಲೆಮಾರೂ ಕಡಿಮೆಯಾಗಿದೆ, ಹೀಗಾಗಿ ಬಾಳಾಚಾರ್ಯರು ಆರನೆ ತಲೆಮಾರಿನವರಾಗಿದ್ದಾರೆ. ಆದರೆ, ವಾಸ್ತವದಲ್ಲಿ ಅವರು ಏಳನೆಯ ತಲೆಮಾರಿನವರು.
ದತ್ತಕದ ಆ ಪ್ರಸಂಗ- ಮೂರನೆ ತಲೆಮಾರಿನ ಮಧ್ವಾಚಾರ್ಯರ ಪುತ್ರ ಎಂದು ತೋರಿಸಿದ ಬಾಳಾಚಾರ್ಯ, ವಾಸ್ತವದಲ್ಲಿ ದತ್ತಕವಾಗಿ ಬಂದ ಐದನೆ ತಲೆಮಾರಿನ ಮೊಮ್ಮಗ. ನಿಜವಾದ ಒಬ್ಬ ಮಗನೂ ಇದ್ದ. ಆತನ ಹೆಸರೂ ಬಾಳಾಚಾರ್ಯ ಎಂದೇ ಇದ್ದಿತು. ಆದರೆ ಆ ಮಗ ನಿಪುತ್ರಕನಾಗಿಯೆ ಬಹುಶಃ ತೀರಿಹೋಗಿದ್ದರಿಂದ, ಮಧ್ವಾಚಾರ್ಯರ ಸಂತತಿ ನಿಂತು ಹೋಗುವ ಸಂಭವ ಉಂಟಾಯಿತು. ಆಗ ಅವರು ತಮ್ಮ ಅಣ್ಣ ಪಾಂಡುರಂಗಾಚಾರ್ಯರ ಮೊಮ್ಮಗನನ್ನು (ಅಂದರೆ ಕಾಂತಾಚಾರ್ಯರ ಎರಡನೆ ಮಗ. ಈತನ ಹೆಸರೂ ಬಾಳಾಚಾರ್ಯ) ದತ್ತಕ ಪುತ್ರನಾಗಿ ತೆಗೆದುಕೊಂಡಿದ್ದರಿಂದ, ಅವರ ಜನಕ ತಂದೆ ನಾಕನೆ ತಲೆಮಾರಿನ ಕಾಂತಾಚಾರ್ಯರ ಹೆಸರೆ ಬಿಟ್ಟು ಹೋಗಿ ಈ ಭ್ರಮೆ ಉಂಟಾಗಿದೆ.
ಜನ್ಮ ದಿನಾಂಕ: ೫ ಮೇ ೧೯೦೩
ಮರಣ: ೩೧ ಸಪ್ಟೆಂಬರ ೧೯೯೩
ಸಂಸ್ಕೃತ ಪಂಡಿತರು, ವೇದಾಂತ, ಉಪನಿಷತ್, ನ್ಯಾಯಸುಧಾ ಇತ್ಯಾದಿಗಳ ಅಭ್ಯಾಸ ಮಾಡಿದವರು.
ಮೊದಲ ಪತ್ನಿ: ತುಳಸಾಬಾಯಿ. ಇವರ ನಿಧನಾ ನಂತರ ಮತ್ತೆ ಮದುವೆ. ಎರಡನೆ ಪತ್ನಿ: ಶಾಂತಾಬಾಯಿ ಮಕ್ಕಳು: ಮೂರು ಹೆಣ್ಣು ಮತ್ತು ನಾಲ್ಕು ಗಂಡು, ಹೀಗೆ ಒಟ್ಟು ಏಳು ಮಕ್ಕಳು. ತುಳಸಾಬಾಯಿಯ ಹೊಟ್ಟೆಯಿಂದ – ೧. ಕಾಂತಾ ೨. ಲಕ್ಷ್ಮೀನರಸಿಂಹ ೩. ಯಾದವ ೪. ಬಂಡಾಚಾರ್ಯ ಶಾಂತಾಬಾಯಿಯ ಹೊಟ್ಟೆಯಿಂದ – ೧. ಸೇತೂಬಾಯಿ ೨. ಮಾಯಾವತಿ ೩. ಗೋವರ್ಧನ.
ವಾಸವಾಗಿದ್ದುದು – ೪೭೪೭, ತೊರವಿಗಲ್ಲಿ (ರಾಯರ ಮಠದ ಹತ್ತಿರ), ಹುಬ್ಬಳ್ಳಿ
ವ್ಯಕ್ತಿ ಪರಿಚಯ
ನಮ್ಮ ಮೊದಲ/ ಕೊನೆಯ ಭೆಟ್ಟಿಯ ಕೆಲ ನೆನಪುಗಳು
ಕವಿ ಕೋಕಿಲ, ಕಾವ್ಯ ಭೂಷಣ, ಮಹಾ ಭಾಗವತಾಚಾರ್ಯ ಎಂಬೆಲ್ಲ ಬಿರುದಾಂಕಿತರು ಮತ್ತು ತಮ್ಮ ಸಂಸ್ಕೃತ ಭಾಷಾ ಪಾಂಡಿತ್ಯಕ್ಕಾಗಿ ಕೇಂದ್ರದಿಂದ ಪ್ರಶಸ್ತಿಯನ್ನು ಪಡೆದಿದ್ದ ದಿ. ಪಂಡಿತ ಬಾಳಾಚಾರ್ಯರ ಈ ಪರಿಚಯ ಲೇಖನವನ್ನು ಬರೆಯುವಾಗ, ಇವರು ನಮ್ಮ ಮನೆತನದಲ್ಲಿ ಆಗಿಹೋದ ಹಿರಿಯರು ಎಂಬ ಹೆಮ್ಮೆಯ ಭಾವ ನನ್ನಲ್ಲಿ ತುಂಬಿದೆ.
ಅವರ ಬಗ್ಗೆ ನನ್ನಲ್ಲಿ ಕುತೂಹಲ ಹುಟ್ಟಿದ್ದು ಅವರು ನಮ್ಮ ಅಡ್ಡ ಹೆಸರನ್ನೆ ಉಳ್ಳವರಾಗಿದ್ದು. ಒಬ್ಬ ಸಂಸ್ಕೃತ ವಿದ್ವಾಂಸ, ಪಂಡಿತ ಎಂದು ಕೇಳಿದ್ದೆ. ಹುಬ್ಬಳ್ಳಿಯಲ್ಲಿ ತೊರವಿ ಗಲ್ಲಿಗೆ ಹೋದರಾಯಿತು, ಅಲ್ಲಿ ಸುಲಭವಾಗಿ ಸಿಗುವ ವಿಳಾಸ ಅವರದು ಎಂದೂ ತಿಳಿದಿತ್ತು. ನಿಮಿತ್ತ ಒಂದರಿಂದ ಆ ಸಲ ಅಲ್ಲಿಗೆ ಹೋದಾಗ, ಈ ಹಿರಿಯ ವ್ಯಕ್ತಿ ನಮ್ಮ ಬಳಗದವರೊ ಹೇಗೆ ಎಂಬುದನ್ನು ತಿಳಿದುಕೊಳ್ಳಬೇಕೆಂಬ ಕುತೂಹಲದಿಂದ ಭೆಟ್ಟಿಯಾದೆ. ಅದೆ ನಮ್ಮ ಮೊದಲ ಭೆಟ್ಟಿ. ಅದನ್ನು ಮರೆಯಲಾರೆ.
ಆ ಒಂದು ದಿನವೇ ಅವರನ್ನು ಎರಡು ಸಲ ಭೆಟ್ಟಿಯಾಗಿದ್ದೆ. ಸಂದರ್ಶನದಲ್ಲಿ ಅವರು ಹೇಳಿದ್ದನ್ನೆಲ್ಲ ಟಿಪ್ಪಣಿ ತೆಗೆದುಕೊಂಡಿದ್ದೆ, ಅಂದಿನ ದಿನಾಂಕವೊಂದನ್ನುಬಿಟ್ಟು.ಅಂದು ಬಹುಶಃ ೧೫ ಅಥವಾ ೧೬ ಸೆಪ್ಟೆಂಬರ ೧೯೯೩ ಇದ್ದಿತೆಂದು ಬಲವಾಗಿ ನಂಬುತ್ತೇನೆ. ಏಕೆಂದರೆ ನಾನು ಭೆಟ್ಟಿಯಾದ ೧೫ ದಿನಗಳ ನಂತರ ಅವರು ತೀರಿಕೊಂಡ ಆಘಾತಕರ ಸುದ್ದಿಯನ್ನು ಪತ್ರಿಕೆಯಲ್ಲಿ ಓದಿದೆ. ಅವರ ಮರಣದ ದಿನಾಂಕ ೩೧-೯-೧೯೯೩.
ಆ ಮೊದಲ ಭೆಟ್ಟಿಯೆ ಕೊನೆಯದೂ ಆಯಿತು. ಅದು ನಿಯತಿಯ ನಿರ್ಧಾರ. ಆದರೆ, ಮುಂದಿನ ಕೆಲ ದಿನಗಳಲ್ಲಿಯೆ ಅವರು ಇಲ್ಲದಾಗುವರು ಎಂಬುದು ಆಗ ಅನೂಹ್ಯವಾಗಿತ್ತು. ಸಾವು ಅಷ್ಟು ಸಮೀಪವಿದೆ ಎನ್ನುವ ಯಾವ ಲಕ್ಷಣಗಳೂ ಕಾಣಿಸಿರಲಿಲ್ಲ. ಪ್ರಕೃತಿ ಚೆನ್ನಾಗಿಯೆ ಇದ್ದಂತೆ ತೋರುತ್ತಿತ್ತು. ಏಕೆಂದರೆ, ಮನೆಯ ಹೊರಗೆಯೆ ಅವರು ಕಾಣಿಸಿಕೊಂಡರು – ಯಾರೋ ಒಬ್ಬರೊಡನೆ ಕುಶಲೋಪರಿ ಮಾತು, ನಗೆಚಾಷ್ಟಿ ನಡೆದಿತ್ತು, ಅದೂ ಸಂಸ್ಕೃತದಲ್ಲಿ.
ಅವರ ಮನೆಗೆ, ನನ್ನ ಸೌಭಾಗ್ಯವತಿಯೊಡನೆ ನಾನು ಹೋಗಿದ್ದಾಗ ಬೆಳಗಿನ ಸುಮಾರು ಹತ್ತು ಗಂಟೆಯ ಸಮಯವಿದ್ದಿರಬಹುದು. ಸ್ವಪರಿಚಯ ಮಾಡಿಕೊಳ್ಳುತ್ತ – ನಾನು ಇಂತಹ ಊರಿನ, ಇಂತಹವರ ಮೊಮ್ಮಗ, ಇಂಥವರ ಮಗ – ಎಂದೆಲ್ಲ ಪ್ರವರ ಹೇಳಿ ನನ್ನ ಭೆಟ್ಟಿಯ ಉದ್ದೇಶವನ್ನು ತಿಳಿಸುತ್ತ ಮನೆಯೊಳಗೆ ಕಾಲಿಡುತ್ತಿದ್ದಂತೆಯೆ, “ಬೆಳಗಾವಿಯ ರಂಗಣ್ಣ… ಅಂದರೆ ಮಾಸ್ತರ ಇದ್ದರು, ಅವರಲ್ಲವೆ! … ಗೋಂಧಳಿಗಲ್ಲಿಯಲ್ಲಿ ಇದ್ದವರಲ್ಲವೆ! …ಅವರ ಮಗನೇ ನೀನು! ಗೊತ್ತೋ s … ನಾವೂ ನೀವೂ ಒಂದೇ … ಬಹಳ ಬಹಳ ಹಿಂದೆ ನಿಮ್ಮ ಆ ಮನೆಗೆ ನಾನು ಒಮ್ಮೆ ಬಂದೂ ಹೋಗಿದ್ದೆ” ಎಂದು ಉದ್ಗರಿಸಿದಾಗ ನನ್ನ ಆನಂದಕ್ಕೆ ಪಾರವೆ ಇರಲಿಲ್ಲ.
ಏಕೆಂದರೆ, ಅವರಿಗೂ ನಮಗೂ ಏನಾದರೂ ಸಂಬಂಧವಿದೆಯೆ ? ಮೂಲತಃ ನಾವು ಒಂದೇ ಮನೆತದವರೆ, ಅಥವಾ ಕೇವಲ ಆ ಅಡ್ದಹೆಸರು ಮಾತ್ರ ನಮ್ಮ ಏಕಮಾತ್ರ ಸಂಬಂಧವೆ ? ಎನ್ನುವದನ್ನೆ ತಿಳಿದುಕೊಳ್ಳಲು ನಾನು ಅವರಲ್ಲಿಗೆ ಹೋಗಿದ್ದೆನಷ್ಟೆ. “ನಾವೂ ನೀವೂ ಒಂದೇ” ಎಂದು ಕೇಳುವ ಮೊದಲೆ ಅವರ ಬಾಯಿಂದ ಬಂದಿದ್ದಿತು. ನನಗೆ ಬೇಕಾಗಿದ್ದುದು ಕೇಳುವ ಮೊದಲೆ ಸಿಕ್ಕಿಬಿಟ್ಟಿತ್ತು. ಆದರೆ ನಾವು ಹೇಗೆ ಒಂದು ಎಂಬ ಆ ಸಂಬಂಧದ ವಿವರ ಆ ಕೂಡಲೆ ಗೊತ್ತಾಗಲಿಲ್ಲ. ಅದನ್ನು ತಿಳಿದುಕೊಳ್ಳಲು ಕಾಲಾವಕಾಶ ಬೇಕಿತ್ತು.. ಆದರೆ, ಅದನ್ನು ಅವರಿಂದ ತಿಳಿದುಕೊಳ್ಳಲು “ಕಾಲ” “ಅವಕಾಶ” ಕೊಡಲಿಲ್ಲ. ಬೇರೆ ಮೂಲದಿಂದ ಮುಂದೆ ಅದೂ ಗೊತ್ತಾಯಿತು.
ಇರಲಿ, ಅವರು ಹೇಳಿದ್ದ ಮತ್ತೆರಡು ಸಂಗತಿಗಳು ಮಹತ್ವದ್ದಾಗಿದ್ದವು. ನಾವು ಈ ಕಡೆಗೆ ವಲಸೆ ಬರುವ ಮೊದಲು ಮಂಗಳವೇಢೆ ಊರಿನಲ್ಲಿದ್ದೆವಷ್ಟೆ! ಟೀಕಾರಾಯರು ಅಲ್ಲಿನ ದೇಶಪಾಂಡೆ ಮನೆತನದವರಲ್ಲವೆ! ಅವರ ಕಾಲದಲ್ಲಿ ನಮ್ಮ ಪೂರ್ವಿಕರು, ಆ ದೇಶಪಾಂಡೆ ಮನೆತನದ ಪುರೋಹಿತರಾಗಿದ್ದವರು. ಈ ಸಂಗತಿ ನನಗೆ ಗೊತ್ತಾದುದೆ ಅವರಿಂದ. ಇದೊಂದೆ ಅಲ್ಲ, ಆ ಕಾಲದಲ್ಲಿ “ರಾಜಪುರೋಹಿತ”ರಾಗಿದ್ದ ನಮ್ಮ ಪೂರ್ವಿಕ ವ್ಯಕ್ತಿ – ವೇ.ಪಂ.ಕುಂಭಾರಿ ಗೋಪಾಳಾಚಾರ್ಯ ಜೋಶಿ,
ನಮ್ಮ ಬಳಗದಲ್ಲಿ ಮತ್ತಾರಿಂದಲೂ ಕೇಳಿರದ, ಮತ್ತು ಬಹುಶಃ ಅವರಲ್ಲಿ ಅನೇಕರಿಗೆ ಗೊತ್ತೂ ಇರದ ವಿಷಯವಿದಾಗಿತ್ತು. ಬಾಳಾಚಾರ್ಯರಲ್ಲಿ ತಮ್ಮ ಹಿಂದಿನವರ ಬಗ್ಗೆ ಸಾಕಷ್ಟು ಮಾಹಿತಿ ಮತ್ತು ದಾಖಲೆಗಳೂ ಇದ್ದ ಒಂದು ಛಾಪು (impression) ಮನದ ಮೇಲೆ ಆ ಸಂದರ್ಶನದಲ್ಲಿ ಉಂಟಾಯಿತು. ತಮ್ಮ ಹತ್ತಿರ ವಂಶಾವಳಿ ಕೂಡ ಇದೆಯೆಂದು ಅಂದಿದ್ದರು. ಅಷ್ಟೆ ಅಲ್ಲ ತಮ್ಮ ಹಿಂದಿನ ನಾಕು ತಲೆಗಳ ಹೆಸರುಗಳನ್ನೂ – ತಮ್ಮ ಪಿತಾ ಬಂಡಾಚಾರ್ಯರು >, ಪಿತಾಮಹ ಬಾಳಾಚಾರ್ಯರು >, ಪ್ರಪಿತಾಮಹ ಮದ್ದಂಭಟ್ಟರು >, ಅವರ ತಂದೆ ಬಾಳಕೃಷ್ಣ ಭಟ್ಟ ಜೋಶಿ ಎಂದು ನೆನಪಿನಿಂದ ಹೇಳಿದರು.
ಅರ್ಥಾತ್, ಬಾಳಕೃಷ್ಣ ಭಟ್ಟ ಜೋಶಿ ಇವರನ್ನೇ (ಆ ಟಿಸಿಲಿನ) ಮೂಲವಾಗಿ ಹಿಡಿದರೆ ಬಾಳಾಚಾರ್ಯರು ಐದನೆಯ ತಲೆಮಾರಿನವರು.
ನಾನು ಪ್ರಾರಂಭದಲ್ಲಿ, ಕಿರು ಪರಿಚಯದ ಮೊದಲ ಸಾಲಿನಲ್ಲಿಯೆ ಅವರು ಒಂದನೆ ಟಿಸಿಲಿನ ಏಳನೆ ತಲೆಮಾರಿನವರು ಎಂದು ಬರೆದಿದ್ದೇನೆ. ಅವರ ಮತ್ತು ನನ್ನ ಹೇಳಿಕೆಗಳಲ್ಲಿನ ಈ ಅಂತರ, ವ್ಯತ್ಯಾಸಕ್ಕೆ ಕಾರಣವಿದೆ. ಅವರು ತಮ್ಮ ಹಿರಿಯರ ಹೆಸರುಗಳಲ್ಲಿ ತೀರ ಹಿಂದಿನದು ಬಾಲಕೃಷ್ಣ ಭಟ್ಟ ಎಂದಿದ್ದಾರೆ. ನನಗೆ ಸಿಕ್ಕಿರುವ ಹಳೆಯ ದಾಖಲೆಯ ಆ ನಕಾಶೆ/ಚಿತ್ರದಲ್ಲಿ (chart) ಕೂಡ ಈ ಹೆಸರು ಇದೆ, ಆದರೆ ಬಾಳಂ ಭಟ್ಟ ಎಂದು. ಅಲ್ಲದೆ ಅವರು ಮಾಣಿಕ ಭಟ್ಟರ ಮಗ – ಮೂವರು ಮಕ್ಕಳಲ್ಲಿ ಹಿರಿಯ ಮಗನೆಂದು ತೋರಿಸಲಾಗಿದೆ. ಹೀಗೆ ಆ ಯಾದಿಯಲ್ಲಿ ಮಾಣಿಕ ಭಟ್ಟರ ಹೆಸರೂ ಸೇರಿದಾಗ ಬಾಳಾಚಾರ್ಯರು ಆರನೆ ತಲೆಮಾರಿನವರಾಗುತ್ತಾರೆ.
ಇಷ್ಟಾಗಿಯೂ ಮತ್ತೂ ಒಂದು ತಲೆಮಾರು ಲೆಕ್ಕಕ್ಕೆ ಸಿಗಲಿಲ್ಲ. ಅಲ್ಲವೆ! ಇದು ಹೇಗೆ? ಬಾಳಾಚಾರ್ಯರು ಒಂದು ಹೆಸರನ್ನು ಮರೆತರೆ? ಯಾವ ತಲೆಮಾರಿನ, ಯಾರ ಹೆಸರದು? ಇಲ್ಲ, ಹಾಗಾಗಿಲ್ಲ. ನಡುವೆ ಯಾವುದೋ ಒಂದು ಹೆಸರನ್ನು ಅವರು ಮರೆತರು ಎಂದು ತಿಳಿದರೆ ಅದು ತಪ್ಪು. ಮತ್ತೆ? ಅವರು ಆರನೆ ತಲೆಮಾರಿನವರೂ ಸರಿ, ಏಳನೆ ತಲೆಮಾರಿನವರು ಎಂದರೂ ಸರಿ, ಇದು ಹೇಗೆ ಸಾಧ್ಯ?
ನನಗೆ ಸಿಕ್ಕ ಆ ವಂಶಾವಳಿ ಇದಕ್ಕೆ ಉತ್ತರ ಕೊಡುತ್ತದೆ. ಅದರ ಪ್ರಕಾರ ಮಧ್ವಾಚಾರ್ಯರಿಗೆ (ಮದ್ದಂ ಭಟ್ಟರಿಗೆ) ಬಾಳಾಚಾರ್ಯ ಎಂಬ ಪುತ್ರನಿದ್ದುದು ಸರಿ. ಆ ವ್ಯಕ್ತಿ ನಾಕನೆ ತಲೆಮಾರಿನವರು – ೧.ಮಾಣಿಕ ಭಟ್ಟ > ೨.ಬಾಳಂ ಭಟ್ಟ(ಬಾಳಕೃಷ್ಣ ಭಟ್ಟ ಜೋಶಿ) > ೩.ಮಧ್ವಾಚಾರ್ಯ (ಮದ್ದಂ ಭಟ್ಟ) > ೪.ಬಾಳಾಚಾರ್ಯ. ಆದರೆ ಇವರು ನಿಪುತ್ರಕನಾಗಿಯೆ ಕಾಲವಾದರು. (ಮದುವೆಯಾಗಿ ಮಕ್ಕಳಾಗದೆ ಮರಣಿಸಿದರೊ ಅಥವಾ ಮದುವೆಯ ಮುನ್ನವೆ ಇಲ್ಲವಾಗಿದ್ದರೊ ಗೊತ್ತಿಲ್ಲ.)
ಆದರೆ, ಮಧ್ವಾಚಾರ್ಯರಿಗೆ (ಮದ್ದಂ ಭಟ್ಟರಿಗೆ) ಒಬ್ಬ ಅಣ್ಣ – ಪಾಂಡುರಂಗಾಚಾರ್ಯ ಎನ್ನುವವರೊಬ್ಬರು ಇದ್ದರಲ್ಲವೆ. ಅವರ ಮೂರನೆ ಮಗ ಕಾಂತಾಚಾರ್ಯ ಎನ್ನುವವರೊಬ್ಬರಿದ್ದರು. ಅವರ ಎರಡನೆ ಮಗನೂ ಹೆಸರೂ ಬಾಳಾಚಾರ್ಯ. ಐದನೆ ತಲೆಮಾರಿನವರು – ೧.ಮಾಣಿಕ ಭಟ್ಟ > ೨.ಬಾಳಂ ಭಟ್ಟ (ಬಾಲಕೃಷ್ಣ ಭಟ್ಟ ಜೋಶಿ) > ೩.ಪಾಂಡುರಂಗಾಚಾರ್ಯ > ೪. ಕಾಂತಾಚಾರ್ಯ > ೫. ಬಾಳಾಚಾರ್ಯ.
ನನಗೆ ಸಿಕ್ಕ ಆ ವಂಶಾವಳಿಯಲ್ಲಿ ನಾಕನೆ ತಲೆಮಾರಿನ ಬಾಳಾಚಾರ್ಯರನ್ನು ನಿಪುತ್ರಕನೆಂದು ತೋರಿಸಲಾಗಿದೆ. ಆದರೆ ಐದನೆ ತಲೆಮಾರಿನ ಬಾಳಾಚಾರ್ಯರನ್ನು (ಕಾಂತಾಚಾರ್ಯರ ಪುತ್ರ) ತುಂಡು ತುಂಡು ರೇಷೆಗಳಿಂದ ಮೂರನೆ ತಲೆಮಾರಿನ ಮಧ್ವಾಚಾರ್ಯರ (ಮದ್ದಂ ಭಟ್ಟರ) ಹೆಸರಿಗೆ ಜೋಡಿಸಲಾಗಿದೆ, ಅವರ (ಮದ್ದಂ ಭಟ್ಟರ ಪುತ್ರ ಎಂದು ಸೂಚಿಸುವಂತೆ.
ಬಹುಶ: ಹೀಗಾಗಿರಬೇಕು. ಮದ್ದಂ ಭಟ್ಟರು (ಮಧ್ವಾಚಾರ್ಯರು) ತಮ್ಮ ಹೊಟ್ಟೆಯಿಂದ ಹುಟ್ಟಿದ ಮಗ ಬಾಳಾಚಾರ್ಯ ಪುತ್ರ ಪ್ರಾಪ್ತಿಯಿಲ್ಲದೆಯೆ ಸತ್ತು ಹೋಗಿದ್ದರಿಂದ, ತಮ್ಮ ಅಣ್ಣ ಪಾಂಡುರಂಗಾಚಾರ್ಯರ ಮೊಮ್ಮಗ (ಕಾಂತಾಚಾರ್ಯರ ಮಗ) ಬಾಳಾಚಾರ್ಯರನ್ನು ದತ್ತಕ ತೆಗೆದುಕೊಂಡಿರಬೇಕು. ಆದರೆ ಆ ತುಂಡು ತುಂಡು ರೇಷೆಯ ಮೇಲೆ ದತ್ತಕ ಹೋದನೆಂಬ / ದತ್ತಕ ಪುತ್ರನೆಂಬ ಯಾವುದೆ ಶಬ್ದವಿಲ್ಲ. ಹಾಗಿದ್ದರೂ, ಹೀಗೇ ಆಗಿರಬೇಕು ಎಂದು ಅನಿಸುತ್ತದೆ. ಅಂತೂ, ಒಬ್ಬ ಬಾಳಾಚಾರ್ಯ was replaced by another ಬಾಳಾಚಾರ್ಯ. ಮತ್ತು, ಹೀಗೆ ದತ್ತಕ ಪುತ್ರನ ಹೆಸರೂ ಅದೇ ಆಗಿ, ಮತ್ತದೇ ಹೆಸರು ಮದ್ದಂ ಭಟ್ಟರ ಪುತ್ರನ ಸ್ಥಳದಲ್ಲಿ ಉಳಿದು ತಪ್ಪು ಗ್ರಹಿಕೆ / ಭ್ರಮೆಗೆ ಕಾರಣವಾಗಿದೆ.
ದತ್ತಕ ಹೋದ ಮೇಲೆ ಐದನೆ ತಲೆಮಾರಿನ ಬಾಳಾಚಾರ್ಯರ ತಂದೆ ಮದ್ದಂ ಭಟ್ಟರಾಗಿ, ಜನಕ ತಂದೆ ಕಾಂತಾಚಾರ್ಯರ ಹೆಸರು ಕೈಬಿಟ್ಟುಹೋಗಿದ್ದರೆ ಅದರಲ್ಲಿ ಅಚ್ಚರಿಯೇನು? ಹಾಗಾದಾಗ, ತಲೆಮಾರಿನ ಲೆಕ್ಕದಲ್ಲೂ ಒಂದು ಎತ್ತರ ಜಿಗಿತವಾಗಿ ಬಾಳಾಚಾರ್ಯರು ನಾಕನೆ ತಲೆಮಾರಿನವರಾದರು. ಅವರ ಮೊಮ್ಮಗ ಕೂಡ ಅದೇ ಹೆಸರಿನವರು. ನಿಜವಾಗಿ ಏಳನೆ ತಲೆಮಾರಿನವರು.
ಅವರ ವಿವರವಾದ ಪರಿಚಯ / ಜೀವನ ಕಥೆಯ ಕೆಲ ಮುಖ್ಯ ಅಂಶಗಳು
ಜನ್ಮ – ೫ ಮೇ ೧೯೦೩ ಅಂದರೆ ಶಕೆ ೧೮೨೫, ಶೋಭನನಾಮ ಸಂವತ್ಸರ, ವೈಶಾಖ ಶುದ್ಧ ನವಮಿ, ಮಂಗಳವಾರ ದಿವಸ ಯಕ್ಕುಂಡಿಯಲ್ಲಿ. ಮರಣ – ೩೧ ಸೆಪ್ಟೆಂಬರ ೧೯೯೩, ಶಕೆ ೧೯೧೫, ಶ್ರೀ ಮುಖನಾಮ ಸಂವತ್ಸರ, ಅಧಿಕ ಭಾದ್ರಪದ ಪೌರ್ಣಿಮಾ – ಪೂಜ್ಯ ಯಾದವಾರ್ಯರ ಪುಣ್ಯತಿಥಿಯ ದಿನ. ಬೆಳಗಿನ ೬.೩೦ ಕ್ಕೆ, ಹುಬ್ಬಳ್ಳಿಯ ತೊರವಿಗಲ್ಲಿಯಲ್ಲಿನ ಸ್ವಗೃಹದಲ್ಲಿ. ಮರಣದ ಕಾಲಕ್ಕೆ ಅವರಿಗೆ ೯೦ ವರ್ಷ ತುಂಬಿ, ೯೧ ರಲ್ಲಿ ಕಾಲಿಟ್ಟಿದ್ದರು.
ಅವರ ಜೀವನ ಕಥೆಯ ಮುಖ್ಯ ಘಟ್ಟಗಳಾದ ಶಿಕ್ಷಣ, ವೃತ್ತಿ ಜೀವನ, ವೈವಾಹಿಕ ಜೀವನ, ಆಸ್ತಿಪಾಸ್ತಿಯ ಸಂಪಾದನೆ ಮತ್ತು ಸಾಧನೆ, ಸಿದ್ಧಿ ಮತ್ತು ಅದಕ್ಕೆ ಸಿಕ್ಕ ಮನ್ನಣೆ ಇತ್ಯಾದಿ ವಿಷಯದ ವಿವರಣೆಯಲ್ಲಿ, ಕಲಿತ ಶಾಲೆಗಳ ಹೆಸರು, ವ₹ರ್ಷ, ವಿವಾಹವಾದ ವರ್ಷ, ಸಾಧನೆ ಮತ್ತು ಅದಕ್ಕೆ ಸಿಕ್ಕ ಅಧಿಕೃತ ಮನ್ನಣೆ – ಯಾರಿಂದ, ಯಾವಾಗ ಈ ಮೊದಲಾದ ವಿವರಗಳು ಸಿಕ್ಕಿದ್ದರೆ ಪರಿಚಯ ಇನ್ನೂ ಹೆಚ್ಚು ಅರ್ಥಪೂರ್ಣವಾಗುತ್ತಿತ್ತು. ಆದರೆ ಆ ವಿವರಗಳು ಲಭ್ಯವಾಗಲಿಲ್ಲ.
ಅವರು ತೀರಿಕೂಂಡೆ ಇಪ್ಪತ್ತುಮೂರು ವ₹ರ್ಷಗಳಾಗಿ ಹೋದವು. ಹಿರಿಯ ಮಗ ಮುಳುಂಡದಲ್ಲಿರುವ ಎಂಭತ್ತು ವರ್ಷದ ಶ್ರೀ ಯಾದವ ಮತ್ತು ಹುಬ್ಬಳ್ಳಿಯಲ್ಲಿರುವ ಅರವತ್ತು ದಾಟಿರುವ ಕಿರಿಯ ಮಗ ಶ್ರೀ ಗೋವರ್ಧನಾಚಾರ್ಯ ಅವರು ಮಾತ್ರ ಈ ವಿವರಗಳನ್ನು ಕೊಡಲು ಸಾಧ್ಯ. ಕೆಲವನ್ನು ಕೊಟ್ಟೂ ಇದ್ದಾರೆ. ಕೊಡಲು ಆಗದೆ ಇದ್ದದ್ದನ್ನು ಶೋಧಿಸಿ ಹೊರ ತೆಗೆಯುವದು ಕಷ್ಟಕರ. ಪ್ರಯತ್ನವಂತೂ ನಡೆದಿದೆ. ಈ ಮುಂದಿನ ಮಾಹಿತಿಯಲ್ಲಿ ಹೆಚ್ಚಿನದು ಶ್ರೀ. ಗೋವರ್ಧನಾಚಾರ್ಯರಿಂದ ಕಲೆಹಾಕಿದ್ದು.
ಬಾಳಾಚಾರ್ಯರ ಶಿಕ್ಷಣ ಮಾಧ್ಯಮಿಕ ಶಾಲೆಯವರೆಗೆ- ಅಂದರೆ ಆ ಕಾಲದ ಮ್ಯಾಟ್ರಿಕ್ ವರೆಗೆಯಂತೂ ಆಗಿದ್ದಿತು. ಅದು ಪೂರ್ತಿಯಾಗಿ, ಮ್ಯಾಟ್ರಿಕ್ ಪರೀಕ್ಷೆಯನ್ನು (ಈಗಿನ ಎಸ್.ಎಸ್.ಎಲ್.ಸಿ – ಆದರೆ, ಆಗ ಅದು ೧೧ನೆ ಇಯತ್ತೆಯಾಗಿತ್ತು) ಪಾಸಾಗಿದ್ದರೊ ಗೊತ್ತಿಲ್ಲ. ಗೊತ್ತಿದ್ದ ಒಂದು ಸಣ್ಣ ಸಂಗತಿ – ಶುರುವಾತಿನಲ್ಲಿ ಅವರು ಶಾಲೆ ಕಲಿತದ್ದು ಬೆಳಗಾವಿಯಲ್ಲಿ, ಅದೂ ಮರಾಠಿ ಶಾಲೆಯಲ್ಲಿ ಎಂಬುದು ವಿಶೇಷವಾಗಿದೆ.
ಆದರೆ ತಾರುಣ್ಯದಲ್ಲಿ ಕಾಲಿಡುತ್ತಿರುವಾಗಲೆ ಆಗ ಗತಿಯಲ್ಲಿದ್ದ ಸ್ವಾತಂತ್ರ್ಯಾಂದೋಲನ ಅವರನ್ನು ಆಕರ್ಷಿಸಿತ್ತೇನೋ, ಹಾಗಾದ ಮೇಲೆ ಪೋಲಿಸರ ದೃಷ್ಟಿ ಆಗೀಗ ಇವರ ಕಡೆಗೆ ಹೊರಳಲು ಶುರುವಾಗಿದ್ದರೆ ಅಶ್ಚರ್ಯವೇನಲ್ಲ! ಬಂಧನ ಮತ್ತು ಜೈಲುವಾಸದ ಸಾಧ್ಯತೆಯ ಅಂಜಿಕೆ ಹುಟ್ಟಿದ ಒಂದೆರಡು ಸಂದರ್ಭಗಳೂ ಬಂದಿರಬೇಕು. ತಂದೆ ಬಂಡಾಚಾರ್ಯರಿಗೆ ತನ್ನ ಮಗ ಬೆಳಗಾವಿಯಲ್ಲಿ ಇರುವದೆ ಬೇಡ ಅನಿಸಿರಬೇಕು. ಪಂಢರಪುರಕ್ಕೆ ಹೋಗಿ, ಅಲ್ಲಿಯೆ ಉಳಿದು, ಸಂಸ್ಕೃತ ವಿದ್ಯಾಭ್ಯಾಸ ಮಾಡಲು ಒತ್ತಾಯಿಸಿದರಂತೆ.
ಅದು, ಸತ್ಯಧ್ಯಾನ ತೀರ್ಥ ಶ್ರೀಗಳವರ ಕಾಲ. ಆಧ್ಯಾತ್ಮ, ಮಾಧ್ವ ತತ್ವವಾದ, ನ್ಯಾಯ ಸುಧಾ ಇತ್ಯಾದಿಗಳ ಅಧ್ಯಯನದತ್ತ ವೈಷ್ಣವ ಬ್ರಾಹ್ಮಣರಲ್ಲಿ ಪ್ರಚಂಡ ಆಕರ್ಷಣೆ ಉಂಟಾಗಿ, ಅನೇಕ ಅನೇಕ ಪಂಡಿತರು ಸತತವಾಗಿ ತಯಾರಾದ ಕಾಲ. ಕಲಿಯ ಬಯಸುವವರಿಗೆ ಉತ್ತರಾದಿಮಠದ ಪಂಢರಪುರ ಶಾಖೆಯೂ ಆ ದಿನಗಳಲ್ಲಿ ಒಂದು ಕೇಂದ್ರವಾಗಿತ್ತು. ಅಲ್ಲಿ, ಪ್ರಸಿದ್ಧರಾಗಿದ್ದ ವರಖೇಡಿ ಪ್ರದ್ಯುಮ್ನಾಚಾರ್ಯ ಮತ್ತು ನರಸಿಂಹಾಚಾರ್ಯರೆಂಬ ಸೋದರರು ಅನೇಕ ಪಂಡಿತರನ್ನು ತಯಾರಿಸಿದರು. ಬಾಳಾಚಾರ್ಯರು ಅವರ ಕಡೆ ಶಿಷ್ಯರಾಗಿ ಹೋದರು. ನ್ಯಾಯ, ವ್ಯಾಕರಣ, ಉಪನಿಷತ್, ವೇದಾಂತ, ಶ್ರೀಮನ್ನ್ಯಾಯ ಸುಧಾ ಮೊದಲಾದವುಗಳನ್ನು ಅಭ್ಯಸಿಸಿದರು. ಆಗ ಅಲ್ಲಿ ಸುಮಾರು ಎಪ್ಪತ್ತು ವಿದ್ಯಾರ್ಥಿಗಳು ಇವರ ಜೊತೆ ಕಲಿಯುತ್ತಿದ್ದರಂತೆ. ಎರಡು ವರ್ಷ ಕಾಲ ಅಲ್ಲಿದ್ದರು.
ಪ್ರಾರಂಭದಲ್ಲಿ, ಕಲಿಯಲು ಬೆಳಗಾವಿಗೆ ಏಕೆ ಹೋದರು, ಮರಾಠಿ ಶಾಲೆಗೆ ಏಕೆ ಹೋದರು, ಅಲ್ಲಿ ಅವರು ಯಾರಲ್ಲಿದ್ದರು ಇತ್ಯಾದಿ ತಿಳಿಯದು. ಆದರೆ ಪಂಢರಪುರಕ್ಕೆ ಅವರು ಹೋಗಿದ್ದು ೧೯೨೧-೨೨ರ ಸುಮಾರಿನಲ್ಲಿರಬೇಕು. ಏಕೆಂದರೆ ಆ ಕಾಲದಲ್ಲಿ ಅಸಹಕಾರ ಆಂದೋಲನ ಜೋರಾಗಿ ನಡೆದಿದ್ದಿತು.
ಇವರಿಗೆ ಆಗ ಇಪ್ಪತ್ತು ವರ್ಷದ ಸಮೀಪದ ವಯಸ್ಸು. ಬೆಳಗಾವಿಯಲ್ಲಿ ಮ್ಯಾಟ್ರಿಕ್ ವರೆಗೆ ಮುಟ್ಟಲೂ ಕಡಿಮೆಯೆಂದರೂ ಸುಮಾರು ಹದಿನಾರು ಹದಿನೇಳು ವರ್ಷಗಳಾದರೂ ಬೇಕಲ್ಲ! ನಡುವೆ ಒಂದಿಲ್ಲ ಒಂದು ಅಡಚಣೆಯಿಂದ ಎರಡು ಮೂರು ವರ್ಷಗಳನ್ನು ಕಳೆದುಕೊಂಡಿದ್ದರಂತೂ ಮಾಧ್ಯಮಿಕ ಶಿಕ್ಷಣದ ಕೊನೆಯನ್ನು ಮುಟ್ಟಲು ಸಾಮಾನ್ಯವಾಗಿ ಸುಮಾರು ಇಪ್ಪತ್ತು ವರ್ಷ ಹಿಡಿಯುತ್ತಿತ್ತು. ಈ ಅಂದಾಜಿನಿಂದ ಅವರು ಪಂಢರಪುರಕ್ಕೆ ಹೋದದ್ದು ೧೯೨೧-೨೨ರ ಸುಮಾರಿಗೆ ಎಂದು ಊಹಿಸಿದ್ದೇನೆ.
ವೃತ್ತಿ ಜೀವನ: ಕಲಿಯುವದು ಮುಗಿದಮೇಲೆ ಹೊಟ್ಟೆಪಾಡಿನ ವ್ಯವಸ್ಠೆ ಮಾಡಿಕೊಳ್ಳಬೇಕಲ್ಲ. ಆ ಭದ್ರತೆ ಹುಟ್ಟದೆಯೆ ಗೃಹಸ್ಠ ಜೀವನದಲ್ಲಿ ಕಾಲಿಡಲಾದೀತೇ? ಬಾಳಾಚಾರ್ಯರ ವೃತ್ತಿ ಜೀವನ ಹುಬ್ಬಳ್ಳಿಯಲ್ಲಿನ ಭಾರತ ಮಿಲ್ಲಿನಲ್ಲಿ ಅಕೌಂಟ್ಸ ವಿಭಾಗದಲ್ಲಿನ ಕೆಲಸದಿಂದ ಶುರುವಾಯಿತು. ಮುಂದೆ, ತನ್ನ ತಮ್ಮ ಸ್ವಾಮಿರಾಚಾರ್ಯರಿಗೂ ಅಲ್ಲಿಯೆ ಕೆಲಸ ಹಚ್ಚಿ ಕೊಟ್ಟರಂತೆ. ಆದರೆ,ಅವರ ವೃತ್ತಿ ಜೀವನ ಕೊನೆಯವರೆಗೆ ಏನೂ ಈ ಭಾರತ ಮಿಲ್ಲಿನಲ್ಲಿಯೆ ಮುಂದುವರೆಯಲಿಲ್ಲ. ಅಲ್ಲಿ ಸುಮಾರು ೧೫ ವರ್ಷ ಕೆಲಸ ಮಾಡಿದ ಮೇಲೆ ಅದನ್ನು ಬಿಟ್ಟರು.
ಅದು ಗೋವರ್ಧನ ಆಚಾರ್ಯರು ಹುಟ್ಟಿದ ೧೯೫೩ರ ತುಸು ಮೊದಲು. ಅಲ್ಲಿ ಹದಿನೈದು ವರ್ಷ ಸರ್ವೀಸು ಆಗಿತ್ತೆಂದರೆ ೧೯೩೫ರ ನಂತರದ ಸುಮಾರಿನಲ್ಲಿ ಕೆಲಸಕ್ಕೆ ಸೇರಿರಬೇಕು. ಅಷ್ಟು ಹೊತ್ತಿಗೆ ಪಂಢರಪುರದಲ್ಲಿ ಎರಡು ವರ್ಷ ಕಳೆದಿದ್ದರಲ್ಲವೆ. ಇದನ್ನೆಲ್ಲ ಲೆಕ್ಕ ಹಾಕಿದರೆ, ಎಲ್ಲೊ ಏನೋ ತಪ್ಪುತ್ತಿದೆ. ಪಂಢರಪುರದ ವಾಸ ಮುಗಿದದ್ದು ಯಾವಾಗ? ಕೆಲಸ ಸಿಕ್ಕದ್ದು ಯಾವಾಗ? ನಡುವಿನ ಕೆಲ ಕಾಲದಲ್ಲಿ ಏನು ಮಾಡುತ್ತಿದ್ದರು. ಅಸ್ಪಷ್ಟವಾಗಿದೆ.
ಇರಲಿ, ಆನಂತರ ಅವರು ಹುಬ್ಬಳ್ಳಿಯಲ್ಲಿಯೆ ನ್ಯೂ ಇಂಗ್ಲಿಷ ಸ್ಕೂಲ (ತೊರವಿ ಸ್ಕೂಲ)ದಲ್ಲಿ ಸಂಸ್ಕೃತ ಶಿಕ್ಷಕರಾಗಿ ಎರಡುವರ್ಷ ಕೆಲಸ ಮಾಡಿ, ಅಲ್ಲಿಯೆ ಹಲಸೀಕರ ಕಾಲೇಜೆಂದು ಗುರುತಿಸಲ್ಪಡುತ್ತಿದ್ದ ಆಯುರ್ವೇದ ಕಾಲೇಜಿನಲ್ಲಿ ಶಿಕ್ಷಕರಾಗಿ ಸೇರಿ ಸಂಸ್ಕೃತ, ಪದಾರ್ಥ ವಿಜ್ಞಾನ ಕಲಿಸುತ್ತಿದ್ದರು. ಈ ಕಾಲೇಜಿನಲ್ಲಿ ಅವರು ಸುಮಾರು ೨೫ ವರ್ಷ ಕೆಲಸ ಮಾಡಿದರು.
ಈ ಮೂರು ಕಡೆ- ಭಾರತ ಮಿಲ್ಲ, ನ್ಯೂ ಇಂಗ್ಲಿಷ ಸ್ಕೂಲ ಮತ್ತು ಆಯುರ್ವೇದ ಕಾಲೇಜುಗಳಲ್ಲಿ ಅವರು ಒಟ್ಟು ೧೫ + ೨ + ೨೫ ಅಂದರೆ ೪೨ ವರ್ಷಕಾಲ “ನೌಕರಿ” ಮಾಡಿದರು. ಕೆಲಸದಿಂದ ಪೂರ್ತಿ ನಿವೃತ್ತರಾದ ಇಸವಿಯೂ ಗೊತ್ತಿಲ್ಲ. ಈ ಮಾಹಿತಿಯೆಲ್ಲ ನಾನು ೧೯೧೫ರ ಜನೆವರಿ ೭ ರಂದು ನಡೆಸಿದ ಶ್ರೀ ಗೋವರ್ಧನಾಚಾರ್ಯರ ಅವರ ಸಂದರ್ಶನದಲ್ಲಿ ಸಿಕ್ಕ ವಿವರ. ಒಂದೆ ಸುದೀರ್ಘವಾದ ಬೈಠಕಿನಲ್ಲಿ, ಯಾವ ಕಾಗದಪತ್ರ, ದಾಖಲಾತಿಗಳನ್ನು ಆಧಾರವನ್ನು ಪಡೆಯದೆಯೆ ಹೇಳುತ್ತ ಹೋದ ವಿವರಣೆ.
ಈಗ ತಮ್ಮ ಹತ್ತಿರ ಬಾಳಾಚಾರ್ಯರ ಜೀವಿತ ಕಾಲದ ಯಾವ ಕಾಗದಗಳೂ ಉಳಿದಿಲ್ಲ, ಎಲ್ಲವನ್ನು ಮೌಖಿಕವಾಗಿ ಕೇಳಿದ್ದು ಮಾತ್ರ. ನೆನಪಿನಿಂದ ಅದನ್ನೆ ಹೇಳಿದ್ದೇನೆ ಎಂದೂ ಅವರು ಸ್ಪಷ್ಟೀಕರಿಸಿದ್ದರು. ಅದೇನೆ ಇರಲಿ, ಯಾವ ವರ್ಷ, ಎಷ್ಟು ವರ್ಷಎಂಬ ಮೊದಲಾದ ಪ್ರಶ್ನೆಗಳಿಗೆ ಸಿಕ್ಕ ಉತ್ತರ “ಅಜಮಾಸು” ಲೆಕ್ಕದ್ದು ಎಂಬುದಂತೂ ನಿಶ್ಚಿತ. ಸರಿಯಾದ ಉತ್ತರ ನಿಖರವಾಗಿ ಸಿಗದಿದ್ದರೂ, ಕೊನೆಯ ಪಕ್ಷ ಸರಿಯಾದುದಕ್ಕೆ ಸಮೀಪದ ಉತ್ತರವನ್ನಾದರೂ ಊಹಿಸಬಹುದು.
ಬಾಳಾಚಾರ್ಯರ ನಿವೃತ್ತಿಯ ನಂತರದ ಜೀವನ ಪುರಾಣ, ಪ್ರವಚನ ಇವುಗಳಲ್ಲಿ ಕಳೆಯಿತು. ಕೆಲವು ಸಲ ಮನೆಯಲ್ಲಿ , ಮತ್ತೆ ಕೆಲವು ಸಲ ಮಠದಲ್ಲಿ. ಹೇಗೂ ತೊರವಿ ಗಲ್ಲಿಯಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪಕ್ಕದಲ್ಲಿಯೆ ಮನೆ ಇದ್ದಿತು. ಕಲಿಯುವದು ಮುಗಿದ ಮೇಲೆ, ವೃತ್ತಿ ಜೀವನದ ಅವಧಿ ಮತ್ತು ಗೃಹಸ್ಠ ಜೀವನ ಎಲ್ಲವೂ ಅಲ್ಲಿಯೆ ಕಳೆಯಿತು, ಸುಮಾರು ಏಳು ದಶಕಗಳಿಗಿಂತಲೂ ಹೆಚ್ಚು ಕಾಲ ಅದು ಅವರ ವಿಳಾಸವಾಗಿತ್ತು.
ವಿವಾಹ: ಬಾಳಾಚಾರ್ಯರು ಮದುವೆಯಾದ ವರ್ಷ ಗೊತ್ತಿಲ್ಲವಾದರೂ, ಅದು ಯಕ್ಕುಂಡಿಯಲ್ಲಿ ನಡೆದಿತ್ತು ಎಂಬುದಂತೂ ನಿಜ. ಏಕೆಂದರೆ ಇವರ ಪತ್ನಿ ತುಳಸಾಬಾಯಿಯೂ ತಾವು ಹುಟ್ಟಿದ್ದ ಊರಾದ ಯಕ್ಕುಂಡಿಯ ಹೆಣ್ಣು ಮಗಳೇ! ಅಲ್ಲಿನ ಹರಿತ ಗೋತ್ರದ, ಕಟ್ಟಿ ಮನೆತನದ ಗೋಪಾಳಾಚಾರ್ಯ ಮತ್ತು ನರಸಕ್ಕ ದಂಪತಿಗಳ ಮಗಳು.
ಮಕ್ಕಳು: : ಈ ದಂಪತಿಗಳಿಗೆ ಒಂದು ಹೆಣ್ಣನ್ನೂ ಹಿಡಿದು ನಾಕು ಮಕ್ಕಳು – ೧.ಕಾಂತಾ ೨. ಲಕ್ಷ್ಮೀ ನರಸಿಂಹ (ಅಣ್ಣಪ್ಪ) ೩. ಯಾದವ ೪. ಬಂಡಾಚಾರ್ಯ – ಎನ್ನುವವರು ಹುಟ್ಟಿದರು. ಐದನೆಯ ಮಗು (ಬಹುಶಃ ಅದೂ ಗಂಡು) ಹುಟ್ಟಿದಾಗ, ಬಾಣಂತಿತನದಲ್ಲಿಯೆ (ತಾಯಿ, ಮಗು ಇಬ್ಬರೂ) ತೀರಿಕೊಂಡರು, ಹುಬ್ಬಳ್ಳಿಯ ರೇಲ್ವೆ ಆಸ್ಪತ್ರೆಯಲ್ಲಿ. ಅದು ಬಹುಶಃ ೧೯೪೨ ಇಸವಿ ಇರಬಹುದು.
ಇವರಲ್ಲಿ, ಜೇಷ್ಠ ಕನ್ಯೆಯಾದ ಕಾಂತಾ ಹುಟ್ಟಿದ ವರ್ಷ ಗೊತ್ತಿಲ್ಲದಿದ್ದರೂ, ಹುಟ್ಟಿದ್ದ ಸ್ಥಳ ಹುಬ್ಬಳ್ಳಿ ಎಂದು ಗೊತ್ತಿದೆ. ಬೆನ್ನುಮೇಲಿನ ಲಕ್ಷ್ಮೀ ನರಸಿಂಹ ಅಲ್ಪಾಯುವಾಗಿ ಮ್ಯಾಟ್ರಿಕ ಕ್ಲಾಸಿನಲ್ಲಿದ್ದಾಗ ತೀರಿಕೊಂಡ. ಹುಟ್ಟಿದ ವರ್ಷ, ಸ್ಥಳ (?). ಮೂರನೆಯ ಮಗ ಯಾದವ ಹುಟ್ಟಿದ್ದು ೧೯೩೬ರ ಅಕ್ಟೋಬರ ಕೊನೆಯ ವಾರದಲ್ಲಿ. ನಂತರದ ಬಂಡಾಚಾರ್ಯ (ಅಜ್ಜನ ಹೆಸರು) ಹುಟ್ಟಿದ್ದು ೧೯೪೧ ರಲ್ಲಿ.
ತಾಯಿ ತೀರಿಕೊಂದಾಗ ಯಾದವ ಅವರು ೫ ವರ್ಷದವರು ಮತ್ತು ಅವರ ತಮ್ಮ ಬಂಡಾಚಾರ್ಯ ಒಂದೂ ಕಾಲು ವ₹ರ್ಷದ ಕೂಸು. ತಾಯಿ ತುಳಸಾಬಾಯಿ ಮರಣಿಸಿದಾಗ ಅವರು ಸುಮಾರು ೪೦ ವರ್ಷ ವಯಸ್ಸಿನವರಾಗಿದ್ದರು.ಹೀಗೆಂದು ತಮ್ಮ ತಾಯಿಯ ವಿಷಯದ ಮಾಹಿತಿ ನೀಡಿದವರು ಶ್ರೀ. ಯಾದವ ಅವರು.
ಇನ್ನು, ಬಾಳಾಚಾರ್ಯರಿಗೆ ಹುಟ್ಟಿದ ಈ ಮಕ್ಕಳ ಬಗ್ಗೆ: ಎಲ್ಲಕ್ಕೂ ಹಿರಿಯವರಾದ ಕಾಂತಾ ಇವರು ಮದುವೆಯಾಗಿ ನವಲಗುಂದದ ಕೊರ್ಲಹಳ್ಳಿ ಹಣಮಂತಾಚಾರ್ಯರ ಪತ್ನಿಯಾದರು. ಪತಿ ಶ್ರೀ. ಸತ್ಯಧ್ಯಾನ ತೀರ್ಥರ ಮನೆತನದವರು. ಈ ದಂಪತಿಗಳ ಹೊಟ್ಟೆಯಿಂದ ಹುಟ್ಟಿದವರೆ ವಸಂತಾಚಾರ್ಯ ಕೊರ್ಲಹಳ್ಳಿ. ಇವರು ಹುಬ್ಬಳ್ಳಿಯಲ್ಲಿ ಕ್ಲಬ್ ರೋಡದ ಮೇಲಿರುವ ಚಿಟಗುಬ್ಬಿ ಚಾಳಿನಲ್ಲಿ ಇದ್ದಾರೆ. ಇವರ ಮಗ ಪವನ ಉರ್ಫ ಅಭಿಷೇಕ ಡಿಪ್ಲೋಮಾ ಮಾಡಿ, ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಮದುವೆ ಆಗಿದೆ ಮತ್ತು ಅವರೀಗ ಒಬ್ಬ ಮಗಳ ತಂದೆ. ೨೦೧೫ ರ ಜನೆವರಿಯಲ್ಲಿ ಈ ಮಾಹಿತಿಯ ಟಿಪ್ಪಣಿ ಬರೆದುಕೊಂದಿದ್ದಾಗ, ಆ ಮಗಳು ಇನ್ನೂ ಚಿಕ್ಕ ಮಗುವಾಗಿತ್ತು.
ಎರಡನೆ ಮಗ ಲಕ್ಷ್ಮೀ ನರಸಿಂಹ ತನ್ನ ಸಣ್ನ ವಯಸ್ಸಿನಲ್ಲಿಯೆ, ಇನ್ನೂ ಮಾಟ್ರಿಕ್ ಕ್ಲಾಸಿನಲ್ಲಿ ಇದ್ದಾಗ ತೀರಿಕೊಂಡಿದ್ದು.
ಅವರ ಬೆನ್ನಮೇಲಿನ ಯಾದವ (ಯಾದವಾಚಾರ್ಯ) ಹುಟ್ಟಿದ್ದು ೧೯೩೬ನೆ ಇಸವಿಯ ಅಕ್ಟೋಬರ ೨೭ ರಂದು, ಹುಬ್ಬಳ್ಳಿಯಲ್ಲಿ. ಮಾಧ್ಯಮಿಕ ಶಾಲಾ ಶಿಕ್ಷಣ ಮುಗಿಯುತ್ತಲೆ, ೧೯೫೪ರಲ್ಲಿ, ಇನ್ನೂ ಇಪ್ಪತ್ತು ವರ್ಷ ವಯಸ್ಸೂ ಆಗಿರಲಿಲ್ಲ, ದಾದರ – ಮುಂಬಯಿಯ ಒಂದು ಕೋ ಆಪರೇಟಿವ ಬ್ಯಾಂಕಿನಲ್ಲಿ ಕೆಲಸವಾಗಿ ಅಲ್ಲಿ ೧೯೫೯ರ ವರೆಗೆ ಇದ್ದು ನಂತರ ಬ್ಯಾಂಕ ಆಫ ಮಹಾರಾಷ್ಟ್ರ ಸೇರಿಕೊಂಡದ್ದು. ನಾಗಪುರದಲ್ಲಿ (ಎಕ್ಸೆಕ್ಯೂಟಿವ) ಚೀಫ ಮ್ಯಾನೇಜರ ಹುದ್ದೆಯಲ್ಲಿರುವಾಗ ಅಕ್ಟೋಬರ ೧೯೯೬ ರಲ್ಲಿ ನಿವೃತ್ತರಾದರು. ಸಧ್ಯ ಮುಂಬಯಿಯ ಮುಳುಂಡ (ಪೂರ್ವ)ದಲ್ಲಿನ ತಮ್ಮ ಸ್ವಂತ ಫ್ಲ್ಯಾಟದಲ್ಲಿ ಇದ್ದಾರೆ. ಯಾದವ ಅವರಿಗೆ ೧೯೬೩ರಲ್ಲಿ ಹುಟ್ಟಿದ ಅನಿಲ ಮತ್ತು ೧೯೭೩ರಲ್ಲಿ ಹುಟ್ಟಿದ ಮಗಳು ಅನಿತಾ ಎಂಬ ಇಬ್ಬರು ಮಕ್ಕಳು. ಇಬ್ಬರ ಮದುವೆಯೂ ಆಗಿದೆ. ಮಕ್ಕಳೂ ಆಗಿವೆ.
ನಾಕನೆ ಮಗ ಬಂಡಾಚಾರ್ಯ ಹುಟ್ಟಿದ್ದು ೧೯೪೧ರಲ್ಲಿ. ಈಗ ತೀರಿಕೊಂಡಿದ್ದಾರೆ. (ಇಸವಿ ?). ತಮ್ಮ ಅಕ್ಕ- ಕಾಂತಾ ಹಣಮಂತಾಚಾರ್ಯ ಕೊರ್ಲಹಳ್ಳಿ ಇವರ ಮಗಳು ನಾಗವೇಣಿ (ಗುಂಡಕ್ಕ) ಅವರ ಜೊತೆ ಮದುವೆ, ಹುಬ್ಬಳ್ಳಿಯ ಎಂ.ಟಿ.ಎಸ್. ಕಾಲನಿಯಲ್ಲಿ. ಇವರಿಗೆ ಟೆಲೆಗ್ರಾಫ ಡಿಪಾರ್ಟಮೆಂಟದಲ್ಲಿ, ಸಿ.ಟಿ.ಒ ಮುಂಬಯಿಯಲ್ಲಿ ಕೆಲಸವಿದ್ದಿತು. ಹೆಂಡತಿ ನಾಗವೇಣಿಯವರಿಗೂ ಕೆಲಸವಿದ್ದಿತು (ಪತಿಯ ಮರಣಾನಂತರ ಅಲ್ಲಿಯೆ ಸಿಕ್ಕ ಕೆಲಸ). ಈಗ ನಿವೃತ್ತರಾಗಿ, ಮುಳುಂಡದಲ್ಲಿನ ಸ್ವಗೃಹದಲ್ಲಿ ಇದ್ದಾರೆ. ಇವರಿಗೆ ಇಬ್ಬರು ಹೆಣ್ಣು ಮಕ್ಕಳು – ಚಿತ್ರಾ ಮತ್ತು ಚಾರುಮತಿ ಎಂದು. ಚಿತ್ರಾ ಅವರ ಮದುವೆ ಚಿಪ್ಪಲಗಟ್ಟಿ ಎಂಬುವರ ಜೊತೆ ಆಗಿ, ಬೆಂಗಳೂರಿನಲ್ಲಿದ್ದಾರೆ. ಚಾರುಮತಿ ಇವರೂ ವಿವಾಹಿತೆ, ಪುಣೆಯಲ್ಲಿದ್ದಾರೆ.
ಬಾಳಾಚಾರ್ಯರ ಎರಡನೆ ಮದುವೆ: ಮೊದಲ ಹೆಂಡತಿ ತುಳಸಾಬಾಯಿ ೧೯೪೨ ರ ಸುಮಾರಿಗೆ ಬಾಣಂತಿತನದಲ್ಲಿಯೆ ತೀರಿಕೊಂಡ ನಂತರಆಚಾರ್ಯರ ಮನೆ ಕೆಲ ಕಾಲ ಗೃಹಿಣಿಯಿಲ್ಲದ ಮನೆಯಾಯಿತು. ಕಡೆಯ ಇಬ್ಬರು ಮಕ್ಕಳಂತೂ, ಸುಮಾರು ಐದು ವರ್ಷದ ಯಾದವ ಮತ್ತು ಸವ್ವಾ ವರ್ಷದ ಬಂಡಾಚಾರ್ಯ ತೀರ ಚಿಕ್ಕವರು. ಅವರ ಮೇಲಿನ ಕಾಂತಾ ಮತ್ತು ಲಕ್ಶ್ಮೀನರಸಿಂಹ (ಅಣ್ಣಪ್ಪ), ಕ್ರಮಶಃ (ಬಹುತೇಕ) ನಾಕು ಮತ್ತು ಎರಡು ವರ್ಷದಷ್ಟು ದೊಡ್ಡವರಿದ್ದಿರಬೇಕು. ಮನೆ – ಮಕ್ಕಳನ್ನು ನೋಡಿಕೊಳ್ಳಲು, ಹಬ್ಬ- ಹುಣ್ಣಿವೆ ನಡೆಸಿಕೊಂಡು ಹೋಗಲು, ಧರ್ಮ -ಕರ್ಮಕಾರ್ಯಗಳಲ್ಲಿ ನೆರವಾಗಲು, ಗೃಹಿಣಿಯೆ ಇಲ್ಲದ ಮನೆಯಾಗಿತ್ತದು.
ಆಚಾರ್ಯರು ಮತ್ತೊಂದು ಮದುವೆಯಾದರು. ಬಡ್ಲಿಯ ಭೀಮರಾವ ಕುಲಕರ್ಣಿಯವರ ಮಗಳು ಶಾಂತಾಬಾಯಿಯಿಂದ ಆ ಕೊರತೆ ತುಂಬಿತು.ಈ ಮದುವೆ ನಡೆದ ವರ್ಷ ಗೊತ್ತಿಲ್ಲ. ಶಾಂತಾಬಾಯಿಯ ಹೊಟ್ಟೆಯಿಂದ ಇಬ್ಬರು ಹೆಣ್ಣು ಮಕ್ಕಳು ಸೇರಿ ಮೂವರು – ೧. ಸೇತೂಬಾಯಿ ೨.ಮಾಯಾವತಿ ೩.ಗೋವರ್ಧನ ಎಂಬುವರು ಹುಟ್ಟಿದರು.
ಸೇತೂಬಾಯಿ ಹುಟ್ಟಿದ್ದು ಬಹುಶ:೧೯೪೮ ರಲ್ಲಿ. ಮಾಳಸಿರಸ್ (ಮಹಾರಾಷ್ಟ್ರ) ದಲ್ಲಿ ಜ್ಯೋತಿಷಿಯಾಗಿದ್ದ ವಾಸುದೇವಾಚಾರ್ಯರ ಪುತ್ರ ಮಾಧವಾಚಾರ್ಯರ ಜೋಶಿಯವರ ಪತ್ನಿ. ಈ ಸಂಬಂಧದ ವಿಶೇಷವೆಂದರೆ – ಅಳಿಯನಾದವರು ಬಾಳಾಚಾರ್ಯರ ಗುರುಮನೆತನದವರು. ತಾವು ಶಿಷ್ಯರಾಗಿ ಕಲಿತ ಪಂಢರಪುರದ ಪ್ರದ್ಯುಮ್ನಾಚಾರ್ಯರ ಮೊಮ್ಮಗ. ಪಿ.ಡಬ್ಲು.ಡಿ ಯಲ್ಲಿ ಕೆಲಸ ಮಾಡುತ್ತಿದ್ದರು. ಇವರಿಗೆ ನಾಕು ಮಕ್ಕಳು – ೧. ನಾಗಮಣಿ ೨. ವೆಂಕಟೇಶ ೩. ಗೀತಾಂಜಲಿ ೪. ರಾಘವೇಂದ್ರ. ಎಲ್ಲರೂ ವಿವಾಹಿತರು ಮತ್ತು ಪುಣೆಯಲ್ಲಿ ವಾಸವಾಗಿದ್ದಾರೆ.
ಎರಡನೆಯ ಮಗಳು ಮಾಯಾವತಿ. ಇವರ ಜನ್ಮ, ಶಿಕ್ಷಣ, ಮದುವೆ, ಮಕ್ಕಳು ಈ ಯಾವ ವಿವರಗಳೂ ಇಲ್ಲ. ಮದುವೆಯಾಗಿ ಕುಪೇರಕರ ಎಂಬ ಅಡ್ದಹೆಸರು ಇದ್ದಿತೆಂದು, ನಾನು ಬರೆದುಕೊಂಡಿದ್ದ ಟಿಪ್ಪಣಿ ಹೇಳುತ್ತದೆ. ಬಹುಶ: ಮುಂಬಯಿಯಲ್ಲಿದ್ದಾರೆಂದು ತೋರುತ್ತದೆ.
ಇವರಿಬ್ಬರ ನಂತರ ಹುಟ್ಟಿದವರು ಗೋವರ್ಧನ. ಜನ್ಮ – ಜನೆವರಿ ೧, ೧೯೫೩. ವಾಣಿಜ್ಯ ಶಾಸ್ತ್ರದ ಪದವೀಧರ. ಕಿರ್ಲೋಸ್ಕರ ಕಂಪನಿಯಲ್ಲಿ (ಮೈಸೂರು) ಕ್ಯಾಶಿಯರ ಆಗಿ ಸ್ವೇಚ್ಛಾ ನಿವೃತ್ತಿ ಪಡೆದು ಬಂದಮೇಲೆ ತಂದೆಯ ಹತ್ತಿರವೆ ಇದ್ದ ವ್ಯಕ್ತಿ. ಆದರೆ ಈಗ ತೊರವಿಗಲ್ಲಿಯಲ್ಲಿನ ಆ ಮನೆಯಲ್ಲಿ ಅಲ್ಲ, ಹುಬ್ಬಳ್ಳಿಯಲ್ಲೆ ಬೇರೆ ವಿಳಾಸಕ್ಕೆ ಸ್ಥಳಾಂತರಗೊಂಡಿದ್ದಾರೆ. ಅವರ ಹೊಸ ಮನೆ, ಗೋಕುಲ ರೋಡದ ಮಂಜುನಾಥ ನಗರದಲ್ಲಿನ ಅರುಣ ಕಾಲನಿಯಲ್ಲಿದೆ. ಇವರ ಪತ್ನಿ ತೇರದಾಳದ ಹಣಮಂತಾಚಾರ್ಯ ಜೋಶಿಯವರ ಮಗಳು ಸುಮಂಗಲಾದೇವಿ. ಈ ದಂಪತಿಗಳಿಗೆ ಒಂದು ಹೆಣ್ಣಿನ ಸಹಿತ ಮೂವರು ಮಕ್ಕಳು – ೧. ಸಂಗೀತಾ ತಿಳಗೂಳ (ವಿಜಯಪುರದಲ್ಲಿದ್ದಾರೆ) ೨. ಸಂತೋಷ, ವಿಜ್ಙಾನ ಪದವೀಧರ. ವಿವಾಹಿತ. ಹುಬ್ಬಳ್ಳಿಯಲ್ಲಿ ಟಿ.ವಿ. ಚಾನೆಲ್ ಒಂದರ ಝೋನಲ ಮ್ಯಾನೇಜರ ಆಗಿದ್ದಾರೆ. ೩. ಕಾಂತೇಶ. ವಾಣಿಜ್ಯ ಶಾಸ್ತ್ರದ ಪದವೀಧರ. ವಿವಾಹಿತ. ಡಾಟಾಪ್ರೊ, ಬೆಂಗಳೂರಲ್ಲಿ ಕೆಲಸ.
ಬಾಳಾಚಾರ್ಯರ ಸಾಧನೆ ಮತ್ತು ಅದಕ್ಕಾಗಿ ಅವರಿಗೆ ಸಿಕ್ಕ ಪ್ರಶಸ್ತಿಗಳು
೧. ಬೆಳಗಾವಿಯ ಮಧುರವಾಣಿ ಸಂಸ್ಥೆಯಿಂದ “ಕವಿ ಕೋಕಿಲ” ಮತ್ತು “ಕಾವ್ಯ ಭೂಷಣ” ಪ್ರಶಸ್ತಿ. (ಯಾವ ವರ್ಷ ಇತ್ಯಾದಿ ವಿವರಗಳು ಲಭ್ಯವಾಗಿಲ್ಲ.)
೨. ಸಂಸ್ಕೃತ ಪಂಡಿತ ಎಂದು ಕೇಂದ್ರ ಸರಕಾರದಿಂದ ಪುರಸ್ಕೃತ. (೧೯೬೪ರಲ್ಲಿ ಇದ್ದಿರಬಹುದು. ಸಂಬಂಧಿಸಿದ ವಿವರಗಳು ಲಭ್ಯವಿಲ್ಲ)
೩. ಸರಕಾರದಿಂದ ಮಾಶಾಸನ (ಯಾವ ವರ್ಷದಿಂದ ಇತ್ಯಾದಿ ವಿವರಗಳು ಲಭ್ಯವಿಲ್ಲ) ?)
೪.ಪಲಿಮಾರು ಮಠದ ಶ್ರೀ. ವಿದ್ಯಾಮಾನ್ಯ ತೀರ್ಥ ಮತ್ತು ಪೇಜಾವರ ಮಠಾಧೀಶರಾದ ಶ್ರೀ. ವಿಶ್ವೇಶ ತೀರ್ಥರಿಂದ ಮಹಾ ಭಾಗವತಾಚಾರ್ಯ ಎಂಬ ಪ್ರಶಸ್ತಿ (ಯಾವ ವರ್ಷ ಇತ್ಯಾದಿ ವಿವರಗಳು ಲಭ್ಯವಿಲ್ಲ).
ಬಾಳಾಚಾರ್ಯರು ತಮ್ಮ ಶಾಲಾ ಶಿಕ್ಷಣವನ್ನು ಪಡೆದ ಬೆಳಗಾವಿ ನಗರ, ಮುಂದೆ ಒಂದು ದಿನ “ಮಧುರವಾಣಿ”ಯಿಂದ ಅವರನ್ನು “ಕವಿ ಕೋಕಿಲ”, “ಕಾವ್ಯ ಭೂಷಣ” ಎಂದೂ ಕರೆದದ್ದು ಒಂದು ವಿಶೇಷ.
ಒಬ್ಬ ವೈದಿಕ ಬ್ರಾಹ್ಮಣನಾಗಿ ಹುಟ್ಟಿ, ಪಂಡಿತ ಎಂಬ ಮಾನ್ಯತೆ ಪಡೆದ ನಂತರ ಕಾಲಾಂತರದಲ್ಲಿ ಉಡುಪಿಯ ಎರಡು ಮಾಧ್ವ ಮಠಗಳಿಂದಲೂ ಸನ್ಮಾನಿಸಲ್ಪಟ್ಟರು. ಅದಮಾರು ಮಠ ಮತ್ತು ಪೇಜಾವರ ಮಠಗಳ ಪೀಠಾಧಿಪತಿಗಳಿಂದ – “ಪುರಾಣ ಪ್ರವೀಣ”, “ಮಹಾ ಭಾಗವತಾಚಾರ್ಯ” ಎಂಬ ಬಿರುದು ಪಡೆದರು. ಅವರಿಗೆ ಬಂದ ಪ್ರಶಸ್ತಿಗಳಲ್ಲಿ ಇವು ಕಿರೀಟಪ್ರಾಯವಾದವು.
ಸರಕಾರದ ಮಟ್ಟದಲ್ಲಿಯೂ ಅವರ ಪಾಂಡಿತ್ಯದ ಮಾನ್ಯತೆ ಪ್ರಶಸ್ತಿ ಮತ್ತು ಮಾಶಾಸನ ರೂಪದಲ್ಲಿ ಸಿಕ್ಕಿದ್ದಿತು.
ಲೇಖಕನ ಒಂದು ಟಿಪ್ಪಣಿ:
ವೈ.ವಾ. ಬಾಳಾಚಾರ್ಯರ ಬಗ್ಗೆ ಬೇರೆ ಮೂಲಗಳಿಂದ ಮತ್ತೂ ಹೆಚ್ಚಿನ ಮಾಹಿತಿಯೇನಾದರೂ ಸಿಕ್ಕೀತೇ ಎಂದು ಪ್ರಯತ್ನಿಸುತ್ತಲೆ ಇದ್ದೇನೆ. ಅಂತಹ ಒಂದು ಪ್ರಯತ್ನದಲ್ಲಿ ಅಂತರ ಜಾಲವನ್ನು (internet) ತಡಕಾಡುತ್ತಿದ್ದಾಗ ಮೂರುನಾಕು ವರ್ಷಗಳ ಹಿಂದೆಯೆ ಅವರ ಬಗ್ಗೆ ಸಂಸ್ಕೃತದಲ್ಲಿ ರಚಿತವಾಗಿದ್ದ ಶ್ಲೋಕವೊಂದು ಕಣ್ಣಿಗೆ ಬಿದ್ದಿತು. ಅದು ಜಯರಾಮ ಸೇತುರಾಮ (ಜೆ.ಸೇತುರಾಮ) ಎಂಬುವರ ರಚನೆ. ತನ್ನ ಗುರುವಿನ ನೆರವನ್ನು ಕೃತಜ್ಞತೆಯಿಂದ ಸ್ಮರಿಸಿದ ಶಿಷ್ಯನ ಮಾತು. ಅದು ಸಂಸ್ಕೃತದಲ್ಲಿ ರಚಿತವಾದುದು, ಗುರು ಸ್ಮರಣೆ ಮಾಡಿದ ಶ್ಲೋಕ. ಆದರೆ ಅದಷ್ಟೆ ಅದರ ಹಿರಿಮೆಯಲ್ಲ.
परम करुणापूरितांबा स्तॊत्रम् ಎಂಬ ಆ ಪ್ರಾರ್ಥನೆ ಒಂದು ಪದ್ಯರೂಪದ ದೇವಿಸ್ತೋತ್ರ. ಆಸ್ತಿಕ ಭಾವನೆ ಇದ್ದವರಿಗೆ, ದೈವ ಶೃದ್ಧೆ, ದೈವ ಭಕ್ತಿ ಉಳ್ಳವರಿಗೆ ಮತ್ತು ಸ್ತೋತ್ರ ಪರಾಯಣ ತತ್ಪರರಿಗೆ ಮೆಚ್ಚಿಗೆಯಾಗುವ ಪಠಣಯೋಗ್ಯ ಸ್ತೋತ್ರ. ಅದರ ರಚನಾಕಾರ ಕೇವಲ ಭಕ್ತಿ, ಶೃದ್ಧೆಯಿಂದ ಪ್ರೇರಿತನಾದ ಸಾಮಾನ್ಯನಲ್ಲ. ಅಂಕಿ ಸಂಖ್ಯಾ ಶಾಸ್ತ್ರದಲ್ಲಿ (Statistics) ಪ್ರಚಂಡ ಸಾಧನೆಗೈದ, ಅಸಾಧಾರಣ ವಿದ್ವತ್ತಿನ ಮತ್ತು ತನ್ನ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ, ವಿದೇಶೀ ವಿಶ್ವವಿದ್ಯಾಲಯವೊಂದರ ಪೀಠದಲ್ಲಿ ಆಸೀನರಾಗಿದ್ದ ವ್ಯಕ್ತಿ. ಅನೇಕ ಪ್ರಶಸ್ತಿಗಳನ್ನು ಪಡೆದವರು.
ಅಂತಹ ಒಬ್ಬ ಪಂಡಿತ, ಪ್ರತಿಭಾವಂತ, ಪರಿಣಿತ, ಸಂಶೋಧಕ ಮತ್ತು ಹಲವು ವಿಶ್ವ ವಿದ್ಯಾಲಯಗಳಲ್ಲಿ ಗುರುವಾಗಿ ಕೆಲಸ ಮಾಡಿದ ಖ್ಯಾತ ವ್ಯಕ್ತಿಯ ರಚನೆಯದು. ಅಂತಹ ದೇವಿ ಸ್ತೋತ್ರದಲ್ಲಿ ಅದರ ರಚನಾಕಾರನಿಂದ ತನ್ನ ಗುರುವೆಂದು ಸ್ಮರಿಸಿಕೊಂಡಿರುವದೆ ಒಂದು ಸನ್ಮಾನ, ವಿಶೇಷವಾದುದು. ಅದರಲ್ಲಿನ ೧೦ನೆ ಶ್ಲೋಕದಲ್ಲಿ ಬಾಳಾಚಾರ್ಯ ಮಂಗಲವೇಡಿಯವರ ಉಲ್ಲೇಖವಿದೆ.
ಸಧ್ಯ, ಆ ಶ್ಲೋಕದಲ್ಲಿನ ವಿಷಯವನ್ನು ನೆನಪಿನಿಂದ ಹೇಳಬೇಕೆಂದಿದ್ದರೆ, ಅದರಲ್ಲಿ, ಸೇತುರಾಮ ಅವರು ಕೆಲಕಾಲ ಹುಬ್ಬಳ್ಳಿಯಲ್ಲಿದ್ದು ಕಲಿತ ತಮ್ಮ ಬಾಲ್ಯದ ದಿನಗಳ ಕುರಿತು ಹೇಳಿದ್ದಾರೆ. ಅವರು ಸ್ಥಳೀಯರಾಗಿರಲಿಲ್ಲವಾದ್ದರಿಂದ ಇಲ್ಲಿನ ಭಾಷೆಯನ್ನು ಚನ್ನಾಗಿ ಆಡಲಾಗುತ್ತಿರಲಿಲ್ಲ. ಹಾಗಾಗಿ ಶಾಲೆಯಲ್ಲಿ ಸಹಪಾಠಿಗಳ ಚೇಷ್ಟೆಗೆ ಈಡಾಗುತ್ತಿದ್ದರು. ಯಾರೂ ಆತ್ಮೀಯತೆಯನ್ನು ತೋರುತ್ತಿರಲಿಲ್ಲ. ಸಂಸ್ಕೃತವನ್ನು ಕಲಿಯ ಬೇಕೆಂಬ ಹಂಬಲವಿದ್ದಿತು. ಆದರೆ ಅವರನ್ನು ಸಮೀಪ ಕರೆದು, ಹಚ್ಚಿಕೊಂಡು ಹೇಳಿಕೊಡುವವರಾರು. ಆ ಮಾನಸಿಕ ಯಾತನೆಯ ದಿನಗಳಲ್ಲಿ ಬಾಳಾಚಾರ್ಯರ ಕಣ್ಣಿಗೆ ಬಿದ್ದಾಗ, ಸಂಸ್ಕೃತ ಕಲಿಯಬೇಕೆಂಬ ಹಂಬಲ ಅವರ ಗಮನಕ್ಕೆ ಬಂದಾಗ, ಸಮೀಪ ಸೆಳೆದುಕೊಂಡು ಅಭಯ ಹೇಳಿ, ಆ ಆಸೆಯನ್ನು ತಣಿಸಿದವರು ಆ ಆಚಾರ್ಯರು. ಅವರಿಂದಾಗಿ ಬಾಲಕ ಸೇತುರಾಮಗೆ ಸಂಸ್ಕೃತ ಭಾಷೆಯಲ್ಲಿ ಒಂದು ಗತಿ ಸಿಕ್ಕಿತು.
ಇಂತಹ ಗಣ್ಯವ್ಯಕ್ತಿ ತನ್ನ ಬಾಲ್ಯದಲ್ಲಿ ತನಗೆ ಸಂಸ್ಕೃತ ಕಲಿಸಿದವರು ಎಂದು “ಗುರು ಸ್ಮರಣೆ” ಮಾಡಿ ಬರೆದ ದೇವಿ ಸ್ತೋತ್ರ ಇದೂ ಒಂದು ಅಪರೂಪದ ಪ್ರಶಸ್ತಿ. ಮೊನ್ನೆ ಮೊನ್ನೆ ೨೦೧೭ರ ಜನೆವರಿ ೮ ರಂದು ಮತ್ತೆ ಅದನ್ನು ಹುಡುಕಿದಾಗ ಅದು ಸಿಗಲಿಲ್ಲ. ತೆಗೆದುಬಿಟ್ಟಿದ್ದಾರೆ. ಆದರೆ ಡಾ.ಸೇತುರಾಮ ಅವರನ್ನೇ ಸಂಪರ್ಕಿಸಿ, ಆ ಸ್ತೋತ್ರದ ಪೂರ್ತಿ ಪಾಠವನ್ನು ಈ ವ್ಯಕ್ತಿ ಪರಿಚಯದ ಜೊತೆ ಕೊಡಬೇಕೆಂದಿದ್ದೇನೆ.
ಅಂತರ ಜಾಲದಲ್ಲಿ ನನಗೆ ಸಿಕ್ಕದ್ದು ಇದೊಂದೆ ಅಲ್ಲ. ಪಂ. ಬಾಳಾಚಾರ್ಯರು ತಮ್ಮ ಕಾಲದಲ್ಲಿ ದೇಶದಾದ್ಯಂತ ಇದ್ದ ಐದು ಸಾವಿರ ಸಂಸ್ಕೃತ ಪಂಡಿತರಲ್ಲಿ ಒಬ್ಬರಾಗಿದ್ದರೆಂದು ಉಲ್ಲೇಖಗೊಂಡವರು ಎಂಬ ಮಾಹಿತಿ. ಆ ಉಲ್ಲೇಖವಿರುವ ಪುಸ್ತಕದ ಹೆಸರು : संस्कृत विद्वत् परिचायिका – ಈ ವಿಷಯವೂ ಅಂತರ್ ಜಾಲವನ್ನು ತದಕಾಡುತ್ತಿದ್ದಾಗ ಇತ್ತೀಚೆಗೆ, ಜನೆವರಿ ೮, ೨೦೧೭ರಂದು ಸಿಕ್ಕಿತು.
ಅದು Inventory of Sanskrit Scholars (संस्कृत विद्वत् परिचायिका) ಎಂಬ ಪುಸ್ತಕ. Gen. Editor – Radha Vallabha Tripathi, Published by Rashtriya Sanskrit Samsthan, Deemed University, New Delhi -110 058 (First Edition – 2012, Price : Rs.450). (Inventory includes the details of about 5000 Sanskrit Scholars).
ಅದರಲ್ಲಿನ Page 141 ರಲ್ಲಿ ಬಂದಿರುವ ಮಾತುಗಳು : “Mangalavede Balacharya Bandacharya. Bhushan in Kavya, Purana Pravina, Mahabhagavatacharya. b. 05-05-1903, Yajnakund, Belgaum, KT. Rtd. Teacher, GP Pt. Pradyumnaacharya, Pt.Narasimhacharya. Add. 4747, Torali galli, Hubli-20 (KT). Spl Ref. Sahitya, Purana”.
ಬಾಳಾಚಾರ್ಯರ ಅಂದಿನ ಭೆಟ್ಟಿಯ ಮತ್ತೂ ಕೆಲ ನೆನಪುಗಳು:
ಅವರ ಮನೆಗೆ, ನನ್ನ ಸೌಭಾಗ್ಯವತಿಯೊಡನೆ ನಾನು ಒಮ್ಮೆ ಹೋಗಿದ್ದೆ. ಅದನ್ನು ಈ ಮೊದಲೆ ಹೇಳಿದ್ದೇನೆ. ಆ ಭೆಟ್ಟಿಯ ವಿಷಯ ಮತ್ತಿಷ್ಟು ನೆನಪಿನಲ್ಲಿದ್ದುದನ್ನು ಹೇಳಬೇಕೆನಿಸುತ್ತದೆ. ಏಕೆಂದರೆ ಆ ಮೊದಲ ಭೆಟ್ಟಿಯೆ ಕಡೆಯದೂ ಆಗಿತ್ತಲ್ಲವೆ!
ಇರಲಿ, ಆ ದುಃಖ ಒಂದೆಡೆ. ಸಮಾಧಾನದ ಸಂಗತಿಯೆಂದರೆ, ಹಿರಿಯರ ಭೆಟ್ಟಿಗೆ ಹೋಗುವಾಗ ಮಾಡಿಕೊಳ್ಳ ಬೇಕಾದ ಯಾವ ಪೂರ್ವ ಸಿದ್ಧತೆಯನ್ನೂ ಮಾಡಿಕೊಳ್ಳದೆ ಹೋಗಿದ್ದಾಗಲೂ, ಅವರ ಪಾದ ಪೂಜೆ ಮಾಡುವ ಅವಕಾಶ ಸಿಕ್ಕದ್ದು. ನಾನು ಮನೆಯಲ್ಲಿ ಕಾಲಿಟ್ಟು, ಕುಳಿತು ನನ್ನ ಭೆಟ್ಟಿಯ ಉದ್ದೇಶದ ಉಪೋದ್ಘಾತವನ್ನು ಪೂರ್ಣಗೊಳಿಸಿರಲಿಲ್ಲ. ಆ ವೃದ್ಧರನ್ನು ಭೆಟ್ಟಿಯಾಗಲು ಬಳಗದವರೆ (ವಾವೆಯಲ್ಲಿ ಮೊಮ್ಮಗ – ಹುಬ್ಬಳ್ಳಿಯಲ್ಲೆ ಚಿಟಗುಪ್ಪಿ ಚಾಳಿನಲ್ಲಿದ್ದ, ನಾರಾಯಣ ರಾಮಚಂದ್ರಾಚಾರ್ಯ ಮಂಗಳವೇಢೆ ದಂಪತಿಗಳು, ಜೊತೆಗೆ ಬಳದವರೆ ಇನ್ನೊಬ್ಬರು, ಬಹಳ ಸಿದ್ಧರಾಗಿ – ಆ ಹೆಣ್ಣುಮಗಳು ರೇಶ್ಮೆ ಸೀರೆ ಉಟ್ಟು ಬಂದಿದ್ದರು.
ಬಂದದ್ದು ತಮ್ಮ ಹೊಸ ಮನೆಯಯ ಗೃಹ ಪ್ರವೇಶ ಮತ್ತು ವಾಸ್ತುಶಾಂತಿ ಸಮಾರಂಭಕ್ಕೆ ಆಮಂತ್ರಣ ಕೊಡಲೆಂದು. ಸ್ವಾಭಾವಿಕವಾಗಿಯೆ ಗಡಿಬಿಡಿಯಲ್ಲಿದ್ದರು. ಆಮಂತ್ರಣವನ್ನು ಬರಿ ಬಾಯುಪಚಾರದಲ್ಲಿ ಸಲ್ಲಿಸದೆ, ತಟ್ಟೆಯಲ್ಲಿ ಹೂವು ಹಣ್ಣುಗಳ ಸಮೇತ ಬಂದಿದ್ದರಲ್ಲದೆ, ಪಾದಪೂಜೆಯನ್ನು ಮಾಡಿ, ತಮ್ಮ ಹೊಸ ಮನೆಗೆ ಬರಬೇಕೆಂದು ಆಗ್ರಹಪೂರ್ವಕವಾಗಿ ಕರೆದರು. ಅವರು ಪಾದಪೂಜೆಯ ಸಿದ್ಧತೆಯನ್ನು ಮಾಡಿಕೊಳ್ಳುತ್ತ ಇದ್ದಾಗ ಅದನ್ನು ನೋಡುತ್ತಿದ್ದಂತೆಯೆ ನಮಗೂ ಪ್ರೇರಣೆಯಾಯಿತು. ಸ್ವಲ್ಪ ಹೊತ್ತಿನಲ್ಲೆ ಬರುತ್ತೇವೆಂದು ತಿಳಿಸಿ, ಸಮೀಪದಲ್ಲಿಯೆ ಇದ್ದ ಪೇಟೆಗೆ ಧಾವಿಸಿ ಹೂವು, ಮಾಲೆ, ಹಣ್ಣು ಇತ್ಯಾದಿ ಸಾಧ್ಯವಾದುದನ್ನೆಲ್ಲ ತಂದು ಪಾದಪೂಜೆಯನ್ನು ಮಾಡಿ, ನಮ್ಮ ಗೌರವ ಆದರ ನಮನಗಳನ್ನು ಅರ್ಪಿಸಿದೆವು. ಕರೆಯಲು ಬಂದಿದ್ದ ಆ ದಂಪತಿಗಳು ಜೊತೆಯಲ್ಲಿ ಕೆಮರಾವನ್ನೂ ತಂದಿದ್ದರು. ಅವರನ್ನು ವಿನಂತಿಸಿಕೊಂಡು ನೆನಪಿಗಾಗಿ ಫೋಟೊವನ್ನೂ ತೆಗೆಸಿಕೊಂಡೆವು. ಆ ನಂತರ ಮತ್ತೆ ಅವರನ್ನು ಸಂಪರ್ಕಿಸಿ ತೆಗೆದಿದ್ದ ಆ ಫೋಟೊವನ್ನು ತರಿಸಿಕೊಳ್ಳುವದು, ದುರ್ದೈವದಿಂದ ಆಗಲಿಲ್ಲ.
ಆಗಲೆ ೯೦-೯೧ ವರ್ಷದಷ್ಟು ವಯೋವೃದ್ಧರಾಗಿದ್ದ ಬಾಳಾಚಾರ್ಯರು ಉತ್ಸಾಹದಿಂದಲೆ ಮಾತನಾಡಿದರು. ಮಾತಿನಲ್ಲಿ ಹುರುಪು ಇದ್ದಿತು, ಯಾವ ಬೇಸರವೂ, ಅಶಕ್ತಿಯೂ ಕಾಣಲಿಲ್ಲ. ಆ ಬೆಳಗಿನ ಭೆಟ್ಟಿಯಲ್ಲಿ ಹೆಚ್ಚು ಮಾತನಾಡಲು ವೇಳೆಯೆ ಸಿಗಲಿಲ್ಲ. ಆದರೆ ಮೊದಲ ಸಲ ತಮ್ಮ ಮನೆಗೆ ಬಂದು ಪರಿಚಿತನಾಗಿದ್ದ ನನ್ನೊಡನೆ ಅವರಿಗೆ ಮಾತನಾಡುವದು, ಹೇಳಬೇಕೆನಿಸಿದ್ದು ಇನ್ನೂ ಬಹಳಷ್ಟಿದ್ದಿತು. ಮತ್ತೊಮ್ಮೆ – ಅಪರಾಹ್ನ ಬರಲು ಹೇಳಿದರು. ಅವರು ಹೇಳಿದ ವೇಳೆಗೆ ಹೋಗಲು ಸ್ವಲ್ಪ ತಡವಾದಾಗ – “ನಾನು ನಿಮ್ಮ ದಾರಿಯನ್ನೆ ನೋಡುತ್ತಿದ್ದೆ” ಎಂದು ಹೇಳಿ, ನನ್ನಲ್ಲಿ ತಮ್ಮ ಉತ್ಸುಕತೆಯನ್ನು ತೋರಿಸಿದರು. ನಮ್ಮ ಮನೆತನ, ಅಜ್ಜ ರಾಮಾಚಾರ್ಯರು ಇದೆಲ್ಲ ತಮಗೆ ಚೆನ್ನಾಗಿ ಗೊತ್ತು, ಎಷ್ಟೋ ವರ್ಷಗಳ ಕೆಳಗೆ ನಮ್ಮ ಮನೆಗೆ ಒಮ್ಮೆ ಬಂದಿದ್ದಾಗಿಯೂ ಹೇಳಿದರು. ನಾನು ಆಗ ಇನ್ನೂ ನನ್ನ ಹುಟ್ಟೂರಾದ ಬೆಳಗಾವಿಯಲ್ಲಿದ್ದೆ. ಅಲ್ಲಿನ ಮನೆಗೆ ಬಂದು ಹೋಗಿದ್ದರ ವಿಷಯ ಅದು.
ನನ್ನನ್ನು ನೋಡುತ್ತಲೆ, ಅಂದು ಬೇರೆ ವಿಷಯ ಮಾತನಾಡುವ ಮೊದಲು, ಟೀಕಾರಾಯರ ಕುರಿತು ಹೇಳಿ ಮುಂದಿನ ವಿಷಯದ ಶ್ರೀ ಗಣೇಶಾಯ ನಮಃ ಮಾಡಬೇಕೆಂದು ಒಳಗೆಲ್ಲೊ ಪ್ರೇರಣೆಯಾಗಿತ್ತೆಂದು ಕಾಣುತ್ತದೆ. ಏಕೆಂದರೆ ನಾನು ಅವರಲ್ಲಿಗೆ ಹೋಗಿದ್ದು ನಮ್ಮ ಮನೆತನದ ಇತಿಹಾಸ ಮತ್ತು ಹಿರಿಯರ ಬಗ್ಗೆ ತಿಳಿದುಕೊಳ್ಳುವ ಉದ್ದೇಶದಿಂದ ಅಲ್ಲವೆ! ಮತ್ತು, ನಾವು ಟೀಕಾರಾಯರ ಊರಿನವರಲ್ಲವೆ! ಅವರ ಬಗ್ಗೆ ನನ್ನ ತಿಳಿವಳಿಕೆ ಎಷ್ಟು ಎಷ್ಟು ಎಂಬುದನ್ನು ತಿಳಿದುಕೊಳ್ಳಲು ಒಂದೆರಡು ಪ್ರಶ್ನೆ ಕೇಳಿದರು. ಆ ವಿಷಯದ ಬಗ್ಗೆ ನನಗಿದ್ದ ತೀರ ಅಲ್ಪ ಜ್ಞಾನದ ಕಲ್ಪನೆ ಬರಲು ಹೆಚ್ಚು ಹೊತ್ತೇನೂ ಬೇಕಿರಲಿಲ್ಲ.
ಟೀಕಾರಾಯರ ಊರಿನವರು ನಾವು ಎಂದಿರುವಾಗ ಅವರ ಬಗ್ಗೆ ತಿಳಿಸುತ್ತಲೆ ಶುರುಮಾಡುವೆ ಎಂದು ಹೇಳಿ, ಆ ಕುರಿತೆ ಹೆಚ್ಚು ಮಾತನಾಡಿದರು. ಅಲ್ಲಿ, ಟೀಕಾರಾಯರ ಮನೆಯನ್ನು ನೋಡಿದ್ದೀರಾ ಎಂದು ಕೇಳಿ – ಅಂಗಳದಲ್ಲಿ ಬಾವಿಯಿದೆ. ಅದಕ್ಕೆ ಗಡಗಡೆ ಇಲ್ಲ. ಅದು ದೇಶಪಾಂಡೆಯವರ – ಸರದಾರರ ಮನೆ. ಆ ವಾಡೆ ಇನ್ನೂ ಇದೆ. ಎಂದೆಲ್ಲ ವರ್ಣಿಸಿದರು, ಅದನ್ನು ನೋಡಿ ಬಾ ಎಂಬುದನ್ನು ಸೂಚ್ಯವಾಗಿ ತಿಳಿಸುತ್ತ. ನನ್ನ ಕುತೂಹಲದ ವಿಷಯ ವಂಶಾವಳಿಯ ಬಗ್ಗೆ ಹೆಚ್ಚು ಕೇಳಲು ಅವಕಾಶವನ್ನೆ ಕೊಡಲಿಲ್ಲ.
ಅವರು ಹೇಳಿದ್ದ, ಮಂಗಳವೇಢೆ ಊರಲ್ಲಿ ನಮ್ಮ ಪೂರ್ವಿಕರು ಟೀಕಾರಾಯರ ಮನೆ ಪುರೋಹಿತರಾಗಿದ್ದರು ಮತ್ತು ನಮ್ಮ ಮೂಲ ಪುರುಷ ವೇ.ಪಂ. ಕುಂಭಾರಿ ಗೋಪಾಳಾಚಾರ್ಯ ಜೋಶಿ ಇತ್ಯಾದಿ ಅಂಶಗಳನ್ನು ಪ್ರಾರಂಭದಲ್ಲಿಯೆ ಪ್ರಸ್ತಾಪಿಸಿದ್ದೇನೆ.
ಅವರು ನಮ್ಮ ಮನೆತನದ ಇತಿಹಾಸ ಕುರಿತು ಹೇಳಿದ ಮತ್ತೊಂದು ಮಾತು – (ಮುಖ್ಯವಾಗಿ) ಧೋಂಡೊಪಂತರು ಸನ್ಯಾಸ ತೆಗೆದುಕೊಂಡದ್ದರಿಂದ, ಕುಂಭಾರಿಯವರ ಕಾಲದಲ್ಲಿಯೆ (ಕೆಲವರು) ಮಂಗಳವೇಢೆ ಊರನ್ನು ತೊರೆದು ಬೇರೆ ಬೇರೆ ಕಡೆ ತೆರಳಿದರು. ವೈದಿಕ ಜನ ಪಂಢರಪುರ, ಮುರಗೋಡ, ಯಕ್ಕುಂಡಿ, ಅಹಮ್ಮದಾಬಾದ, ಗುರ್ಲಹೊಸೂರ, ಬಡ್ಲಿ ಇತ್ಯಾದಿಕಡೆ ಮತ್ತು ಗೃಹಸ್ಥರು (ಯಜಮಾನರು) (ಟೀಕಾರಾಯರ ಮನೆತನದವರು) ಬಾಗಲಕೋಟಿಗೆ ಮತ್ತೂ ಬೇರೆ ಬೇರೆ ಕಡೆಗೆ ತೆರಳಿದರು, ಹೊಟ್ಟೆಪಾಡಿಗಾಗಿ. ಮುಂದೆ ಮುರಗೋಡದ ಶ್ರೀ. ಚಿದಂಬರ ದೀಕ್ಷಿತರ ಕಾಲದಲ್ಲಿಯೂ ಈ ವಲಸೆ ನಡೆಯಿತು.
ನಾವು ತಾಸೆರಡು ತಾಸು ಅವರ ಮನೆಯಲ್ಲಿದ್ದೆನಷ್ಟೆ! ಆ ಅಲ್ಪ ಅವಧಿಯಲ್ಲಿ ಸ್ವಲ್ಪ ಸ್ವಲ್ಪ ತಮ್ಮಪತ್ನಿ, ಪರಿವಾರ, ಒಡಹುಟ್ಟಿದವರು, ಹಿರಿಯರು, ಕಕ್ಕಂದಿರು ಇವರುಗಳ ಹೆಸರು ಹೇಳಿದರು. ಮಾತಿನಲ್ಲಿ ಅವರ ಸಂಗ್ರಹದಲ್ಲಿ ವಂಶಾವಳಿ, ಹಳೆಯ ದಾಖಲೆಗಳು, ಹಿರಿಯರ ಬಗ್ಗೆ ಸಾಕಷ್ಟು ಮಾಹಿತಿ ಇದ್ದ impression ಸಿಕ್ಕಿತು. ಮುಂದಿನ ಭೆಟ್ಟಿಗಳಲ್ಲಿ ನನಗೆ ಬೇಕಾದ ಅನೇಕ ಮಾಹಿತಿ ಅವರಲ್ಲಿ ಸಿಕ್ಕೇಸಿಗುತ್ತದೆ ಎಂಬ ಭರವಸೆಯೂ ಹುಟ್ಟಿತು. ಆದರೆ ಅವರನ್ನು ಮತ್ತೆ ಕಾಣುವ ಯೋಗವೆ ಇರಲಿಲ್ಲ. ಹದಿನೈದೆ ದಿನಗಳ ನಂತರ ಅವರು ಇಲ್ಲವಾದ ಸುದ್ದಿಯನ್ನು ಪತ್ರಿಕೆಯಲ್ಲಿ ನೋಡಿದೆ.
ಬಾಳಾಚಾರ್ಯರ ಬಗ್ಗೆ ಬರೆಯುವಾಗ ಹೆಮ್ಮೆಯ ಜೊತೆಗೆ ಒಂದು ಕೊರಗೂ ಇದೆ. ಅವರ ಕಡೆಯ ಮಗ ಆ ಹಳೆಯ ಮನೆ ಬಿಟ್ಟಾಗಿದೆ. ಹೊಸ ಮನೆಯಲ್ಲಿ, ನೋಡ ಬೇಕು ಎಂದೆನಿಸಿದರೆ, ನಮ್ಮ ಹೆಮ್ಮೆಗೆ ಕಾರಣವಾದ ಅವರ ಆ ಬಿರುದು, ಆ ಪ್ರಶಸ್ತಿ, ಅದರ citation, ಯಾವ ಒಂದು ದಾಖಲೆಯೂ ಅವರ ಮನೆಯಲ್ಲಿ ಕಾಣಸಿಗುವದಿಲ್ಲ. ನಾನು ಕಲೆ ಹಾಕಿದ ಮಾಹಿತಿ “ಎಲ್ಲ ಮೌಖಿಕ”ವಾಗಿ ಕೇಳಿಬಂದದ್ದು. ಸ್ಮೃತಿಪಟಲದ ಮೇಲಿನ ಚಿತ್ರ ಕ್ರಮೇಣ ಮಾಸಿ ಹೋಗುತ್ತಿರುವಾಗ, ತಲೆಕೆರೆದು ನೆನಪಿಸಿಕೊಂಡು, ಆ ಕ್ಷಣಕ್ಕೆ ಕಣ್ಣೆದುರು ಹೊಳೆದಂತೆ ಹೇಳಿದ, ಕೇಳಿದ ಘಟನಾವಳಿಗಳ ವಿವರ. ಹತ್ತಾರು ಕಡೆ ನಿಖರತೆ ಇಲ್ಲದುದು. ಅಸ್ಪಷ್ಟ ಆಕಾರದ ಚಿತ್ರ.
ಈ ಜಾಲತಾಣದಲ್ಲಿ ಒಂದು archive ಕೂಡ ಇದೆ. ಎಲ್ಲೆಲ್ಲಿ ಮನೆತನದ ಅಥವಾ ವ್ಯಕ್ತಿಯ ಇತಿಹಾಸ ಬಂದಿದೆಯೊ ಅದಕ್ಕೆ ಅಧಾರವಾಗಿ ಕಾಗದ ಪತ್ರ, ದಸ್ತಾವೈಜುಗಳನ್ನು ಒದಗಿಸುವ ಪತ್ರಾಗಾರವಿದು. ಹೇಳಿದ್ದರ ವಿಶ್ವಾಸಾರ್ಹತೆಯನ್ನು ಸಾಬೀತು ಪಡಿಸುವ ವಿಭಾಗವಿದು. ಅವರಿಗೆ ಸಂಬಂಧಿಸಿದ ದಾಖಲೆಗಳು, ಸರ್ಟಿಫಿಕೇಟುಗಳು, ಪ್ರಶಸ್ತಿಯ citation, ಪ್ರಶಸ್ತಿ ಪ್ರದಾನ ಸಮಾರಂಭದ ಚಿತ್ರಗಳು, ಅವರ ಹಸ್ತಾಕ್ಷರದಲ್ಲಿನ ಕಾಗದಗಳು, ಸಹಿ ಇತ್ಯಾದಿಗಳು ನನಗೆ ನೋಡಸಿಕ್ಕಿದ್ದರೆ scan ಮಾಡಿ ಇದರಲ್ಲಿ ಸಂಗ್ರಹಿಸಿ ಇಡಬೇಕು ಎಂದುಕೊಂಡಿದ್ದೆ. ಅವುಗಳಿಂದ archiveದ ಬಾಳಾಚಾರ್ಯರಿಗೆ ಸಂಬಂಧಿಸಿದ ಈ ಭಾಗ ಪರಿವರ್ತನೆಯಾಗಿ archive cum showcase ಆಗುವ ನಿರೀಕ್ಷೆಯಲ್ಲಿದ್ದೆ. ನಿರಾಶೆ ಆಯಿತು. ಹೆಚ್ಚಾಗಿ ಇಲ್ಲಿನ “ಎಲ್ಲವೂ ಮೌಖಿಕ”ವಾಗಿ ಹೇಳಿದ್ದು, ಕೇಳಿದ್ದು ಮತ್ತು ಅದನ್ನೆ ಬರೆದದ್ದು ಆಗಿದೆ.
ಇದು ಒಂದು ವ್ಯಥೆಯಾದರೆ, ಮತ್ತೊಂದು ಇವರು ನಮ್ಮವರು ಎಂಬುದೂ ಗೊತ್ತಿಲ್ಲದೆ ಇರುವ ಅನೇಕರ ಅಜ್ಞಾನ. ಗೊತ್ತಿದ್ದವರ ಸ್ಮರಣೆಯೂ ಮಂಕಾಗುತ್ತಿದೆ. ಹೀಗಾಗದಂತೆ ಯಾರಾದರೂ ನೋಡಿಕೊಳ್ಳಬೇಕಿದೆ. ಆದರೆ ಯಾರು ಎಂಬ ಪ್ರಶ್ನೆ ಕಾಡುತ್ತದೆ.
ಬರೆದವರು : ಶ್ರೀಕಾಂತ ಮಂಗಳವೇಢೆ. ಪುಣೆ ಮುಕ್ಕಾಮಿನಲ್ಲಿ. ೨೮-೧-೨೦೧೭ (ಶನಿವಾರ) ಮಾಘ ಶುಕ್ಲ ಪ್ರತಿಪದಾ.
ಆಧಾರ : ಬಾಳಾಚಾರ್ಯರೊಡನೆ ೧೫ ಅಥವಾ ೧೬ನೆ ಸೆಪ್ಟೆಂಬರ ೧೯೯೩ರಲ್ಲಿ, ಹುಬ್ಬಳ್ಳಿಯ ಅವರ ಮನೆಯಲ್ಲಿ ನಡೆಸಿದ ಸಂದರ್ಶನ.
ಅವರ ಕಿರಿಯ ಮಗ ಗೋವರ್ಧಾಚಾರ್ಯರನ್ನು ತೊರವಿಗಲ್ಲಿಯ ಮನೆಯಲ್ಲಿ ೧೭ ಎಪ್ರಿಲ ೨೦೦೨ ರಂದು ನಡೆಸಿದ ಭೆಟ್ಟಿ, ೧೯ ಮಾರ್ಚ ೨೦೧೦ರಂದು ಅದೇ ಮನೆಗೆ ಮತ್ತೊಮ್ಮೆ ಹೋಗಿಬಂದು ಟಿಪ್ಪಣಿಗಳನ್ನು ಬರೆದುಕೊಂಡದ್ದು – ಅಷ್ಟು ಹೊತ್ತಿಗೆ ಅವರು ಆ ಮನೆಯನ್ನು ಆಗಲೆ ಮಾರಿ ಗೋಕುಲ ರೋಡಿನ ಮೇಲಿರುವ ಮಂಜುನಾಥ ನಗರದ ಹೊಸ ಮನೆಗೆ ಹೋಗಿದ್ದರು, ಭೆಟ್ಟಿಯಾಗದೆ ಮರಳಿದ್ದು, ಆ ಹೊಸ ವಿಳಾಸದಲ್ಲಿ ಅವರನ್ನು ೭ ಜನೆವರಿ ೨೦೧೫ ರಂದು (ಬುಧವಾರ) ರಂಗನಾಥ ನಾ. ಮಂಗಳವೇಢೆಯವರೊಡನೆ ಹೋಗಿ ಸಂದರ್ಶಿಸಿದ್ದು ಮತ್ತು ಬಾಳಾಚಾರ್ಯರ ಹಿರಿಯ ಪುತ್ರ ಯಾದವ ಅವರನ್ನು ಮುಳುಂಡದ ಅವರ ಮನೆಯಲ್ಲಿ ೧೦ ಎಪ್ರಿಲ್ ೨೦೧೬ (ರವಿವಾರ) ರಂದು ಭೆಟ್ಟಿಯಾಗಿ ಬರೆದುಕೊಂಡ ಟಿಪ್ಪಣಿಗಳು.