ಯಕ್ಕುಂಡಿಯ ಬಾಳಾಚಾರ್ಯರ ಪ್ರಪೌತ್ರ, ಬಂಡಾಚಾರ್ಯರ ಪೌತ್ರ, ಬಾಳಾಚಾರ್ಯರ ಪುತ್ರ ಮುಳುಂಡ (ಪೂರ್ವ) – ಮುಂಬಯಿ ನಿವಾಸಿ
ಮಾಣಿಕ ಭಟ್ಟ > ಬಾಳಂ ಭಟ್ಟ (ಬಾಳಕೃಷ್ಣ ಭಟ್ಟ ಜೋಶಿ) > ಮಧ್ವಾಚಾರ್ಯ (ಮದ್ದಂ ಭಟ್ಟ) > ಬಾಳಾಚಾರ್ಯ > ಬಂಡಾಚಾರ್ಯ > ಬಾಳಾಚಾರ್ಯ > ಯಾದವ
ವ್ಯಕ್ತಿ ಪರಿಚಯ
ಇನ್ನೂ ಭಾಷಾವಾರು ಪ್ರಾಂತಗಳು ನಿರ್ಮಾಣವಾಗಿರಲಿಲ್ಲ, ಆಗ ಬೆಳಗಾವಿ, ಧಾರವಾಡ, ಕಾರವಾರ ಮತ್ತು ಬಿಜಾಪುರ ಈ ಜಿಲ್ಲೆಗಳು ಮುಂಬಯಿ ಪ್ರಾಂತದ ಭಾಗ ವಾಗಿದ್ದವು. ೧೯೫೬ ರ ಪೂರ್ವದ ಆ ಕಾಲದಲ್ಲಿ ಉಚ್ಚ ಶಿಕ್ಷಣ ಮತ್ತು ಉದ್ಯೋಗಾವಕಾಶಕ್ಕಾಗಿ ನಮ್ಮ ಭಾಗದ ಜನರ ಮುಖ ಪುಣೆ, ಮುಂಬಯಿಕಡೆಗೆ ಹೊರಳಿರುತ್ತಿತ್ತು. ಮಧ್ಯಮ ವರ್ಗದ ಹೆಚ್ಚಿನ ಜನ ಮಾಧ್ಯಮಿಕ ಶಾಲೆಯನ್ನು ಮುಗಿಸಿದೊಡನೆ ಕೆಲಸಕ್ಕೆ ಹತ್ತುವದು ಸಾಮಾನ್ಯವಾಗಿತ್ತು.
ಹೀಗೆ, ನೌಕರಿ ಹುಡುಕುತ್ತಿದ್ದಾಗ ಯಾದವ ಅವರಿಗೆ ಮುಂಬಯಿಯ ದಾದರಿನಲ್ಲಿ ಒಂದು ಸಹಕಾರಿ ಬ್ಯಾಂಕು ಕೆಲಸವನ್ನು ಕೊಟ್ಟಿತು. ಇದು ೧೯೫೪ರಲ್ಲಿ. ನಾಕು ವರ್ಷದ ನಂತರ ೧೯೫೯ ರಲ್ಲಿ ಅದಕ್ಕೂ ಒಳ್ಳೆಯ ಉದ್ಯೋಗಾವಕಾಶವನ್ನು ಅದೇ ಮಹಾನಗರದಲ್ಲಿ ಬ್ಯಾಂಕ ಆಫ ಮಹಾರಾಷ್ಟ್ರ ಅವರಿಗೆ ಕೊಟ್ಟಿತು. ಮುಂದೆ ಅದನ್ನು ಬದಲಿಸುವ ಪ್ರಸಂಗವೆ ಬರಲಿಲ್ಲ. ಸುಮಾರು ೩೬ ವರ್ಷಗಳ ಅದೇ ಬ್ಯಾಂಕಿನಲ್ಲಿ ಕೆಲಸ ಮಾಡುತ್ತ ಇಂದಿನ ಮಹಾರಾಷ್ಟ್ರದಲ್ಲಿಯೆ ಉಳಿದುಬಿಟ್ಟರು. ೧೯೯೫ರಲ್ಲಿ ನಾಗಪುರದಲ್ಲಿ (ಎಕ್ಸೆಕ್ಯೂಟಿವ) ಚೀಫ ಮ್ಯಾನೇಜರ ಆಗಿದ್ದಾಗ ನಿವೃತ್ತರಾದರು.
ಆ ಮೊದಲೆ ೧೯೬೮ರಲ್ಲಿ ಮುಳುಂಡ (ಪೂರ್ವ) ದಲ್ಲಿ ಅಪಾರ್ಟಮೆಂಟ ತೆಗೆದುಕೊಂಡಿದ್ದರು. ಕಾಲಾಂತರದಲ್ಲಿ ಕಟ್ಟಡ ಹಳೆಯದಾದಂತೆ ಅದಕ್ಕೆ ಕಾಯಕಲ್ಪವಾಗಿ ನವೀಕೃತಗೊಂಡಿತು. ಹೊಸದಾಗಿ ಸಿದ್ಧಗೊಂಡ ವಾಸ್ತುವಿನಲ್ಲಿ ಇವರ ಮನೆ ಸ್ವಲ್ಪ ಸ್ಥಾನಾಂತರ ಹೊಂದಿತು. ಪುನರ್ನವವಾದ ಆ ನಿವಾಸ ಇನ್ನೂ ಚಂದಗೊಂಡಿತು. ಬಹಳ ಹಿಂದೆಯೆ – ಸ್ಥಳಾವಕಾಶ, ವಿಸ್ತಾರ ಈಗಿನಂತೆ ಸಂಕೋಚಗೊಂಡಿರದ ಆ ಕಾಲದಲ್ಲಿ ಕೊಂಡಿದ್ದ ಫ್ಲ್ಯಾಟ ಅದು. ಮುಂಬಯಿ ಮಾನದಿಂದ ಈಗ ಅಷ್ಟು ವಿಶಾಲವಾದ ಮನೆಯನ್ನು ಹೊಸದಾಗಿ ಖರೀದಿಸುವದು ಬಹಳ ತುಟ್ಟಿಯ ವ್ಯವಹಾರ. ಅದರಲ್ಲಿ ತಮಗೆ ಬೇಕಾದ ಸೌಕರ್ಯ ಮತ್ತು ಅಲಂಕಾರವನ್ನು ಒಂದು ಅಭಿರುಚಿಯೊಂದಿಗೆ ಮಾಡಿಕೊಂಡು ಇದ್ದಾರೆ.
ಹೀಗೆ, ಉದ್ಯೋಗವನ್ನರಸಿ ಮುಂಬಯಿಗೆ ಹೋದ ಯಾದವ ಅವರು ಸುಮಾರು ಅರವತ್ತು ವರ್ಷಗಳಿಂದ ಅಲ್ಲಿನವರೆ ಆಗಿ ಬಿಟ್ಟಿದ್ದಾರೆ.
ತಂದೆ ಸಂಸ್ಕೃತ, ವೇದಾಂತ, ಮಾಧ್ವ ತತ್ವವಾದ ಇತ್ಯಾದಿಗಳ ಅಧ್ಯಯನ ಮಾಡುತ್ತ ಪಂಡಿತರೆನಿಸಿಕೊಂಡು ಹುಬ್ಬಳ್ಳಿಯಲ್ಲಿ ನಡೆಸಿದ ಜೀವನ ಶೈಲಿ ಒಂದು ಬಗೆಯದು. ಕಾಲೇಜು ಪದವಿಯನ್ನು ಪಡೆಯಲಾಗದಿದ್ದರೂ, ಸಿಕ್ಕ ಉದ್ಯೋಗಾವಕಾಶದಲ್ಲಿ ತಮ್ಮ ಕಾರ್ಯಕ್ಷಮತೆಯಿಂದ ಪದೋನ್ನತಿ ಪಡೆದು ಒಂದು ಜವಾಬುದಾರಿಯ ಹುದ್ದೆಯನ್ನು ಹೊಂದಿ ನಿವೃತ್ತಿ ಹೊಂದಿದ ಹಿರಿಯ ಮಗನ ಜೀವನಶೈಲಿ ಮತ್ತೊಂದು ಬಗೆಯದು. ಕಾಲಕ್ಕೆ ತಕ್ಕಂತೆ ಬದಲಾದುದು. ಹಳೆಯದು ಹೋಗಿ ಆ ಜಾಗವನ್ನು ಬಹಳಷ್ಟು ಹೊಸದು ಆಕ್ರಮಿಸಿದ್ದರೂ, ಯಾದವ ಅವರು ಹಳೆಯದನ್ನು ಪೂರ್ತಿ ಬಿಟ್ಟಿಲ್ಲ, ಒಂದು ಸಮನ್ವಯವನ್ನು ಸಾಧಿಸಿದ್ದಾರೆ.
ಮುಂಬಯಿ ಫ್ಲ್ಯಾಟುಗಳಲ್ಲಿ ದೇವರ ಮನೆಯೆಂಬುದು ಪ್ರತ್ಯೇಕವಾಗಿರುವದಿಲ್ಲ. ಪ್ರತಿಯೊಂದು ಮಲಗುವ ಕೋಣೆಗೆ ಅದಕ್ಕೆ ಹೊಂದಿದ ಶೌಚಗೃಹ ಇದ್ದರೂ, ದೇವರಿಗೆ ಮಾತ್ರ ಪ್ರತ್ಯೇಕವಾದ, ಬಿಡಿಯಾದ ಸ್ವತಂತ್ರ ಸ್ಥಳ ಇರುವದಿಲ್ಲ. ಯಾವುದೋ ಗೋಡೆಯೊಂದರ ಮೇಲೆ, ಸ್ವಲ್ಪ ಎತ್ತರದಲ್ಲಿ ಒಂದು ಸಣ್ಣ ಮಂಟಪ, ಇಲ್ಲ ಒಂದು ಫಳಿ, ಆ ಅಂತರಾಳಿ ಮಣೆಯ ಮೇಲೆ ದೇವರೂ ಮುದುಡಿಕೊಂಡು “ವಿರಾಜಮಾನ”ನಾಗಿರುತ್ತಾನೆ. ಆ ಮಣೆಯ ತುಂಬ ಊದುಬತ್ತಿ ಬೂದಿ, ಒಣಗಿದ ಹೂವುಗಳು. ಮೂರ್ತಿಗಿಂತ ಫೋಟೊ ರೂಪದಲ್ಲಿಯೆ ದೇವರು ಹೆಚ್ಚಾಗಿ ಕಾಣುವದು.
ದೇವರ ಮನೆ
ಆದರೆ ಯಾದವ ಅವರ ಮನೆಯಲ್ಲಿ ದೇವರಿಗೇ ಪ್ರತ್ಯೇಕ ಸ್ಥಳ, ಸಂಗಮರವರಿ ಕಟ್ಟೆ, ರಂಗೋಲಿ ಭೂಷಿತ ಕಲ್ಲಿನ ನೆಲಗಟ್ಟಿನ ಮೇಲೆ ಮಂಟಪ, ಕೃಷ್ಣಾಜಿನದ ಪೆಟ್ಟಿಗೆ, ಸಂಪುಷ್ಟ, ಮಣೆ ಎಲ್ಲ ಇವೆ. ತಂದೆಯಿಂದ ಪಡೆದ ಶಾಲಿಗ್ರಾಮ, ಸುದರ್ಶನಗಳ ಸಹಿತ ದೇವ ಪ್ರತಿಮೆಗಳಿವೆ. ನಿಂತು ಅಲ್ಲ, ಆರಾಮಾಗಿ ನೆಲದ ಮೇಲೆ ಐಸಪೈಸ ಆಗಿ ಕುಳಿತು ಪೂಜಿಸಬಹುದು. ಅವರ ಸೌಭಾಗ್ಯವತಿ ಹೇಳಿದರು. ಬೆಳಿಗ್ಗೆ ಬೇಗನೆ ಎಚ್ಚರವಾಗುತ್ತದೆ. ನಾಕೂವರೆ ಐದರ ಒಳಗೆ ಸ್ನಾನ ಮುಗಿಯುತ್ತದೆ. ಮಡಿಯಿಂದ ಪೂಜೆ ಆಗುತ್ತದೆ. ಬೆಳಗಾಗುವ ಹೊತ್ತಿನಲ್ಲಿ ಪೂಜಾ ಕಾರ್ಯ ಮುಗಿದುಬಿಟ್ಟಿರುತ್ತದೆ.
ತಾಯಿಯ ತೌರು ಮನೆ ಯಕ್ಕುಂಡಿಯ ಹರಿತ ಗೋತ್ರದ ಕಟ್ಟಿಮನೆತನ, ಈ ಮನೆತನದ ಪೂರ್ವಿಕರಲ್ಲಿ ಶ್ರೀ ಯಾದವಾರ್ಯರ ಶಿಷ್ಯ ಶ್ರೀ ಲಕ್ಷ್ಮೀ ನರಸಿಂಹಾಹಾಚಾರ್ಯ ಎಂಬ ಪೂಜ್ಯರೊಬ್ಬರು ಆಗಿ ಹೋದರು. ಈ ಪೂಜ್ಯರನ್ನು ಮುಂದೆ ಕಟ್ಟಿ ಮತ್ತು ಮಂಗಳವೇಢೆ (ಯಕ್ಕುಂಡಿ ಮೂಲದ ಅಂದರೆ ಒಂದನೆ ಟಿಸಿಲಿನ ಮಂಗಳವೇಢೆ) ಈ ಎರಡೂ ಮನೆತನಗಳು ತಮ್ಮ ಕುಲಗುರು ಎಂದು ಮನ್ನಿಸಿ, ಪ್ರತಿ ವರ್ಷ ಅವರ ನೆನಪಿನಲ್ಲಿ ವೈಶಾಖ ಶುದ್ಧ ಸಪ್ತಮಿ ಮತ್ತು ಅಷ್ಟಮಿಯಂದು “ಆಚಾರ್ಯ ಪ್ರಯೋಜನಿ” ಯನ್ನು ಆಚರಿಸುವ ಪರಿಪಾಠ ಇಟ್ಟುಕೊಂಡಿದ್ದಾರೆ. ಈ ಆರಾಧನೆ ಮುಳುಂಡದ ಇವರ ಮನೆಯಲ್ಲಿ, ಗೋವರ್ಧನ ಅವರು ಇರುವ ಹುಬ್ಬಳ್ಳಿಯ ಮನೆಯಲ್ಲಿ, ಧಾರವಾಡದಲ್ಲಿನ ಗಾಂಧಿ ನಗರದ ರಂಗನಾಥ ಅವರ ಮನೆಯಲ್ಲಿ (ದಿ. ನಾರಾಯಣ ಅವರ ಪುತ್ರ) ಹಾಗೆಯೆ ಈ ಬಳಗದ ಭಾವಿಕರು ಇರುವಲ್ಲೆಲ್ಲ ನಡೆಯುತ್ತದೆ. ಅಣ್ಣ ತಮ್ಮಂದಿರೆಲ್ಲ ಸೇರುತ್ತಾರೆ.
ಕಟ್ಟಿ ಮನೆತನದಲ್ಲಿ ಶ್ರೀ ಲಕ್ಷ್ಮೀ ನರಸಿಂಹಾಚಾರ್ಯರ ನಂತರದ ಹಿರಿಯರು – ೧. ಸುಬ್ರಹ್ಮಣ್ಯಾಚಾರ್ಯ ೨. ವೆಂಕಟರಮಣಾಚಾರ್ಯ ೩. ಗೋಪಾಳಾಚಾರ್ಯ (ತುಳಸಾಬಾಯಿಯ ತಂದೆ, ಯಾದವ ಅವರ ಅಜ್ಜ) ೪. ವಿಟ್ಠಲಾಚಾರ್ಯ (ತುಳಸಾಬಾಯಿಯವರ ಸೋದರ, ಯಾದವ ಅವರ ಸೋದರ ಮಾವ).
ಜನನ ಮತ್ತು ಬಾಲ್ಯ: ಯಾದವ ಅವರ ಹುಟ್ಟಿದ ದಿನ ದಾಖಲೆಗಳಲ್ಲಿ ಎಪ್ರಿಲ್ ೧೦,೧೯೩೭ ಎಂದು ನಮೂದಾಗಿದ್ದರೂ, ನಿಜವಾಗಿ ಹುಟ್ಟಿದ್ದು ೧೯೩೬ರ ಶೀಗೀ ಹುಣ್ಣಿವೆಯ ದಿನ. ಅಕ್ಟೋಬರ ೨೭ ರಂದು, ಹುಬ್ಬಳ್ಳಿಯಲ್ಲಿ. ಅವರು ತಾಯಿ ತುಳಸಾಬಾಯಿ ಅವರಿಗೆ ಮೂರನೆಯ ಸಂತಾನ. ಇವರ ಮೊದಲು ಹುಟ್ಟಿದವರು ಚೊಚ್ಚಲ ಮಗಳು ಕಾಂತಾ ಮತ್ತು ಬೆನ್ನಮೇಲಿನ ಲಕ್ಷ್ಮೀ ನರಸಿಂಹ (ಅಣ್ಣಪ್ಪ). ಹೆಣ್ಣುಮಗಳು ಮುಂದೆ ಮದುವೆಯಾಗಿ ಶ್ರೀ ಸತ್ಯಧ್ಯಾನರ ಮನೆತನದ ಕೊರ್ಲಹಳ್ಳಿ ಹಣಮಂತಾಚಾರ್ಯರ ಪತ್ನಿಯಾದರು. ಲಕ್ಷ್ಮೀ ನರಸಿಂಹ ಮ್ಯಾಟ್ರಿಕ ಕ್ಲಾಸಿನಲ್ಲಿರುವಾಗಲೆ ತೀರಿಕೊಂಡಿದ್ದರಿಂದ, ಯಾದವ ಅವರೆ ಬಾಳಾಚಾರ್ಯರ ಹಿರಿಯ ಮಗನಾದರು. ಇವರ ಬೆನ್ನ ಮೇಲೆ ಹುಟ್ಟಿದವರೆ ಬಂಡಾಚಾರ್ಯ.
ಆದರೆ ಉಳಿದ ಈ ಮೂವರೂ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೆ ತಾಯಿಯನ್ನು ಕಳೆದುಕೊಳ್ಳುವದಿತ್ತು. ಮತ್ತೊಂದು ಮಗುವಿನ ಹೆರಿಗೆಯಲ್ಲಿ. ಅದು ಬಹುಶ: ೧೯೪೨ರ ಸುಮಾರಿನಲ್ಲಿ. ಹುಬ್ಬಳ್ಳಿಯ ರೇಲ್ವೆ ಹಾಸ್ಪಿಟಲದಲ್ಲಿ ಬಾಣಂತಿತನದಲ್ಲಿಯೆ ತುಳಸಾಬಾಯಿ ಮತ್ತು ಕೂಸು ಉಳಿಯದೆ ಹೋದರು. ಆಗ ಯಾದವ ಅವರಿಗೆ ಐದು ವರ್ಷ, ಬಂಡಾಚಾರ್ಯರಿನ್ನೂ ಸವ್ವಾ ವರ್ಷದ ಮಗು.
ಕಾಲ ನಿಲ್ಲುತ್ತದೆಯೆ! ಹುಡುಗರು ದೊಡ್ಡವರಾಗುತ್ತಿದ್ದರು. ಅವರ ಲಾಲನೆ ಪಾಲನೆಗೆ ಮನೆಯಲ್ಲಿ ಗೃಹಿಣಿಯಿರಲಿಲ್ಲ. ಹಬ್ಬ ಹರಿದಿನಗಳನ್ನು, ಪೂಜೆ ಪುರಸ್ಕಾರ ಕಷ್ಟವಾಗತೊಡಗಿತ್ತು. ತಂದೆ ಬಾಳಾಚಾರ್ಯರು ಮತ್ತೊಂದು ಮದುವೆಯಾಗಿ, ಬಡ್ಲಿ ಊರಿನ ಭೀಮರಾವ ಕುಲಕರ್ಣಿಯವರ ಮಗಳು ಶಾಂತಾಬಾಯಿಯನ್ನು ಮದುವೆಯಾಗಿ, ಮನೆ ತುಂಬಿಸಿಕೊಂಡರು. ಮುಂದೆ ಅವರ ಹೊಟ್ಟೆಯಿಂದ ಮೂರು ಮಕ್ಕಳು – ಎರಡು ಹೆಣ್ಣು, ಒಂದು ಗಂಡು – ೧. ಸೇತೂಬಾಯಿ (ಜನ್ಮ ೧೯೪೮ರಲ್ಲಿ ?), ೨. ಮಾಯಾವತಿ ಮತ್ತು ೩. ಗೋವರ್ಧನ (ಜನ್ಮ೧೯೫೩ರಲ್ಲಿ) – ಹುಟ್ಟಿದರು.
ಯಾದವ ಅವರ ಬಾಲ್ಯ ಹುಬ್ಬಳ್ಳಿಯಲ್ಲಿ ಕಳೆಯಿತು, ಕಲಿತದ್ದು ಅಲ್ಲಿನ ತೊರವಿ ಸ್ಕೂಲ ಎಂದು ಕರೆಯಲ್ಪಡುತ್ತಿದ್ದ ನ್ಯೂ ಇಂಗ್ಲಿಷ ಸ್ಕೂಲಿನಲ್ಲಿ. ವೃತ್ತಿ ಜೀವನದ ಪ್ರಾರಂಭವಾದುದು ೧೯೫೪ರಲ್ಲಿ ಮುಂಬಯಿಯ ದಾದರಿನ ಕೋ-ಆಪರೇಟಿವ ಬ್ಯಾಂಕದಲ್ಲಿ ಸಿಕ್ಕ ಕೆಲಸದೊಡನೆ. ನಂತರ ೧೯೫೯ರಲ್ಲಿ ಮುಂಬಯಿಯಲ್ಲಿಯೆ ಬ್ಯಾಂಕ ಆಫ ಮಹಾರಾಷ್ಟ್ರ ಸೇರಿಕೊಂಡಿದ್ದು. ಕೊನೆಯವರೆಗೂ ಅದೇ ಬ್ಯಾಂಕಿನ ಸೇವೆಯಲ್ಲಿದ್ದು, ೧೯೯೬ರ ಅಕ್ಟೋಬರದಲ್ಲಿ ನಾಗಪುರದಲ್ಲಿ ಚೀಫ಼್ ಮ್ಯಾನೇಜರ ಆಗಿದ್ದಾಗ ನಿವೃತ್ತರಾದರು.
ಮದುವೆ, ಮಕ್ಕಳು: ಕೆಲಸ ಸಿಕ್ಕು ಎಂಟು ಒಂಬತ್ತು ವರ್ಷಗಳಾಗಿದ್ದವು. ಜೀವನಕ್ಕೆ ಒಂದು ಸ್ಥಿರತೆ ಬಂದಿದ್ದಿತು. ಮದುವೆ ವಯಸ್ಸೂ ಆಗಿದ್ದಿತು. ಇಪ್ಪತ್ತೇಳನೆ ವಯಸ್ಸಿಗೆ ಆ ಯೋಗವೂ ಬಂದಿತು. ಧಾರವಾಡದ ಪದ್ಮಾವತಿ ಎಂಬುವರು ಪತ್ನಿಯಾಗಿ ಮನೆ ತುಂಬಿದರು. ಅನ್ಯತ್ರ ಕಾಣದ ಒಂದು ವಿಶೇಷ ಎಂದರೆ – ಯಾದವ ಅವರು ಇವರನ್ನು ವರಿಸಿದ್ದರಿಂದ ಈ ಮಹಿಳೆ ಮಂಗಳವೇಢೆ ಎಂಬ ಅಡ್ಡಹೆಸರನ್ನು ಹೊಂದಲಿಲ್ಲ. ಮದುವೆಯ ಮೊದಲೂ ಪದ್ಮಾವತಿ ಮಂಗಳವೇಢೆ ಆಗಿಯೆ ಇದ್ದವರು.
ಸೌ. ಪದ್ಮಾವತಿ
ಹೆಣ್ಣುಕೊಟ್ಟ ಮಾವ ಕೂಡ ಮಂಗಳವೇಢೆಕರ ಎಂಬ ಅಡ್ದಹೆಸರಿನವರೆ. ಆದರೆ, ಬೇರೆ ಗೋತ್ರದವರು. ನಾವು ಮುರಗೋಡ / ಯಕ್ಕುಂಡಿ ಮೂಲದವರಾಗಿದ್ದ ಹಾಗೆಯೆ ಇವರು ಬಾಗಲಕೋಟೆ ಮೂಲದವರು. ಅವರ ಹಿರಿಯರೂ ಈ ಕಡೆಗೆ ವಲಸೆ ಬಂದು ಮೊದಲಲ್ಲಿ ಬಾಗಿಲುಕೋಟೆಯಲ್ಲಿ ನೆಲಸಿದ್ದರು. ಕಾಲಾಂತರದಲ್ಲಿ ಮತ್ತೆ ಬೇರೆ ಬೇರೆ ಕಡೆ ಹೋದರು. ಅಂತಹ ಒಂದು ಕುಟುಂಬದ ಗುರುರಾವ ರಂಗರಾವ ಮಂಗಳವೇಢೆಕರ ಧಾರವಾಡದಲ್ಲಿ ಪಿ.ಡಬ್ಲು.ಡಿ ಯಲ್ಲಿ ಓವರಸೀಅರ ಆಗಿದ್ದರು.
ಒಂದು ಟಿಪ್ಪಣಿ: ಗುರುರಾವ ಅವರ ಹುಟ್ಟಿದ ದಿನಾಂಕ ಅವರ ಮಗಳು ಪದ್ಮಾವತಿಯವರಿಗಾದರೂ ಗೊತ್ತಿದೆಯೊ ಇಲ್ಲವೊ, ನನಗೆ ಆ ಮಾಹಿತಿ ಇದೆ. ನೂರಾ ಇಪ್ಪತ್ತು ವರ್ಷಗಳ ಹಿಂದಿನ ತಾರೀಖು ಅದು. ಈ ವಿಷಯ ನನಗೆ ಗೊತ್ತಾದದ್ದು ಹೀಗೆ.
ನನಗೆ ಇಪ್ಪತ್ತೈದು ವರ್ಷಗಳ ಹಿಂದಿನ ವರೆಗೂ ನನ್ನ ತಂದೆ ಧಾರವಾಡದಲ್ಲಿದ್ದು ಮಾಧ್ಯಮಿಕ ಶಿಕ್ಷಣ ಪಡೆದಿದ್ದರು ಎಂಬುದು ಮಾತ್ರ ಗೊತ್ತಿದ್ದಿತು, ಅವರ ಒಂದು ಹಳೆಯ ಪಠ್ಯ ಪುಸ್ತಕ – ಅದರಲ್ಲಿ ಬರೆದಿದ್ದ ತಮ್ಮ ಹೆಸರು, ಶಾಲೆಯ ಹೆಸರು, ವರ್ಗ ಈ ಎಲ್ಲ ವಿವರಗಳಿದ್ದರೂ ಯಾವ ವರ್ಷ ಆ ವರ್ಗದಲ್ಲಿದ್ದರು ಎಂಬುದು ಗೊತ್ತಾಗದೆ ಚಡಪಡಿಸುತ್ತಿದ್ದೆ. ಯಾವುದೋ ಒಂದು ದಿನ ಆ ಪುಸ್ತಕದ ಮೇಲೆ ಹಾಕಿದ್ದ ಖಾಕಿ ಕಾಗದದ ಹೊದಿಕೆಯನ್ನು (Brown paper cover) ತೆಗೆದು ಆ ಪುಸ್ತಕದ ಮುಖ ಪುಟ ನೋಡ ಬೇಕೆನಿಸಿತು. ಹಾಗೆ ಮಾಡಿದಾಗ, ಹುಡುಕುತ್ತಿದ್ದುದು ಸಿಕ್ಕಿತು. ಅವರು ಆಗ ಕೊಟ್ಟ ಫೀ ರಿಸೀಟು. ಅದರ ಮೇಲಿತ್ತು ತಾರಿಖು ಮತ್ತು ಇಯತ್ತೆ.
ಈಗ ನಾನು ಬೆಳಗಾವಿಯಲ್ಲಿಲ್ಲ. ಧಾರವಾಡದಲ್ಲಿದ್ದೇನೆ. ಆ ರಸೀದಿ ಹಿಡಿದುಕೊಂಡು ಕರ್ನಾಟಕ ಹಾಯಸ್ಕೂಲಿಗೆ ಹೋದೆ. ತೊಂಬತ್ತು ವರ್ಷದಷ್ಟು ಹಿಂದಿನ ಜನರಲ ರಜಿಸ್ಟರ ಇನ್ನೂ ಉಳಿದಿದೆಯೆ, ಇದ್ದರೆ ನೋಡಲು ಸಿಕ್ಕೀತೆ, ಆ ಉಪಕಾರ ಮಾಡುವಿರಾ ಎಂದಾಗ ಅಚ್ಚರಿಯೆನಿಸುವಂತೆ ತಕ್ಷಣ ಪ್ರಿನ್ಸಿಪಾಲಮ್ಮ ಅವರಿಂದ ನನ್ನ ಮುಖ ಅರಳುವ ಉತ್ತರ ಸಿಕ್ಕಿತು. “ಬಹುಶಃ ಇದೆ. ಹುಡುಕಿ ಇಡುತ್ತೇವೆ. ಒಂದೆರಡು ದಿನ ಕಾಯಬೇಕಾದೀತು”. ಮುಂದೆ ಆ ರಜಿಸ್ಟರದಲ್ಲಿ ನನಗೆ ಬೇಕಾದುದನ್ನು ಹುಡುಕುವ ಅವಕಾಶವೂ ಸಿಕ್ಕಿತು. ಅದರಲ್ಲಿ ನನ್ನ ಕಣ್ಣಿಗೆ ಬಿದ್ದ ಮತ್ತೆ ಕೆಲ ಮಂಗಳವೇಢೆ ಹೆಸರುಗಳನ್ನು – ಕೆಲವು ಸಂಬಂಧಿಕರವು, ಮತ್ತೆ ಕೆಲವು ಪರಿಚಯ ಹತ್ತದವು, ಬರೆದಿಟ್ಟುಕೊಂಡೆ.
ಅದರಲ್ಲಿ ಒಂದು – Mangalvedhe Guru Rangarao ಎನ್ನುವ, ಯಾರು ಗೊತ್ತಾಗದ ಒಂದುಹೆಸರೂಇದ್ದಿತು. Register No. 664, Haveri, 1-4-93, Last School Attended : Dharwar HS, VI B, Date of Leaving 31-3-1921, Class from which left – VII A, since Jan. 21, Sent for SL Exam. ಎಂತಹ ಸಂತೋಷದ ಆಕಸ್ಮಿಕ ಅಲ್ಲವೆ! ಇದು ನಡೆದದ್ದು ತೀರ ಇತ್ತೀಚೆಗೆ, ೨೬ ಸಪ್ಟೆಂಬರ ೨೦೧೬ರಂದು.
ಪದ್ಮಾವತಿಯವರ ಬಗ್ಗೆ ಇನ್ನಷ್ಟು: ಗುರುರಾವ ಅವರ ಎಂಟು ಮಕ್ಕಳಲ್ಲಿ ಪದ್ಮಾವತಿ ನಾಕನೆಯವರು. ಅವರ ಒಡಹುಟ್ಟಿದವರು : ೧. ಕೃಷ್ಣ (ತೀರಿಕೊಂಡಿದ್ದಾರೆ) ೨. ಅರುಣ (ಡೊಂಬಿವಲಿಯಲ್ಲಿದ್ದಾರೆ) ೩.ಶಾಂತಾ (ಕುಲಕರ್ಣಿಯವರ ಪತ್ನಿ, ಡೊಂಬಿವಲಿಯಲ್ಲಿದ್ದಾರೆ). ಈ ಮೂವರು ಪದ್ಮಾವತಿ ಅವರಿಗಿಂತ ದೊಡ್ಡವರು. ನಂತರದವರೆಲ್ಲ ತಂಗಿಯರು. ಅವರು- ೪. ಉಷಾ (ಬಳ್ಳಾರಿಯ ರಾಘವೇಂದ್ರಾಚಾರರ ಪತ್ನಿ, ಬೆಂಗಳೂರಲ್ಲಿರುವರು) ೫. ಪ್ರಭಾ (ಜಾಂಬಳೆಯವರ ಪತ್ನಿ, ಬೆಂಗಳೂರಲ್ಲಿರುವರು) ೬. ಮೀನಾಕ್ಷಿ (ಅಧ್ಯಾಪಕ ಅವರ ಪತ್ನಿ, ಡೊಂಬಿವಲಿಯಲ್ಲಿದ್ದಾರೆ) ೭. ಗೀತಾ (ಜೋಶಿಯವರ ಪತ್ನಿ, ಕಲ್ಯಾಣದಲ್ಲಿದ್ದಾರೆ).
ಪದ್ಮಾವತಿ ಅವರು ಹುಟ್ಟಿದ ದಿನಾಂಕ: 7 ಡಿಸೆಂಬರ 1939, ಧಾರವಾಡದಲ್ಲಿ. ಆ ದಿನಗಳಲ್ಲಿ ಅವರ ತಂದೆ ತಾಯಿ ಅಲ್ಲಿನ ಮುದಿ ಮಾರುತಿ ದೇವಸ್ಥಾನದ ಹತ್ತಿರ ಮನೆಯೊಂದರಲ್ಲಿದ್ದರು.
ಮದುವೆಯಾದ ದಿನಾಂಕ : 31 ಜನೆವರಿ 1963 ರಂದು ಧಾರವಾಡದಲ್ಲಿ.
ಈ ದಂಪತಿಗಳ ಚೊಚ್ಚಲ ಮಗ ಅನಿಲ ( ಹುಟ್ಟಿದ್ದು 17 ನವೆಂಬರ 1963 ರಲ್ಲಿ, ತಾಯಿಯ ತೌರುಮನೆ ಇದ್ದ ಧಾರವಾಡದಲ್ಲಿ. ಮಗಳು ಅನಿತಾ ಹುಟ್ಟಿದ್ದು ಹತ್ತು ವರ್ಷಗಳ ಅಂತರದ ಮೇಲೆ, 22 ಸಪ್ಟೆಂಬರ 1973 ರಂದು, ಮುಳುಂಡದಲ್ಲಿ. ಇಬ್ಬರ ಶಿಕ್ಷಣವೂ ಮುಳುಂಡದಲ್ಲಿಯೆ ಆಯಿತು, ಮರಾಠಿ ಮಾಧ್ಯಮದಲ್ಲಿ. ಅನಿಲ ಮೆಕ್ಯಾನಿಕಲ ಇಂಜಿನೀಯರ, SAP Course in IT ಕೂಡ ಆಗಿದೆ. ಸಧ್ಯ ಪ್ರೆಸಿಹೋಲ ಮಶೀನ ಟೂಲ್ಸ ಪ್ರಾ.ಲಿ. ದಲ್ಲಿ (Precihole Machine Tools Pvt. Ltd.) ಜನರಲ ಮ್ಯಾನೇಜರ (ಸೇಲ್ಸ ಮತ್ತು ಮಾರ್ಕೆಟಿಂಗ) ಆಗಿ ಇದ್ದಾರೆ. ಈ ಕಂಪನಿ ಠಾಣೆಯ ವಾಗಳೆ ಇಂಡಸ್ಟ್ರಿಯಲ ಎಸ್ಟೇಟದಲ್ಲಿದೆ. ಅನಿತಾ, ಮುಂಬಯಿ ವಿಶ್ವ ವಿದ್ಯಾಲಯದ ವಾಣಿಜ್ಯ ಪದವಿಧರೆ (B.Com).
ಈಗ ಈ ಇಬ್ಬರ ಮದುವೆಯೂ ಆಗಿದೆ. ಅನಿಲ (ಇನ್ನೊಂದು ಹೆಸರು ವಿಜಯ ವಿಟ್ಠಲ) ಅವರ ಹೆಂಡತಿ, ಯಾದವ – ಪದ್ಮಾವತಿಯವರ ಸೊಸೆ ಸೀಮಾ, ವಿಜಯಪುರದ ಪ್ರಹ್ಲಾದಾಚಾರ ಎನ್.ಕವಿ ಅವರ ಮಗಳು. ಮುಂಬಯಿ ವಿಶ್ವ ವಿದ್ಯಾಲಯದ ವಾಣಿಜ್ಯ ಪದವಿಧರೆ. ಎಲ್.ಆಯ್.ಸಿ ಆಫ ಇಂಡಿಯಾದಲ್ಲಿ ಅಧಿಕಾರಿ. ಈ ದಂಪತಿಗಳಿಗೆ ಅಂಕಿತಾ ಎಂಬ ಮಗಳು, ಮಾಟುಂಗಾ- ಮುಂಬಯಿದಲ್ಲಿರುವ ಇನಸ್ಟಿಟ್ಯೂಟ ಆಫ ಕೆಮಿಕಲ ಟೆಕ್ನಾಲಜಿಯಲ್ಲಿ ಶಿಕ್ಷಣ ಪಡೆದು, ಫುಡ್ ಇಂಜಿನೀಯರಿಂಗ ಟೆಕ್ನಾಲಜಿಯಲ್ಲಿ ಪದವಿ ಪಡೆದಿದ್ದಾರೆ. ಸಧ್ಯ, ಅಮೇರಿಕಾದಲ್ಲಿ ಎಂ.ಎಸ್. ಮಾಡುತ್ತಿದ್ದಾರೆ.
ಅನಿತಾ ಅವರ ಪತಿ, ಯಾದವ-ಪದ್ಮಾವತಿಯವರ ಅಳಿಯ, IT Professional ಅರವಿಂದ ವೆಂಕಟೇಶ ಕುಲಕರ್ಣಿ, ಇನ್ಫೊಸಿಸ್, ಪುಣೆಯಲ್ಲಿ ಮ್ಯಾನೇಜರ ಆಗಿದ್ದಾರೆ. ಅನಿತಾ ಅವರ ಅತ್ತೆಮನೆ ಹೆಸರು ಅರ್ಪಿತಾ, ಗೃಹಿಣಿ. ಇವರದಾದ ಒಂದು ಸ್ವಂತ ಫ್ಲ್ಯಾಟ ಪುಣೆಯಲ್ಲಿದೆ. ಈ ದಂಪತಿಗಳಿಗೂ ಒಬ್ಬ ಮಗಳು – ಗೌರಿ ಇನ್ನೂ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿನಿ. ಕ್ರೀಡೆಯಲ್ಲಿ ಆಸಕ್ತೆ. ಬ್ಯಾಡಮಿಂಟನ ಟೂರ್ನಾಮೆಂಟಗಳಲ್ಲಿ ಭಾಗವಹಿಸುತ್ತಾಳೆ.
ಹೀಗೆ ಯಾದವ-ಪದ್ಮಾವತಿ ದಂಪತಿಗಳಿಗೆ ಇಬ್ಬರು ಮಕ್ಕಳು- ಒಂದು ಗಂಡು, ಒಂದು ಹೆಣ್ಣು, ಮತ್ತು ಇಬ್ಬರು ಮೊಮ್ಮಕ್ಕಳು – ಅಂಕಿತಾ ಹಾಗೂ ಗೌರಿ. ಮಗಳು ಅನಿತಾ ಬಗ್ಗೆ ಮತ್ತೂ ಒಂದು ಮಾತನ್ನು ಹೇಳಬೇಕು, ಒಳ್ಳೆಯ ಕಲಾವಿದೆ, ಚಿತ್ರಕಲೆ -ಪೇಂಟಿಂಗದಲ್ಲಿ ಅಭಿರುಚಿ, ಪರಿಣಿತಿ ಇದೆ. ಮನೆಯಲ್ಲಿ ಅದರ ನಿದರ್ಶನಗಳಿವೆ.
ಬಾಳಾಚಾರ್ಯರ ಈ ಹಿರಿಯ ಪುತ್ರ ಯಾದವ ಅವರನ್ನು ಕಳೆದ ವರ್ಷ ಅಂದರೆ ೨೦೧೬ರ ಎಪ್ರಿಲ ೧೦ರಂದು (ರವಿವಾರ) ಮುಳುಂಡದ ಅವರ ಮನೆಗೆ ಹೋಗಿ ಭೆಟ್ಟಿಯಾಗಿದ್ದೆ. ಜೊತೆಗೆ ನನ್ನ ಪತ್ನಿ ಸೌ. ಅನುರಾಧಾ (ಪರಿಮಳಾ ಎಂದೆ ಹೆಚ್ಚಾಗಿ ಪರಿಚಿತ) ಮತ್ತು ಹಿರಿಯ ಮಗ ರಂಗನಾಥ ಕೂಡ ಇದ್ದರು. ಹತ್ತು ಗಂಟೆಗೆ ಬರುತ್ತೇವೆಂದು ತಿಳಿಸಿ ಒಂದು ಗಂಟೆ ತಡವಾಗಿ ಹೋಗಿದ್ದೆವು. ವೃದ್ಧ ದಂಪತಿಗಳು ನಮಗಾಗಿ ಕಾಯುತ್ತಿದ್ದರು. ಪರಸ್ಪರ ಪರಿಚಯವಾದ ಮೇಲೆ ಬಂದ ಉದ್ದೇಶ ತಿಳಿಸಿದೆ. ವಂಶಾವಳಿಯ ಮಾಹಿತಿ ಕಲೆಹಾಕಿ, ಮನೆತನದ ಇತಿಹಾಸ ತಿಳಿದುಕೊಂಡು ಪುಸ್ತಕ ಬರೆಯ ಹೊರಟಿದ್ದೇನೆ ಎಂದು ಹೇಳಿದೆ. ಮತ್ತು ಅದರಲ್ಲಿ ಮಂಗಳವೇಢೆ ಪರಿವಾರದವರೆಲ್ಲರ ಒಂದು ಡಿರೆಕ್ಟರಿಯನ್ನೂ ಅಳವಡಿಸಬೆಕೆಂಬ ವಿಚಾರದಿಂದ ಮಾಹಿತಿ ಕಲೆ ಹಾಕಲು ಬಂದಿದ್ದೇನೆಂದು ತಿಳಿಸಿದೆ.
ಅದು ಒಂದು ಗಂಟೆಯಲ್ಲಿ ಮುಗಿಯುವ ಕೆಲಸವಾಗಿರಲಿಲ್ಲ. ಮೊದಲೆ ತಡವಾಗಿ ಹೋಗಿದ್ದೆ. ಅಂದು ತಪ್ಪಿದ್ದರೆ ಆಗೀಗ ಮತ್ತೆ ಮತ್ತೆ ಭೆಟ್ಟಿ ಕಷ್ಟಸಾಧ್ಯ ಮಾತಾಗಿತ್ತು. ಸೌ. ಪದ್ಮಾವತಿಯವರು ಪರಿಸ್ಥಿಯನ್ನು ಅರ್ಥ ಮಾಡಿಕೊಂಡರು. ಇಳಿವಯಸ್ಸು, ಶಕ್ತಿಗುಂದಿದ ದೇಹ. ಮನೆಯಲ್ಲಿ ಆಗ ಮತ್ತಾರೂ ಇರಲಿಲ್ಲ. ಅಷ್ಟಾಗಿಯೂ, ಅಡುಗೆ ಮನೆ ಹೊಕ್ಕರು. ಊಟಕ್ಕೆ ವ್ಯವಸ್ಥೆ ಮಾಡಲು. ನಿಮ್ಮ ಕೆಲಸ ಸಾಗಲಿ. ಗಡಿಬಿಡಿ ಮಾಡಿಕೊಳ್ಳ ಬೇಡಿ. ಕೆಲಸವಾದಮೇಲೆ ಇಲ್ಲಿಯೆ ಊಟವಾಗಲಿ ಎಂದು ಆಗ್ರಹಿಸಿದರು. ಅತಿಶಯ ಸಂಕೋಚವಾದರೂ ಬೇರೆ ದಾರಿ ತೋಚದೆ ಒಪ್ಪಿಕೊಂಡೆವು. ಆಗ ಮನೆಯಲ್ಲಿದ್ದವರು ಆ ವಯಸ್ಸಾದ ಗಂಡ ಹೆಂಡತಿ ಇಬ್ಬರೆ. ಆ ರೀತಿ ಆದರ ಸತ್ಕಾರ ಮಾಡುವ ಗುಣ ಅಂತಹ ಹಳೆಯ ಜನರಲ್ಲಿಯೆ ಕಾಣ ಸಿಗುವಂತಹದು. ಮರೆಯಲಾರೆ.
ಆ ಭೆಟ್ಟಿಯಿಂದಾದ ಮತ್ತೊಂದು ಸಂತೋಷದ ಸಂಗತಿ, ಲಾಭ ಎಂದರೆ ಅವರ ತಂದೆ ಪಂ. ಬಾಳಾಚಾರ್ಯರ ಮೊದಲಮದುವೆಯಾದ ಹೊಸತರಲ್ಲಿ, ತೆಗೆಸಿಕೊಂಡ ತಮ್ಮ ಪತ್ನಿ ತುಳಸಾಬಾಯಿಯ ಜೊತೆ ತೆಗೆಸಿಕೊಂಡ ಫೋಟೊ, ಮತ್ತು ತುಳಸಾಬಾಯಿಯವರ ಪ್ರತ್ಯೇಕ ಫೋಟೊ ಹೀಗೆ ಎರಡು ಫೋಟೊಗಳು ನೋಡ ಸಿಕ್ಕದ್ದು. ಸುಮಾರು ಎಂಬತ್ತು ವರ್ಷಗಳ ಹಿಂದಿನ ಚಿತ್ರಗಳವು. ನಾವು ಇನ್ನೇನು ಹೊರಡ ಬೇಕು ಅನ್ನುವಾಗ, ನಿಮ್ಮ ತಂದೆ ತಾಯಿಯ ಹಳೆಯ ಫೋಟೊಗಳೇನಾದರೂ ನಿಮ್ಮ ಕಡೆಗೆ ಇವೆಯೆ ಎಂದು ಕೇಳಿದೆ. ಅವರು, ಇವೆ, ಆದರೆ ಈಗ ಕೂಡಲೆ ಹುಡುಕಿ ಕೊಡಲಾಗುವದಿಲ್ಲ ಎಂದು ಹೇಳಲಿಲ್ಲ. ಎಂಬತ್ತರಷ್ಟು ವಯಸ್ಸಾಗಿರುವ ತಮ್ಮ ವೃದ್ಧಾಪ್ಯವನ್ನು ಲೆಕ್ಕಿಸಲಿಲ್ಲ. ಒಂದೆರಡು ಸ್ಥಳಗಳಲ್ಲಿ ಹುಡುಕಿದರು. ಖುರ್ಚಿಯೊ ಸ್ಟೂಲೋ ಯಾವುದನ್ನೊ ಇಟ್ಟುಕೊಂಡು ಅದರಮೇಲೆ ಹತ್ತಿನಿಂತು ಕಪಾಟ ಒಂದರಲ್ಲಿ ಎತ್ತರದಲ್ಲಿಟ್ಟಿದ್ದ ಅವನ್ನು ಹುಡುಕಿ, ತೋರಿಸಿದರು.
ಯಾದವ ಅವರಿಗೆ (ಯಾದವಾಚಾರ್ಯ ಎಂದರೂ ಸರಿಯೆ) ಜ್ಯೋತಿಷದಲ್ಲಿಯೂ ಗತಿ ಇದೆ. ಆ ಕಾರಣದಿಂದ ಅನೇಕ ಜನ ಮನೆಗೆ ಬಂದು ಹೋಗುತ್ತಿರುತ್ತಾರೆ. ನಿವೃತ್ತಿಯ ನಂತರವೂ- ಈ ನಿಮಿತ್ತದಿಂದ ಜನಸಂಪರ್ಕ ಸದಾ ಇದೆ. ಅವರು ಮಾಡಿದ ಪ್ರವಾಸ – ತೀರ್ಥ ಕ್ಷೇತ್ರ ಯಾತ್ರೆಯ ವಿಷಯ ಕೇಳಿದೆ. ಪಂಢರಪುರದ ಪಾಂಡುರಂಗ ನಮ್ಮ ಮನೆ ದೇವರಲ್ಲವೆ ! “ನಾನು ಬಹಳ ಸಣ್ಣವನಿದ್ದಾಗ ಜಾವಳ ತೆಗೆಸುವ ಕಾರ್ಯ ಪಂಢರಪುರದಲ್ಲಿಯೆ ಆಗಿದ್ದು” ಎಂದು ನೆನಪು ಮಾಡಿಕೊಂಡರು.
ಅವರ ಜಾತಕದಲ್ಲಿ ಪ್ರವಾಸದ – ತೀರ್ಥ ಕ್ಷೇತ್ರ ಸಂದರ್ಶನದ ಯೋಗ ಬಹಳ ಬಹಳ ಇತ್ತೆಂದು ತೋರುತ್ತದೆ. ದೇಶವನ್ನಷ್ಟೆ ಏಕೆ ವಿದೇಶಗಳನ್ನೂ ಸುತ್ತಾಡಿದ್ದಾರೆ. ಉಡುಪಿ, ಮಂತ್ರಾಲಯ, ಕಾಶಿ, ರಾಮೇಶ್ವರ, ಮಧುರೈ, ಕಂಚಿ, ತಿರುಪತಿ, ಪಂಢರಪುರ, ಚಾರಧಾಮಗಳಾದ ಗಂಗೋತ್ರಿ, ಯಮುನೋತ್ರಿ, ಬದರಿ, ಕೇದಾರಗಳ ಯಾತ್ರೆಯೆಲ್ಲ (2012 ರಲ್ಲಿ) ಆಗಿದೆ. ನೋಡಿದ ಪ್ರದೇಶಸೂಚಕ ಯಾದಿಯಲ್ಲಿ ಕೇರಳ, ಮಾರವಾಡ, ಮೇವಾಡ, ರಾಜಸ್ಥಾನ, ಹಿಮಾಚಲ ಪ್ರದೇಶ ಮತ್ತು ನೇಪಾಳಗಳು ಸೇರಿವೆ. ವಿದೇಶ ಪರ್ಯಟನದಲ್ಲಿ USA (2006 ರಲ್ಲಿ) UK (2009 ರಲ್ಲಿ), Bangkok, Thailand, Singapore (2011 ರಲ್ಲಿ) ಮೊದಲಾದ ದೇಶಗಳನ್ನು ಸಂದರ್ಶಿಸಿದ್ದಾರೆ.
ಬರೆದವರು : ಶ್ರೀಕಾಂತ ರಂ. ಮಂಗಳವೇಢೆ. ಮುಗಿದುದು : ರಥ ಸಪ್ತಮಿಯ ದಿನ, ಶುಕ್ರವಾರ, ೩ ಫ಼ೆಬ್ರುವರಿ ೨೦೧೭
ಆಧಾರ: ಯಾದವ ಅವರನ್ನು ಮುಳುಂಡದ ಅವರ ಮನೆಯಲ್ಲಿಯೆ ರವಿವಾರ (ಗೌರಿ ತದಿಗೆ), ಎಪ್ರಿಲ ೧೦, ೨೦೧೬ ರಂದು ಭೆಟ್ಟಿಯಾಗಿ ನಡೆಸಿದ ಸಂದರ್ಶನ ಮತ್ತು ನಾನು ಕಳಿಸಿದ್ದ ಪ್ರಶ್ನಾವಳಿಗೆ ಅವರು ೩೧-೮-೨೦೧೫ ರಂದು ಇ-ಮೇಲದಿಂದ ಕಳಿಸಿದ ಲಿಖಿತ ಮಾಹಿತಿ ಅಲ್ಲದೆ ಅವರ ಕಿರಿಯ ಸಹೋದರ ಗೋವರ್ಧನಾಚಾರ್ಯರನ್ನು ಬುಧವಾರ, ಜನೆವರಿ ೧, ೨೦೧೫ ರಂದು ಹುಬ್ಬಳ್ಳಿಯ ಗೋಕುಲ ರೋಡಿನ ಮೇಲೆ ಇರುವ ಮಂಜುನಾಥ ನಗರದ ಅವರ ಮನೆಯಲ್ಲಿ ಭೆಟ್ಟಿಯಾಗಿ ಪಡೆದಿದ್ದ ಮಾಹಿತಿ.