ಮಾಧವಾಚಾರ್ಯ
ಮಾಧವಾಚಾರ್ಯ | ಹುಟ್ಟಿದ ದಿನಾಂಕ: 1932-07-22 | ||
ತಂದೆ: ಪಾಂಡುರಂಗಾಚಾರ್ಯ | ತಾಯಿ: | ||
ಮಕ್ಕಳು: ಕೃಷ್ಣಮೂರ್ತಿ, ಬಂಡಾಚಾರ್ಯ, ಪದ್ಮಾ | |||
ಒಡಹುಟ್ಟಿದವರು: ಪ್ರಭಾವತಿ, ವಾಸುದೇವಾಚಾರ್ಯ, ವೇದವ್ಯಾಸಾಚಾರ್ಯ, ವಿಜಯಾವತಿ, ವೆಂಕಟೇಶ, ಅನಂತಾಚಾರ್ಯ | |||
ವಿಳಾಸ: ೮೩೩, ನೇಕಾರ ಓಣಿ, ಹೊಸ ಯಲ್ಲಾಪುರ - ಧಾರವಾಡ | |||
ಮೊಬೈಲ್: 9844559896 | Branch: 1 | Generation: 8 |
ವ್ಯಕ್ತಿ ಚಿತ್ರ
ಮಾಧವಾಚಾರ್ಯ ಪಾಂಡುರಂಗಾಚಾರ್ಯ ಮಂಗಳವೇಢೆ
ಯಕ್ಕುಂಡಿಯ ಬಾಳಾಚಾರ್ಯರ ಪ್ರಪೌತ್ರ, ಬಂಡಾಚಾರ್ಯರ ಪೌತ್ರ, ಪಾಂಡುರಂಗಾಚಾರ್ಯರ ಪುತ್ರ ಧಾರವಾಡ ನಿವಾಸಿ
ಕಿರು ಪರಿಚಯ
ಒಂದನೆ ಟಿಸಿಲಿನ ಎಂಟನೆ ತಲೆಮಾರಿನವರು
ಜನ್ಮ ದಿನಾಂಕ: ೨೨ ಜುಲೈ ೧೯೩೨
ತಂದೆ ತಾಯಿ: ಪಾಂಡುರಂಗಾಚಾರ್ಯ ಮತ್ತು ಇಂದಿರಾಬಾಯಿ ಮಾಧವಾಚಾರ್ಯರು ತಮ್ಮ ಏಳು ಒಡಹುಟ್ಟಿದವರಲ್ಲಿ ಐದನೆಯವರು
ಒಡಹುಟ್ಟಿದವರು: ಅಕ್ಕ ಪ್ರಭಾವತಿ, ಅಣ್ಣ ವಾಸುದೇವಾಚಾರ್ಯ, ಅಣ್ಣ ವೇದವ್ಯಾಸಾಚಾರ್ಯ (ತೀರಿಕೊಂಡಿದ್ದಾರೆ), ಅಕ್ಕ ವಿಜಯಾವತಿ ಮತ್ತು ತಮ್ಮಂದಿರು – ವೆಂಕಟೇಶ ಮತ್ತು ಅನಂತ (ಧಾರವಾಡದಲ್ಲಿದ್ದಾರೆ).
ನಿವೃತ್ತ ಶಾಲಾ ಶಿಕ್ಷಕ
ಪತ್ನಿ: ಮಾಲತಿಬಾಯಿ, ಗೃಹಿಣಿ.
ಮಕ್ಕಳು: ೧. ಕೃಷ್ಣಮೂರ್ತಿ ೨. ಬಂಡೂರಾಜ ೩. ಪದ್ಮಾ
ವಿಳಾಸ: ೮೩೩, ನೇಕಾರ ಓಣಿ, ಹೊಸ ಯಲ್ಲಾಪುರ – ಧಾರವಾಡ
ಫೋನ ನಂ. (ಮನೆ) ೦೮೩೬ -೨೪೪ ೬೩ ೭೮ (ಮೊ) ೯೮೪೪ ೫೫೯೮೬೮
ವ್ಯಕ್ತಿ ಪರಿಚಯ
ಧಾರವಾಡದ ನೇಕಾರ ಓಣಿಯಲ್ಲಿ ಮಾಧವಾಚಾರ್ಯರದು ವಿಶೇಷವೇನಿಲ್ಲದ ಒಂದು ಸಣ್ಣ ಮನೆ. ರಸ್ತೆಯ ಮಟ್ಟದಿಂದ ಸ್ವಲ್ಪ ಎತ್ತರದ ದಿನ್ನೆಯ ಮೇಲೆ ಮೂರು ಸಾಲು ಮನೆಗಳಿವೆ. ಅವುಗಳಲ್ಲಿ ನಡುವಿನದು. ಆದರೆ, ಮನೆತನದ ಇತಿಹಾಸದ ಜಾಡನ್ನು ಹಿಡಿದು ಅಲ್ಲಿಗೆ ಹೋಗಿದ್ದ ನನಗೆ, ಅನ್ಯತ್ರ ಇಲ್ಲದಿದ್ದ ಅಲಭ್ಯ ವಿಶೇಷವೊಂದು ಆ ಮನೆಯಲ್ಲಿ ನೋಡಸಿಕ್ಕಿತು. ಅದುವೆ ನಮ್ಮ ಹಿರಿಯರೊಬ್ಬರ ಭಾವಚಿತ್ರ. ಮಾಧವಾಚಾರ್ಯರ ಅಜ್ಜ ಬಂಡಾಚಾರ್ಯರರದು.
ಬಂಡಾಚಾರ್ಯರು ಯಾವ ಕಾಲದವರೆಂದರೆ ಅವರು ಹುಟ್ಟಿದಾಗ ೧೮೫೭ ರ ಆ “ಸಿಪಾಯಿ ಬಂಡಾಯ” ಅಥವಾ ವಾಸ್ತವವಾಗಿ “ಮೊದಲ ಸ್ವಾತಂತ್ರ್ಯ ಸಂಗ್ರಾಮ” ವೆಂದು ಹೆಸರಿಸಬೇಕಾದ ಆ ವಿಪ್ಲವ ಇನ್ನೂ ಆಗಿರಲೇ ಇಲ್ಲ. ಹುಟ್ಟಿದ್ದು ಅಷ್ಟು ವರ್ಷಗಳ ಹಿಂದೆ (೧೮೪೬). ಎಷ್ಟು ಎಂದರೆ, ಒಂದು ನೂರಾ ಎಪ್ಪತ್ತು ವರ್ಷಗಳ ಹಿಂದೆ, ತೀರಿಕೊಂಡೂ ಎಂಬತ್ತು ವರ್ಷಗಳೇ ಆದವು. ಮರಣ ಹೊಂದಿದ್ದು ೧೯೩೬ರ. ಪೌಷ್ಯ ಬಹುಳ ಅಮಾವಾಸ್ಯೆಯಂದು.
ಸಧ್ಯಕ್ಕೆ ನಮ್ಮ ನಡುವೆ ೮೦ ವರ್ಷ ವಯಸ್ಸು ದಾಟಿದವರು ಬಹುಶಃ ಇಬ್ಬರು ಇದ್ದಾರೆ – ೧೯೩೨ರ ಸಪ್ಟೆಂಬರದಲ್ಲಿ ಹುಟ್ಟಿದ ಮಾಧವಾಚಾರ್ಯರು ಮತ್ತು ೧೯೩೬ರ ಡಿಸೆಂಬರದಲ್ಲಿ ಹುಟ್ಟಿದ ಯಾದವ ಅವರು. ಇಬ್ಬರೂ ಬಂಡಾಚಾರ್ಯರ ಮೊಮ್ಮಕ್ಕಳು. ಒಬ್ಬರು ಪಾಂಡುರಂಗಾಚಾರ್ಯರ ಮಗ, ಇನ್ನೊಬ್ಬರು ಪಂ.ಬಾಳಾಚಾರ್ಯರ ಮಗ.ಮುಳುಂಡ-ಮುಂಬಯಿಯಲ್ಲಿದ್ದಾರೆ. ಅವರು ಹುಟ್ಟಿದ್ದು ೧೯೩೬ ರ ಡಿಸೆಂಬರ ೨೭ರಂದು.
ಬಂಡಾಚಾರ್ಯರ ಮರಣ ಪುರಂದರದಾಸರ ಪುಣ್ಯ ತಿಥಿಯ ದಿನ. ಅದು ಸಾಮಾನ್ಯವಾಗಿ ಅದೇ ಇಸವಿಯ ಪ್ರಾರಂಭದಲ್ಲಿ, ಜನೆವರಿಯಲ್ಲಿ ಬರುತ್ತದೆ. ಹೀಗಿರುವಾಗಯಾದವ ಅವರೂ ಅಜ್ಜನನ್ನು ನೋಡಿರಲಾರರು. ಅದರೆ ಮಾಧವಾಚಾರ್ಯರು ಆಗ ನಾಕು ವರ್ಷದ ಬಾಲಕ. ಅವರೊಬ್ಬರೆ ಅಜ್ಜನನ್ನು ನೋಡಿದವರು. ಆದರೆ ನೋಡಿದ್ದ ಅವರ ನೆನಪು ಇದೆಯೋ ಇಲ್ಲವೋ!
ಅಂತಹ “ಆ ಇತಿಹಾಸ ಕಾಲದ” ಹಿರಿಯರ ಚಿತ್ರ ಮಾಧವಾಚಾರ್ಯರ ಮನೆಯ ಗೋಡೆಯನ್ನಲಂಕರಿಸಿದೆ. ಲಭ್ಯವಿರುವದು ಅದೊಂದೆ ಚಿತ್ರ ಎಂದೇನೂ ಅಲ್ಲ. ಇನ್ನೊಂದು ಚಿತ್ರವೂ ಇದೆ. ಹುಬ್ಬಳ್ಳಿಯಲ್ಲಿ, ಅವರ ಮಗ ಪಂ. ಬಾಳಾಚಾರ್ಯರ ಹತ್ತಿರ ಇದ್ದುದು.ಈಗ ಅವರು ತೀರಿಹೋಗಿದ್ದಾರೆ. ಹೀಗಾಗಿ ಆ ಚಿತ್ರ ಈಗ ಅವರ ಮಗ ಗೋವರ್ಧನ ಅವರ ಕಡೆ, ಹೊಸ ಮನೆಯಲ್ಲಿದೆ.
ಆದರೆ ಅದು ಕೆಮರಾದಿಂದ ತೆಗೆದುದು. ಇದು ಒಂದು ವರ್ಣ ಚಿತ್ರ- ಪೇಂಟಿಂಗ. ಕುರ್ಚಿಯ ಮೇಲೆ ಕುಳಿತಿರುವ ಚಿತ್ರ. ಆ ಹಿರಿಯರ ಮೇಲಿನ ಭಕ್ತಿ, ಗೌರವದಿಂದ ಮುರಲೀಧರ ಎಂಬುವರು ರಚಿಸಿದ ಪೇಂಟಿಂಗ. ಕಲಾವಿದ ಮಾಧವಾಚಾರ್ಯರ ಪರಿವಾರದವರೆ, ಪತ್ನಿ ಮಾಲತಿಬಾಯಿಯವರ ಅಕ್ಕನ ಮಗ.
ತೊಂಬತ್ತು ವರ್ಷ ಬದುಕಿದ್ದ ಬಂಡಾಚಾರ್ಯರಷ್ಟೆ ಇನ್ನೊಬ್ಬ ದೀರ್ಘಾಯುಷಿ ಅವರ ಮಗ ಪಂ. ಬಾಳಾಚಾರ್ಯರು. ಅವರೂ ತೊಂಬತ್ತು ವಸಂತಗಳನ್ನು ಕಂಡವರು ( ಜನ್ಮ : ೧೯೦೩ ಮರಣ : ೧೯೯೩).
ಮಾಧವಾಚಾರ್ಯರ ಮನೆಗೆ ಮೊದಲು ನಾನು ಹೋಗಿ ಭೆಟ್ಟಿಯಾದದ್ದು ೧೯೯೩ ಅಥವಾ ೧೯೯೪ ರಲ್ಲಿ. ಆಗ ಅವರು ಹೆಂಬ್ಲಿ ಓಣಿಯಲ್ಲಿದ್ದರು. ಅಂದಿನಿಂದ ಮುಂದೆ ಕಡೆಯ ಪಕ್ಷ ನಾಕಾರು ಸಲ ಅವರ ಕಡೆ ಹೋಗಿದ್ದೇನೆ. ಆದರೂ ಬರೆಯಲು ಅವರಿಂದಲೆ ಸಿಕ್ಕ ಮಾಹಿತಿ ನಾಕಾರು ಸಾಲೂ ಆಗದಷ್ಟು ಅಲ್ಪ. ನಾನು ಕೊಟ್ಟಿರುವ ಅವರ ವ್ಯಕ್ತಿ ಪರಿಚಯದ ಮೂಲ ಸಾಮಗ್ರಿ ಸಿಕ್ಕದ್ದು ಅವರ ಅಣ್ಣ ವೇದವ್ಯಾಸ ಅವರ ಮಗ ರಘುರಾಜ ಅವರಿಂದ. ವಿಷೇಷವೇನಿಲ್ಲದ – ಜನ್ಮ ದಿನಾಂಕ, ಶಿಕ್ಷಣ, ವೃತ್ತಿ ಜೀವನ, ಮದುವೆ, ನಿವೃತ್ತಿ, ಆಸ್ತಿಪಾಸ್ತಿ, ಕೈಗೊಂಡ ಪ್ರವಾಸ ಯಾತ್ರೆ ಇತ್ಯಾದಿಇಂತಹ ಸಾಮಾನ್ಯ ಮಾಹಿತಿ ಅಷ್ಟೇ!
ಆದರೆ, ಮಾಧವಾಚಾರ್ಯರನ್ನು ಪರಿಚಯಿಸಲು ಹೊರಟಾಗ ಎಲ್ಲಕ್ಕೂ ಮೊದಲು ಹೊಳೆದದ್ದು ಅವರ ಮನೆ ಗೋಡೆ ಮೇಲೆ ಕಂಡ ಆ ಆ ಭಾವಚಿತ್ರ – ಪೇಂಟಿಂಗ. ಮತ್ತೆ ಯಾವ ಮಂಗಳವೇಢೆ ಜನರ ಮನೆಯಲ್ಲಿಯೂ ಕಾಣದ ವಿಶೇಷ ಅದು.
ಎಲ್ಲೂ ಅನುಭವಕ್ಕೆ ಬರದ ಮತ್ತೊಂದು ವಿಶೇಷ ಯಾವ ಹೊದಿಕೆಯಿಂದಲೂ ಮುಚ್ಚದಿದ್ದ ಅವರ ಗುಣ ಸ್ವಭಾವ. ಅದು ಅವರ ಹೊರ ಊಪದಂತೆ ಒಳ ರೂಪದ ಸ್ಫುಟ ಚಿತ್ರವನ್ನೂ ನನಗೆ ಕಾಣಿಸಿತು
ಬಂಡಾಚಾರ್ಯರು ಅಂದರೆ ಮಾಧವಾಚಾರ್ಯರ ತಂದೆ ಪಾಂಡುರಂಗಾಚಾರ್ಯರ (ಪಂ. ಬಾಳಾಚಾರ್ಯರ ಅಣ್ಣ) ತಂದೆ. ನೈಷ್ಠಿಕ ವೈದಿಕ ಬ್ರಾಹ್ಮಣ. ನಿತ್ಯ ಮಧ್ವ ವಿಜಯ ಪಾರಾಯಣ ಮಾಡುತ್ತಿದ್ದರಂತೆ. ಮಾಧವಾಚಾರ್ಯರಿಗೂ ಮಧ್ವ ವಿಜಯದ ಪಾರಾಯಣೆಯ ಮಹಿಮೆಯ ಬಗ್ಗೆ ಬಹಳ ನಂಬುಗೆಯಿದೆ. ಹಾಗೆಯೆ ನಿತ್ಯ ಕರ್ಮಾನುಚರಣೆ ಯಲ್ಲಿಯೂ ಕೂಡ.
ಅವರಮನೆಗೆ ಮಧ್ಯಾಹ್ನದ ಮೊದಲು ಹೋದರೆ ಪಂಚೆ ಉಟ್ಟು ಮಂತ್ರ ಪಠಣ ಮಾಡುತ್ತಿರುವದೊ, ಪೂಜೆಯಲ್ಲಿ ನಿರತರಾಗಿರುವದೊ ನಡೆದಿರುತ್ತದೆ. ಸಂಜೆ ಹೋದರೆ, ಭಾಗವತವೊ ಇನ್ನಾವುದೊ ಧರ್ಮ ಗ್ರಂಥದ ಪಠಣೆಯಲ್ಲಿ ಇರುವದನ್ನು ಕಾಣುತ್ತೀರಿ. ಮಧ್ಯಾಹ್ನದ ಮೊದಲು ಪೂಜೆಗಾಗಿ ಮಡಿಯಲ್ಲಿ ಇದ್ದ ಹಾಗೆ ಸಂಜೆಯಲ್ಲೂ ಹೆಚ್ಚೂ ಕಡಿಮೆ ಹಾಗೆ ಕಾಣುತ್ತಾರೆ.
ನಾನು ಹೋದಷ್ಟೂ ಸಲ ನನ್ನನ್ನು ಬರಮಾಡಿಕೊಂಡ ರೀತಿಯಲ್ಲಿ ಸ್ವಲ್ಪವೂ ಬದಲಾವಣೆ ಆಗಲಿಲ್ಲ. ಅದೇ ಪ್ರಶ್ನೆಯಿಂದ ನನ್ನ ಸ್ವಾಗತವಾಗಿತ್ತು. ಮುಂದೆ ಅದರದೆ ಪುರಾವರ್ತನೆ ಆಗುತ್ತ ಹೋಯಿತು. “ನೀನು ನಿತ್ಯ ಸಂಧ್ಯಾವಂದನೆ ಮಾಡುತ್ತಿಯಾ?” ಎಂಬ ಪ್ರಶ್ನೆ. “ಗಾಯತ್ರಿ ಜಪ, ಪೂಜೆ, ನೈವೇದ್ಯಗಳನ್ನು ನಿತ್ಯವೂ ಮಾಡದೆ ಈ ವಂಶಾವಳಿಯನ್ನು ಬರೆಯುವ ಪ್ರಯತ್ನವನ್ನೊಳಗೊಂಡು ಯಾವ ಕೆಲಸ ಮಾಡಿದರೂ ಅದು ವ್ಯರ್ಥ್ಯ, ಸಾರ್ಥಕವಾಗುವದಿಲ್ಲ, ನಿಷ್ಫಲವಾಗುವದು. ಹಾಗೆಯೆ ಸುಮಧ್ವ ವಿಜಯವನ್ನೂ ಓದು, ಪಾರಾಯಣ ಮಾಡು.” ಎಂಬ ಆದೇಶ.
ನನಗೋ ಸುಳ್ಳು ಹೇಳಲು ನಾಲಗೆ ತಿರುಗುತ್ತಿರಲಿಲ್ಲ. ಸತ್ಯ ಹೇಳಿದಾಗ, “ಈ ಕೆಲಸಗಳನ್ನು ಮಾಡದೆ ನಿನ್ನ ಕೆಲಸಕ್ಕಾಗಿ ನನ್ನನ್ನು ಏನೂ ಕೇಳಬೇಡ. ನಾನು ಅಲ್ಲಿಯವರೆಗೆ ಏನೂ ಹೇಳುವದಿಲ್ಲ. ಎಂದ ಮೇಲೆ ಏಕೆ ವ್ಯರ್ಥ ಪ್ರಯತ್ನ ಮಾಡುವಿ”. ಆದರೂ “ಮರಳಿ ಯತ್ನವ ಮಾಡು” ಎಂಬುದರಲ್ಲಿ ವಿಶ್ವಾಸವಿದ್ದ ನಾನು ಹೋಗುತ್ತಲೆ ಇದ್ದೆ.
ಅನುಭವ ನನ್ನನ್ನು ಕೊನೆಗೆ ಸ್ವಲ್ಪ ಜಾಣನಾಗಿಸಿತು. ಬೇಕಾಗಿದ್ದ ಮಾಹಿತಿಯನ್ನು ಪಕ್ಕದ ಮನೆಯಲ್ಲಿಯೆ ಇರುವ ಅವರ ತಮ್ಮ ಅನಂತಾಚಾರ್ಯರಿಂದಲೊ ಅಥವಾ ಅವರ ಮನೆಯ ಮೊದಲೆ ಹತ್ತುವ ರಘುರಾಜ (ಅವರ ಅಣ್ಣ ವೇದವ್ಯಾಸ ಅವರ ಮಗ) ಅವರನ್ನು ಕೇಳಿಯೊ ಅಲ್ಪಸ್ವಲ್ಪ ಕಲೆಹಾಕಿದೆ. ಮಾಧವಾಚಾರ್ಯರ ಜೊತೆ ಭೆಟ್ಟಿಯಾದ ಕೂಡಲೆ ನಮಸ್ಕಾರ, ನಂತರ ಹಳೆ ಪ್ರಶ್ನೋತ್ತರದ ಪುನರಾವರ್ತನೆ ಮತ್ತು ಕುಶಲೋಪರಿ ಇವಿಷ್ಟಕ್ಕೆ ಸಂದರ್ಶನ ಮಿತಗೊಳ್ಳುತ್ತಿತ್ತು.
ನಿತ್ಯ ಕರ್ಮಾಚರಣೆ ಮತ್ತು ಸುಮಧ್ವ ವಿಜಯ ವಾಚನದಿಂದ ಸಿಗುವ ಪುಣ್ಯ ಲಾಭದಲ್ಲಿ ನಂಬುಗೆ, ಪರಂಪರಾ ನಿಷ್ಠೆ, ರೂಢಿಪ್ರಿಯತೆ, ಸನಾತನಿ ಸ್ವಭಾವ ಇವುಗಳೆಲ್ಲ ಸೇರಿ ಅವರ ವ್ಯಕ್ತಿತ್ವ ರಚನೆ ಆಗಿದೆ ಎಂದು ನನ್ನಂತಹವರಿಗೆ ಅನಿಸಿದರೆ ಅದು ಬಹಳ ತಪ್ಪೇನೂ ಅಗಿರಲಿಕ್ಕಿಲ್ಲ. ಇರಲಿ ಅದು ನನ್ನ ವಯ್ಯಕ್ತಿಕ ಅನಸಿಕೆ.
ಪಂ. ಬಾಳಾಚಾರ್ಯರನ್ನು ಮೊದಲು ಭೆಟ್ಟಿಯಾದಾಗ ಅವರು ಹೇಳಿದ್ದ ” ನಾವೂ ನೀವೂ ಒಂದೇ”, “ನಿಮ್ಮ ತಂದೆ ರಂಗಣ್ಣ ಗೊತ್ತು. ಬಹಳ ಹಿಂದೆ ಬೆಳಗಾವಿಗೆ ಬಂದಿದ್ದಾಗ ನಿಮ್ಮ ಮನೆಗೂ ಬಂದಿದ್ದೆ” ಎಂದು ಹೇಳಿದ ಹಾಗೆಯೆ ಇವರನ್ನು ಮೊದಲ ಸಲ ಭೆಟ್ಟಿಯಾದಾಗಲೂ ಆ ತರಹದ ಪರಿಚಯದ ಶಬ್ದಗಳು ಇವರ ಬಾಯಿಂದಲೂ ಬಂದಿದ್ದವು.ನ್ನ್ನ ತಂದೆ ರಂಗಾಚಾರ್ಯರನ್ನು ೧೯೫೩ರಲ್ಲಿ ಟಿ.ಸಿ.ಎಚ್. ಟೇನಿಂಗಿಗಾಗಿ ಬೆಳಗಾವಿಗೆ ಬಂದಿದ್ದಾಗ ನಮ್ಮ ಮನೆಗೂ ಬಂದು ಭೆಟ್ಟಿಯಾಗಿದ್ದರಂತೆ. “ನೌಕರಿ ಮಾಡುತ್ತಿದ್ದರೂ – ಒಳ್ಳೆಯ ಬ್ರಾಹ್ಮಣ, ಪಂಡಿತ, ಅಧ್ಯಯನವನ್ನು ಇಟ್ಟುಕೊಂಡು ಇದ್ದರು ಎಂಬುದು ತಮ್ಮ ಮತ್ತು ತಮ್ಮ ಜನರ ಇಂಪ್ರೆಶನ್”, ಎಂದೂ ಹೇಳಿದರು.
ಅವರ ಜೊತೆ ಮಾತನಾಡುತ್ತಿದ್ದಾಗ ಕುತೂಹಲ ಕೆರಳಿದ್ದ ಮತ್ತೊಂದು ಸಂಗತಿಯೆಂದರೆ ಅವರು ನನ್ನ ಅಜ್ಜಿ “ಕಾವೇರಿ ಅಕ್ಕ”ನನ್ನು “ಕಿತ್ತೂರಿನಲ್ಲಿ” ನೋಡಿದ ನೆನಪು ಮತ್ತು ತಮಗೆ ಇದ್ದ ಅಜ್ಜಿ ತೌರು ಮನೆ “ತಾಳಿಕೋಟಿ” ಜನರ ಗುರುತು. ಮತ್ತು ಆ ಜನರ ಸಂಪರ್ಕ ಈಗಲೂ ತಮಗೆ ಇದೆ ಎಂಬ ಮಾತು. ನನ್ನ ತಂದೆಯ ಜನಕ ತಂದೆ ರಾಮಾಚಾರ್ಯರ ಪತ್ನಿಯ ಹೆಸರು ಕಾವೇರಿ ಮತ್ತು ತೌರು ಮನೆ ರಾಮದುರ್ಗದ ತಾಳಿಕೋಟಿ ಎಂಬ ಮನೆತನ ಇದು ಸರಿ. ಆದರೆ ಅವರನ್ನು ಕಿತ್ತೂರಿನಲ್ಲಿ ಇವರು ಯಾವಾಗ ನೋಡಿದ್ದರು? ನೆನಪು ಎಡವುತ್ತಿದೆಯೆ? ಎಂದು ಅನಿಸಿತು. ಆದರೆ ಇದ್ದೂ ಇರಬಹುದು ಎಂದೂ ಅನಿಸಿತು. ಏಕೆಂದರೆ ನನ್ನ ತಂದೆ ಕಿತ್ತೂರಿನ ವಾವೆಯಲ್ಲಿ ಕಾಕಾ ಅಗಬೇಕಿದ್ದ ವ್ಯಕ್ತಿಗೆ ದತ್ತಕ ಬಂದಿದ್ದರು. ಆದರೆ ಅವರಾಗಲಿ, ಕಾವೇರಿಬಾಯಿ ಆಗಲಿ ಅಲ್ಲಿ ವಾಸವಾಗಿದ್ದವರಲ್ಲ. ಯಾವುದೊ ಸಂದರ್ಭದಲ್ಲಿ ಕಾವೇರಿಬಾಯಿ ಅಲ್ಲಿಗೆ ಹೋದಾಗ ಭೆಟ್ಟಿಯಾಗಿದ್ದರೂ ಇರಬಹುದು. ಆದರೆ ಕಾವೇರಿಬಾಯಿಯ ತೌರು ಮನೆ ಜನರ ಬಗ್ಗೆ ತಿಳಿದುಕೊಳ್ಳಲು ಅವರ ಮೂಲಕ ಸಾಧ್ಯ ಎನಿಸಿದ್ದರೂ ಅದು ಇನ್ನೂ ಕಾರ್ಯಗತವಾಗಿಲ್ಲ.
ಮಾಧವಾಚಾರ್ಯರು ಹುಟ್ಟಿದ ವರ್ಷ ೧೯೩೨ನೆ ಇಸವಿ. ನನ್ನ ಅಣ್ಣ ಶ್ರೀನಿವಾಸ ಹುಟ್ಟಿದ್ದೂ ಅದೇ ವ₹ರ್ಷದಲ್ಲಿ. ಬಹಳ ಜನಪ್ರಿಯನಾಗಿದ್ದ ಶೀನೂ ಎಂದೆ ಗುರುತಿಸಲ್ಪಡುತ್ತಿದ್ದ ಆ ನನ್ನಣ್ಣ ಈಗ ಇಲ್ಲ. ಕಾಲೇಜು ಕಲಿಯುತ್ತಿರುವಾಗಲೆ ಡಿಫ್ತೀರಿಯಾ ಅವನನ್ನು ಕರೆದೊಯ್ದಿತ್ತು. ಅವರ ಬಗ್ಗೆ ಮಾಹಿತಿ ಕೇಳುತ್ತಿದ್ದಾಗ ಥಟ್ಟನೆ ಲಕ್ಷ್ಯಕ್ಕೆ ಬಂದ ಸಂಗತಿ ಇದು.
ಇರಲಿ, ಅವರು ಹುಟ್ಟಿದ್ದು ೨೨ ಜುಲೈ ೧೯೩೨ರಂದು. T.C.H. ಆಗಿ ಧಾರವಾಡದಲ್ಲಿ ಶಿಕ್ಷಕರಾಗಿದ್ದರು. ಮದುವೆಯಾದದ್ದು ಕುಲಕರ್ಣಿ ಮನೆತನದ ಮಾಲತಿ ಬಾಯಿ (ಜನ್ಮ ೩-೪-೧೯೩೭) ಎಂಬುವರನ್ನು. ಅವರು ಅರಣ್ಯ ಇಲಾಖೆಯಲ್ಲಿದ್ದ ತಮ್ಮ ಅಣ್ಣ ಅಣ್ಣಾರಾವ ಅವರ ಕಡೆಯೆ ಬೆಳೆದವರು.
ಮಾಧವಾಚಾರ್ಯ – ಸೌ. ಮಾಲತಿದಂಪತಿಗಳಿಗೆ ಮೂರು ಮಕ್ಕಳು:
೧. ಕೃಷ್ಣಮೂರ್ತಿ. ಇವರು ಹುಬ್ಬಳ್ಳಿಯಲ್ಲಿ ೧೪-೯-೧೯೬೨ರಂದು ಹುಟ್ಟಿದವರು. ಪತ್ನಿ ಸೌ.ಅನಘಾ (ತಾರಾ ಸವಾಯಿ ಎಂದು ತೌರು ಮನೆ ಹೆಸರು)
೨. ಬಂಡೂರಾಜ. ಇವರು ೨೮-೩-೧೯೬೯ರಂದು ಹುಟ್ಟಿದವರು. ಇವರ ಪತ್ನಿ ಶ್ರೀದೇವಿ (ತೌರು ಮನೆ ಆಡವಿ)
೩. ಪದ್ಮಾ. ಹುಟ್ಟಿದ್ದು ೧೨-೧೦-೧೯೭೨ ರಂದು. ಪತಿ ಕೃಷ್ಣ ನಾರಾಯಣರಾವ ಕುಲಕರ್ಣಿ, ಮುಂಬಯಿಯಲ್ಲಿ ಇಲೆಕ್ಟ್ರಿಕಲ ಕಾಂಟ್ರಾಕ್ಟರ ಆಗಿ ಇದ್ದಾರೆ. ಅವರು ಪದ್ಮಾ ಅವರ ತಾಯಿಯ ಮತ್ತೊಬ್ಬ ಸಹೋದರ.
ಮಾಧವಾಚಾರ್ಯರಿಗೆ ಮೊಮ್ಮಕ್ಕಳೂ ಇದ್ದಾರೆ. ಅಖಿಲಾ ಈಕೆ ಕೃಷ್ಣಮೂರ್ತಿ ಅವರ ಮಗಳು. ರುಚಿರ ಮತ್ತು ಪ್ರಣವ ಈ ಇಬ್ಬರು ಬಂಡೂರಾಜ ಇವರ ಮಕ್ಕಳು.
ಬರೆದವರು : ಶ್ರೀಕಾಂತ ರಂ. ಮಂಗಳವೇಢೆ ಮುಗಿದುದು, ಬುಧವಾರ, ಮಾಘ ಕೃಷ್ಣ ಪಂಚಮಿ, ೧೫ ಫೆಬ್ರುವರಿ ೨೦೧೭ ಸಂಜೆ ೫.೩೦ ಗಂಟೆ. ಆಧಾರ : ೧೯೯೩ ಅಥವಾ ೯೪ರಲ್ಲಿ ಹಾಗೆಯೆ ೨೦೧೦ರ ಮೇ ೨ (ರವಿವಾರ) ರಂದು ಧಾರವಾಡದಲ್ಲಿ ಮಾಧವಾಚಾರ್ಯರನ್ನು ಭೆಟ್ಟಿಯಾಗಿ ಪಡೆದ ಮಾಹಿತಿ. ಹಾಗೆಯೆ ಅವರ ಅಣ್ಣ ವೇದವ್ಯಾಸ ಅವರ ಮಗ ರಘುರಾಜ ಅವರಿಂದ ೨೦೧೬ ರಲ್ಲಿ ಪಡೆದ ಮಾಹಿತಿ.