ಯಕ್ಕುಂಡಿಯ ಗುರಾಚಾರ್ಯರ ಪ್ರಪೌತ್ರ, ಬಂಡಾಚಾರ್ಯರ ಪೌತ್ರ, ಪಾಂಡುರಂಗಾಚಾರ್ಯರ ಪುತ್ರಮಿರಜ (ಮಹಾರಾಷ್ಟ್ರ) ನಿವಾಸಿ
ಒಂದನೆ ಟಿಸಿಲಿನ ಎಂಟನೆ ತಲೆಮಾರಿನವರು.
ವಾಸುದೇವಾಚಾರ್ಯರು ತಮ್ಮ ಏಳು ಒಡಹುಟ್ಟಿದವರಲ್ಲಿ ಎರಡನೆಯವರು.
ವ್ಯಕ್ತಿ ಪರಿಚಯ
ಅತ್ಯಂತ ನೈಷ್ಠಿಕ ಜೀವನ ನಡೆಸಿದ ಅಪರೂಪದ ವ್ಯಕ್ತಿಯಾಗಿದ್ದವರು ವೈ.ವಾ.ವಾಸುದೇವಾಚಾರ್ಯರು. ನೌಕರಿಯ ನಿಮಿತ್ತ ದೂರ ದೂರದ ಹಲವು ಊರುಗಳನ್ನು ಸುತ್ತಾಡುವ ಸ್ಥಿತಿಯಲ್ಲಿಯೂ ‘ನೇಮ ನಿಷ್ಠೆ‘, ಧಾರ್ಮಿಕ ರೂಢಿ ಸಂಪ್ರದಾಯಗಳನ್ನು ಅನೂಚಾನವಾಗಿ ನಡೆಸಿಕೊಂಡು ಹೋದವರು. ಮಂತ್ರ, ಪೂಜಾ ವಿಧಾನಗಳನ್ನು ಚೆನ್ನಾಗಿ ಬಲ್ಲವರು. ನಿತ್ಯ ಪೂಜೆ, ವೈಶ್ವದೇವ ಇಲ್ಲದೆ ಊಟ ಮಾಡಿದವರಲ್ಲ.
ಮಿರಜಿಯಲ್ಲಿ ಇದ್ದಾಗ, ಬೇಸಗೆಯಲ್ಲಿ ನೀರಿನ ಕೊರತೆ ಇದ್ದಾಗಲೂ ಮಡಿಯ ವಿಚಾರದಲ್ಲಿ ಯಾವ ವಿನಾಯತಿಯನ್ನೂ ತಮಗೆ ಕೊಟ್ಟುಕೊಳ್ಳದೆ, ನೀರು ಎಲ್ಲಿ ಸಿಗುತ್ತಿತ್ತೋ ಅಲ್ಲಿಯ ವರೆಗೆ ಹೋಗಿ, ಅಲ್ಲಿಯೆ ಸ್ನಾನ ಮಾಡಿ ಒಂದು ಕೊಡ ನೀರನ್ನು ಮಡಿಯಲ್ಲಿಯೆ ಅಲ್ಲಿಂದ ಹೊತ್ತು ತಂದು, ಮಡಿಯಲ್ಲಿ ಅಡುಗೆ, ಪೂಜೆ, ನೈವೇದ್ಯ ಇವೆಲ್ಲವುಗಳನ್ನು ಊಟಕ್ಕೆ ಎಷ್ಟೆ ಹೊತ್ತಾದರೂ ಮಾಡಿ ಮುಗಿಸುತ್ತಿದ್ದರು. ಕೆಲಸದ ನಿಮಿತ್ತ ಹೊರಗೆ ಹೋದಾಗ ಎಲ್ಲಿಯೂ ನೀರೂ ಕುಡಿಯುತ್ತಿರಲಿಲ್ಲ.
ಈ ರೂಢಿ – ಸಂಪ್ರದಾಯ ಪ್ರಿಯತೆಯ ಹಿಂದೆ ತಮ್ಮ ಮನೆಯ ರೂಢಿ – ಸಂಪ್ರದಾಯಗಳ ಹಿನ್ನೆಲೆಯ ಜೊತೆಗೆ ತಮ್ಮ ತಾಯಿಯ ಮನೆಯ ಪ್ರಭಾವವೂ ಸೇರಿಕೊಂಡಿದ್ದವು. ತಾಯಿ ಇಂದಿರಾಬಾಯಿಯ ತಂದೆ ಧಾರವಾಡದಲ್ಲಿಯೆ ಇದ್ದ ಶ್ರೀ ಕೃಷ್ಟಾಚಾರ್ಯ ತಾಳಿಕೋಟಿ ಅವರ, ತಮ್ಮ ಬಾಲ್ಯದಿಂದಲೆ ಇದ್ದ ಸಂಪರ್ಕ ಈ ಗುಣಗಳನ್ನು ದೃಢಗೊಳಿಸಿದ್ದವು. ಆ ಅಜ್ಜ – ರೆವೆನ್ಯು-ಸರ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದೂ ಅಂತಹ ವಾತಾವರಣವನ್ನು ತಮ್ಮ ಮನೆಯಲ್ಲಿ ಇಟ್ಟುಕೊಂಡವರು.
ಈ ಎಲ್ಲ ಕಟ್ಟು ಪಾಡುಗಳ ನಡುವೆ ಮನೆಯ ಸಂಪ್ರದಾಯ ಮುಂದಿನ ಪೀಳಿಗೆಗೂ ಗೊತ್ತಾಗಲಿ ಎಂದು ತಮ್ಮ ಮಗ ಸುಧೀರ ಅವರಿಗೆ ಬಾಲ್ಯದಿಂದಲೆ ಸಂಸ್ಕಾರ ಕೊಡಲೆಂದು ಸಂಸ್ಕೃತದ ಪಾಠ, ಶಬ್ದ ರೂಪಾವಲಿ, ಧಾತು ರೂಪಾವಲಿ, ಭಗವದ್ಗೀತಾ ಪಾಠ, ವಿಷ್ಣು ಸಹಸ್ರನಾಮ, ವಾಯುಸ್ತುತಿ, ದ್ವಾದಶ ಸ್ತೋತ್ರ ಇತ್ಯಾದಿಗಳನ್ನೆಲ್ಲ ಹೇಳಿಕೊಟ್ಟಿದ್ದರು.
ಜನ್ಮ ಮತ್ತು ಶಿಕ್ಷಣ: ಯಕ್ಕುಂಡಿಯಲ್ಲಿ ೧೦, ಫೆಬ್ರುವರಿ ೧೯೨೬ ರಲ್ಲಿ ಪಾಂಡುರಂಗಾಚಾರ್ಯ ಮತ್ತು ಇಂದಿರಾಬಾಯಿಯರ ಏಳು ಮಕ್ಕಳಲ್ಲಿ (ಐದು ಗಂಡು, ಎರಡು ಹೆಣ್ಣು) ಎರಡನೆಯವರಾಗಿ ಹುಟ್ಟಿದವರು. ಇವರ ಒಡಹುಟ್ಟಿದವರು : ಪ್ರಭಾವತಿ (ಅಕ್ಕ), ನಂತರದ ವಾಸುದೇವಾಚಾರ್ಯರ ಬೆನ್ನಮೇಲೆ ಹುಟ್ಟಿದವರು ವೇದವ್ಯಾಸಾಚಾರ್ಯ, ವಿಜಯಾವತಿ, ಮಾಧವಾಚಾರ್ಯ, ವೆಂಕಟೇಶ ಮತ್ತು ಅನಂತಾಚಾರ್ಯ.
ಪ್ರಾಥಮಿಕ, ಮಾಧ್ಯಮಿಕ ಮತ್ತು ಕಾಲೇಜು ಶಿಕ್ಷಣವೆಲ್ಲ ಹುಬ್ಬಳ್ಳಿಯಲ್ಲಿ ಆಯಿತು. ಲ್ಯಾಮಿಂಗಟನ ಹಾಯಸ್ಕೂಲು ಅವರು ಕಲಿತ ಮಾಧ್ಯಮಿಕ ಶಾಲೆ. ಕಾಲೇಜು ಪೂರ್ಣಗೊಳಿಸುವ ಮೊದಲೆ ಕೆಲಸ ಸಿಕ್ಕು ಶಿಕ್ಷಣ Inter (ಪದವಿ ಪೂರ್ವ ವರ್ಗ) ವರೆಗೆ ಅಷ್ಟೆ ಆಯಿತು.
ವೃತ್ತಿ ಜೀವನ: ತಾವು ಕಲಿಯುತ್ತಿದ್ದ ಊರಾದ ಹುಬ್ಬಳ್ಳಿಯಲ್ಲಿಯೆ ರೇಲ್ವೆಯಲ್ಲಿ ಕೆಲಸ ಸಿಕ್ಕು Godown Clerk / Comercial Clerk ಎಂದು ವೃತ್ತಿ ಜೀವನದ ಪ್ರಾರಂಭ. ಮುಂದೆ ವರ್ಗವಾಗಿ ಮಿರಜ, ಶೇಡಬಾಳ, ಬಿಲವಡಿ, ಟಾಕಾರಿ, ಜಯಸಿಂಗಪುರ, ಹಾತಕಣಗಲೆ, ರುಕಡಿ ಮೊದಲಾದ ಕಡೆಗೆ ಹೋಗಬೇಕಾಗಿ ಬಂದಿತು. ಆದರೆ ಮಕ್ಕಳು ಶಾಲೆಗೆ ಹೋಗಲು ಪ್ರಾರಂಭಿಸಿದಾಗ ಕುಟುಂಬವನ್ನು ಮಿರಜದಲ್ಲಿ ಸ್ಥಾಯಿಗೊಳಿಸಿದ್ದರು
ಮದುವೆ: ಶಾಲಾ ಶಿಕ್ಷಿಕೆಯಾಗಿದ್ದ ಪ್ರೇಮಾ (ತೌರು ಮನೆ ಹೆಸರು) ಅವರನ್ನು ಮದುವೆಯಾಗಿ ಮನೆತುಂಬಿಸಿಕೊಂಡು ಕೃಷ್ಣಾ ಎಂದು (ಅತ್ತೆ ಮನೆ ಹೆಸರು) ಹೆಸರನ್ನಿಟ್ಟು ಸಂಸಾರ ಜೀವನದ ಪ್ರಾರಂಭ ಮಾಡಿದ್ದು. ಮದುವೆಯಾದದ್ದು ಅವರ ೨೭ನೆ ವಯಸ್ಸಿನಲ್ಲಿ ಅಂದರೆ ೧೯೫೨ ರಲ್ಲಿ, ಮಿರಜಿಯಲ್ಲಿ. ಆಗ ಅವರ ಪತ್ನಿಗೆ ಅದೇ ೨೦ ವರ್ಷ ತುಂಬಿದ್ದವು. ಅವರು ಹುಟ್ಟಿದ್ದು ೧೮ ಡಿಸೆಂಬರ ೧೯೩೧ರಂದು.
ಕಲಿತದ್ದು ಪ್ರಾಥಮಿಕ ಶಾಲಾಂತ್ಯದವರೆಗೆ (ಅಂದರೆ ೭ನೆ ವರ್ಗ ವರೆಗೆ) ಜೊತೆಗೇ ವರ್ನ್ಯಾಕ್ಯುಲರ್ ಪರೀಕ್ಷೆಯನ್ನೂ ಮಾಡಿದ್ದರು (ಅದು ಆ ಕಾಲದಲ್ಲಿ ಮಾಧ್ಯಮಿಕ ಶಾಲೆಗೆ ಹೋಗಿ ಕೆಲ ವಿಷಯಗಳನ್ನುಇಂಗ್ಲಿಶಿನಲ್ಲಿ ಕಲಿಯಲು ಅನುಕೂಲವಾಗುತ್ತಿದ್ದ ಅರ್ಹತಾ ಪರೀಕ್ಷೆ). ವಿವಾಹ ಪೂರ್ವದಲ್ಲಿಯೆ ಅವರು ಶಿಕ್ಷಿಕೆಯಾಗಿ ಕೆಲಸ ಮಾಡುತ್ತಿದ್ದರು (ಮ್ಹೈಸಾಳದಲ್ಲಿ). ಮುಂದೆ ಮಿರಜಿಯ ಮ್ಯುನಿಸಿಪಲ ಶಾಲೆಯಲ್ಲಿಯೆ ಕೆಲಸವಾಯಿತು.
ಕೃಷ್ಣಾಬಾಯಿ ಎಂದು ಅತ್ತೆ ಮನೆಯಲ್ಲಿ ಹೊಸ ಹೆಸರು ಪಡೆದ ವಾಸುದೇವಾಚಾರ್ಯರ ಪತ್ನಿ ಮಿರಜಿಯಲ್ಲಿ ಸರಕಾರಿ ಶಾಲೆಯಲ್ಲಿ ಶಿಕ್ಷಕರಾಗಿದ್ದ ಶ್ರೀ ನರಹರ ಜೀವಾಜಿ ಬಾಗಲಕೋಟೆ ಅವರ ಮಗಳು. ತಾಯಿ ಇಂದಿರಾಬಾಯಿ. ಶ್ರೀ ನರಹರ ಅವರು ಸಮೀಪದ ಮ್ಹೈಸಾಳದ ಹತ್ತಿರದ ನರವಾಡದಲ್ಲಿ ಜಮೀನುಹೊಂದಿದ್ದರು. ಅವರಿಗೆ ಐದು ಮಕ್ಕಳು. ಹಿರಿಯವ ಬಳವಂತ, ಬೆನ್ನಮೇಲೆ ಹುಟ್ಟಿದವರೆ ಪೇಮಾ. ಅವರ ನಂತರ ಹುಟ್ಟಿದವರು ರಘುನಾಥ, ಗೋಪಾಳ ಮತ್ತು ಕೊನೆಯವರಾಗಿ ಪಂಡಿತ.
ವಾಸುದೇವಾಚಾರ್ಯರು ತಮ್ಮ ಹೆಂಡತಿಗೆ ಕೃಷ್ಣಾ ಎಂದು ಹೆಸರನ್ನು ಇಟ್ಟ ಕಾರಣ ಆಕೆ ಕೃಷ್ಣಾ ತೀರದವಳು ಎಂದು ಹೇಳುತ್ತಿದ್ದರಂತೆ.
ಕೃಷ್ಣಾಬಾಯಿ ಮತ್ತು ವಾಸುದೇವಾಚಾರ್ಯರು, ಮಗ ಸುಧೀರ ಅವರ ಮದುವೆಯಲ್ಲಿ ತೆಗೆದದ್ದು.
ಮುಂದೆ ಈ ದಂಪತಿಗಳಿಗೆ ಐದು ಮಕ್ಕಳು ಆದವು –ಒಂದು ಗಂಡು, ನಾಲ್ಕು ಹೆಣ್ಣು – ೧) ಸುಧೀರ (೧೯೫೪ –ನವೆಂಬರ ೨೬) ೨) ಸುಲೋಚನಾ (೧೯೫೬ – ಅಕ್ಟೋಬರ ೨೨) ೩) ಶೋಭಾ (೧೯೬೦ – ಮೇ ೨೨) ೪) ಆಶಾ (೧೯೬೨ –ಫ಼ೆಬ್ರುವರಿ ೨೮) ೫) ಅಂಜಲಿ (೧೯೬೫ – ಮಾರ್ಚ್ ೨೫).
ಯಾತ್ರೆ ಮತ್ತು ಧರ್ಮಕ್ಷೇತ್ರಗಳ ದರ್ಶನ: ಸಾಮಾನ್ಯವಾಗಿ ಪ್ರತಿವರ್ಷ ಕುಲದೇವರಾದ ಶ್ರೀ ವಿಟ್ಠಲ ರಖುಮಾಯಿ ದರ್ಶನಕ್ಕಾಗಿ ಪಂಢರಪುರಕ್ಕೆ ಹಾಗೆಯೆ ಶ್ರೀ ವೆಂಕಟೇಶ್ವರನ ದರ್ಶನಕ್ಕಾಗಿ ತಿರುಪತಿಗೆ ಮತ್ತು ಶ್ರೀ ರಾಘವೇಂದ್ರಸ್ವಾಮಿಗಳ ಬೃಂದಾವನ ದರ್ಶನಕ್ಕಾಗಿ ಮಂತ್ರಾಲಯಕ್ಕೆ ಹೋಗಿ ಬರುತ್ತಿದ್ದರು.
ಅಲ್ಲದೆ ಬದರೀ ಯಾತ್ರೆಯನ್ನೂ ಎರಡು ಸಲ, ರಾಮೇಶ್ವರಕ್ಕೆ ಮೂರುಸಲ ಯಾತ್ರೆಯನ್ನು ಮಾಡಿದ್ದರು. ಮೊದಲ ಬದರೀ ಯಾತ್ರೆ – ತಮ್ಮ ಹಿರಿಯ ಮಗ ಸುಧೀರ ೮-೧೦ ವರ್ಷದವನಿದ್ದಾಗ, ಎರಡನೆಯದು ಅವನು ಕಾಲೇಜಿನಲ್ಲಿದ್ದಾಗ. ಆ ಯಾತ್ರಾ ಕಾಲಕ್ಕೆ ಕಾಶಿ, ಪ್ರಯಾಗ, ಗಯಾ ಕ್ಷೇತ್ರಗಳಿಗೂ ಇಡೀ ಕುಟುಂಬ – ಹೆಣ್ಣು ಮಕ್ಕಳು, ಮಕ್ಕಳು ಸಹಿತ ಕೂಡಿ ಹೋಗಿದ್ದರು. ಹಾಗೆಯೆ ರಾಮೇಶ್ವರ ಯಾತ್ರೆಗೂ ಕೂಡ.
ಶ್ರೀ ವಾಸುದೇವಾಚಾರ್ಯರು ರೇಲ್ವೆಯಲ್ಲಿ ಕೆಲಸಕ್ಕಿದ್ದುದರಿಂದ ಒಂದು ಸಲ ಅವರಿಗೆ ಸುಮಾರು ಒಂದೂವರೆ ತಿಂಗಳ ಕಾಲ ಒಂದು ತರಬೇತಿಯ ನಿಮಿತ್ತ ತ್ರಿಚಿನಾಪಳ್ಳಿಯ ಹತ್ತಿರ ಶ್ರೀರಂಗಂ ದಲ್ಲಿ ಇರಬೇಕಾಗಿ ಬಂದಿದ್ದಿತು. ಅಲ್ಲಿನ ರಂಗನಾಥಸ್ವಾಮಿಯ ದೇವಸ್ಥಾನದ ಹತ್ತಿರವೆ ಬಿಡಾರ. ಅದರ ಪ್ರಯೋಜನ ಆ ಕ್ಷೇತ್ರ ದರ್ಶನಕ್ಕೂ ಆಗಿದ್ದಿತು. .
ಮನೆಯಲ್ಲಿನ ಹಬ್ಬ ಹರಿದಿನಗಳು – ಸಂಪ್ರದಾಯ : ಆಜ್ಜಿ – ಅಜ್ಜ ಪಾಂಡುರಂಗಾಚಾರ್ಯರ ಪತ್ನಿ – ಇಂದಿರಾಬಾಯಿಯ ಅವರ ಒಂದು ಹರಕೆ, ಇಚ್ಛೆ, ಆಗ ಹಿಡಿದ ಆ ವ್ರತದ ಪರಿಣಾಮವಾಗಿ ಇವರ ಮನೆಯಲ್ಲಿ ಗಣಪತಿ ಹಬ್ಬದಲ್ಲಿ ಎರಡು ಗಣಪತಿಗಳನ್ನು ಇಡುವದು ಶುರುವಾದದ್ದು ಆ ಪದ್ಧತಿ ಇನ್ನೂ ಉಳಿದು ಮುಂದುವರೆದಿದೆ. ಒಂದು ಮೂರ್ತಿ ಎಲ್ಲರಿಗೂ ಸುಪರಿಚಿತವಾದ ರೂಪದಲ್ಲಿನದು, ಇನ್ನೊಂದು ಅವನ ಬಾಲಕ ರೂಪದಲ್ಲಿನದು. ಅದು ಅಖಂಡ ಪಡಿಯಚ್ಚಿನಲ್ಲಿ ತಯಾರಾಗ ಬೇಕಿತ್ತು. ಅವನಿಗೆ ಸಿದ್ಧಿವಿನಾಯಕನೆಂದು ಕರೆದರು. ಒಬ್ಬ ಗಣಪತಿಗೆ ಇಪ್ಪತ್ತೊಂದು ದಿವಸಗಳ ನಂತರ ವಿಸರ್ಜನೆ, ಮತ್ತೊಬ್ಬನಿಗೆ ಐದು ದಿನಗಳ ನಂತರ.
ಜೀವನ ಸಮಾಪ್ತಿ: ವಾಸುದೇವಾಚಾರ್ಯರು ಮಧುಮೇಹ ಮತ್ತು ಉಬ್ಬಸ ರೋಗದಿಂದ ಬಳಲುತ್ತಿದ್ದರು. ಮಿರಜದಲ್ಲಿನ ಮಿಶನ್ ಆಸ್ಪತ್ರೆಯಲ್ಲಿ ಒಂದು ವಾರ ಉಪಚಾರ ಪಡೆಯುತ್ತಿದ್ದಾಗಲೆ ಜೀವನ ಕೊನೆಗೊಂಡಿತು. ಅದು ೧೯೮೩ ರ ಮಾರ್ಚ ತಿಂಗಳಲ್ಲಿ – ಪಾಲ್ಗುಣ ವದ್ಯ ಏಕಾದಶಿಯಂದು. ಆಗ ಅವರಿಗೆ ಇನ್ನೂ ಆಗ ೫೭ ವರ್ಷ ವಯಸ್ಸು. ಒಂದು ವರ್ಷ ಸರ್ವಿಸು ಇನ್ನೂ ಇರುವಾಗಲೆ ತೀರಿಕೊಂಡರು. ಮುಂದೆ ಪತ್ನಿ ಕೃಷ್ಣಾಬಾಯಿ ತಮ್ಮ ೭೭ನೆ ವಯಸ್ಸಿಗೆ ೨೦೦೮ ರ ಅನಂತ ಚತುರ್ದಶಿ ದಿನ ತೀರಿಕೊಂಡರು.
ಬರೆದು ಮುಗಿಸಿದ್ದು : ೨ ನವೆಂಬರ್ ೨೦೧೯ (ಶುಕ್ರವಾರ) , ಪುಣೆ ಮುಕ್ಕಾಮಿನಲ್ಲಿ, ಆಧಾರ : ಅವರ ಪುತ್ರ ಸುಧೀರ ಅವರೊಂದಿಗಿನ ಸಂದರ್ಶನ