ರಘುರಾಜ
ರಘುರಾಜ | ಹುಟ್ಟಿದ ದಿನಾಂಕ: 1962-06-12 | ||
ತಂದೆ: ವೇದವ್ಯಾಸಾಚಾರ್ಯ | ತಾಯಿ: | ||
ಮಕ್ಕಳು: ವೇದವ್ಯಾಸ, ಗಿರಿರಾಜ | |||
ಒಡಹುಟ್ಟಿದವರು: ನಂದಾ, ಚಂಪಾ, ವಿದ್ಯಾ | |||
ವಿಳಾಸ: ‘ಪಾಂಡುರಂಗ ನಿವಾಸ’, ನೇಕಾರ ಓಣಿ, ಹೊಸ ಯಲ್ಲಾಪುರ, ಧಾರವಾಡಧಾರವಾಡ | |||
ಮೊಬೈಲ್: 9844559868 | Branch: 1 | Generation: 9 |
ವ್ಯಕ್ತಿ ಚಿತ್ರ
ರಘುರಾಜ ವೇದವ್ಯಾಸ ಮಂಗಳವೇಢೆ
ಯಕ್ಕುಂಡಿಯ ಬಂಡಾಚಾರ್ಯರ ಪ್ರಪೌತ್ರ, ಪಾಂಡುರಂಗಾಚಾರ್ಯರ ಪೌತ್ರ, ವೇದವ್ಯಾಸಾಚಾರ್ಯರ ಪುತ್ರ. ಧಾರವಾಡ ನಿವಾಸಿ
ಕಿರು ಪರಿಚಯ
ಒಂದನೆ ಟಿಸಿಲಿನ ಒಂಬತ್ತನೆ ತಲೆಮಾರಿನವರು.
ಜನ್ಮ ದಿನಾಂಕ: ೧೨ ಜೂನ ೧೯೬೨
ಜನ್ಮ ಸ್ಥಳ: ಧಾರವಾಡ
ತಂದೆ – ತಾಯಿ: ವೇದವ್ಯಾಸ – ಲಕ್ಷ್ಮೀಬಾಯಿ (ಇವರ ನಾಕು ಮಕ್ಕಳಲ್ಲಿ ಎರಡನೆಯವರು)
ಒಡಹುಟ್ಟಿದವರು: ಅಕ್ಕ – ನಂದಾ (ಕೃಷ್ಣ ಹುನಗುಂದ ಅವರ ಪತ್ನಿ, ಹುಬ್ಬಳ್ಳಿ), ತಂಗಿ – ಚಂಪಾ (ಗೋಪಾಲ ಮಠದ ಅವರ ಪತ್ನಿ, ಕಿತ್ತೂರು), ಇನ್ನೊಬ್ಬ ತಂಗಿ – ವಿದ್ಯಾವತಿ (ಸುಧೀಂದ್ರ ಯಜುರ್ವೇದಿಯವರ ಪತ್ನಿ, ದಾವಣಗೆರೆ).
L.I.C and Postal Agent
ಪತ್ನಿ: ರೋಹಿಣಿ, ಇವರೂ Postal (RD) Agent.
ಮಕ್ಕಳು: ೧. ವೇದವ್ಯಾಸ ೨. ಗಿರಿರಾಜ
ವಿಳಾಸ: ‘ಪಾಂಡುರಂಗ ನಿವಾಸ’, ನೇಕಾರ ಓಣಿ, ಹೊಸ ಯಲ್ಲಾಪುರ, ಧಾರವಾಡ
ಫೋನ: (ಮನೆ) ೦೮೩೬ – ೨೪೪ ೬೩ ೭೮ (ಮೊ) ೯೮೪೪ ೫೫ ೯೮೬೮ ; e-mail : rvmangalvedhe@gmail.com
ವ್ಯಕ್ತಿ ಪರಿಚಯ
ಧಾರವಾಡದ ಹೊಸ ಯಲ್ಲಾಪುರದಲ್ಲಿ ನೇಕಾರ ಓಣಿ ಎಂಬುದಿದೆ. ಅಲ್ಲಿನ ಬನಶಂಕರಿ ಗುಡಿಯ ಹತ್ತಿರ ರಸ್ತೆಯ ಇನ್ನೊಂದು ಬದಿಗೆ ತುಸು ಎತ್ತರದಲ್ಲಿ ಇರುವದೆ ‘ಪಾಂಡುರಂಗ ನಿಲಯ’. ಒಂದಕ್ಕೊಂದು ಸಾಲಾಗಿ ಹತ್ತಿಕೊಂಡಿರುವ ಆ ಮೂರು ಮನೆಗಳಲ್ಲಿ ಮೊದಲನೆಯದೆ ರಘುರಾಜ ಅವರದು. ಅದಕ್ಕೆ ಹೊಂದಿ – ನಡುವಿನಲ್ಲಿರುವದು, ಇವರ ಕಕ್ಕ ಮಾಧವಾಚಾರ್ಯರದು. ಕೊನೆಯದು ಇನ್ನೊಬ್ಬ ಕಕ್ಕ ಅನಂತಾಚಾರ್ಯ ಅವರದು.
ಅಲ್ಲಿಗೆ ಹೋದರಾಯಿತು. ದಿ. ಪಾಂಡುರಂಗಾಚಾರ್ಯರ ಇಬ್ಬರನ್ನು ಬಿಟ್ಟು ಉಳಿದ ಮೂರು ಮಕ್ಕಳು – ವೇದವ್ಯಾಸಾಚಾರ್ಯ(ರಘುರಾಜ ಅವರ ದಿವಂಗತ ತಂದೆ), ಮಾಧವಾಚಾರ್ಯ ಮತ್ತು ಅನಂತಾಚಾರ್ಯ ಇವರ ಒಂದೇ ಸೂರಿನಡಿಯ ಆ ಮನೆಗಳು ಸಿಗುತ್ತವೆ. ಆ ಎಲ್ಲರ ಬಳಗ ಭೆಟ್ಟಿಯಾಗುತ್ತದೆ. ಆ ಸಹೋದರರಲ್ಲಿ ಉಳಿದ ಇಬ್ಬರು – ವಾಸುದೇವಾಚಾರ್ಯ ಮತ್ತು ವೆಂಕಟೇಶ ಎಂಬುವರು. ನೌಕರಿಗಾಗಿ ಹೊರಗೆ ಹೋದರು. ಅವರ ಮಕ್ಕಳು ಡೊಂಬಿವಲಿಯಲ್ಲಿದ್ದಾರೆ.
ರಘುರಾಜ ಅವರ ತಂದೆ ತಾಯಿ ವೇದವ್ಯಾಸ – ಲಕ್ಷ್ಮೀಬಾಯಿ. ವೇದವ್ಯಾಸ ಅವರು RMP (Registered Medical Practitioner) ಆಗಿ ಸ್ವತಂತ್ರರಾಗಿ ಕೆಲಕಾಲ ಮತ್ತು ಬೇರೆ ಕಡೆ ಕಂಪೌಂಡರ ಎಂದೂ ಕೆಲಕಾಲ ಕೆಲಸ ಮಾಡುತ್ತಿದ್ದರು. ತಾಯಿ ಗೃಹಿಣಿ.
ಇವರ ನಾಕು ಮಕ್ಕಳಲ್ಲಿ ರಘುರಾಜ ಎರಡನೆಯವರು – ಮತ್ತು ಏಕಮಾತ್ರ ಪುತ್ರ. ಅಕ್ಕ ನಂದಾ, ತಂಗಿಯಂದಿರು ಚಂಪಾ ಮತ್ತು ವಿದ್ಯಾವತಿ.
ನಂದಾ ಕೃಷ್ಣ ಹುನಗುಂದ ಎನ್ನುವವರ ಪತ್ನಿಯಾಗಿ ಅತ್ತೆ ಮನೆಯಲ್ಲಿ ರಾಧಾ ಎಂದು ಹೆಸರು ಪಡೆದರು. ಶಿಕ್ಷಿಕೆಯಾಗಿದ್ದಾರೆ . ಪತಿಗೆ ಸುಶ್ರುತಾ ಆಸ್ಪತ್ರೆಯಲ್ಲಿ ಕೆಲಸ. ಹುಬ್ಬಳ್ಳಿಯಲ್ಲಿ ಇದ್ದಾರೆ. ಒಬ್ಬಳೆ ಮಗಳು ಗಾಯತ್ರಿ, ಗುರುರಾಜ ಶಿರೋಳ ಎಂಬುವರನ್ನು ಮದುವೆಯಾಗಿ ಸುನಿಧಿ ಮತ್ತು ಶುಭಾಂಗ ಎಂಬ ಇಬ್ಬರು ಮಕ್ಕಳನ್ನು ಪಡೆದಿದ್ದಾರೆ. ಪತಿಗೆ ಅಹಮದಾಬಾದದಲ್ಲಿ ನೆಸ್ಲೆ ಕಂಪನಿಯಲ್ಲಿ ಕೆಲಸ.
ಚಂಪಾ ಗೋಪಾಲ ಮಠದ ಎನ್ನುವವರ ಪತ್ನಿಯಾಗಿ ಅತ್ತೆ ಮನೆಯಲ್ಲಿ ಸರಳಾ ಎಂದು ಹೆಸರು ಪಡೆದರು. ಗೃಹಿಣಿ. ಪತಿಗೆ ಪೋಸ್ಟ್ ಆಫೀಸಿನಲ್ಲಿ ಕೆಲಸ. ಕಿತ್ತೂರಿನಲ್ಲಿದ್ದಾರೆ. ಇವರಿಗೂ ಇಬ್ಬರು ಮಕ್ಕಳು – ವಾಣಿ ಮತ್ತು ಪವನ.
ಕಡೆಯ ತಂಗಿ ವಿದ್ಯಾವತಿ ಸುಧೀಂದ್ರ ಯಜುರ್ವೇದಿ ಎನ್ನುವವರ ಪತ್ನಿಯಾಗಿ ಅತ್ತೆಮನೆಯಲ್ಲಿ ಸುಜಾತಾ ಎಂದು ಹೆಸರು ಪಡೆದರು, ಗೃಹಿಣಿ. ಪತಿ ವೈದಿಕಿವೃತ್ತಿಯಲ್ಲಿದ್ದಾರೆ. ದಾವಣಗೆರೆಯಲ್ಲಿದ್ದಾರೆ. ಇವರಿಗೂ ಇಬ್ಬರು ಮಕ್ಕಳು – ಸಹನಾ ಮತ್ತು ಶ್ರೀಕರ.
ರಘುರಾಜ ಅವರು ಹುಟ್ಟಿದ್ದು (ಶಾಲಾ ದಾಖಲೆಯಂತೆ) ೧೨ ಜೂನ ೧೯೬೨ರಲ್ಲಿ. ಹುಟ್ಟಿದ ಊರು ಧಾರವಾಡ. ಜನ್ಮ ನಕ್ಷತ್ರ ಉತ್ತರಾ ಭಾದ್ರಪದ. ಮೀನ ರಾಶಿ. B.Com ಪದವಿಧರರಾದ ಇವರ ಶಿಕ್ಷಣವೆಲ್ಲ ಧಾರವಾಡದಲ್ಲಿಯೆ – ಕಾಮನ ಕಟ್ಟೆಯಲ್ಲಿರುವ ಸರಕಾರಿ ಪ್ರಾಥಮಿಕ ಶಾಲೆ, ವಿದ್ಯಾರಣ್ಯ ಹಾಯಸ್ಕೂಲು (ಎಸ್.ಎಸ್.ಎಲ್.ಸಿ ೧೯೭೮) ಮತ್ತು ಜೆ.ಎಸ್.ಎಸ್. ಕಾಲೇಜಿನಲ್ಲಿ (B.Com. ೧೯೮೪ ರಲ್ಲಿ ? ) ಆಯಿತು.
ವೃತ್ತಿ ಜೀವನ: ಕಾಲೇಜು ಕಲಿಯುವದಾದ ಮೇಲೆ ಲಕಮನ ಹಳ್ಳಿಯ ಔದ್ಯಮಿಕ ಪ್ರದೇಶದಲ್ಲಿದ್ದ ಕ್ರೀಸೆಂಟ ಇಂಜಿನೀಯರಿಂಗ ಇಂಡಸ್ಟ್ರೀಸದಲ್ಲಿ (Crecent Engineering Industries) ೧೯೯೬ರಲ್ಲಿ ಸೇರಿಕೊಂಡರು. ಅಲ್ಲಿ ೨೦೦೮ ರ ವರೆಗೆ ೧೨ ವರ್ಷ ಇದ್ದು ನಂತರ L.I.C. and Postal Agent ಆಗಿ ಸ್ವತಂತ್ರವಾಗಿ ಕೆಲಸ ಮಾಡಹತ್ತಿದರು. ಕ್ರೀಸೆಂಟ ಇಂಡಸ್ಟ್ರೀಸದಲ್ಲಿ ಸೇರುವ ಮೊದಲೆ L.I.C Agency ಇದ್ದೇ ಇದ್ದಿತು. ಆ ಕೆಲಸ ಬಿಟ್ಟ ಮೇಲೆ ಅಂಚೆ ಖಾತೆಯ ಏಜೆನ್ಸಿ ಕೂಡ ಪಡೆದು, ಆಎರಡೂ ಏಜೆನ್ಸಿಗಳನ್ನು ಹೊಂದಿದ್ದಾರೆ.
ವಿವಾಹ: ಮದುವೆ ಧಾರವಾಡದಲ್ಲಿಯೆ ಆಯಿತು. ತಡವಾಗಿ ಅವರ ೩೮ನೆ ವಯಸ್ಸಿಗೆ ಆ ಯೋಗ ಕೂಡಿ ಬಂದಿತು. ಧಾರವಾಡದವರೆ ಆದ ರಘುನಾಥ ಕೊಪ್ಪ ಮತ್ತು ಸೌ.ಲೇಏಲಾವತಿಯವರ ಮಗಳು ಪುಷ್ಪಾ ಜೊತೆ ೨ ಜುಲೈ ೧೯೯೯ ರಂದು ವಿವಾಹ ಜರುಗಿತು. ಪುಷ್ಪಾ ಅವರು ಪತಿಯ ಮನೆಸೇರಿದ ಮೇಲೆ ರೋಹಿಣಿ ಎಂದು ಹೆಸರು ಪಡೆದರು. ಗೃಹಿಣಿ. ಮನೆಯಲ್ಲಿಯೆ ಇದ್ದು Postal Agency ಯನ್ನು ನೋಡಿಕೊಳ್ಳುತ್ತಿದ್ದಾರೆ.
ರೋಹಿಣಿ (ತೌರು ಮನೆಯ ಪುಷ್ಪಾ) ಅವರು ಹುಟ್ಟಿದ್ದು ೭ ಮೇ ೧೯೭೧. ಜೆ.ಎಸ್.ಎಸ್. ಕಾಲೇಜಿನಲ್ಲಿ ಪೀಯುಸಿ ಮುಗಿಸಿಯಾದ ಮೇಲೆ ಮುಂದುವರೆಸಲಾಗಲಿಲ್ಲ. ಆ ಮೊದಲು ಕೊಪ್ಪ ಕುಟುಂಬ ಬೆಳಗಾವಿಯಲ್ಲಿ ಇದ್ದಿತು. ಅಲ್ಲಿ ೮ನೆ ಇಯತ್ತೆಯಲ್ಲಿದ್ದಾಗ ಧಾರವಾಡಕ್ಕೆ ಬಂದರು.
ರಘುರಾಜ ಮತ್ತು ರೋಹಿಣಿ ದಂಪತಿಗಳಿಗೆ ವೇದವ್ಯಾಸ ಮತ್ತು ಗಿರೀಶ ಎಂಬ ಇಬ್ಬರು ಗಂಡು ಮಕ್ಕಳು ಇದ್ದಾರೆ. ವೇದವ್ಯಾಸ ಹುಟ್ಟಿದ್ದು ಧಾರವಾಡದ ತಾವರಗೆರೆ ಆಸ್ಪತ್ರೆಯಲ್ಲಿ, ೪-೯-೨೦೦೧ ರಂದು. ಗಿರೀಶ ಹುಟ್ಟಿದ್ದು ಅದೇ ಆಸ್ಪತ್ರೆಯಲ್ಲಿ ೧೨-೧೧-೨೦೦೨ರಲ್ಲಿ.
ರಘುರಾಜ ಅವರ ಹೆಣ್ಣು ಕೊಟ್ಟ ಮಾವ ರಘುನಾಥ ಕೊಪ್ಪ K.S.R.T.C.ಯಲ್ಲಿ ಕೆಲಸ ಮಾಡುತ್ತಿದ್ದರು. ತಮ್ಮ ಸೇವಾವಧಿಯಲ್ಲಿ ಸಿರಸಿ, ಬೆಳಗಾವಿ, ಧಾರವಾಡ ಗಳಲ್ಲಿ ಇದ್ದುದಾಯಿತು. ಅವರು ವಿಶ್ವ ಹಿಂದು ಪರಿಷತ್ತಿನ (V.H.P) ಕ್ರಿಯಾಶೀಲ ಸದಸ್ಯರಾಗಿದ್ದರು. ಒಂದು ಜಿಲ್ಲೆಯ (ಧಾರವಾಡ?) ಅಧ್ಯಕ್ಷರೂ ಆಗಿದ್ದರು. ಪುಷ್ಪಾ ಅವರ ಕೊನೆಯ ಮಗಳು.
ಚೊಚ್ಚಲ ಮಗಳು ಶ್ರೀದೇವಿ. ಬೆಳಗಾವಿಯಲ್ಲಿ ಸಂರಕ್ಷಣ ಖಾತೆಯಲ್ಲಿ ಕೆಲಸದಲ್ಲಿದ್ದು, ೨೦೦೮ರಲ್ಲಿ ಸ್ವೇಚ್ಛಾ ನಿವೃತ್ತಿ ಪಡೆದರು. ಅವಿವಾಹಿತೆ. ಧಾರವಾಡದಲ್ಲಿ ತೀರಿಕೊಂಡಿದ್ದಾರೆ. ಬೆನ್ನ ಮೇಲೆ ಹುಟ್ಟಿದವರು ಉದಯ, ರವಿ ಮತ್ತು ಪುಷ್ಪಾ. ಅವರಲ್ಲಿ ಉದಯ ಅವರು B.Com. ಆದವರು. ಸ್ವತಂತ್ರವಾಗಿ ಯಾವುದೋ ಒಂದರ ಏಜನ್ಸಿ ಪಡೆದು ಆ ಕೆಲಸದಲ್ಲಿ, ತಾರಿಹಾಳ- ಹುಬ್ಬಳ್ಳಿಯಲ್ಲಿ ಇದ್ದಾರೆ. ರವಿ ವಿವಾಹಿತ, ಮೆಕ್ಯಾನಿಕಲ ಇಂಜಿನೀಯರಿಂಗದಲ್ಲಿ ಡಿಪ್ಲೊಮಾ ಪಡೆದು Excide (Batery) ಕಂಪನಿಯಲ್ಲಿ, ಬೆಂಗಳೂರಿನಲ್ಲಿದ್ದಾರೆ.
ರಘುರಾಜ ಅವರ ಆಸ್ತಿ ಪಾಸ್ತಿ: ನೇಕಾರ ಓಣಿಯ ಮನೆ ಅಜ್ಜ ಪಾಂಡುರಂಗಾಚಾರ್ಯರು ಬಹುಶಃ ೧೯೪೬ರಲ್ಲಿ ? ಖರೀದಿಸಿದ್ದು. ಆ ಹಳೆಯ ಜೀರ್ಣವಾಗಿತ್ತು. ಮಕ್ಕಳು ಆ ಮನೆಯನ್ನು ಬಿಚ್ಚಿಸಿ, ೨೦೦೯ರಲ್ಲಿ ಹೊಸದಾಗಿ ಕಟ್ಟಿಕೊಂಡರು. ಅದರಲ್ಲೀಗ ರಘುರಾಜ (ದಿ. ವೇದವ್ಯಾಸ ಅವರ ಮಗ) ಮತ್ತು ಅವರ ಇಬ್ಬರು ಕಕ್ಕಂದಿರಾದ ಮಾಧವಾಚಾರ್ಯ ಮತ್ತು ಅನಂತಾಚಾರ್ಯ, ಪ್ರತ್ಯೇಕವಾಗಿ ಇರುತ್ತಿದ್ದಾರೆ.
ಯಕ್ಕುಂಡಿ ಮತ್ತು ಗುರ್ಲಹೊಸೂರಿನಲ್ಲಿ ಹಿರಿಯರ ಹೊಲಗಳು ಇದ್ದವೆಂದು ಕೇಳಿಗೊತ್ತೆ ಹೊರತು ಒಮ್ಮೆಯೂ ನೋಡಿ ಕೂಡ ಗೊತ್ತಿಲ್ಲ ಎನ್ನುತ್ತಾರೆ ರಘುರಾಜ. ಅಜ್ಜ ಪಾಂಡುರಂಗಾಚಾರ್ಯರು ತೀರಿಕೊಂಡಿದ್ದು ೧೯೭೬ ರಲ್ಲಿ. ಆ ಮೊದಲೆ, ಅವರ ಕಾಲಕ್ಕೇ ಅವು ಟೆನನ್ಸಿ ಕಾಯದೆಯಲ್ಲಿ ರೈತರ ಪಾಲಗಿದ್ದವಂತೆ. ನೇಕಾರ ಓಣಿಯಲ್ಲಿ ಹಿರಿಯರಿಂದ ಬಂದ ಆ ಸಣ್ಣ ಮನೆಯಲ್ಲದೆ ರಘುರಾಜ ಅವರು ಡೆಂಟಲ ಕಾಲೇಜಿನ ಹಿಂದೆ ಉದಯಗಿರಿಯಲ್ಲಿ ೨೦೦೧ರಲ್ಲಿ ಖರೀದಿಸಿದ್ದ ಅರ್ಧ ಗುಂಠೆಯ ತುಂಡು ನಿವೇಶನ ಇದೆ. ಅದು ಅವರಿಗೆ ಆರ್ಥಿಕವಾಗಿ ದುರ್ಬಲವಾಗಿರುವವರಿಗಾಗಿ ಹಂಚಿಕೆಯಾದ ಜಾಗೆ.
ಯಾತ್ರೆ, ಧರ್ಮ ಕ್ಷೇತ್ರಗಳ ದರ್ಶನ: ಕುಲದೇವರು ಪಾಂಡುರಂಗ ವಿಟ್ಠಲನ ಕ್ಷೇತ್ರ ಪಂಢರಪುರಕ್ಕೆ – ೧೯೬೩ ರಲ್ಲಿ, ತಾವು ಹತ್ತು ತಿಂಗಳ ಕೂಸಿದ್ದಾಗ ತಂದೆ ವೇದವ್ಯಾಸ ಅವರು ಕರೆದುಕೊಂಡು ಹೋಗಿದ್ದರಂತೆ. ಮತ್ತೊಮ್ಮೆ ಆ ಕ್ಷೇತ್ರಕ್ಕೆ ಯಾತ್ರೆ ನಡೆದದ್ದು ೨೦೦೨ರಲ್ಲಿ, ೩೫ ವರ್ಷಗಳ ನಂತರ. ರಘುರಾಜ ಅವರು ತಮ್ಮ ಮಗ ವೇದವ್ಯಾಸ ಹತ್ತು ತಿಂಗಳ ಕೂಸಿದ್ದಾಗ. ಎಂತಹ ಆ ದಿನಗಳು, ಆ ಅಡಚಣಿಗಳು. ಎಂತಹ ಆ ವಿಚಿತ್ರ ಸಾಮ್ಯ !
ಆದರೆ ೫-೬ ಸಲ ಮಳಖೇಡಕ್ಕೆ ಹೋಗಿ ಬಂದದ್ದರಿಂದ ಟೀಕಾರಾಯರ ಬೃಂದಾವನದ ದರ್ಶನ ಭಾಗ್ಯ ಮಾತ್ರ ಅಷ್ಟು ಸಲ ಲಭ್ಯವಾಗಿದೆ. ಮಳಖೇಡದ ನಂತರ ಹೆಚ್ಚು ಸಲ ಹೋಗಿ ಬರಲು ಆದುದು ಮಂತ್ರಾಲಯದ ವಿಷಯದಲ್ಲಿ. ೧೯೭೮ ರಿಂದ ಮೂರು ಸಲ ಅಲ್ಲಿಗೆ ಹೋಗಿ ಬಂದುದಾಗಿದೆ. ಒಂದು ಒಂದು ಸಲ ಉಡುಪಿ ಮತ್ತು ತಿರುಪತಿ ಆಗಿದೆ. ಉಡುಪಿ ಕೃಷ್ಣನ ದರ್ಶನವಾದದ್ದು ಕಕ್ಕ ಮಾಧವಾಚಾರ್ಯರ ಜೊತೆ ೧೯೭೫ ಅಥವಾ ೧೯೭೬ ರಲ್ಲಿ ಹೋಗಿದ್ದಾಗ. ತಿರುಪತಿ ವೆಂಕಪ್ಪನನ್ನು ನೋಡಿದ್ದು ಜನೆವರಿ ೨೦೧೫ರಲ್ಲಿ.
ರೂಢಿ ಸಂಪ್ರದಾಯಗಳ ಆಚರಣೆ: ತೀರ್ಥ ಕ್ಷೇತ್ರ ಸಂದರ್ಶನದ ವಿಷಯ ಹೀಗಾದರೆ, ಹಬ್ಬವೊಂದರ ಆಚರಣೆಯಲ್ಲಿ ‘ಬಹು ಮೂರ್ತಿಯ’ ಬಾಹುಳ್ಯವಿದೆ. ಗಣೇಶ ಚತುರ್ಥಿಯಲ್ಲಿ ಪ್ರತಿಯೊಬ್ಬರ ಮನೆಗೆ ಒಬ್ಬ ಗಣಪತಿ ಬಂದರೆ, ಪಾಂಡುರಂಗಾಚಾರ್ಯರ ಐವರು ಮಕ್ಕಳ ಮನೆಯಲ್ಲಿ ಮಾತ್ರ ಇಬ್ಬರು ಗಣಪತಿಗಳು ಬಂದು ವಿರಾಜಮಾನರಾಗಿ ಪೂಜೆಯನ್ನು ಮಾಡಿಸಿಕೊಳ್ಳುತ್ತಾರೆ. ಒಂದು ಕಾಲಕ್ಕೆ ೨೧ ದಿವಸ ಮನೆಯಲ್ಲಿ ಗಟ್ಟಿಯಾಗಿ ಕೂತಿರುತ್ತಿದ್ದರು. ಈಗ ಆ ನಿಯಮದಲ್ಲಿ ಸ್ವಲ್ಪ ಸವಲತ್ತು ಸಿಕ್ಕಿದೆ. ಈ ಆಚರಣೆಯನ್ನು ಹುಟ್ಟು ಹಾಕಿದವರು ಪಾಂಡುರಂಗಾಚಾರ್ಯರು.
ಅದು ಶುರುವಾದುದು ಹೀಗೆ. ಏಕೆಂದರೆ ಅದು ಅವರ ಪತ್ನಿಯ ಅಪೇಕ್ಷೆ ಯಾಗಿತ್ತು. ಅವರು ಯಾವುದೋ ಒಂದು ಸಿದ್ಧಿವಿನಾಯಕ ವೃತದ ಆಚರಣೆಯನ್ನು ಇಟ್ಟುಕೊಂಡಿದ್ದರು. ಅದರ ಅಂಗವಾಗಿ ಗಣಪ ತನ್ನ ಸಾಮಾನ್ಯ ಆಕಾರದ ಜೊತೆಗೇ ಚಿಕ್ಕ ಬಾಲ ರೂಪದಲ್ಲಿಯೂ ಆಗಮಿಸಲಾರಂಬಿಸಿದ. ಇಬ್ಬರೂ ೨೧ದಿನಗಳ ಠಿಕಾಣೆ ಹೂಡುತ್ತಿದ್ದರು. ಮುಂದೆ ಯಾವಾಗಲೊ ಯಾವುದೋ ಒಂದು “ಅವಘಡ” ವಾಗಿ “ಐದು ದಿವಸ ಮಾತ್ರ”ದ (ಒಮ್ಮೊಮ್ಮೆ ಏಳು ದಿವಸ) ರೂಢಿ ಚಾಲ್ತಿಯಲ್ಲಿ ಬಂದಿತು. ಅದು ಅಜ್ಜಿ ಇಲ್ಲವಾದ ಮೇಲೆ. (ತೀರಿಕೊಂಡದ್ದು ತಮ್ಮ ಐವತ್ತನೆ ವಯಸ್ಸಿನಲ್ಲಿ). ಅದು ಏನೆ ಇರಲಿ, ಗಣಪ್ಪ ಇವರ ಮನೆಗೆ ಬಾಲ ರೂಪದಲ್ಲಿಯೂ , ಇತರರಿಗೆ ಕಾಣುವ ಸಾಮನ್ಯ ರೂಪದಲ್ಲಿಯೂ ಹೀಗೆ ಎರಡು ಸಂಖ್ಯೆಯಲ್ಲಿ ಬಂದು ಹೋಗಲು ಶುರುವಾಗಿ ಸುಮಾರು ಮೂರು ದಶಕ ಕಾಲ ಆಗಿದೆ.